ಜವಾಬ್ದಾರಿಯುತ ಸ್ಥಾನದಲ್ಲಿರುವ ಛಲವಾದಿ ನಾರಾಯಣಸ್ವಾಮಿ ಹಾಗೂ ಎನ್.ರವಿಕುಮಾರ್ ಅವರು ಅಸಂಸದೀಯ ಪದ ಬಳಕೆ ಮಾಡುವ ಮೂಲಕ ವಿಧಾನ ಪರಿಷತ್ಗೆ ಕುಂದು ತಂದಿದ್ದು, ಕೂಡಲೇ ಇಬ್ಬರನ್ನು ವಿಧಾನ ಪರಿಷತ್ ಸದಸ್ಯತ್ವದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕ ನೇತ್ರತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಮಂಗಳವಾರ ಬೀದರ್ ನಗರದ ಶಾಹಗಂಜ ಡಾ.ಬಿ.ಆರ್.ಅಂಬೇಡ್ಕರ್ ಭವನದಿಂದ ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿದರು. ಬಳಿಕ ರಾಜ್ಯಪಾಲರ ಹೆಸರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖಂಡರು ಮಾತನಾಡಿ, ʼರಾಜ್ಯ ಸರ್ಕಾರದಲ್ಲಿ ಸಂಪುಟ ದರ್ಜೆ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಜೀವಪರ, ಜನಪರ ಹಾಗೂ ಅಂಬೇಡ್ಕರ್ ಸಿದ್ಧಾಂತ ಮೈಗೂಡಿಸಿಕೊಂಡು ಬಿಜೆಪಿ ಹಾಗೂ ಕೋಮುವಾದಿ ಸಂಘಪರಿವಾರದವರನ್ನು ವಿಧಾನಸೌಧದ ಒಳಗೆ ಹಾಗೂ ಹೊರಗೆ ಸಿಂಹಸ್ವಪ್ನವಾಗಿ ಕಾಡುತ್ತಿದ್ದಾರೆ. ಪ್ರಿಯಾಂಕ್ ಖರ್ಗೆ ಅವರು ಸಾರ್ವಜನಿಕವಾಗಿ ಕೇಳಿರುವ ಸಂವಿಧಾನ ಬದ್ಧವಾದ ಸೈದ್ಧಾಂತಿಕ ಪ್ರಶ್ನೆಗಳಿಗೆ ಉತ್ತರಿಸಲು ನೈತಿಕ ಸಾಮರ್ಥ್ಯವಿಲ್ಲದ ಮನುವಾದಿಗಳು ಖರ್ಗೆ ಅವರ ವೈಯಕ್ತಿಕ ನಿಂದನೆಗೆ ಇಳಿದಿರುವುದು ನಾಚಿಕೆಗೇಡಿನ ಸಂಗತಿʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
ʼನಾಡಿನ ಅಭಿವೃದ್ಧಿ ಹಾಗೂ ದಲಿತರ ಮೇಲಿನ ದೌರ್ಜನ್ಯಗಳ ಕುರಿತು ಸದನದಲ್ಲಿ ಗಂಭೀರವಾಗಿ ಚರ್ಚಿಸಲು ಪಾಲ್ಗೊಳ್ಳದ ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ ಅವರು ಬಿಜೆಪಿ, ಆರ್ಎಸ್ಎಸ್ ಅಣತಿಗೆ ತಕ್ಕಂತೆ ʼಮನುವಾದಿʼಗಳಾಗಿ ವರ್ತಿಸುತ್ತಿದ್ದಾರೆ. ಯಾವ ಘನ ಉದ್ದೇಶ ಇಲ್ಲದಿದ್ದರೂ, ಸಣ್ಣಪುಟ್ಟ ನೆಪದಿಂದ ಪದೇ ಪದೇ ಕಲಬುರಗಿಗೆ ಆಗಮಿಸುವ ನಾರಾಯಣಸ್ವಾಮಿಅ ಅವರು ಖರ್ಗೆ ಅವರನ್ನು ನಿಂದಿಸುವುದನ್ನೇ ಕಾಯಕ ಮಾಡಿಕೊಂಡು, ಖರ್ಗೆ ಕುಟುಂಬದ ವಿರುದ್ಧ ಸುಳ್ಳು ಆಪಾದನೆ ಹೊರಿಸುತ್ತಿದ್ದಾರೆ. ಇದರಿಂದ ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತ, ಕಲ್ಯಾಣ ಕರ್ನಾಟಕ ಭಾಗದ ಜನರಲ್ಲಿ ವಿಷ ಬಿತ್ತಿ ಸಾಮರಸ್ಯ ಹಾಳು ಮಾಡುತ್ತಿರುವುದು ಖಂಡನೀಯʼ ಎಂದರು.
ʼಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ನಾಯಿಗೆ ಹೋಲಿಸಿ ಸಾರ್ವಜನಿಕವಾಗಿ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತಂದಿರುವ ಛಲವಾದಿ ನಾರಾಯಣಸ್ವಾಮಿ ಅವರ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ಹೂಡಲು ಸಮುದಾಯ ಚಿಂತಿಸುತ್ತಿದೆ. ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರು ಈಚೆಗೆ ಕಲಬುರಗಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಕಲಬುರಗಿ ಜಿಲ್ಲಾಧಿಕಾರಿಗಳ ವಿರುದ್ಧ ಅಸಂವಿಧಾನಿಕ ಪದ ಬಳಸಿ ಅವಹೇಳನ ಮಾಡಿರುವುದು ಖಂಡನೀಯ. ಜವಾಬ್ದಾರಿ ಸ್ಥಾನದಲ್ಲಿರುವವರ ಇಂಥ ನಡುವಳಿಕೆ ಸರಿಯಲ್ಲ. ಕೂಡಲೇ ಇವರನ್ನು ಎಂಎಲ್ಸಿ ಸ್ಥಾನದಿಂದ ವಜಾಗೊಳಿಸಬೇಕುʼ ಎಂದು ಒತ್ತಾಯಿಸಿದರು.
ಇದನ್ನೂ ಓದಿ : ಯಾದಗಿರಿ | ಕಾಲ್ತುಳಿತ ದುರಂತ : ಮೃತ ಶಿವಲಿಂಗ ಕುಂಬಾರ್ ಕುಟುಂಬಕ್ಕೆ ₹25 ಲಕ್ಷ ಚೆಕ್ ವಿತರಣೆ
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ, ಜಿಲ್ಲಾ ಸಂಚಾಲಕ ಅರುಣ ಪಟೇಲ್, ಜಿಲ್ಲಾ ಸಂಘಟನಾ ಸಂಚಾಲಕ ರಾಜಕುಮಾರ ವಾಘಮಾರೆ, ದಲಿತ ಕಲಾ ಮಂಡಳಿ ಜಿಲ್ಲಾ ಸಂಚಾಲಕ ಶಿವರಾಜ ಪಡಪಳ್ಳಿ, ಜಿಲ್ಲಾ ಸಂಘಟನಾ ಸಂಚಾಲಕ ಅಶೋಕ ಗಾಯಕವಾಡ ಸೇರಿದಂತೆ ಪ್ರಮುಖರಾದ ವಿಠಲದಾಸ ಪ್ಯಾಗೆ, ಬಾಬುರಾವ್ ಹೊನ್ನಾ, ಪಂಡಿತರಾವ ಚಿದ್ರಿ, ಅಬ್ದುಲ್ ಮನ್ನಾನ್ ಸೇಠ್, ಬಾಬು ಟೈಗರ್, ಮಹೇಶ ಗೋರನಾಳಕರ್, ವಿನಯ ಮಾಳಗೆ, ರಮೇಶ ಉಮ್ಮಾಪೂರೆ, ವಾಮನ ಮೈಸಲಗೆ, ರಮೇಶ ಬೆಲ್ದಾರ್, ಸತೀಶ ರತ್ನಾಕರ್, ಝರೆಪ್ಪಾ ವರ್ಮಾ, ಗೋವಿಂದರಾವ, ಶಿರೋಮಣಿ ಹಲಗೆ, ರಾಹುಲ ಹಾಲಹಿಪ್ಪರ್ಗಾ, ವಿನೋದ ಬಂದಗೆ, ವಿಜಯಕುಮಾರ ಭಾವಿಕಟ್ಟೆ, ಮಲ್ಲಿಕಾರ್ಜುನ ಮಹೇಂದ್ರಕುಮಾರ, ದಶರಥ ಗುರು, ಅಶೋಕ ಗಾಯಕವಾಡ, ಸುರೇಶ ಮೊರೆ, ಅಭಿ ಕಾಳೆ, ಶ್ರೀಧರ ಸೋಮನೋರ್, ಗೌತಮ ಮುತಂಗಿಕರ್, ರಾಹುಲ್ ಹಾಲೇಪುರ್ಗೆಕರ್ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.