ದೇಶದಲ್ಲಿ ಸಾವಿರಾರು ವರ್ಷಗಳಿಂದ ಅಕ್ಷರ, ಅರಿವು, ಅಧಿಕಾರವನ್ನು ಕೆಲವೇ ಸಮುದಾಯಗಳು ಅನುಭವಿಸಿದ್ದವು. ಆದರೆ ಬಹುಸಂಖ್ಯಾತರಾದ ಎಸ್ಸಿ, ಎಸ್ಟಿ, ಹಿಂದುಳಿದ ಸಮುದಾಯಗಳು ಮತ್ತು ಎಲ್ಲಾ ಜಾತಿಯ ಮಹಿಳೆಯರು ಸೇರಿದಂತೆ ಶೋಷಿತ, ಅವಕಾಶ ವಂಚಿತ ಸಮುದಾಯಗಳಿಗೆ ಸಂವಿಧಾನಬದ್ದವಾಗಿ ಮುಕ್ತ ಅವಕಾಶಗಳನ್ನು ನೀಡಿದವರು ಅಂಬೇಡ್ಕರ್ ರವರೇ ನ್ಯಾಯದ ಅಸ್ತ್ರವಾಗಿದ್ದಾರೆ ಎಂದು ಕವಿಗಳು ಮತ್ತು ಉಪನ್ಯಾಸಕರಾದ ಉಮರ್ ದೇವರಮನಿ ಮಾನವಿ ಅಭಿಮತ ವ್ಯಕ್ತಪಡಿಸಿದರು.
ಮಾನ್ವಿ ತಾಲೂಕಿನ ನಕ್ಕುಂದಿ ಗ್ರಾಮದ ಬಸಲಿಂಗಮ್ಮ – ಮೌನೇಶ ಇವರ ಮನೆಯಲ್ಲಿ ಬಹುಜನ ಸಂಘರ್ಷ ಸಮಿತಿಯಿಂದ ಸೋಮವಾರ ಆಯೋಜಿಸಿದ್ದ, 116ನೇ ಮನೆ-ಮನೆಗೆ ಅಂಬೇಡ್ಕರ್ ಕಾರ್ಯಕ್ರಮವನ್ನು ಸಂವಿಧಾನ ಪೀಠಿಕೆ ಓದುವದರೊಂದಿಗೆ ಉದ್ಘಾಟಿಸಿ ಮಾತನಾಡಿದರು.
ಮಾನ್ವಿ ತಾಲೂಕ ಖಾಸಗಿ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ಆಂಜಿನೇಯ್ಯ ನಸಲಾಪೂರ ಮುಖ್ಯಭಾಷಣಕಾರರಾಗಿ ಮಾತನಾಡಿ ಸಂವಿಧಾನ ಜಾರಿ ಪೂರ್ವ ಭಾರತ ದೇಶದಲ್ಲಿ ಅಸಮಾನತೆ ತಾಂಡವಾಡುತ್ತಿತ್ತು. ದಲಿತರಿಗೆ, ಮಹಿಳೆಯರಿಗೆ, ಎಲ್ಲಾ ಜಾತಿಯ ಬಡವರಿಗೂ ಸೇರಿದಂತೆ ಸರ್ವರಿಗೂ ಸಮಾನತೆಯಿಂದ ಬದುಕುವಂತಹ ಸಮಾನವಾದ ಅವಕಾಶಗಳು ಮತ್ತು ಸಮಾನತೆಯ ಹಕ್ಕುಗಳನ್ನು ಸಂವಿಧಾನಬದ್ಧವಾಗಿ ಕಲ್ಪಿಸಿಕೊಟ್ಟವರು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಎಂದು ಅಭಿಪ್ರಾಯಪಟ್ಟರು.
ಬಾಬಾಸಾಹೇಬ್ ಅಂಬೇಡ್ಕರ್ ರವರ ಹೋರಾಟದ ಪ್ರತಿಫಲದಿಂದ ಓಟಿನ ಹಕ್ಕು ದೊರಕಿಸಿ ಕೊಟ್ಟಿದ್ದಾರೆ. ಓಟು ಸರ್ವಸಮಸ್ಯೆಗಳ ಪರಿಹಾರದ ಅಸ್ತ್ರವಾಗಿದೆ. ಇದನ್ನು ಬಳಸುವಲ್ಲಿ ಅನಕ್ಷರಸ್ಥರಿಗಿಂತ ಅಕ್ಷರಸ್ಥರೇ ದಾರಿ ತಪ್ಪುತ್ತಿದ್ದಾರೆ ಎಂದು ಕಳವಳಪಟ್ಟರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಮೂರು ದಿನಗಳ ಮುಂಗಾರು ಸಾಂಸ್ಕೃತಿಕ ಬೆಳ್ಳಿ ಹಬ್ಬಕ್ಕೆ ಚಾಲನೆ
ಪ್ರಾಸ್ತಾವಿಕವಾಗಿ ಬಹುಜನ ಸಂಘರ್ಷ ಸಮಿತಿ ಸಂಸ್ಥಾಪಕ ಅಧ್ಯಕ್ಷ ಜೆ.ಶರಣಪ್ಪ ಬಲ್ಲಟಗಿ, ಗ್ರಂಥಾಪಾಲಕ ಹನುಮಂತ್ರಾಯ ದೊರೆ ನಕ್ಕುಂದಿ ಮಾತನಾಡಿದರು.ಸಾಮಾಜಿಕ ಕಾರ್ಯಕರ್ತ ಹಾಗೂ ಯುವ ದಲಿತ ಮುಖಂಡ ಮೌನೇಶ ನಕ್ಕುಂದಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದಲಿತ ಸಂಘರ್ಷ ಸಮಿತಿ ಯುವನಾಯಕ ಜಗದೀಶ ಸಾಲ್ಮನಿ ಬಾಗಲವಾಡ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಈ ಸಂದರ್ಭದಲ್ಲಿ ನಕ್ಕುಂದಿ ಗ್ರಾಮ ಪಂಚಾಯತಿ ಅಧ್ಯಕ್ಷ ಈರಮ್ಮ ಹನುಮಯ್ಯ ನಕ್ಕುಂದಿ, ದಸಂಸ ಜಿಲ್ಲಾ ಸಂಚಾಲಕ ಗಂಗಾಧರ ಹಿಂದಿನಮನೆ ಬಾಗಲವಾಡ, ಮಾನವಿ ಬಹುಜನ ಸಂಘರ್ಷ ಸಮಿತಿ ತಾಲೂಕಾಧ್ಯಕ್ಷ ಯಮುನಪ್ಪ ಜಾಗೀರಪನ್ನೂರು, ದಸಂಸ ಮುಖಂಡ ಮೌನೇಶ್ ಕೋರಿ ಬಾಗಲವಾಡ, ಶಿವರಾಜ ಮರಾಠ, ನಕ್ಕುಂದಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವೀರೇಶ ನಕ್ಕುಂದಿ,ನಕ್ಕುಂದಿ ಗ್ರಾಮ ಪಂಚಾಯತಿ ಸದಸ್ಯ ಯಂಕಪ್ಪ ನಕ್ಕುಂದಿ, ಬುಡ್ಡಪ್ಪ ನಕ್ಕುಂದಿ, ಹನುಮಯ್ಯ ನಕ್ಕುಂದಿ, ಕಂಠಮ್ಮ ನಕ್ಕುಂದಿ, ದುರ್ಗಮ್ಮ, ಲಕ್ಷ್ಮಿ ಕುಟುಂಬಸ್ಥರು ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು
