ಕೇಂದ್ರ ವಿರೋಧ ಪಕ್ಷದ ನಾಯಕರು ಹಾಗೂ ಕಾಂಗ್ರೆಸ್ ಸಂಸದ, ಶಾಸಕರ ಮನೆಗಳ ಮೇಲೆ ಪದೇ ಪದೆ ರಾಜ್ಯ ಹಾಗೂ ರಾಷ್ಟ್ರಾದ್ಯಂತ ಬಿಜೆಪಿ ಪ್ರಾಯೋಜಿತ ಇ.ಡಿ ದಾಳಿ ನಡೆಯುತ್ತಿದ್ದು, ಇದು ವಿರೋಧ ಪಕ್ಷಗಳನ್ನು ಕುಗ್ಗಿಸುವ ಭಾರತೀಯ ಜನತಾ ಪಕ್ಷದ ಷಡ್ಯಂತ್ರ ಮತ್ತು ಕುತಂತ್ರವಾಗಿದೆ ಎಂದು ರಾಜ್ಯಸಭಾ ಸದಸ್ಯ ಸೈಯದ್ ನಾಸಿರ್ ಹುಸೇನ್ ಆರೋಪಿಸಿದರು.
ಬಳ್ಳಾರಿ ನಗರದ ರಾಯಲ್ ಫೋರ್ಟ್ ಹೋಟೆಲ್ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, “ನಗರ ಶಾಸಕ ಭರತ್ ರೆಡ್ಡಿ, ಕಂಪ್ಲಿ ಶಾಸಕ ಗಣೇಶ್, ಕೂಡ್ಲಿಗಿ ಶಾಸಕ ಡಾ. ಶ್ರೀನಿವಾಸ್ ಮತ್ತು ಅತ್ಯಂತ ಮುಖ್ಯವಾಗಿ ಬಳ್ಳಾರಿ ಸಂಸದ ಈ. ತುಕಾರಾಂ ಅವರ ಮನೆ ಮೇಲೆ ದಾಳಿ ನಡೆಸಿರುವುದು ಬಿಜೆಪಿಯ ಕುತಂತ್ರ ಮತ್ತು ದುರುದ್ದೇಶದಿಂದ ಕೂಡಿದೆ. ಶಾಸಕರು ರಾಜಕೀಯ ಹಾಗೂ ವ್ಯವಹಾರಗಳಲ್ಲಿ ಶುದ್ಧ ಹಸ್ತರಾಗಿದ್ದಾರೆ. ಇ.ಡಿ ಪರಿಶೀಲನೆ ಸಮಯದಲ್ಲಿ ಅಧಿಕಾರಿಗಳಿಗೆ ಕಾನೂನುಬಾಹಿರ ಆಸ್ತಿ ಹಾಗೂ ಸಂಪತ್ತು ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಖಾಲಿ ಕೈಯಲ್ಲಿ ಹೋಗಿದ್ದಾರೆ” ಎಂದರು.
“ಲೋಕಸಭಾ ಚುನಾವಣೆಯಲ್ಲಿ ಎಸ್ಟಿ ನಿಗಮದ ಹಣವನ್ನು ಬಳಸಲಾಗಿದೆಯೆಂದು ವಿರೋಧ ಪಕ್ಷಗಳು ಸುಳ್ಳು ಅಪಾದನೆ ಮಾಡುತ್ತಿವೆ. ಆದರೆ ಎಸ್ಟಿ ನಿಗಮದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ಈಗಾಗಲೇ ಶೇ.95ರಷ್ಟು ವಾಪಸ್ ಆಗಿದೆ. ಇನ್ನು ಆ ಹಣವನ್ನು ಎಂಪಿ ಚುನಾವಣೆಯಲ್ಲಿ ಬಳಸಲು ಹೇಗೆ ಸಾಧ್ಯ” ಎಂದು ಪ್ರಶ್ನಿಸಿದರು.
“ಬಿಜೆಪಿ ಆಡಳಿತದಿಂದ ಈವರೆಗೆ ಶೇ.98ರಷ್ಟು ವಿರೋಧ ಪಕ್ಷಗಳ ಎಂಪಿ, ಎಂಎಲ್ಎಗಳ ಮನೆಗಳ ಮೇಲೆ ಇ.ಡಿ ದಾಳಿ ನಡೆದಿದೆ. ಬಿಜೆಪಿ ನಾಯಕರ ಮೇಲೆ ಇ.ಡಿ ದಾಳಿ ನಡೆಸಿರುವುದು ಕೇವಲ ಶೇ.2ರಷ್ಟು ಮಾತ್ರ. ಇದನ್ನು ಗಮನಿಸಿದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದೇಶದಲ್ಲಿ ವಿರೋಧ ಪಕ್ಷವೇ ಇರಬಾರದು ಎಂಬಂತೆ ವರ್ತಿಸುತ್ತಿದೆ. ಇ.ಡಿ ಮತ್ತು ಸಿಬಿಐಯನ್ನು ಬಳಸಿಕೊಂಡು ರಾಷ್ಟ್ರದಲ್ಲಿ ಇತರೆ ಪಕ್ಷಗಳ ಆಡಳಿತವನ್ನು ಹೈಜಾಕ್ ಮಾಡಿ ಆ ರಾಜ್ಯದಲ್ಲಿ ಹಿಂಭಾಗಿಲಿನ ಮೂಲಕ ಆಡಳಿತವನ್ನು ಹಿಡಿಯಲು ಬಿಜೆಪಿ ಸರ್ಕಾರ ಸಂಚು ರೂಪಿಸುತ್ತದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ” ಎಂದು ಬಿಜೆಪಿ ನಡೆಯನ್ನು ಖಂಡಿಸಿದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ರಾಜ್ಯಾದ್ಯಂತ ಸಹಿ ಸಂಗ್ರಹ; ವಕೀಲರ ನಿಯೋಗದಿಂದ ಬೇಡಿಕೆ ಈಡೇರಿಸುವಂತೆ ಮನವಿ
“ಗ್ರಾಮಾಂತರ ಶಾಸಕ ಬಿ ನಾಗೇಂದ್ರ ಅವರಿಗೆ ಸಚಿವ ಸ್ಥಾನ ಸಿಗಬೇಕೆಂಬುದು ನಮ್ಮೆಲ್ಲರ ಆಶಯವಾಗಿದೆ. ಆದರೆ ಹೈಕಮಾಂಡ್ ಯಾವಾಗ ಸಿಗ್ನಲ್ ಕೊಡುತ್ತದೆಯೋ ಆಗ ನಾಗೇಂದ್ರ ಸಚಿವರಾಗುತ್ತಾರೆ” ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ಲಮಪ್ರಶಾಂತ್, ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ್, ಕೇಂದ್ರ ಪರಿಹಾರ ಸಮಿತಿಯ ಮಾಜಿ ಅಧ್ಯಕ್ಷ ಎ ಮಾನಸಯ್ಯ, ಮೇಯರ್ ಮುಲ್ಲಂಗಿ ನಂದಿಶ್, ಎಪಿಎಂಸಿ ಅಧ್ಯಕ್ಷ ನಾಗೇಂದ್ರ, ಬಗರ್ ಹುಕುಮ್ ಅಧ್ಯಕ್ಷ ತಿಮ್ಮನಗೌಡ, ಗ್ಯಾರಂಟಿ ಯೋಜನೆಯ ಅನುಷ್ಠಾನದ ಅಧ್ಯಕ್ಷ ಕೆ ಚಿದಾನಂದಪ್ಪ, ಬಿ ರಾಂಪ್ರಸಾದ್, ವಿ ಕೆ ಬಸಪ್ಪ, ಕಲ್ಕಂಬ ಪಂಪಾಪತಿ, ವೆಂಕಟೇಶ್ ಹೆಗಡೆ, ಕಾಂಗ್ರೆಸ್ ಮುಖಂಡರು ಹಾಗೂ ಮಹಾನಗರ ಪಾಲಿಕೆ ಸದಸ್ಯರುಗಳು ಇದ್ದರು.