ಮನುಕುಲದ ಉಳಿವಿಗೆ ಪರಿಸರ ಅತ್ಯವಶ್ಯಕವಾಗಿದೆ. ಹಾಗಾಗಿ ಪರಿಸರ ಸಂರಕ್ಷಣೆಯು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ವನಿತಾ ಆರ್ ಹೇಳಿದರು.
ವಿಜಯಪುರ ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
“ವಿಶೇಷವಾಗಿ ವಿದ್ಯಾರ್ಥಿನಿಯರು ತಮ್ಮ ದೈನಂದಿನ ಜೀವನದ ಸ್ನೇಹಿ ಯೋಜನೆಗಳನ್ನು ರೂಢಿಸಿಕೊಳ್ಳಬೇಕು” ಎಂದು ಸಲಹೆ ನೀಡಿದ ಅವರು ಅರಣ್ಯ ಇಲಾಖೆ ನಗರದಲ್ಲಿ ಕೈಗೊಂಡಿರುವ ಪರಿಸರ ಸ್ನೇಹಿ ಕಾರ್ಯಕ್ರಮಗಳಾದ ಕೋಟೆ ವೃಕ್ಷ ಆಂದೋಲನ ಹಾಗೂ ಸಾರ್ವಜನಿಕರಿಗೆ ಮೊಳಕೆ ಸಸಿಗಳ ವಿತರಣೆ ಕುರಿತು ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು.
ಮಹಿಳಾ ವಿವಿಯ ಕುಲ ಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ʼಹಸಿರಿಲ್ಲದೆ ಉಸಿರಿಲ್ಲʼ ಎಂಬ ನುಡಿಯನ್ನು ಉಲ್ಲೇಖಿಸಿ, “ಸಸಿ ನೆಡುವ ಕಾರ್ಯಕ್ರಮವನ್ನು ಪರಿಸರ ದಿನಾಚರಣೆಗಷ್ಟೇ ಸೀಮಿತಗೊಳಿಸದೆ, ಅವುಗಳನ್ನು ಪೋಷಿಸಿ ಬೆಳೆಸಬೇಕು” ಎಂದು ಸಲಹೆ ಮಾಡಿದರು. ಪರಿಸರದ ಬಗೆಗಿನ ಜ್ಞಾನವನ್ನು ರಸಪ್ರಶ್ನೆ ಮುಖಾಂತರ ಕೇಳಿ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿವಿಯ ಹಂಗಾಮಿ ಕುಲಪತಿ ಪ್ರೊ. ಶಾಂತಾದೇವಿ ಟಿ ಮಾತನಾಡಿ, ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಹಸಿರೀಕರಣ ಪ್ರಯತ್ನಗಳನ್ನು ನೆನಪಿಸಿಕೊಂಡರು. “ವಿಶ್ವವಿದ್ಯಾಲಯದ ಕೋಶದ ವತಿಯಿಂದ ಪ್ರತಿ ವರ್ಷ 500 ಸಸಿಗಳನ್ನು ನೆಟ್ಟು ಪೋಷಿಸಲಾಗುತ್ತಿರುವುದು ಶ್ಲಾಘನೀಯ. ವಿವಿಯ ಆವರಣದಲ್ಲಿ ವಿಶೇಷ ಸಸಿಗಳ ಸಸ್ಯೋದ್ಯಾನ ಸ್ಥಾಪಿಸಲು ಅರಣ್ಯ ಇಲಾಖೆ ಅಗತ್ಯ ನೆರವು ನೀಡಬೇಕು” ಎಂದು ಕೋರಿದರು.
ಇದನ್ನೂ ಓದಿದ್ದೀರಾ? ರಾಜಕಾರಣಿಗಳ ಕಣ್ಣೀರು ರಾಜಕೀಯ ತಂತ್ರ, ಪ್ರಜೆಗಳ ಭಾವನೆಗಳಿಗೆ ಎಸಗುವ ದ್ರೋಹ
“ತಮ್ಮ ಹೆಸರಿನಲ್ಲಿ ಒಂದೊಂದು ಸಸಿಯನ್ನು ನೆಟ್ಟು, ಪೋಷಿಸಿ, ಮುಂದಿನ ಪೀಳಿಗೆಗೆ ಶಾಶ್ವತ ಹಸಿರಾದ ಕೊಡುಗೆಯನ್ನು ನೀಡಬೇಕು” ಎಂದು ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿವಿಯ ಮೌಲ್ಯಮಾಪನ ಕುಲ ಸಚಿವ ಪ್ರೊ. ಎಚ್ ಎಮ್ ಚಂದ್ರಶೇಖರ, ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕಿ ಪ್ರೊ. ಲಕ್ಷ್ಮೀದೇವಿ ವೈ, ವಿಭಾಗದ ಅಧ್ಯಾಪಕಿ ಫಿರ್ದೊಶ್ ಕೋಲ್ಹಾರ ಹಾಗೂ ವಿದ್ಯಾರ್ಥಿನಿಯರು ಇದ್ದರು.