ಹನ್ನೊಂದು ವರ್ಷಗಳಾದರೂ ಸೌಜನ್ಯ ಪ್ರಕರಣದಲ್ಲಿ ನಿಜವಾದ ಅಪರಾಧಿಗಳನ್ನು ಪತ್ತೆ ಮಾಡಿ, ಬಂಧಿಸುವಲ್ಲ ಪೊಲೀಸ್, ಸಿಐಡಿ ಹಾಗೂ ಸಿಬಿಐ ತನಿಖಾಧಿಕಾರಿಗಳು ವಿಫಲವಾಗಿದ್ದಾರೆ. ಸೌಜನ್ಯ ಕುಟುಂಬಸ್ಥರು ಶಂಕಿಸಿರುವ ಆರೋಪಿಗಳನ್ನು ಬಂಧಿಸಿ, ವಿಚಾರಣೆ ಒಳಪಡಿಸಬೇಕು. ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿ) ವಹಿಸಬೇಕು ಎಂದು ಅತ್ಯಾಚಾರ ವಿರೋಧಿ ಆಂದೋಲನದ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಸೌಜನ್ಯ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿ ಆಂದೋಲನದ ಕಾರ್ಯಕರ್ತರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದ್ದಾರೆ. “ಮೂವರು ಜೈನ್ಗಳೇ ಕೃತ್ಯವನ್ನು ಎಸಗಿದ್ದಾರೆಂದು ಸೌಜನ್ಯ ಕುಟುಂಬಸ್ಥರು ಶಂಕಿಸಿದ್ದರೂ, ಶಂಕಿತರನ್ನು ಪೊಲೀಸರು ಬಂಧಿಸಿಲ್ಲ. ವಿಚಾರಣೆ ಒಳಪಡಿಸಿಲ್ಲ. ಉಳ್ಳವರು, ಪೊಲೀಸರು, ಅಧಿಕಾರಿಗಳೆಲ್ಲರೂ ಸೇರಿ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದ್ದಾರೆ” ಎಂದು ಕಿಡಿಕಾರಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ಮಹಿಳಾ ಮುನ್ನಡೆ ಸಂಚಾಲಕಿ ಪೂರ್ಣಿಮಾ, “ಸೌಜನ್ಯಳ ಮೇಲೆ ವಿಕೃತಿ ಮೆರೆದ ದುರುಳರನ್ನು ಬಂಧಿಸಿ, ಶಿಕ್ಷೆ ವಿಧಿಸಬೇಕು. ಸೌಜನ್ಯಳ ಸಾವಿಗೆ ನ್ಯಾಯ ಕೊಡಬೇಕು. ಸೌಜನ್ಯ ಕುಟುಂಬ ಶಂಕಿಸಿರುವ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಸೋದರನ ಮಗ ನಿಶ್ಚಲ್ ಜೈನ್ ಮತ್ತು ಆತನ ಸ್ನೇಹಿತರಾದ ಉದಯ್ ಜೈನ್, ಮಲಿಕ್, ಜೈನ್ ಹಾಗೂ ಧೀರಜ್ ಜೈನ್ರನ್ನು ವಿಚಾರಣೆಗೆ ಒಳಪಡಿಸಬೇಕು. ತಪ್ಪಿತಸ್ತರಿಗೆ ಶಿಕ್ಷೆ ವಿಧಿಸಬೇಕು” ಎಂದು ಒತ್ತಾಯಿಸಿದರು.
“ಉಳ್ಳವರ ಕುತಂತ್ರಕ್ಕೆ ಕೈಜೋಡಿಸಿದ್ದ ಪೊಲೀಸರು ಅಮಾಯಕ, ನಿರಪರಾಧಿ ಸಂತೋಷ್ ರಾವ್ನನ್ನು ಬಂಧಿಸಿದ್ದರು. ಅಲ್ಲದೆ, ತಾನೇ ಕೃತ್ಯ ಎಸಗಿದ್ದಾಗಿ ಒಪ್ಪಿಕೊಳ್ಳುವಂತೆ ಆತನಿಗೆ ಹೊಡೆದು, ಕಿರುಕುಳ ನೀಡಿದ್ದರು. ಬರೋಬ್ಬರಿ ಆರು ವರ್ಷ ಜೈಲಿಗೆ ದೂಡಿದರು. ಆತನ ತಾಯಿ ಮೃತಪಟ್ಟಾಗಲೂ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲೂ ನ್ಯಾಯಾಂಗ ವ್ಯವಸ್ಥೆ ಅವಕಾಶ ಕೊಡಲಿಲ್ಲ. ವ್ಯವಸ್ಥೆಯ ಸಂಚಿಗೆ ನಿರಪರಾಧಿಯೊಬ್ಬ ತನ್ನ ಮತ್ತು ತನ್ನಿಡೀ ಕುಟುಂಬ ಭವಿಷ್ಯ, ಜೀವನವನ್ನೇ ಬಲಿಕೊಡಬೇಕಾಯಿತು. ನಿರಪರಾಧಿ ಸಂತೋಷ್ ರಾವ್ ಕುಟುಂಬಕ್ಕೆ ಪರಿಹಾರ ನೀಡಬೇಕು” ಎಂದು ಸರ್ಕಾರವನ್ನು ಒತ್ತಾಯಿಸಿದರು.
“ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ಒಪ್ಪಿಸಬೇಕು. ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ನಿಜವಾದ ಅಪರಾಧಿಗಳನ್ನು ಬಂಧಿಸಿ ಶಿಕ್ಷಗೆ ಒಳಪಡಿಸಬೇಕು” ಎಂದು ಆಗ್ರಹಿಸಿದರು.
ಪ್ರತಿಭಟನಾಕಾರರ ಹಕ್ಕೊತ್ತಾಯಗಳು
- ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಬೇಕು. ಎಸ್ಐಟಿ ರಚಿಸಿ, ನಿಷ್ಪಕ್ಷಪಾತ ತನಿಖೆ ನಡೆಸಬೇಕು.
- ಶಂಕಿತ ಆರೋಪಿಗಳಾದ ಉದಯ್ ಜೈನ್, ಮಲಿಕ್ ಜೈನ್ ಹಾಗೂ ಧೀರಜ್ ಜೈನ್ನನ್ನು ಬಂಧಿಸಿ, ವಿಚಾರಣೆ ನಡೆಸಬೇಕು.
- ಸೌಜನ್ಯಳ ಮೃತದೇಹವನ್ನು ಪರೀಕ್ಷಿಸಿ, ಸರಿಯಾದ ಮರಣೋತ್ತರ ಪರೀಕ್ಷಾ ವರದಿ ನೀಡದ ಬೆಳ್ತಂಗಡಿ ವೈದ್ಯಕೀಯ ಆಸ್ಪತ್ರೆಯ ಸ್ತ್ರೀರೋಗತಜ್ಞ ಡಾ ರಶ್ಮಿ ಎನ್, ಡಾ. ಆಡಂ ವಿರುದ್ಧ ಕ್ರಮ ಕೈಗೊಳ್ಳಬೇಕು.
- ಮೊದಲಿಗೆ ಪ್ರಕರಣದ ತನಿಖೆ ನಡೆಸಿದ್ದ ತನಿಖಾಧಿಕಾರಿ ಯೋಗೀಶ್ ಕುಮಾರ್, ಅಂದಿನ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಗೋಯಲ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು.
- ಸಂತೋಷ್ ರಾವ್ ಅವರನ್ನು ಪರೀಕ್ಷಿಸಿದ ಫೋರೆನ್ಸಿಕ್ ಮೆಡಿಸಿನ್ ಪ್ರಾಧ್ಯಾಪಕ ಡಾ. ಮಹಾಬಲ ಶೆಟ್ಟಿ ಅವರನ್ನೂ ತನಿಖೆಗೆ ಒಳಪಡಿಸಿ, ಕ್ರಮ ಕೈಗೊಳ್ಳಬೇಕು.
- ನಿರಪರಾಧಿಯಾಗಿದ್ದರೂ ಪೊಲೀಸ್ ದೌರ್ಜನ್ಯಕ್ಕೆ ತುತ್ತಾದ ಸಂತೋಷ್ ರಾವ್ ಮತ್ತು ಕುಟುಂಬಕ್ಕೆ ಪರಿಹಾರ ನೀಡಬೇಕು.
- ಕಲಬುರಗಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿರುವ ಕಾಮುಕರನ್ನು ಬಂಧಿಸಿಬೇಕು.
- ರಾಜಸ್ಥಾನದಲ್ಲಿ ಹೆಣ್ಣು ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಕಾಮುಕರಿಗೆ ಕಠಿಣ ಶಿಕ್ಷೆ ವಿಧಿಸಬೇಕು.
ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡೆ ಸುನಂದಾ ಜಯರಾಮ್, ಮಂಜುಳ, ಕಿರಣ, ಸೌಮ್ಯ, ಒಡನಾಡಿ ಸಂಸ್ಥೆ ಸ್ಟ್ಯಾನ್ಲಿ ಇದ್ದರು.