ಮಹಿಳೆಯೊಬ್ಬರನ್ನು ಮರಕ್ಕೆ ಕಟ್ಟಿ ಹಾಕಿ, ಹಲ್ಲೆ ನಡೆಸಿ ಚಿತ್ರಹಿಂಸೆ ನೀಡಿರುವ ಘಟನೆ ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರ ಕ್ಷೇತ್ರ ಕುಪ್ಪಂನಲ್ಲಿ ನಡೆದಿದೆ.
ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಕುಪ್ಪಂ ಮಂಡಲದ ನಾರಾಯಣಪುರ ಗ್ರಾಮದಲ್ಲಿ ಘಟನೆ ನಡೆದಿದೆ. ದೌರ್ಜನ್ಯ ಎಸಗಿರುವ ಆರೋಪಿಯನ್ನು ನಾಯ್ಡು ಅವರ ಪಕ್ಷ ‘ತೆಲುಗು ದೇಶಂ ಪಕ್ಷ’ದ ಕಾರ್ಯಕರ್ತ ಮಣಿಕಣ್ಣಪ್ಪ ಎಂದು ಹೇಳಲಾಗಿದೆ.
ಮೂರು ವರ್ಷಗಳ ಹಿಂದೆ ಮಣಿಕಣ್ಣಪ್ಪ ಬಳಿ ಸಂತ್ರಸ್ತ ಮಹಿಳೆಯ ಕುಟುಂಬವು 80,000 ರೂ. ಸಾಲ ಪಡೆದಿತ್ತು. ಆ ಸಾಲದ ಹಣವನನ್ಉ ಮರುಪಾವತಿ ಮಾಡುವಲ್ಲಿ ವಿಳಂಬವಾದ ಕಾರಣಕ್ಕೆ, ಮಹಿಳೆಯಯನ್ನು ಮರಕ್ಕೆ ಕಟ್ಟಿ ಚಿತ್ರಹಿಂಸೆ ನೀಡಿದ್ದಾರೆ. ಅವಮಾನಿಸಿದ್ದಾರೆ ಎಂದು ವರದಿಯಾಗಿದೆ.
ಸಾಲ ತೀರಿಸಲಾಗದೆ ಸಂತ್ರಸ್ತೆಯ ಪತಿ ತಿಮ್ಮರಾಯಪ್ಪ ಇತ್ತೀಚೆಗೆ ಗ್ರಾಮ ತೊರೆದಿದ್ದರು.ಹೀಗಾಗಿ, ಸಂತ್ರಸ್ತೆ ಶಿರೇಶ ಅವರು ಶಾಂತಿಪುರಂನಲ್ಲಿದ್ದ ತನ್ನ ತಾಯಿಯ ಮನೆಯಲ್ಲಿ ಉಳಿದುಕೊಂಡಿದ್ದರು. ಸೋಮವಾರ, ನಾರಾಯಣಪುರ ಶಾಲೆಯಲ್ಲಿ ತನ್ನ ಮಗ ವರ್ಗಾವಣೆ ಪತ್ರವನ್ನು ಪಡೆಯಲು ಗ್ರಾಮಕ್ಕೆ ಬಂದಾಗ, ಆಕೆಯನ್ನು ಸಾಲದಾತ ಮಣಿಕಣ್ಣಪ್ಪ ಮತ್ತು ಕುಟುಂಬಸ್ಥರು ಅಡ್ಡಗಟ್ಟಿದ್ದಾರೆ. ಅಮಾನವೀಯವಾಗಿ ನಿಂದಿಸಿ, ಮರಕ್ಕೆ ಕಟ್ಟಿ ದೌರ್ಜನ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ.
Shocking ! In CM #ChandrababuNaidu's own constituency Kuppam an alleged #TDP worker tied a 25-year-old woman to a tree and publicly humiliated her over an unpaid loan of ₹80,000. Victim Sirisha has been raising her two children on her own since her husband abandoned them. After… pic.twitter.com/UI0Xft63Lh
— Ashish (@KP_Aashish) June 17, 2025
ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಘಟನೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಕುಪ್ಪಂ ವಿಧಾನಸಭಾ ಕ್ಷೇತ್ರವನ್ನು ಸ್ವತಃ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೇ ಪ್ರತಿನಿಧಿಸುತ್ತಿದ್ದು, ಘಟನೆಯು ನಾಯ್ಡು ಅವರನ್ನು ಮುಜುಗರಕ್ಕೆ ಸಿಲುಕಿಸಿದೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ನಾಯ್ಡು, ಸಂತ್ರಸ್ತೆಯ ಮೇಲೆ ಅಮಾನವೀಯ ದೌರ್ಜನ್ಯ ಎಸಗಿದ ಮಣಿಕಣ್ಣಪ್ಪ ಮತ್ತು ಅವರ ಕುಟುಂಬದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.
“ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 341, 323, 324, 506 ಮತ್ತು 34 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ” ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.