“ನನ್ನ ವೃತ್ತಿಬದುಕಿಗೆ ರಾಜ್ಯದ ನೌಕರ ಸಂಘದ ಅಧ್ಯಕ್ಷ ಷಡಾಕ್ಷರಿ ಮತ್ತು ಮಾಜಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ವ್ಯವಸ್ಥಿತ ಪಿತೂರಿಯಿಂದ ತೊಂದರೆಯಾಗಿದೆ. ಕಳೆದ 6 ತಿಂಗಳಿಂದ ವೇತನವಿಲ್ಲದೆ ನರಕಯಾತನೆ ಅನುಭವಿಸಿದ್ದೇನೆ. ನನ್ನ ಇಡೀ ಕುಟುಂಬ ಕಣ್ಣೀರಿನಲ್ಲಿ ಮುಳುಗಿದೆ. ನನ್ನ ಸಮಸ್ಯೆಗೆ ಪರಿಹಾರ ಸಿಗಬಹುದು ಎಂಬ ನಿರೀಕ್ಷೆಯಲ್ಲಿ 6 ತಿಂಗಳಕಾಲ ಕಳೆದಾಯಿತು. ಆದರೂ ಯಾವುದೇ ಪರಿಹಾರ ಸಿಕ್ಕಿಲ್ಲ. ಈ ಘಟನೆಗೆ ಕಾರಣರಾದವರು ಚೆನ್ನಾಗಿರಲಿ… ನಾನು ಬದುಕಿಗೆ ವಿಧಾಯ ಹೇಳಲು ಬಯಸಿದ್ದೇನೆ” ಎಂದು ಎನ್ಪಿಎಸ್ ನೌಕರ ಪ್ರಭಾಕರ್ ಎಂಬವರು ವಾಟ್ಸಾಪ್ನಲ್ಲಿ ಡೆತ್ನೋಟ್ ಮೆಸೇಜ್ ಕಳಿಸಿ, ಜುಲೈ 19ರಿಂದ ನಾಪತ್ತೆಯಾಗಿದ್ದಾರೆ.
ಶಿವಮೊಗ್ಗ ನಿಯಾಸಿಯಾಗಿರುವ ಪ್ರಭಾಕರ್ ಅವರು ಸರ್ಕಾರಿ ನೌಕರರ ಸಂಘದ ವಾಟ್ಸಾಪ್ ಗ್ರೂಪ್ನಲ್ಲಿ ಎರಡು ಡೆತ್ನೋಟ್ ಪೋಸ್ಟ್ ಮಾಡಿದ್ದಾರೆಂದು ತಿಳಿದುಬಂದಿದೆ. ಡೆತ್ನೋಟ್ನ ಮೆಸೇಜ್ ಸೆಂಡ್ ಮಾಡಿ, ಅವರು ಪೋನ್ ಸ್ವಿಚ್ಆಫ್ ಮಾಡಿಕೊಂಡಿದ್ದು, ಕುಟುಂಬಸ್ಥರು ಮತ್ತು ಸ್ನೇಹಿತರು ಆತಂಕಗೊಂಡಿದ್ದಾರೆ.
ಪ್ರಭಾಕರ್ ಅವರ ಸ್ನೇಹಿತರು, ಬಂಧು ಬಳಗದವರು ಪ್ರಭಾಕರ್ ಮನೆಯ ಬಳಿ ಜಮಾಯಿಸಿದ್ದಾರೆ. ಡೆತ್ನೋಟ್ ಆಧಾರದ ಮೇಲೆ ಶಿವಮೊಗ್ಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ, ಕರ್ನಾಟಕ ರಾಜ್ಯ ಎನ್ಪಿಎಸ್ ನೌಕರರ ಸಂಘ ಕೂಡ ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದೆ.
ಬುಧವಾರ ಮುಂಜಾನೆ 4:28 ಗಂಟೆ ಮತ್ತು ಬೆಳಗ್ಗೆ 8:13 ಗಂಟೆಗೆ ನೌಕರರ ವಾಟ್ಸಾಪ್ ಗ್ರೂಪ್ನಲ್ಲಿ ಪ್ರಭಾಕರ್ ಎರಡು ಮೆಸೇಜ್ ಪೋಸ್ಟ್ ಮಾಡಿದ್ದಾರೆ. ಅವರು ಬರೆದಿರುವ ಮೆಸೇಜ್ ಕೆಳಗಿನಂತಿದೆ.
4.28ಕ್ಕೆ ಕಳಿಸಿದ ಮೊದಲ ಮೆಸೇಜ್ನಲ್ಲಿ “ಆತ್ಮೀಯ ರಾಜ್ಯದ ಸಮಸ್ತ ಎನ್ಪಿಎಸ್ ನೌಕರ ಸಂಘದ ಪದಾಧಿಕಾರಿ ಮಿತ್ರರೇ ನಾನು ಕಳೆದ ಹತ್ತು ವರ್ಷಗಳಿಂದ ಎನ್ಪಿಎಸ್ ನೌಕರ ಸಂಘವನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಾಮಾಣಿಕವಾಗಿ ಕಟ್ಟಿ ಬೆಳೆಸಿದ್ದೇನೆ. ರಾಜ್ಯ ಸಂಘದ ನಿರ್ಧೇಶನದಂತೆ ಅನೇಕ ಕಾರ್ಯಕ್ರಮಗಳನ್ನು ಶಿವಮೊಗ್ಗ ತಾಲ್ಲೂಕಿನಲ್ಲಿ ಯಶಸ್ವಿಯಾಗಿ ಸಂಘಟನೆ ಮಾಡಿದ್ದೇನೆ. ಇತ್ತೀಚೆಗೆ ಜನವರಿ 22-2023 ರಂದು ಶಿವಮೊಗ್ಗ ಜಿಲ್ಲಾ ಮಟ್ಟದ ಎನ್ಪಿಎಸ್ ನೌಕರರ ಸಮಾವೇಶ ಮತ್ತು ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಅತ್ಯಂತ ಯಶಸ್ವಿಯಾಗಿ ಮಾಡಿದ್ದರ ಫಲವಾಗಿ ನನ್ನ ವೃತ್ತಿಬದುಕಿಗೆ ರಾಜ್ಯದ ನೌಕರ ಸಂಘದ ಅಧ್ಯಕ್ಷರಿಂದ ವ್ಯವಸ್ಥಿತ ತೊಂದರೆಯಾಗಿ ಕಳೆದ 6 ತಿಂಗಳಿಂದ ವೇತನವಿಲ್ಲದೆ ನರಕಯಾತನೆ ಅನುಭವಿಸಿದ್ದೇನೆ. ಮತ್ತು ನನ್ನ ಇಡೀ ಕುಟುಂಬ ಕಣ್ಣೀರಿನಲ್ಲಿ ಮುಳುಗಿದೆ ನನ್ನ ಸಮಸ್ಯೆಗೆ ಪರಿಹಾರ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಕಾಲ ಕಳೆದಾಯಿತು. ಆದರೂ ಯಾವುದೇ ಪರಿಹಾರ ಸಿಗದೆ ಪ್ರಯತ್ನಗಳೆಲ್ಲ ವಿಫಲವಾಗಿದ್ದು ಅತ್ಯಂತ ನೋವಿನ ಸಂಗತಿ. ಈ ಘಟನೆಗೆ ಕಾರಣರಾದವರು ಚೆನ್ನಾಗಿರಲಿ. ನಾನು ಈ ಸಮಸ್ಯೆಯನ್ನು ನಿಭಾಯಿಸುವಲ್ಲಿ ಮಾನಸಿಕವಾಗಿ ವಿಫಲನಾಗಿರುವ ಪ್ರಯುಕ್ತ ನಾನು ಬದುಕಿಗೆ ವಿಧಾಯ ಹೇಳಲು ಬಯಸಿದ್ದೇನೆ. ನನ್ನ ಕುಟುಂಬದ ಹೊಣೆಗಾರಿಕೆ ಇಡೀ ಎನ್ಪಿಎಸ್ ನೌಕರ ಸಂಘಟನೆಯದ್ದು. ದಯವಿಟ್ಟು ನನ್ನ ಕುಟುಂಬಕ್ಕೆ ಸಹಾಯ ಸಹಕಾರ ಮಾಡಿ. ಇಂತಿ ನಿಮ್ಮ ನತದೃಷ್ಟ ಎನ್ಪಿಎಸ್ ನೌಕರ ಪ್ರಭಾಕರ ಎಸ್.” ಎಂದು ಬರೆದ ಮೆಸೇಜ್ ರವಾನೆಯಾಗಿದೆ.
ನಂತರ 8.13ಕ್ಕೆ ಬಂದ ಇನ್ನೊಂದು ಮೆಸೇಜ್ನಲ್ಲಿ “ಆತ್ಮೀಯ ರಾಜ್ಯದ ಸಮಸ್ತ ಎನ್ಪಿಎಸ್ ನೌಕರ ಸಂಘದ ಪದಾಧಿಕಾರಿ ಮಿತ್ರರೇ ನಾನು ಕಳೆದ ಹತ್ತು ವರ್ಷಗಳಿಂದ ಎನ್ಪಿಎಸ್ ನೌಕರ ಸಂಘವನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಾಮಾಣಿಕವಾಗಿ ಕಟ್ಟಿ ಬೆಳೆಸಿದ್ದೇನೆ. ರಾಜ್ಯ ಸಂಘದ ನಿರ್ಧೇಶನದಂತೆ ಅನೇಕ ಕಾರ್ಯಕ್ರಮಗಳನ್ನು ಶಿವಮೊಗ್ಗ ತಾಲ್ಲೂಕಿನಲ್ಲಿ ಯಶಸ್ವಿಯಾಗಿ ಸಂಘಟನೆ ಮಾಡಿದ್ದೇನೆ. ಇತ್ತೀಚೆಗೆ ಜನವರಿ 22-2023 ರಂದು ಶಿವಮೊಗ್ಗ ಜಿಲ್ಲಾ ಮಟ್ಟದ ಎನ್ಪಿಎಸ್ ನೌಕರರ ಸಮಾವೇಶ ಮತ್ತು ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಅತ್ಯಂತ ಯಶಸ್ವಿಯಾಗಿ ಮಾಡಿದ್ದರ ಫಲವಾಗಿ ನನ್ನ ವೃತ್ತಿಬದುಕಿಗೆ ರಾಜ್ಯದ ನೌಕರ ಸಂಘದ ಅಧ್ಯಕ್ಷರಾದ ಷಡಾಕ್ಷರಿ, ಅವರ ಸಹಚರರಾದ ಮೋಹನ್ ಕುಮಾರ ಆರ್,ಬಸವನಗೌಡ, ಹಾಗೂ ಹಿಂದಿನ ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್ ಮತ್ತು ಅವರ ಆಪ್ತ ಕಾರ್ಯದರ್ಶಿಗಳಾಗಿದ್ದ ಎ ಆರ್ ರವಿ ಅವರ ವ್ಯವಸ್ಥಿತ ಪಿತೂರಿಯಿಂದಾಗಿ ಹಿಂಬಡ್ತಿ ಮಾಡಿ ನಿಯಮಗಳಲ್ಲಿ ವೇತನ ಸಂರಕ್ಷಣೆಗೆ ಅವಕಾಶವಿದ್ದರೂ ಹಿಂಬಡ್ತಿ ಆದೇಶದಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿಗಳಾದ ಶ್ರೀ ಮಹಂತಯ್ಯ ಹೊಸಮಠ ಅವರು ಹಿಂಬಡ್ತಿ ಮಾಡಿದ್ದಲ್ಲದೆ, ಹೆಚ್ಚುವರಿ ವೇತನ ಕಟಾಯಿಸುವಂತೆ ಆದೇಶ ಮಾಡಿದ್ದರ ಪ್ರತಿಫಲವಾಗಿ, ಹೊನ್ನಾಳಿ ಬಿಇಒ ರವರಾದ ನಂಜರಾಜ ಅವರು ಸರಿಯಾದ ಸಮಯಕ್ಕೆ ಅಂತಿಮ ವೇತನ ಪ್ರಮಾಣ ಪತ್ರ, ಸೇವಾವಹಿಯನ್ನು ಕಳುಹಿಸದೆ ಕಳೆದ 6 ತಿಂಗಳಿಂದ ವೇತನ ಆಗದೆ ನರಕಯಾತನೆ ಅನುಭವಿಸಿದ್ದೇನೆ. ಮತ್ತು ನನ್ನ ಇಡೀ ಕುಟುಂಬ ಕಣ್ಣೀರಿನಲ್ಲಿ ಮುಳುಗಿದೆ ನನ್ನ ಸಮಸ್ಯೆಗೆ ಪರಿಹಾರ ಸಿಗಬಹುದು ಎಂಬ ನಿರೀಕ್ಷೆಯಲ್ಲಿ 6 ತಿಂಗಳಕಾಲ ಕಳೆದಾಯಿತು. ಆದರೂ ಯಾವುದೇ ಪರಿಹಾರ ಸಿಗದೆ ಪ್ರಯತ್ನಗಳೆಲ್ಲ ವಿಫಲವಾಗಿದ್ದು ಅತ್ಯಂತ ನೋವಿನ ಸಂಗತಿ .ಈ ಘಟನೆಗೆ ಕಾರಣರಾದವರು ಚೆನ್ನಾಗಿರಲಿ……ನಾನು ಈ ಸಮಸ್ಯೆಯನ್ನು ನಿಭಾಯಿಸುವಲ್ಲಿ ಮಾನಸಿಕವಾಗಿ ವಿಫಲನಾಗಿರುವ ಪ್ರಯುಕ್ತ ನಾನು ಬದುಕಿಗೆ ವಿಧಾಯ ಹೇಳಲು ಬಯಸಿದ್ದೇನೆ….. ನನ್ನ ನಿರ್ಧಾರಕ್ಕೆ ಮೇಲ್ಕಾಣಿಸಿದ ವ್ಯಕ್ತಿಗಳೇ ನೇರ ಕಾರಣರಾಗಿರುತ್ತಾರೆ. ನನ್ನ ಈ ನನ್ನ ಕುಟುಂಬದ ಹೊಣೆಗಾರಿಕೆ ಇಡೀ ಎನ್ಪಿಎಸ್ ನೌಕರ ಸಂಘಟನೆಯದ್ದು ದಯವಿಟ್ಟು ನನ್ನ ಕುಟುಂಬಕ್ಕೆ ಸಹಾಯ ಸಹಕಾರ ಮಾಡಿ…… ಇಂತಿ ನಿಮ್ಮ ನತದೃಷ್ಟ ಎನ್ಪಿಎಸ್ ನೌಕರ” ಎಂದಾಗಿದೆ.
ಪ್ರಭಾಕರ್ ಅವರು ಬರೆದ ಡೆತ್ನೋಟ್ನಲ್ಲಿ ಮಾಜಿ ಸಚಿವ ಬಿ.ಸಿ ನಾಗೇಶ್ ಹಾಗೂ ರಾಜ್ಯ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಹೆಸರು ಇರುವುದು ಚರ್ಚೆಗೆ ಗ್ರಾಸವಾಗಿದೆ. ಪ್ರಭಾಕರ್ ಅವರ ಮುಖ್ಯ ಉದ್ದೇಶ ಇರುವುದು ಘಟನೆ ಹಿನ್ನೆಲೆಯಲ್ಲಿ ತನಿಖೆ ಆಗಬೇಕು, ತಮಗೆ ತೊಂದರೆ ನೀಡಿದ ವ್ಯಕ್ತಿಗಳಿಗೆ ಶಿಕ್ಷೆ ಆಗಬೇಕು ಎಂಬ ಉದ್ದೇಶ ಇರುವುದು ಸ್ಪಷ್ಟವಾಗಿದೆ.
ಪ್ರಭಾಕರ್ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿಯ ಕೊಕ್ಕೋಡುವಿನಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಬಳಿಕ, ಶೆಟ್ಟಿಹಳ್ಳಿಯಲ್ಲಿ ಸಿಆರ್ಪಿಯಾಗಿ ಕಾರ್ಯನಿರ್ವಹಿಸಿದ್ದರು. ಆನಂತರ ಅವರು ಎಫ್ಡಿಎ ಆಗಿ ಹೊನ್ನಾಳಿ ಬಿಒ ಆಫೀಸ್ನಲ್ಲಿ ಕಾರ್ಯನಿರ್ವಹಿಸಿದ್ದರು. ಟೀಚರ್ ಆಗಿದ್ದವರು ಎಫ್ಡಿಎ ಆಗಿ ಬದಲಾವಣೆ ಪಡೆದಿದ್ದರ ಸಂಬಂಧ ಹಲವರು ಆಕ್ಷೇಪಣೆ ಸಲ್ಲಿಸಿದ್ದರು. ಅಲ್ಲದೆ ಇದರ ನಡುವೆ ಅವರನ್ನು ಹಿರಿಯೂರು ತಾಲ್ಲೂಕಿನ ಸರ್ಕಾರಿ ಪ್ರೌಡಶಾಲೆಗೆ ವರ್ಗಾವಣೆ ಮಾಡಲಾಗಿತ್ತು. ಆದರೆ, ಪ್ರಭಾಕರ್ ಕೋರ್ಟ್ ಮೊರೆಹೋಗಿ, ವರ್ಗಾವಣೆಗೆ ಸ್ಟೇ ತಂದಿದ್ದರು.
“ವರ್ಗಾವಣೆಗೆ ಸ್ವೇ ತಂದ ನಂತರ ಅವರನ್ನು ಎಫ್ಡಿಎಯಿಂದ ಎಸ್ಡಿಎಗೆ ಹಿಂಬಡ್ತಿ ನೀಡಲಾಗಿತ್ತು. ನೌಕರರ ಸಂಘದ ಹೋರಾಟಗಳಲ್ಲಿ ಅವರು ಭಾಗಿಯಾಗಿದ್ಧೇ ಅವರ ವರ್ಗಾವಣೆ ಮತ್ತು ಹಿಂಬಡ್ತಿಗೆ ಮುಖ್ಯ ಕಾರಣ” ಎಂದು ಅವರ ಸ್ನೇಹಿತರು ಆರೋಪಿಸಿದ್ದಾರೆ.
ಎಸ್ಡಿಎಗೆ ಹಿಂಬಡ್ತಿ ನೀಡಿದ ಬಳಿಕ ಅವರನ್ನು ಹೊಸನಗರದ ಮಾರುತಿಪುರಕ್ಕೆ ವರ್ಗಾವಣೆ ಮಾಡಲಾಗಿತ್ತು. ಅಲ್ಲಿಗೆ ಹೋಗದ ಪ್ರಭಾಕರ್, ಹೋರಾಟಕ್ಕೆ ಇಳಿದಿದ್ದರು ಎಂದು ತಿಳಿದುಬಂದಿದೆ.