ಬಾಲ್ಯವಿವಾಹ ಮತ್ತು ಬಾಲ ಗರ್ಭಿಣಿಯರ ಪ್ರಕರಣಗಳಲ್ಲಿ ಸರ್ಕಾರ ಮತ್ತು ಮಕ್ಕಳ ಕಲ್ಯಾಣ ಸಮಿತಿ, ರಕ್ಷಣಾ ಸಮಿತಿಯ ಅಧಿಕಾರಿಗಳ ನಿರ್ಲಕ್ಷ್ಯ ಕಾಣುತ್ತದೆ. ಜಾಗೃತಿ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ಯಶಸ್ಸು ಕಾಣುತ್ತಿಲ್ಲ. ಬಾಲ್ಯ ವಿವಾಹ ತಡೆಗೆ ಗ್ರಾಮ ಮಟ್ಟದಲ್ಲಿ ಕಾನೂನು ಅರಿವು ಮತ್ತು ಜಾಗೃತಿ ಕಾರ್ಯಕ್ರಮ ಆಯೋಜಿಸಬೇಕು ಎಂದು ಚಿತ್ರದುರ್ಗದ ನಕ್ಷತ್ರ ಕಿಶೋರಿಯರ ಪಾರ್ಲಿಮೆಂಟ್ , ಧಮ್ಮ ಡ್ರಾಮಾ ಸ್ಕೂಲ್, ವಿಮುಕ್ತಿ ವಿದ್ಯಾಸಂಸ್ಥೆ ಸೇರಿದಂತೆ ಹಲವು ಮಕ್ಕಳ ಹಕ್ಕುಗಳ ರಕ್ಷಣೆಯ ಸಂಘಟನೆಗಳು, ಮಾನವ ಹಕ್ಕುಗಳ ಹೋರಾಟಗಾರರು ಬಾಲ್ಯ ವಿವಾಹ ತಡೆಗೆ ತುರ್ತು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿ ಚಿತ್ರದುರ್ಗ ಜಿಲ್ಲಾಧಿಕಾರಿಗಳ ಮೂಲಕ ಮನವಿ ಪತ್ರ ಸಲ್ಲಿಸಿದರು.
ಈ ಬಗ್ಗೆ ಮಾತನಾಡಿದ ಮುಖಂಡರು “ಬಾಲ್ಯವಿವಾಹಗಳು ಹಾಗೂ ಬಾಲ ಗರ್ಭಿಣಿಯರ ಪ್ರಕರಣಗಳು ಜಾಸ್ತಿಯಾಗುತ್ತಿರುವುದು ಸರ್ಕಾರಕ್ಕೆ ತಿಳಿದ ವಿಷಯವಾಗಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ರೆಡ್ಡಿಹಳ್ಳಿ ಗೊಲ್ಲರಹಟ್ಟಿ ಗ್ರಾಮದಲ್ಲಿ ಬಾಲ್ಯವಿವಾಹಕ್ಕೆ ಪೋಷಕರಿಂದಲೇ ದೈಹಿಕ ಹಿಂಸೆ ನಡೆಯಿರುವುದು ಇದು ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ” ಎಂದು ಆರೋಪಿಸಿದರು.
“ಜಾಗೃತಿ ಕಾರ್ಯಕ್ರಮಗಳು ನಾಮಕಾವಸ್ಥೆ ನೆಡೆಯುತ್ತಿವೆ. ಎನ್ನುವ ಪ್ರಶ್ನೆ ಮೂಡುತ್ತದೆ. ಸರ್ಕಾರವು ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ಮಕ್ಕಳ ರಕ್ಷಣಾ ಘಟಕ, ಮಕ್ಕಳ ಕಲ್ಯಾಣ ಸಮಿತಿ ಮತ್ತು ಇತರೆ ಸರ್ಕಾರಿ ಸಂಸ್ಥೆಗಳ ಮೂಲಕ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಜಾಗೃತಿ, ಪ್ರಕರಣಗಳ ದೂರು ದಾಖಲು, ಮಕ್ಕಳ ರಕ್ಷಣೆ ಮಾಡುತ್ತಿದ್ದರೂ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಬಾಲ್ಯವಿವಾಹ ಮತ್ತು ಬಾಲ ಗರ್ಭಿಣಿಯರ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಕೇವಲ ಮಾದ್ಯಮ ಪ್ರಚಾರಕ್ಕಾಗಿಯೇ ಈ ಕಾರ್ಯಕ್ರಮಗಳು ಸೀಮಿತವಾಗಿದ್ದು, ಇದು ಮಕ್ಕಳ ಭವಿಷ್ಯಕ್ಕೆ ಮಾರಕವಾಗಿದೆ” ಎಂದು ಆತಂಕ ವ್ಯಕ್ತಪಡಿಸಿದರು.

“ಹತ್ತು ತಿಂಗಳಲ್ಲಿ ರಾಜ್ಯದಲ್ಲಿ 26,463 ಬಾಲ ಗರ್ಭಿಣಿಯರು, ಚಿತ್ರದುರ್ಗ ಜಿಲ್ಲೆಯಲ್ಲಿ 1,033 ಬಾಲ್ಯವಿವಾಹಗಳು ಹಾಗೂ 1,030 ಬಾಲ ಗರ್ಭಿಣಿಯರ ಪ್ರಕರಣಗಳು ವರದಿಯಾಗಿವೆ. ಆದರೆ ಯಾವುದೇ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸದಿರುವುದು, ಕ್ರಮ ಕೈಗೊಳ್ಳದಿರುವುದು ಆತಂಕಕಾರಿ ಬೆಳವಣಿಗೆ” ಎಂದು ಬೇಸರ ವ್ಯಕ್ತಪಡಿಸಿ, “ಬಾಲ್ಯ ವಿವಾಹ ಪ್ರಕರಣಗಳ ತಡೆಗೆ ರಚಿಸಲಾಗಿರುವ ಸಮಿತಿಗಳು ಮತ್ತು ಇಲಾಖೆಗಳು ಪ್ರಾಮಾಣಿಕವಾಗಿ ಅವರ ಕರ್ತವ್ಯ ನಿರ್ವಹಿಸಿಲ್ಲ. ಸರ್ಕಾರದ ನಿರ್ಲಕ್ಷ್ಯವೇ ಪ್ರಕರಣಗಳ ಏರಿಕೆಗೆ ಕಾರಣವಾಗಿದೆ” ಎಂದು ಕಿಡಿಕಾರಿದರು.
“ಜಿಲ್ಲಾ ಕೇಂದ್ರಮಟ್ಟದ ಕಾರ್ಯಕ್ರಮಗಳನ್ನು ನಿಲ್ಲಿಸಿ, ನ್ಯಾಯಧೀಶರು, ಜಿಲ್ಲಾ ಆಡಳಿತ, ಇಲಾಖೆಗಳು, ಸಮಿತಿಗಳ ಸದಸ್ಯರು ಪ್ರಕರಣಗಳು ಎಲ್ಲಿ-ಯಾವ ಜಾತಿ-ವರ್ಗಗಳ ಊರಲ್ಲಿ ಜರುಗುತ್ತವೆಂದು ಪತ್ತೆಹಚ್ಚಿ ಅಂತಹ ಗ್ರಾಮ-ಹಾಡಿ-ಹಟ್ಟಿಗಳಲ್ಲಿ ನೇರವಾಗಿ ಹೋಗಿ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಈ ಮೂಲಕ ಬಾಲ್ಯ ವಿವಾಹ ಜಾಗೃತಿಗೆ ಹೊಸ ದಿಕ್ಕು ತೋರಿಸುವ ಮೂಲಕ ನೇರವಾಗಿ ಗ್ರಾಮಮಟ್ಟದಲ್ಲಿ ಜಾಗೃತಿ ಮೂಡಿಸುವ ಹೊಸ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
“80–90ರ ದಶಕದ ಬಾಲಕಾರ್ಮಿಕರ ವಿರುದ್ಧದ ಯಶಸ್ವಿ ಹೋರಾಟದ ಮಾದರಿಯಲ್ಲಿ ಇದೀಗ ಸರ್ಕಾರ-ಸಂಘಟನೆಗಳು ಜೊತೆಯಾಗಿ ಕಾರ್ಯತಂತ್ರ ರೂಪಿಸಬೇಕು. ಇಂದು ಬಾಲ್ಯವಿವಾಹ- ಬಾಲ ಗರ್ಭಿಣೀಯರ ರಕ್ಷಣೆ ವಿಚಾರದಲ್ಲಿ ಸಂಘ-ಸಂಸ್ಥೆಗಳನ್ನು ಹೊರಗಿಟ್ಟು, ಕೆಲವೇ ನಿರುಪಯುಕ್ತರನ್ನು ಸೇರಿಸಿಕೊಂಡು ಕೇವಲ ಸಭೆ-ಮೆರವಣಿಗೆಗೆ ಸೀಮಿತಗೊಳಿಸಿರುವುದು ಪ್ರಕರಣಗಳು ಮರುಕಳಿಸಲು ಕಾರಣ. ಈ ನಿಟ್ಟಿನಲ್ಲಿ ಗ್ರಾಮ ಮಟ್ಟದಲ್ಲಿ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಉಪವಿಭಾಗಾಧಿಕಾರಿಗಳ ಭರವಸೆ ಹಿನ್ನೆಲೆ ಅನಾಥ ಸೇವಾಶ್ರಮ ಅವ್ಯವಹಾರ ಪ್ರತಿಭಟನೆ ತಾತ್ಕಾಲಿಕ ಮುಂದೂಡಿಕೆ
ಮನವಿ ಸಲ್ಲಿಸುವ ಸಂದರ್ಭದಲ್ಲಿ ಮಾನವ ಹಕ್ಕುಗಳ ಹೋರಾಟಗಾರ್ತಿ ಬೀಬಿ ಜಾನ್, ಧಮ್ಮಸಂಸ್ಥೆಯ ಅರುಣ್ ಸಾಗರ್, ನಕ್ಷತ್ರ ಕಿಶೋರಿಯರ ಪಾರ್ಲಿಮೆಂಟ್ ನ ಕುಮಾರಿ ಸ್ಪೂರ್ತಿ, ವಿಮುಕ್ತಿ ವಿದ್ಯಾಸಂಸ್ಥೆಯ ವಿಶ್ವ ಸಾಗರ್, ಅನ್ನಪೂರ್ಣ, ಸೇರಿದಂತೆ ಹಲವರು ಪಾಲ್ಗೊಂಡಿದ್ದರು.