ತುಮಕೂರು ಜಿಲ್ಲೆಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸರ್ಕಾರದ ಅನುದಾನವನ್ನು ಗ್ರಾಮೀಣ ಭಾಗದ ಅಭಿವೃದ್ಧಿಗೆ ಸಮರ್ಪಕವಾಗಿ ಅನುಷ್ಠಾನಗೊಳಿಸಿದ್ದು, ನರೇಗಾ ಕಾಮಗಾರಿ ಅಭಿವೃದ್ಧಿಯಲ್ಲಿ ತುಮಕೂರು ಜಿಲ್ಲೆ ರಾಜ್ಯದಲ್ಲಿಯೇ ವಿಶೇಷ ಹೆಗ್ಗಳಿಕೆ ಪಾತ್ರವಾಗಿದೆ ಎಂದು ತಹಶೀಲ್ದಾರ್ ಕೆ.ಮಂಜುನಾಥ್ ತಿಳಿಸಿದರು.
ಕೊರಟಗೆರೆ ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಪಂಚಾಯತಿ ತಾಲ್ಲೂಕು ಪಂಚಾಯಿತಿ, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ವತಿಯಿಂದ ಆಯೋಜಿಸಲಾದ 24 ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಿಡಿಓ ಹಾಗೂ ಕಾರ್ಯದರ್ಶಿಗಳ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ಬಾಲ್ಯದಲ್ಲಿ ಶಿಕ್ಷಣ ಕಲಿಯಬೇಕಾದರೆ ಶಾಲೆಗಳಲ್ಲಿ ಕೊಠಡಿಗಳ ಮತ್ತು ಮೂಲಭೂತ ವ್ಯವಸ್ಥೆ ಕೊರತೆ ಹೆಚ್ಚಾಗಿತ್ತು.ಆದರೂ ಬಡತನ ಮಧ್ಯೆ ಶಿಕ್ಷಣ ಬಿಡದೇ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ವಿದ್ಯಾಭ್ಯಾಸದೊಂದಿಗೆ ವಿಶೇಷ ಸಾಧನೆ ಮಾಡಿದ್ದೇವೆ, ಈಗಿನ ಸರ್ಕಾರ ಸುಸಜ್ಜಿತ ಶಾಲಾ ಅಭಿವೃದ್ದಿ, ಡಿಜಿಟಲ್ ಶಿಕ್ಷಣ ವ್ಯವಸ್ಥೆ, ಮೂಲಭೂತ ವ್ಯವಸ್ಥೆಯನ್ನು ಕಲ್ಪಿಸಿದರೂ ಸಹ ಪ್ರತಿವರ್ಷದಂತೆ ಎಸ್ಎಸ್ಎಲ್ಸಿ ಫಲಿತಾಂಶ ಮಾತ್ರ ಕುಗ್ಗುತ್ತಲೆ ಇದೆ ಎಂದು ಬೇಸರ ವ್ಯಕ್ತಪಡಿಸಿದರು.
ಎಸ್ಎಸ್ಎಲ್ಸಿ ಫಲಿತಾಂಶ ಪ್ರತಿವರ್ಷ ಕುಗ್ಗಲು ಪೋಷಕರ ಬೇಜಾವಬ್ದಾರಿ ತನವು ಹೆಚ್ಚಾಗಿ ಕಂಡುಬರುತ್ತಿದೆ.ಮಕ್ಕಳ ಶಿಕ್ಷಣದ ಬಗ್ಗೆ ಪೋಷಕರು ವಿಶೇಷ ಕಾಳಜಿವಹಿಸಿ ಶಿಕ್ಷಣ ಕೊಡಿಸುವುದು ಪ್ರಮುಖ ಕರ್ತವ್ಯ. ಸಚಿವರ ಆದೇಶದಂತೆ ಪಿಂಚಣಿ, ಪೌತಿ ಖಾತೆ ಅನೇಕ ಸವಲತ್ತುಗಳಿಂದ ವಂಚಿತರಾದ ಫಲಾನುಭವಿಗಳನ್ನು ಗುರುತಿಸಿ ಸೌಲಭ್ಯ ಒದಗಿಸಲಾಗಿದ್ದು, ತಾಲ್ಲೂಕಿನ ಮಜರೆ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಗುರುತಿಸಿ ಈಗಾಗಲೇ ಅರ್ಹರಿಗೆ ಹಕ್ಕುಪತ್ರ ವಿತರಣೆ ಮಾಡಲಾಗಿದೆ ಎಂದು ಹೇಳಿದರು.
ತಾ.ಪಂ ಕಾರ್ಯನಿರ್ವಹಣಾಧಿಕಾರಿ ಅಪೂರ್ವ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಗ್ರಾ.ಪಂ ಮಟ್ಟದಲ್ಲಿ ಶಾಲಾ ಕೊಠಡಿ ಅಭಿವೃದ್ಧಿ ಮತ್ತು ಮೂಲಭೂತ ವ್ಯವಸ್ಥೆ, ಗ್ರಾಮ ಸ್ವಚ್ಚತೆ, ಸ್ಮಶಾನ ಅಭಿವೃದ್ಧಿ, ಸ್ವ-ಸಹಾಯ ಸಂಘಗಳ ಅಭಿವೃದ್ಧಿ, ಅಂಗನವಾಡಿ ಕೇಂದ್ರ ಅಭಿವೃದ್ಧಿಗೆ ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗಿದ್ದು, ಅಭಿವೃದ್ಧಿಯ ಬಗ್ಗೆ ಚರ್ಚಿಸಲು ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಕಳೆದ ಕೆಲವು ದಿನಗಳ ಹಿಂದೆ ಗುಜರಾಜ್ನಲ್ಲಿ ಸರ್ಕಾರದಿಂದ ಆಯೋಜಿಸಿದ್ದ ತರಬೇತಿಯಲ್ಲಿ ದೇಶದ ಹಲವು ರಾಜ್ಯಗಳಿಂದ ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸಿದ್ದು, ಈ ತರಬೇತಿಯಲ್ಲಿ ಕೇಂದ್ರ ಸರ್ಕಾರದ 15ನೇ ಹಣಕಾಸು ಯೋಜನೆಯಿಂದ ಮಾಡಬಹುದಾದ ಹಲವು ಅಭಿವೃದ್ಧಿಯ ಬಗ್ಗೆ ತರಬೇತಿ ಕಾರ್ಯಾಗಾರದಲ್ಲಿ ತಿಳಿಸಿದ್ದು, ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿನ ಜನರು ಯಾವುದೇ ಕೊರತೆಯಿಲ್ಲದೆ ಪ್ರತಿಯೊಬ್ಬರಿಗೂ ಸರ್ಕಾರದ ಪ್ರತಿಯೊಂದು ಸೌಲಭ್ಯವನ್ನು ಒದಗಿಸುವುದು ನನ್ನ ಪ್ರಮುಖ ಗುರಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬಿಇಓ ನಟರಾಜ್, ತೋಟಗಾರಿಕೆ ಇಲಾಖೆಯ ರಾಮಾಂಜಲಪ್ಪ, ಕೃಷಿ ಇಲಾಖೆ ರುದ್ರಪ್ಪ, ಸಿಡಿಪಿಓ ಅಂಬಿಕಾ, ಸಾಮಾಜಿಕ ವಲಯ ಅರಣ್ಯಾಧಿಕಾರಿ ಶಿಲ್ಪಾ, ಪಶು ಸಂಗೋಪನೆ ಇಲಾಖೆ ನಾಗರಾಜು, ತಾ.ಪಂ ಯೋಜನಾಧಿಕಾರಿ ಮಧುಸೂಧನ್ ಸೇರಿದಂತೆ 24ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಿಡಿಓ ಹಾಜರಿದ್ದರು.