ರೈತರು ಮಣ್ಣಿನ ಫಲವತ್ತತೆ ಆಧರಿಸಿ ವೈಜ್ಞಾನಿಕ ಕೃಷಿ ಪದ್ಧತಿ ಅನುಸರಿಸಿ ಹೆಚ್ಚಿನ ಇಳುವರಿ ಪಡೆಯಲು ಆಧುನಿಕ ಕೃಷಿ ನಡೆಸಬೇಕು. ದೂರದೃಷ್ಟಿಯ ರೈತರ ಮೇಳ ಹಮ್ಮಿಕೊಂಡಿರುವುದು ಶ್ಲಾಘನೀಯ. ರೈತರು ಇಂತಹ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ತಿಳಿಸಿದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಮತ್ತು ತೋಟಗಾರಿಕೆ ಇಲಾಖೆ, ಜಿಲ್ಲಾ ಕಾಟನ್ ಅಸೋಸಿಯೇಷನ್, ಕರ್ನಾಟಕ ರಾಜ್ಯ ಕೃಷಿ ಪರಿಕರಗಳ ಮಾರಾಟಗಾರರ ಸಂಘದ ಜಿಲ್ಲಾ ಘಟಕ, ಎಪಿಎಂಸಿ ವರ್ತಕರ ಸಂಘ ಹಾಗೂ ಹತ್ತಿ ಬೆಳೆಯುವ ರೈತರ ಸಮೂಹ ಇವರ ಸಂಯುಕ್ತಾಶ್ರಯದಲ್ಲಿ ಬಳ್ಳಾರಿ ಚೇಂಬರ್ ಆಫ್ ಕಾಮರ್ಸ್ ಉಚಿತ ಆಸ್ಪತ್ರೆಯ ಮುಂಭಾಗದಲ್ಲಿ ಏರ್ಪಡಿಸಿದ್ದ `ರೈತರ ಮೇಳ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ ಪ್ರಾಸ್ತಾವಿಕ ಮಾತನಾಡಿ, “ರೈತರಿಲ್ಲದೆ, ಕೃಷಿ ಇಲ್ಲದೆ ಕೈಗಾರಿಕೆಗಳು ಮತ್ತು ಉದ್ಯಮಗಳಿಲ್ಲ. ಹಾಗಾಗಿ ದೇಶದ ಬೆನ್ನೆಲುಬಾಗಿರುವ ರೈತರನ್ನು ಮತ್ತು ಕೃಷಿಯನ್ನು ನಮ್ಮ ಸಂಸ್ಥೆಯು ಪ್ರೋತ್ಸಾಹಿಸುತ್ತಿದೆ. ಇದರ ಭಾಗವಾಗಿ ರೈತಣ್ಣ ಊಟ, ರೈತಣ್ಣ ಕ್ಲಿನಿಕ್, ರೈತಣ್ಣ ಹಾಸಿಗೆ ಹಾಗೂ ರೈತರ–ಕೃಷಿಕರ ಪರವಾದ ಅನೇಕ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿದೆ” ಎಂದು ಹೇಳಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ ಎಂ ಸೋಮಸುಂದರ್ ಮಾತನಾಡಿ, “ರೈತರು ವೈಜ್ಞಾನಿಕವಾಗಿ ಪ್ರಮಾಣೀಕೃತ ಬೀಜಗಳನ್ನು ಆಯ್ಕೆ ಮಾಡಿಕೊಂಡು, ವೈಜ್ಞಾನಿಕ ಪದ್ಧತಿಯಲ್ಲಿ ಬೆಳೆಗಳನ್ನು ಬೆಳೆಯುವ ಮೂಲಕ ಹೆಚ್ಚಿನ ಇಳುವರಿ ಪಡೆಯಬೇಕು” ಎಂದು ವಿವರಿಸಿ, ಸರ್ಕಾರದ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ ಆರೋಪಿಗಳಿಗೆ 6 ತಿಂಗಳು ಜೈಲು, ₹1000 ದಂಡ
ಸಂಪನ್ಮೂಲ ವ್ಯಕ್ತಿಗಳಾಗಿದ್ದ ರಾಯಚೂರು ಕೆವಿಕೆಯ ಡಾ. ಭೀಮಣ್ಣ ಮಾತನಾಡಿ, ಮಣ್ಣಿನ ಫಲವತ್ತತೆ, ಬೀಜಗಳ ಆಯ್ಕೆ, ವೈಜ್ಞಾನಿಕವಾಗಿ ಬೀಜ ಬಿತ್ತನೆ, ನೀರುಣಿಸುವಿಕೆ, ಆಧುನಿಕ ತಂತ್ರಜ್ಞಾನಗಳ ಬಳಕೆ, ಯಂತ್ರಗಳ ಬಳಕೆ, ಸಾಂಪ್ರದಾಯಿಕ ಪದ್ಧತಿಯ ಕೃಷಿ ಸೇರಿದಂತೆ ಇತರೆ ವಿಷಯಗಳ ಕುರಿತು ಸಮಗ್ರವಾಗಿ ಉಪನ್ಯಾಸ ನೀಡಿ, ರೈತರಿಂದ ಅಪಾರ ಮೆಚ್ಚುಗೆ ಪಡೆದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಸಿ ಶ್ರೀನಿವಾಸರಾವ್, ಬಳ್ಳಾರಿ ಎಪಿಎಂಸಿ ಅಧ್ಯಕ್ಷ ಕಟ್ಟೇಮನಿ ನಾಗೇಂದ್ರ, ಕಾರ್ಯದರ್ಶಿ ಶ್ರೀಹರಿ, ಬಳ್ಳಾರಿ ಜಿಲ್ಲಾ ಕಾಟನ್ ಅಸೋಸಿಯೇಷನ್ ಅಧ್ಯಕ್ಷ ದಂಡಿನ ತಿಪ್ಪೇಸ್ವಾಮಿ, ಬಿಡಿಸಿಸಿಐನ ಹಿರಿಯ ಉಪಾಧ್ಯಕ್ಷ ಅವ್ವಾರು ಮಂಜುನಾಥ್ ಸೇರಿದಂತೆ ಇತರರು ಇದ್ದರು.