- ಈಜಿಪುರ ಮೇಲ್ಸೇತುವೆ ನಿರ್ಮಾಣವಾಗದ ಕಾರಣ ದೀಪದ ಕಂಬಗಳಾಗಿ ಬಳಕೆ; ಟ್ವೀಟ್
- ಕಾಮಗಾರಿ ಮತ್ತೆ ಆರಂಭವಾಗುತ್ತಿರುವ ಬಗ್ಗೆ ಸೂಚಿಸುತ್ತಿರುವ ವಿದ್ಯುತ್ ದೀಪಗಳು
ರಾಜ್ಯ ರಾಜಧಾನಿ ಬೆಂಗಳೂರಿನ ಈಜಿಪುರ ಮೇಲ್ಸೇತುವೆ ಕಾಮಗಾರಿ ನನೆಗುದಿಗೆ ಬಿದ್ದು ಐದು ವರ್ಷಗಳು ಕಳೆದಿವೆ. ಇದೀಗ ಹೊಸ ಗುತ್ತಿಗೆದಾರರು ಸಿಕ್ಕಿದ್ದು, ಕಾಮಗಾರಿ ಆರಂಭವಾಗಬೇಕಿದೆ. ಈ ಮಧ್ಯೆ ಮೇಲ್ಸೇತುವೆ ನಿರ್ಮಾಣ ಹಂತದ ಕಂಬಗಳ ಮೇಲೆ ವಿದ್ಯುತ್ ದೀಪ ಹಾಕಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗಿದೆ.
ಅನರ್ವ ಗುಪ್ತಾ ಎಂಬುವವರು, “ಈಜಿಪುರ ಮೇಲ್ಸೇತುವೆ ನಿರ್ಮಾಣವಾಗದ ಕಾರಣ ಈಗ ಕಂಬಗಳನ್ನೇ ದೀಪದ ಕಂಬಗಳಾಗಿ ಬಳಸಲಾಗುತ್ತಿದೆ” ಎಂದು ಟ್ವೀಟ್ ಮಾಡಿ ಫೋಟೋ ಹಂಚಿಕೊಂಡಿದ್ದಾರೆ.
ಈ ಟ್ವೀಟ್ಗೆ ಹಲವು ಜನ ಪ್ರತಿಕ್ರಿಯೆ ನೀಡುತ್ತಿದ್ದು, “ಬೆಂಗಳೂರಿನಲ್ಲಿ ಸಂಚಾರಿ ದೀಪಗಳನ್ನು ಹೊಂದಿರುವ ಫ್ಲೈಓವರ್ ಇದೆ. ಶೀಘ್ರದಲ್ಲೇ ಹೆಬ್ಬಾಳ ಮೇಲ್ಸೇತುವೆಯಲ್ಲಿ ಟ್ರಾಫಿಕ್ ದೀಪಗಳು ಬರಬಹುದು. ಈಗ ಫ್ಲೈಓವರ್ ಪಿಲ್ಲರ್ ಮೇಲೆ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ನೇರವಾದ ರಸ್ತೆಗಳಲ್ಲಿ, ನಮ್ಮಲ್ಲಿ ರಸ್ತೆ ವಿಭಜಕಗಳು ನೇರವಾಗಿರುವುದಿಲ್ಲ. ಬೆಂಗಳೂರು ನಿಜವಾಗಿಯೂ ಶೀಘ್ರದಲ್ಲೇ ಸ್ಮಾರ್ಟ್ ಸಿಟಿಯಾಗಲಿದೆ” ಎಂದು ಎಮ್ ಎನ್ ರಾವ್ ಎಂಬುವವರು ಟ್ವೀಟ್ ಮಾಡಿದ್ದಾರೆ.
“ಅದ್ಭುತ ನೋಟ! ಕೇವಲ ನೂರು ವರ್ಷಗಳ ನಂತರ ಈ ಸ್ಥಳವನ್ನು ಕೋರಮಂಗಲದ 12 ಪ್ರಚಾರಕರು ಎಂದು ಕರೆಯುತ್ತಾರೆ! ಮೇಲಿನಿಂದ ವೀಕ್ಷಿಸಿ, ಕಂಬಗಳ ಮೇಲೆ ಕುಳಿತು ಉತ್ತಮವಾದ 7 ಸ್ಟಾರ್ ರೆಸ್ಟೋರೆಂಟ್ ಊಟ ಮಾಡಬಹುದು” ಎಂದು ಬಸು ಹೇಳಿದ್ದಾರೆ.
ಇನ್ನೂ ಕೆಲವರು, “ದೀಪಗಳು ಮೇಲ್ಸೇತುವೆ ಕಾಮಗಾರಿ ಮತ್ತೆ ಆರಂಭವಾಗುತ್ತದೆ ಎಂಬುದನ್ನು ಸೂಚಿಸುತ್ತಿದೆ” ಎಂದು ಟ್ವೀಟ್ ಮಾಡಿದ್ದಾರೆ.
ಈಜಿಪುರ ಮೇಲ್ಸೆತುವೆ
ಈ ಮೇಲ್ಸೇತುವೆ ಕೋರಮಂಗಲದ 100 ಅಡಿ ಮುಖ್ಯ ರಸ್ತೆಯಲ್ಲಿ ಹಾದು ಹೋಗುತ್ತದೆ. ಈಜಿಪುರ ಮುಖ್ಯ ರಸ್ತೆ ಜಂಕ್ಷನ್, ಹೊರ ವರ್ತುಲ ರಸ್ತೆಯಿಂದ ಕೇಂದ್ರೀಯ ಸದನ ಜಂಕ್ಷನ್ಗೆ ಸಂಪರ್ಕ ಕಲ್ಪಿಸುತ್ತದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಬೀದಿನಾಯಿಗಳ ಗಣತಿಗೆ ಮೊದಲ ಬಾರಿಗೆ ಡ್ರೋನ್ ಬಳಕೆ
ಈ ಮೇಲ್ಸೇತುವೆ 2.5 ಕಿ.ಮೀ ಉದ್ದವಿದೆ. ಮೊದಲ ಬಾರಿಗೆ ಈ ಮೇಲ್ಸೇತುವೆ ನಿರ್ಮಾಣ ಮಾಡಲು ಕೋಲ್ಕತ್ತಾ ಮೂಲದ ನಿರ್ಮಾಣ ಸಂಸ್ಥೆ ಸಿಂಪ್ಲೆಕ್ಸ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಟೆಂಡರ್ ಪಡೆದುಕೊಂಡಿತ್ತು. 2017ರಲ್ಲಿ ಈ ಮೇಲ್ಸೇತುವೆ ಕಾಮಗಾರಿ ಆರಂಭವಾಯಿತು. 2019ರ ಒಳಗೆ ಈ ಯೋಜನೆ ಪೂರ್ಣವಾಗುವ ನಿರೀಕ್ಷೆ ಇತ್ತು. ಈ ಸಂಸ್ಥೆ ಒಟ್ಟು 81 ಪಿಲ್ಲರ್ಗಳನ್ನು ನಿರ್ಮಿಸಬೇಕಿತ್ತು. ಆದರೆ, ಈ ಸಂಸ್ಥೆ 67 ಪಿಲ್ಲರ್ಗಳನ್ನಷ್ಟೇ ನಿರ್ಮಾಣ ಮಾಡಿದೆ. ಬಿಬಿಎಂಪಿ ಹಲವು ಬಾರಿ ಡೆಡ್ಲೈನ್ ನೀಡಿ, ಅವಧಿ ವಿಸ್ತರಣೆ ಮಾಡಿದರೂ ಕಾಮಗಾರಿ ವಿಳಂಬವಾದ ಕಾರಣ ಟೆಂಡರ್ ರದ್ದಾಗಿತ್ತು.
ಈಜಿಪುರ ಫ್ಲೈ ಓವರ್ ನಿರ್ಮಾಣ ಯೋಜನೆಗೆ ಬಿಬಿಎಂಪಿ ಒಟ್ಟು ₹252 ಕೋಟಿ ವ್ಯಯಿಸಬೇಕಿದೆ. ನಾಲ್ಕನೇ ಬಾರಿ ನಡೆದ ಟೆಂಡರ್ ಪ್ರಕ್ರಿಯೆಯಲ್ಲಿ ಕೇವಲ ಒಂದೇ ಒಂದು ಕಂಪನಿ ಭಾಗವಹಿಸಿದ ಕಾರಣ ಅವರಿಗೇ ಈ ಕಾಮಗಾರಿ ನಡೆಸುವ ಅವಕಾಶ ದೊರೆತಿದೆ.