2024ರ ಲೋಕಸಭೆ ಚುನಾವಣೆಗೆ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ವಿಚಾರ ಸಾಕಷ್ಟು ಚರ್ಚೆಯಲ್ಲಿದೆ. ಇತ್ತೀಚೆಗೆ ಪಕ್ಷದ ವರಿಷ್ಠರಾದ ಎಚ್ ಡಿ ದೇವೇಗೌಡ ಅವರು ಯಾರೊಂದಿಗೂ ಮೈತ್ರಿ ಇಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಆದರೆ, ಈಗ ಬಿಜೆಪಿ ಮತ್ತು ಜೆಡಿಎಸ್ನ ಕೆಲವು ನಾಯಕರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಜೆಡಿಎಸ್ – ಬಿಜೆಪಿ ಮೈತ್ರಿ ವಿಚಾರವಾಗಿ ಹಾಸನ ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಶಾಸಕ ಎ ಟಿ ರಾಮಸ್ವಾಮಿ, “ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ಅಥವಾ ವಿಲೀನ ಮಾಡಿಕೊಳ್ಳುವುದು ನನಗಂತೂ ಒಪ್ಪುವಂತಹ ಮಾತಲ್ಲ” ಎಂದು ಹೇಳಿದರು.
“ಅವಕಾಶವಾದಿತನಕ್ಕೆ ಅವಕಾಶ ಕೊಡಬಾರದು. ಕೊಟ್ಟ ಮಾತಿಗೆ ತಪ್ಪಿದವರು, ವಚನ ಭ್ರಷ್ಟತೆ ಮಾಡಿದವರು, ಅಂತಹವರ ಜೊತೆ ಮತ್ತೆ ಒಂದಾಗುತ್ತೇವೆ ಅಥವಾ ಮೈತ್ರಿ ಮಾಡಿಕೊಳ್ಳುತ್ತೇವೆ ಎಂದು ಹೊರಟರೆ ಬಿಜೆಪಿಗೆ ಹೆಚ್ಚು ಪೆಟ್ಟಾಗಬಹುದು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ” ಎಂದರು.
“ಮೈತ್ರಿ ವಿಚಾರವನ್ನು ಪಕ್ಷದ ವರಿಷ್ಠರು ನೋಡಿಕೊಳ್ಳುತ್ತಾರೆ. ಆದರೆ, ನನ್ನ ವೈಯಕ್ತಿಕ ಅಭಿಪ್ರಾಯ ಒಳ್ಳೆಯದಲ್ಲ ಎಂದು ಹೇಳಿದ್ದೇನೆ ಅಷ್ಟೆ” ಎಂದು ಸ್ಪಷ್ಟನೆ ನೀಡಿದರು.
ಬಿಜೆಪಿಯವರದ್ದು ಗೋಡ್ಸೆ ಮನಸ್ಥಿತಿ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, “ಅವರು ನಮ್ಮನ್ನು ಹೊಗಳಲು ಆಗುವುದಿಲ್ಲ. ನಾವೆಲ್ಲರೂ ಭಾರತ ಮಾತೆಯ ಮಕ್ಕಳು. ಆದರೆ, ಕೆಸರೆರಚಾಡುವ ಜಾಯಮಾನ ಹೆಚ್ಚಾಗಿದೆ” ಎಂದು ವಿಷಾದಿಸಿದರು.
ಬಿಜೆಪಿಯ 10 ಶಾಸಕರನ್ನು ಅಧಿವೇಶನದಿಂದ ಅಮಾನತು ಮಾಡಿದ ಕುರಿತು ಮಾತನಾಡಿದ ಅವರು, “ಇತ್ತೀಚಿನ ವರ್ಷಗಳಲ್ಲಿ ಸದನದ ಘನತೆ, ಗೌರವ ಕಡಿಮೆ ಆಗುತ್ತಿದೆ ಎನ್ನುವ ನೋವಿದೆ. ಶಾಸಕರ ಅಮಾನತು ಆತುರದ ಕ್ರಮ, ಸ್ಪೀಕರ್ ಚೇಂಬರ್ಗೆ ಕರೆದು ಮಾತನಾಡಿಸಬಹುದಿತ್ತು” ಎಂದು ಅಭಿಪ್ರಾಯಪಟ್ಟರು.
ಬಿಜೆಪಿ, ಜೆಡಿಎಸ್ ಜಂಟಿಯಾಗಿ ಹೋರಾಟ ಮಾಡುತ್ತವೆ ಎಂಬ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ವಿರೋಧ ಪಕ್ಷಗಳು ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಲೋಪದೋಷದ ವಿರುದ್ಧ ಜಂಟಿಯಾಗಿ ದನಿ ಎತ್ತಬೇಕು ಅನ್ನುವ ನಡೆಗೆ ನನ್ನ ಬೆಂಬಲ ಇದೆ ಎಂದರು.
ಈ ಬಾರಿಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ತೊರೆದು ಎ ಟಿ ರಾಮಸ್ವಾಮಿ ಅವರು ಬಿಜೆಪಿ ಸೇರ್ಪಡೆಯಾಗಿದ್ದರು. ಈಗ ಒಂದು ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅಥವಾ ವಿಲೀನ ಮಾಡಿಕೊಂಡರೆ ರಾಮಸ್ವಾಮಿ ಅವರಿಗೆ ಮತ್ತೆ ಇಕ್ಕಟ್ಟಿನ ಸ್ಥಿತಿ ನಿರ್ಮಾಣವಾಗಲಿದೆ. ಆ ಕಾರಣದಿಂದಲೇ ಬಹಿರಂಗವಾಗಿ ಜೆಡಿಎಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಪಿಎಸ್ಐ ನೇಮಕಾತಿ ಹಗರಣ ನ್ಯಾಯಾಂಗ ತನಿಖೆಗೆ; ಕಾಂಗ್ರೆಸ್ ದ್ವೇಷದ ರಾಜಕಾರಣ: ಬೊಮ್ಮಾಯಿ
ಮೈತ್ರಿ ಮಾಡಿಕೊಂಡರೆ ಮುಂದಿನ ನಿರ್ಧಾರ: ನಾರಾಯಣಗೌಡ
ಇನ್ನು ಈ ಕುರಿತು ಮಂಡ್ಯದಲ್ಲಿ ಸುದ್ದಿಗಾರರಿಗೆ ಹೇಳಿಕೆ ನೀಡಿರುವ ಮಾಜಿ ಸಚಿವ ನಾರಾಯಣಗೌಡ, “ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರು ದಿನಕ್ಕೊಂದು ರೀತಿಯಲ್ಲಿ ಮಾತನಾಡುತ್ತಾರೆ. ಅವರ ಮಾತು ನಂಬಲು ಸಾಧ್ಯವಿಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡರೆ, ನನ್ನ ಮುಂದಿನ ನಿರ್ಧಾರ ಏನೆಂದು ನಂತರದಲ್ಲಿ ತಿಳಿಸಲಾಗುವುದು” ಎಂದಿದ್ದಾರೆ.
“ಕುಮಾರಸ್ವಾಮಿ ಅವರು ಈ ಹಿಂದೆ ಕಾಂಗ್ರೆಸ್ ಪರವಾಗಿ ಮಾತನಾಡುತ್ತಿದ್ದರು. ಈಗ ಬಿಜೆಪಿ ಪರ ಮಾತನಾಡುತ್ತಿದ್ದಾರೆ. ಅವರು ದಿನಕ್ಕೊಂದು ರೀತಿಯಲ್ಲಿ ಮಾತನಾಡುತ್ತಾರೆ. ಅವರನ್ನು ನಂಬಲು ಸಾಧ್ಯವಿಲ್ಲ. ಹೊಂದಾಣಿಕೆ ಬಗ್ಗೆ ಪಕ್ಷದ ವರಿಷ್ಠರು ಏನೂ ಹೇಳಿಲ್ಲ” ಎಂದು ತಿಳಿಸಿದ್ದಾರೆ.