ದಾವಣಗೆರೆ ಪಂಪಾಪತಿ ಭವನದಲ್ಲಿ ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನದ ಜಿಲ್ಲಾ ಸಮ್ಮೇಳನ ಆಯೋಜಿಸಲಾಗಿತ್ತು. ಸಮ್ಮೇಳನ ಉದ್ಘಾಟಿಸಿದ ಎಐಡಿಆರ್ ಎಂ ರಾಜ್ಯಾಧ್ಯಕ್ಷರಾದ ಡಾ.ಜನಾರ್ಧನ್ ಮಾತನಾಡಿ, “ಜಾತಿ ಸಮಸ್ಯೆಗೆ 12 ನೇ ಶತಮಾನದಲ್ಲಿ ಶರಣರು ಉತ್ತರ ಹೇಳಿದ್ದಾರೆ. ಜಾತೀಯ ಹೆಸರಿನಲ್ಲಿ ಇಂದಿಗೂ ಅತ್ಯಂತ ಶೋಷಣೆಗೆ ಒಳಗಾಗಿರುವವರು ದಲಿತರು” ಎಂದು ವಿಷಾದ ವ್ಯಕ್ತಪಡಿಸಿದರು.

“ಸಮ ಸಮಾಜದ ಕನಸು ಕಟ್ಟುವವರ ಆಶಯಗಳನ್ನು ನಾವು ಮುಂದುವರೆಸಿಕೊಂಡು ಹೋಗಬೇಕೆಂದು ಕಾರ್ಲ್ ಮಾರ್ಕ್ಸ್ ಹೇಳುತ್ತಾರೆ. ಭೂಮಿ ಸರ್ಕಾರದ ಕೈಯಲ್ಲಿರಬೇಕು. ಕೈಗಾರಿಕೆಗಳು ಸಾರ್ವಜನಿಕ ಸ್ವತ್ತಾಗಬೇಕು ಎಂದು ಅಂಬೇಡ್ಕರ್ ಹೇಳಿದ್ದಾರೆ. ಇವರಿಬ್ಬರ ನಡುವೆ ವ್ಯತ್ಯಾಸವನ್ನು ಸೃಷ್ಟಿ ಮಾಡುವ ಮೂರ್ಖರೂ ಇದ್ದಾರೆ. ಅದರಿಂದ ನಾವು ಎಚ್ಚರದಿಂದಿರಬೇಕು” ಎಂದು ತಿಳಿಸಿದರು.

“1920 ಕ್ಕಿಂತ ಮೊದಲಿನಿಂದಲೂ ದಲಿತ ಹಕ್ಕುಗಳಿಗಾಗಿ ಸಿಪಿಐ ಪಕ್ಷ ಹೋರಾಟ ಮಾಡುತ್ತಾ ಬಂದಿದೆ. ಕೆಲವರು ಇದನ್ನು ದಿಕ್ಕು ತಪ್ಪಿಸುವ ಸಲುವಾಗಿ ಅಪಪ್ರಚಾರ ಮಾಡುವವರಿದ್ದಾರೆ. ಪಕ್ಷವು ಶೋಷಿತ ಸಮುದಾಯದ ಮಧ್ಯೆ ನಿರಂತರವಾಗಿ ಹೋರಾಡುತ್ತಾ ಬಂದಿದೆ. ನಾವು ಅದನ್ನು ಒಂದು ಆಂದೋಲನವೆಂದು ಕರೆಯುತ್ತೇವೆ. ಏಕೆಂದರೆ ಎಲ್ಲಾ ದಲಿತ ಸಂಘಟನೆಗಳನ್ನು ಸೇರಿಸಿಕೊಂಡು ಹೋರಾಟ ಮಾಡುವ ಉದ್ದೇಶದಿಂದ ದೂರ ದೃಷ್ಟಿಯ ಆಲೋಚನೆಯಿಂದಾಗಿ ದಲಿತ ಹಕ್ಕುಗಳಿಗಾಗಿ ಹೋರಾಟ ಮಾಡುತ್ತೇವೆ. 80ರ ದಶಕದಲ್ಲಿ ತುಂಬಾ ಉಚ್ಛ್ರಾಯ ಸ್ಥಿತಿಯಲ್ಲಿದ್ದ ದಲಿತ ಸಂಘಟನೆಗಳು ವಿಘಟನೆಗೊಂಡಿದೆ. ಈಗ ಅದನ್ನು ಪುನಶ್ಚೇತನ ಗೊಳಿಸಬೇಕಾಗಿದೆ. ಈ ಸಮಾಜ ಮಹಿಳೆಯನ್ನು ಅತ್ಯಂತ ಕೀಳಾಗಿ ಕಾಣುತ್ತಿದೆ. ಅದರಲ್ಲೂ ದಲಿತ ಮಹಿಳೆಯರನ್ನು ತುಂಬಾ ಕೀಳಾಗಿ ಕಾಣುತ್ತಿದ್ದು ದೇವದಾಸಿ ಪದ್ಧತಿಯಲ್ಲಿರುವವರು ದಲಿತ ಮಹಿಳೆಯರು ಮಾತ್ರ. ಇದನ್ನು ನಾವು ಜಾಗೃತಿ ಮೂಡಿಸುವುದರ ಮೂಲಕ ಹೋಗಲಾಡಿಸಬೇಕಾಗಿದೆ” ಎಂದು ಅಭಿಪ್ರಾಯಪಟ್ಟರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ರೈತೋದಯ ಹಸಿರುಸೇನೆಯಿಂದ 1008 ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮ; ಪೂರ್ವಭಾವಿ ಸಭೆ
ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು ಮಾತನಾಡಿ, “ಕಾರ್ಯಕರ್ತರು ಹಳ್ಳಿಗಳಿಗೆ, ನಗರದ ಕೆಲವು ಏರಿಯಾಗಳಿಗೆ ತೆರಳಿ ಎಲ್ಲಾ ಜಾತಿಯ ಬಡವರ ಪರವಾಗಿ ಅವರ ಹಕ್ಕುಗಳನ್ನು ಕೊಡಿಸಲು ಸಂಘಟನೆ ಮಾಡುವುದರ ಮೂಲಕ ಸಂಘಟನೆ ಬಲವರ್ಧನೆಗೆ ಮುಂದಾಗಬೇಕು” ಎಂದು ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ| ಸರ್ಕಾರಿ ಶಾಲೆ ಮುಚ್ಚುವುದನ್ನು ವಿರೋಧಿಸಿ ಎಐಡಿಎಸ್ಓ ಸಹಿ ಸಂಗ್ರಹ ಅಭಿಯಾನ
ಸಮ್ಮೇಳನದಲ್ಲಿ ಸಿಪಿಐ ಜಿಲ್ಲಾ ಸಹಕಾರ್ಯದರ್ಶಿ ಹೆಚ್ಜಿ ಉಮೇಶ್ ಆವರಗೆರೆ, ಮುಖಂಡರಾದ ಪಿ ಷಣ್ಮುಖ ಸ್ವಾಮಿ, ಎಸ್ ಎಸ್ ಮಲ್ಲಮ್ಮ, ವಿ ಲಕ್ಷ್ಮಣ, ಜಿ ಯಲ್ಲಪ್ಪ, ನರೇಗಾ ರಂಗನಾಥ್, ಶೇಖರ ನಾಯಕ್, ಯುವ ಮುಖಂಡ ಕೆರನಳ್ಳಿ ರಾಜು, ತಿಪ್ಪೇಶ್, ಸಿಪಿಐ ಜಿಲ್ಲಾ ಮಂಡಳಿ ಸದಸ್ಯ ಕೆ ಬಾನಪ್ಪ ಸೇರಿದಂತೆ ಇತರ ಸದಸ್ಯರು ಹಾಗೂ ಮುಖಂಡರು ಭಾಗವಹಿಸಿದ್ದರು