2022ರಲ್ಲಿ 86.5 ಲಕ್ಷ ಸಾವು; ಕೋವಿಡ್‌ ಸಾವಿನ ಕುರಿತು ವರದಿ ಹೇಳೋದೇನು?

Date:

Advertisements

2022ನೇ ಸಾಲಿನಲ್ಲಿ ದೇಶದಲ್ಲಿ ಸುಮಾರು 86.5 ಲಕ್ಷ ನೋಂದಾಯಿತ ಸಾವುಗಳು ಸಂಭವಿಸಿವೆ. ಕೋವಿಡ್‌ ಪ್ರಭಾವವಿದ್ದ 2021ರಲ್ಲಿ 1.02 ಕೋಟಿಗೂ ಹೆಚ್ಚು ಸಾವು ಸಂಭವಿಸಿದ್ದವು. ಅದಕ್ಕೆ ಹೋಲಿಸಿದರೆ ಸಾವಿನ ಪ್ರಮಾಣ ಶೇ.15.74ಕ್ಕೆ ಇಳಿಕೆಯಾಗಿದೆ ಎಂಬುದನ್ನು CRSನ (ನಾಗರಿಕ ನೋಂದಣಿ ವ್ಯವಸ್ಥೆ) ಹೊಸ ವರದಿ ಬಹಿರಂಗಗೊಳಿಸಿದೆ.

ಕೋವಿಡ್‌ ಪೂರ್ವ ವರ್ಷಗಳಲ್ಲಿ ಅಂದರೆ, 2020 ರಲ್ಲಿ 81.1 ಲಕ್ಷ, 2019 ರಲ್ಲಿ 76.4 ಲಕ್ಷ ಮತ್ತು 2018 ರಲ್ಲಿ 69.5 ಲಕ್ಷ ಸಾವುಗಳು ಸಂಭವಿಸಿದ್ದವು. 2022ರ ಗಣನೀಯ ಇಳಿಕೆಯು ಕೋವಿಡ್-19ರ ಪರಿಣಾಮವನ್ನು ಒತ್ತಿ ಹೇಳುತ್ತಿದ್ದು, ಸಾಂಕ್ರಾಮಿಕದಿಂದ ಗರಿಷ್ಠ ಮಟ್ಟಕ್ಕೆ ತಲುಪಿದ್ದ ಸಾವಿನ ಪ್ರಮಾಣ ಸಾಮಾನ್ಯ ಮಟ್ಟಕ್ಕೆ ಕುಸಿದಿದೆ.

ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರಪ್ರದೇಶ, ತಮಿಳುನಾಡು, ಉತ್ತರ ಪ್ರದೇಶ, ಕರ್ನಾಟಕ, ಪಶ್ಚಿಮ ಬಂಗಾಳ, ಬಿಹಾರ ಮತ್ತು ಹರಿಯಾಣ ಸೇರಿದಂತೆ ಕೆಲವು ಪ್ರಮುಖ ರಾಜ್ಯಗಳು ಆರೋಗ್ಯ ವ್ಯವಸ್ಥೆಯಲ್ಲಿ ಸುಧಾರಣೆ ಕಂಡುಕೊಂಡು ನೋಂದಾಯಿತ ಸಾವುಗಳ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆಗೆ ದಾರಿ ಮಾಡಿಕೊಂಡಿವೆ.

Advertisements
WhatsApp Image 2025 06 10 at 4.42.18 PM

ಕೋವಿಡ್-19 ನಿಂದ 2022ರ ಜುಲೈ 26 ರವರೆಗೆ ಸುಮಾರು 5.26 ಲಕ್ಷ ಸಾವುಗಳು ವರದಿಯಾಗಿವೆ ಎಂದು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಹೇಳಿಕೊಂಡಿತ್ತು. ಆದರೆ ಇದಕ್ಕೆ ವ್ಯತಿರಿಕ್ತವಾಗಿ, ವಿಶ್ವ ಆರೋಗ್ಯ ಸಂಸ್ಥೆಯು (WHO) ಭಾರತದಲ್ಲಿ 47 ಲಕ್ಷಕ್ಕೂ ಹೆಚ್ಚು ಕೋವಿಡ್-19 ಸಂಬಂಧಿತ ಸಾವುಗಳು ಸಂಭವಿಸಿವೆ ಎಂದು ವರದಿ ಮಾಡಿತ್ತು. ತೀವ್ರ ಮುಜುಗರಕ್ಕೀಡಾದ ಕೇಂದ್ರ, ಈ ವಿಶ್ವಸಂಸ್ಥೆಯ ವರದಿಯನ್ನೇ ತೀವ್ರವಾಗಿ ವಿರೋಧಿಸಿ, WHO ಅಂದಾಜುಗಳು “ಹಲವಾರು ಅಸಂಗತತೆಗಳು ಮತ್ತು ತಪ್ಪಾದ ಊಹೆಗಳಿಂದ” ಬಳಲುತ್ತಿವೆ ಎಂದಿತ್ತು.

ಮರಣ ಪ್ರಮಾಣ ಲೆಕ್ಕಹಾಕಲು ಎರಡು ಮೂಲಗಳಿಂದ ಬಂದ ಮಾಹಿತಿಯ ಅಗತ್ಯವಿದೆ:

  1. ಮಾದರಿ ನೋಂದಣಿ ವ್ಯವಸ್ಥೆ (SRS): ಇದು ಪ್ರತಿ 1,000 ಜನರಲ್ಲಿ ಎಷ್ಟು ಜನರು ಸಾವಿಗೀಡಾಗುತ್ತಾರೆ ಎಂಬ ಅಂದಾಜು ಅಂಕಿಅಂಶ ನೀಡುತ್ತದೆ. ಇದರಿಂದ 2022ರಲ್ಲಿ ಸಂಭವಿಸಿದ ಒಟ್ಟು ಸಾವಿನ ಅಂದಾಜು ಲಭ್ಯವಾಗಬಹುದು.
  2. CRS (ನಾಗರಿಕ ನೋಂದಣಿ ವ್ಯವಸ್ಥೆ): ಇದು ನಿಜವಾಗಿ ಆ ವರ್ಷದಲ್ಲಿ ನೋಂದಾಯಿತ ಸಾವಿನ ಪ್ರಮಾಣವನ್ನು ನೀಡುತ್ತದೆ.

ಆದರೆ, ಸರ್ಕಾರ 2022ರ CRS ಮಾಹಿತಿ ಬಿಡುಗಡೆ ಮಾಡಿದ್ದರೂ, SRS ವರದಿಯನ್ನು ಇನ್ನೂ ಪ್ರಕಟಿಸಿಲ್ಲ. ಇದರಿಂದ 2022ರಲ್ಲಿ ಸಾವಿನ ನೋಂದಾವಣೆ ಶೇಕಡಾವಾರನ್ನು ಲೆಕ್ಕ ಹಾಕುವುದು ಅಸಾಧ್ಯವಾಗಿದೆ.

ಭಾರತದಲ್ಲಿ ಸಾವುಗಳ ನೋಂದಣಿ ಶೇಕಡಾವಾರು ಸರಾಸರಿ ಸುಮಾರು 80% ಇತ್ತು ಎಂದು ಹಳೆಯ ವರದಿಯೊಂದು ಮಾಹಿತಿ ನೀಡುತ್ತದೆ. ಆದರೆ, ರಾಜ್ಯದ ಮಟ್ಟದಲ್ಲಿ ಈ ಶೇಕಡಾವಾರು ಹೇಗಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಆದರೆ 2022ರ ಪೂರಕ ಮಾಹಿತಿಯ ಕೊರತೆಯಿಂದ ರಾಜ್ಯದ ಪ್ರಗತಿ ಅಥವಾ ಹಿನ್ನಡೆಯ ಮೇಲೆ ಪ್ರತಿಕ್ರಿಯೆ ನೀಡುವುದು ಸುಲಭವಲ್ಲ.

CRS ವರದಿಯನ್ನು ರಾಜ್ಯ ಸರ್ಕಾರಗಳು ಸಂಗ್ರಹಿಸುತ್ತವೆ. ಆದರೆ SRS ಅಂದಾಜುಗಳನ್ನು ಕೇಂದ್ರ ಸರ್ಕಾರ ಮಾಡುತ್ತದೆ. SRS ಅಂದಾಜುಗಳು ಅತ್ಯಂತ ಅಗತ್ಯ. ಏಕೆಂದರೆ ನೋಂದಣಿಯಿಂದ ತಪ್ಪಿಹೋಗುವ ಸಾವಿನ ಸಂಖ್ಯೆಯನ್ನೂ ಅಂದಾಜು ಮಾಡಬಹುದು.

ಇನ್ನೊಂದು ಪ್ರಮುಖ ಅಂಶವೆಂದರೆ, ಗ್ರಾಮೀಣ ಪ್ರದೇಶಗಳು ನಗರ ಪ್ರದೇಶಗಳಿಗಿಂತ ಉತ್ತಮವಾಗಿ ಸಾವುಗಳನ್ನು ನೊಂದಾಯಿಸುತ್ತಿವೆ ಎಂಬುದು CRS 2022ರ ವರದಿಯಲ್ಲಿ ಸ್ಪಷ್ಟವಾಗಿದೆ. ಇದು ನಗರಗಳಲ್ಲಿನ ದೋಷಪೂರ್ಣ ವ್ಯವಸ್ಥೆಯನ್ನು ಬೆಳಕಿಗೆ ತರುತ್ತದೆ.

ಒಟ್ಟು ಹೇಳುವುದಾದರೆ, 2022ರ ಸಾವಿನ ನಿಖರ ದಾಖಲಾತಿ ಬಗ್ಗೆ ಪೂರಕ ದೃಷ್ಟಿಕೋನ ಪಡೆಯಲು, SRS ಅಂಕಿಅಂಶಗಳಿಲ್ಲದೆ ಹೇಳಲಾಗುವುದಿಲ್ಲ. ಕೇಂದ್ರ ಈ ಅಂಕಿಅಂಶಗಳನ್ನು, ಅಧಿಕೃತ ವರದಿಯನ್ನು ಬಿಡುಗಡೆ ಮಾಡದಿರುವುದು ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟಿಸಿದೆ.

ಜನನ ಪ್ರಮಾಣದಲ್ಲೂ ಹೆಚ್ಚಳ:

ಸಿಆರ್‌ಎಸ್ ವರದಿಯು, 2022 ರಲ್ಲಿ 2.54 ಕೋಟಿಗೂ ಹೆಚ್ಚು ಆರೋಗ್ಯವಂತ ಜನನಗಳು ದಾಖಲಾಗಿವೆ ಎಂದಿದೆ. 2021 ರಲ್ಲಿ 2.42 ಕೋಟಿಯಿದ್ದ ನೋಂದಾಯಿತ ಜನನಗಳ ಸಂಖ್ಯೆ 2022 ರಲ್ಲಿ 2.54 ಕೋಟಿಗೆ ಏರಿದ್ದು, ಸುಮಾರು ಶೇ. 5.1 ರಷ್ಟು ಜನನ ಪ್ರಮಾಣ ಹೆಚ್ಚಳವಾಗಿದೆ ಎಂದು ತಿಳಿಸಿದೆ. 2021 ಕ್ಕೆ ಹೋಲಿಸಿದರೆ 2022 ರಲ್ಲಿ ಬಿಹಾರ, ಹರಿಯಾಣ, ಹಿಮಾಚಲ ಪ್ರದೇಶ, ಸಿಕ್ಕಿಂ, ಪಶ್ಚಿಮ ಬಂಗಾಳ, ಲಡಾಖ್ ಮತ್ತು ಲಕ್ಷದ್ವೀಪಗಳನ್ನು ಹೊರತುಪಡಿಸಿ ಬಹುತೇಕ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನೋಂದಾಯಿತ ಜನನಗಳಲ್ಲಿ ಹೆಚ್ಚಳ ಕಂಡುಬಂದಿದೆ.

ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಜಾರ್ಖಂಡ್, ಕರ್ನಾಟಕ, ಗುಜರಾತ್, ತೆಲಂಗಾಣ, ಛತ್ತೀಸ್‌ಗಢ ಮತ್ತು ಅಸ್ಸಾಂ ರಾಜ್ಯಗಳಲ್ಲಿ 2021 ಕ್ಕಿಂತ 2022 ರಲ್ಲಿ ನೋಂದಾಯಿತ ಜನನಗಳ ಹೆಚ್ಚಳವಾಗಿದೆ. ಈ ರಾಜ್ಯಗಳಲ್ಲಿ ಸಾವಿನ ಪ್ರಮಾಣವೂ ಗಣನೀಯವಾಗಿ ಕಡಿಮೆಯಾಗಿದೆ ಎಂಬುದು ಗಮನಾರ್ಹ. ಮತ್ತೊಂದೆಡೆ 2021-2022ರ ಅವಧಿಯಲ್ಲಿ ಪಶ್ಚಿಮ ಬಂಗಾಳ ಮತ್ತು ಬಿಹಾರ ರಾಜ್ಯಗಳಲ್ಲಿ ನೋಂದಾಯಿತ ಜನನಗಳಲ್ಲಿ ಭಾರೀ (ಆರು ಅಂಕಿಗಳಷ್ಟು) ಇಳಿಕೆ ಕಂಡುಬಂದಿದೆ ಎಂದೂ ವರದಿ ಹೇಳಿದೆ.

2022ರ CRS ವರದಿ ಆ ವರ್ಷದಲ್ಲಿ ದೇಶದ ನೋಂದಾಯಿತ ಸಾವುಗಳ ಸಂಖ್ಯೆಯನ್ನು ಸ್ಪಷ್ಟವಾಗಿ ತೋರಿಸುತ್ತಿದೆ. ಆದರೆ, ಎಷ್ಟು ಸಾವುಗಳು ನೋಂದಾವಣೆಯಾಗಿಲ್ಲ ಎಂಬುದರ ಕುರಿತು ಯಾವುದೇ ಮಾಹಿತಿ ಬಹಿರಂಗಗೊಳಿಸಿಲ್ಲ. ಹಾಗಾಗಿ ಮರಣದ ದಾಖಲೆ ವ್ಯವಸ್ಥೆ ಎಷ್ಟು ನಿಖರವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ.

ಹೀಗಾಗಿ, 2022ರ CRS ವರದಿ ಮೂಲ ಮರಣ ಪ್ರಮಾಣ ತಿಳಿಯಲು ಸಹಾಯ ಮಾಡಿದರೂ, ಮರಣದ ದಾಖಲೆ ವ್ಯವಸ್ಥೆಯ ನಿಖರತೆಯನ್ನು ಮೌಲ್ಯಮಾಪನ ಮಾಡುವುದು ಸವಾಲಾಗಿದೆ. ಮುಂದಿನ ವರ್ಷಗಳಲ್ಲಾದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿಖರ ದಾಖಲೆಗಳ ಪ್ರಮಾಣ, ನೋಂದಾಯಿತ ಹಾಗೂ ನೋಂದಾಯಿತವಲ್ಲದ ಮರಣಗಳ ಅಂದಾಜು ಮತ್ತು ಉತ್ತಮ ಡಿಜಿಟಲ್ ದಾಖಲೆ ವ್ಯವಸ್ಥೆಗಳ ಅನುಷ್ಠಾನ ಕುರಿತ ಮಾಹಿತಿಯನ್ನು ಬಹಿರಂಗಗೊಳಿಸುವುದರ ಜೊತೆಗೆ ಆರೋಗ್ಯ ವ್ಯವಸ್ಥೆ, ಸ್ಥಳೀಯ ಆಡಳಿತ ಮತ್ತು ಜಾಗೃತಿಯ ಸುಧಾರಣೆ ಅಗತ್ಯವಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊರೋನಾ ಸಮಯದಲ್ಲಿ ತಬ್ಲಿಘಿ ಸಭೆ: 70 ಜನರ ವಿರುದ್ಧದ FIR ರದ್ದು; ಕೋರ್ಟ್‌ ಆದೇಶ

ದೇಶದಲ್ಲಿ ಕೊರೋನಾ ಆಕ್ರಮಣ ಆರಂಭವಾಗಿದ್ದ ಸಮಯ 2020ರ ಮಾರ್ಚ್‌ನಲ್ಲಿ ದೆಹಲಿಯಲ್ಲಿ ತಬ್ಲಿಘಿ...

ದಾವಣಗೆರೆ | ಹೃದಯಾಘಾತಕ್ಕೆ ಯುವಕ ಬಲಿ

ದಾವಣಗೆರೆಯ ಉದ್ಯಮಿಯೊಬ್ಬರ ಪುತ್ರ ಕಾಲೇಜು ವಿದ್ಯಾರ್ಥಿ ಹೃದಯಾಘಾತದಿಂದ (Heart Attack) ಕುಸಿದು...

ಮಹಿಳೆಯರನ್ನು ಗರ್ಭಕೋಶ ಕ್ಯಾನ್ಸರ್‌ನಿಂದ ರಕ್ಷಿಸಲು ಎಚ್‌ಪಿವಿ ಲಸಿಕೆ ಅತ್ಯಗತ್ಯ: ಡಾ. ಮಂಗಳ

ಮಹಿಳೆಯರಲ್ಲಿ ಗರ್ಭಕೋಶದ ಕ್ಯಾನ್ಸರ್ ಹೆಚ್ಚಾಗಿ ಕಂಡುಬರುತ್ತಿದೆ. ಈ ಸಮಸ್ಯೆಯಿಂದ ರಕ್ಷಣೆ ಪಡೆಯಲು...

ಕೋವಿಡ್ ಲಸಿಕೆಗೂ ಹಠಾತ್ ಸಾವುಗಳಿಗೂ ಯಾವುದೇ ಸಂಬಂಧವಿಲ್ಲ: ಆರೋಗ್ಯ ಸಚಿವಾಲಯ

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಮತ್ತು ರಾಷ್ಟ್ರೀಯ ರೋಗ ನಿಯಂತ್ರಣ...

Download Eedina App Android / iOS

X