ಗೃಹ ಖಾತೆ ಬದಲಾಯಿಸುವಂತೆ ಮುಖ್ಯಮಂತ್ರಿಯವರನ್ನು ಕೇಳಿಲ್ಲ. ನನ್ನ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಲಾಗಿದೆ. 30 ವರ್ಷದಿಂದ ಮಾಧ್ಯಮದೊಂದಿಗೆ ಸಂಯಮದಿಂದ ನಡೆದುಕೊಂಡಿದ್ದೇನೆ. ನೀವು ಅಷ್ಟೇ ಗೌರವಿಸಿದ್ದೀರಿ. ಇದಕ್ಕೆ ನಾನು ಅಭಾರಿ. ಆದರೆ, ವ್ಯಕ್ತಿಯ ವ್ಯಕ್ತಿತ್ವವನ್ನು ಹೀಗೆ ನಾಶ ಮಾಡುವುದು ಒಳ್ಳೆಯದಲ್ಲ ಮತ್ತು ಶೋಭೆ ತರುವುದಿಲ್ಲ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದರು.
ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ನಾನು ಯಾವತ್ತು ಕೂಡ ಇಂತಹ ಖಾತೆಯೇ ಬೇಕು ಎಂದು ಮುಖ್ಯಮಂತ್ರಿಯವರನ್ನು ಕೇಳಿಲ್ಲ. ಸಿಕ್ಕ ಖಾತೆಯನ್ನು ಸರಿಯಾಗಿ ನಿರ್ವಹಿಸುತ್ತಿರುವೆ. ಖಾತೆ ಬದಲಾವಣೆ ಕುರಿತಂತೆ ನಿಮಗೆ ಯಾರು ಹೇಳಿದರು? ಒಂದು ವೇಳೆ ನಿಮ್ಮ ಕಿವಿಗೆ ಬಿದ್ದಿದ್ದರೆ ನನ್ನನ್ನು ನೇರವಾಗಿ ಕೇಳಿ ಸ್ಪಷ್ಟಪಡಿಸಿಕೊಳ್ಳಬಹುದಲ್ಲವೆ? ಎಂದು ಪ್ರಶ್ನಿಸಿದರು.
“ನಾನು ಮತ್ತು ನನ್ನ ಶ್ರೀಮತಿಯವರು ಸೇರಿದಂತೆ ಯಾರ ಬಳಿಯೂ ನಾನು ರಾಜಕೀಯದ ಬಗ್ಗೆ ಮಾತನಾಡುವುದಿಲ್ಲ. ಖಾತೆ ಬದಲಾಯಿಸುವಂತೆ ಆಪ್ತರ ಬಳಿ ಹೇಳಿದರು, ಮುಖ್ಯಮಂತ್ರಿಯವರ ಬಳಿ ಕೇಳಿದರು, ಅವರು ಸುಮ್ಮನೆ ಇರಿ ಎಂದು ಎಂದೆಲ್ಲ ಸುದ್ದಿ ಮಾಡಲಾಗಿದೆ. ಇದನ್ನು ಯಾರು ಹೇಳಿದರು? ನಮ್ಮ ಅಭಿಮಾನಿಗಳು, ಕ್ಷೇತ್ರದ ಮತದಾರರು ಏನೆಂದುಕೊಳ್ಳುತ್ತಾರೆ? ಮುಂದೆ ಈ ರೀತಿ ಊಹಾಪೋಹಾ ಸುದ್ದಿ ನಿಮ್ಮ ಕಿವಿಗೆ ಬಿದ್ದಾಗ ನನ್ನನ್ನು ಕೇಳಿ” ಎಂದರು.
ಈ ಸುದ್ದಿ ಓದಿದ್ದೀರಾ? ಗೃಹ ಖಾತೆ ಬದಲಿಸಲು ಪರಮೇಶ್ವರ್ ಕೇಳುತ್ತಿದ್ದರೂ ಬದಲಾವಣೆ ಏಕಿಲ್ಲ: ಆರ್ ಅಶೋಕ್ ಪ್ರಶ್ನೆ
“ಬೆಂಗಳೂರಿನಲ್ಲಿ ದುರದೃಷ್ಟಕರ ಘಟನೆ ನಡೆದಿದೆ. ಇಂತಹ ಘಟನೆಗಳಾಗಬಾರದು. ಈ ಘಟನೆಯಿಂದ ನಾವು ನೋವನ್ನು ಅನುಭವಿಸುತ್ತಿದ್ದೇವೆ. ಇಂತಹ ಸವಾಲುಗಳನ್ನು ಎದುರಿಸಬೇಕು. ಕಾಲ್ತುಳಿತ ಘಟನೆಯ ಬಗ್ಗೆ ನಾನು ಈಗ ಮಾತನಾಡುವುದಿಲ್ಲ. ಈ ಪ್ರಕರಣವನ್ನು ನಿವೃತ್ತ ನ್ಯಾಯಾದೀಶ ಮೈಕೆಲ್ ಡಿ.ಕುನ್ಹಾ ಅವರ ಏಕವ್ಯಕ್ತಿ ಆಯೋಗಕ್ಕೆ ವಹಿಸಿದ್ದೇವೆ. ಅವರು ತನಿಖೆ ಮಾಡಿ ವರದಿ ಕೊಡುತ್ತಾರೆ. ನಾವು ಹೇಳಿಕೆ ಕೊಟ್ಟರೆ ಬೇರೆ ರೀತಿಯ ಪರಿಣಾಮ ಬೀರುತ್ತದೆ” ಎಂದು ಹೇಳಿದರು.
ದೆಹಲಿಗೆ ಕರೆದಿಲ್ಲ
“ಪಕ್ಷದ ವರಿಷ್ಠರು ನನ್ನನ್ನು ದೆಹಲಿಗೆ ಕರೆದಿಲ್ಲ. ಫೋನ್ನಲ್ಲಿ ಮಾತನಾಡುತ್ತಿರುತ್ತಾರೆ. ಘಟನೆಯ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೇಳುತ್ತಾರೆ. ಸಿಎಂ, ಡಿಸಿಎಂ ಅವರನ್ನು ಕೇಳಿ ಮಾಹಿತಿ ಪಡೆಯುತ್ತಾರೆ” ಎಂದು ತಿಳಿಸಿದರು.