ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಕಡಿಮೆ ಬೆಲೆಯಲ್ಲಿ ಔಷಧಗಳನ್ನು ಒದಗಿಸುವ ಉದ್ದೇಶದಿಂದ ಸ್ಥಾಪಿಸಲಾಗಿದ್ದ ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳು ರಾಜ್ಯದಲ್ಲಿ ಮುಚ್ಚಲ್ಪಡುತ್ತಿವೆ ಎಂಬ ಆತಂಕ ಸೃಷ್ಟಿಯಾಗಿದೆ. ಇದರ ಭಾಗವಾಗಿ, ಗದಗ ಜಿಲ್ಲೆಯ ನರಗುಂದ ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿದ್ದ ಜನೌಷಧಿ ಕೇಂದ್ರ ಸಂಪೂರ್ಣವಾಗಿ ಬಂದ್ ಆಗಿದ್ದು, ಸ್ಥಳೀಯರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ.
ನರಗುಂದದಲ್ಲಿ ಜನೌಷಧಿ ಕೇಂದ್ರ ಬಂದ್ ಆಗಿರುವುದರಿಂದ, ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಬರುವ ಬಡ ಮತ್ತು ಸಾಮಾನ್ಯ ಜನರು ಔಷಧಿಗಳಿಗಾಗಿ ಖಾಸಗಿ ಮೆಡಿಕಲ್ ಶಾಪ್ಗಳಲ್ಲಿ ಹೆಚ್ಚು ಹಣ ಕೊಟ್ಟು ಖರೀದಿಸುವುದು ಅನಿವಾರ್ಯವಾಗಿದೆ. ಇದು ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಜನರ ಮೇಲೆ ಮತ್ತಷ್ಟು ಹೊರೆ ಹೇರುತ್ತಿದೆ. ಅತಿ ಕಡಿಮೆ ದರದಲ್ಲಿ ಸಿಗುತ್ತಿದ್ದ ಔಷಧಿಗಳಿಗಾಗಿ ಈಗ ದುಪ್ಪಟ್ಟು ಬೆಲೆ ತೆರಬೇಕಾದ ಪರಿಸ್ಥಿತಿ ಬಂದಿದೆ ಎಂದು ಸಾರ್ವಜನಿಕರು ಅಳಲು ತೋಡಿಕೊಂಡಿದ್ದಾರೆ.
ವರದಿಗಳ ಪ್ರಕಾರ, ರಾಜ್ಯ ಆರೋಗ್ಯ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಪಿಎಂ ಜನೌಷಧಿ ಕೇಂದ್ರಗಳನ್ನು ಸ್ಥಗಿತಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಈ ನಿರ್ಧಾರವು, ಕಡಿಮೆ ದರದಲ್ಲಿ ಔಷಧಗಳನ್ನು ಪಡೆಯಲು ಕಷ್ಟಪಡುತ್ತಿದ್ದ ಬಡ ಜನರಿಗೆ ಮತ್ತಷ್ಟು ತೊಂದರೆ ನೀಡಲಿದೆ.
ನರಗುಂದದಲ್ಲಿನ ಜನೌಷಧಿ ಕೇಂದ್ರ ಐದಾರು ತಿಂಗಳ ಹಿಂದೆಯೇ ಬಂದ್ ಆಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸಮರ್ಪಕವಾಗಿ ಔಷಧಗಳು ಸಿಗುತ್ತಿಲ್ಲ ಎಂಬ ದೂರುಗಳು ಹೆಚ್ಚಿರುವಾಗ, ಬಡವರಿಗೆ ನೆರವಾಗಿರುವ ಜನೌಷಧಿ ಕೇಂದ್ರಗಳನ್ನು ಮುಚ್ಚುವುದು ಮತ್ತಷ್ಟು ತೊಂದರೆ ಉಂಟುಮಾಡುತ್ತದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.

ಬಂದ್ ಆಗಿರುವ ನರಗುಂದ ಜನೌಷಧಿ ಕೇಂದ್ರವನ್ನು ತಕ್ಷಣವೇ ಪುನಾರಂಭಿಸಬೇಕು ಎಂದು ಸ್ಥಳೀಯರು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ. ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಅಗತ್ಯವಾದ ಔಷಧಗಳನ್ನು ಕೈಗೆಟಕುವ ಬೆಲೆಯಲ್ಲಿ ಒದಗಿಸುವುದು ಸರ್ಕಾರದ ಕರ್ತವ್ಯವಾಗಿದ್ದು, ಈ ಕೇಂದ್ರಗಳ ಮುಚ್ಚುವಿಕೆಯಿಂದ ಜನರಿಗೆ ಆಗುತ್ತಿರುವ ಅಸಮಾಧಾನವನ್ನು ಗಂಭೀರವಾಗಿ ಪರಿಗಣಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಈ ಕುರಿತು ಆಸ್ಪತ್ರೆಗೆ ಬಂದಿದ್ದ ಮಹಿಳೆ ಪಾರವ್ವ ಮಾತನಾಡಿ, “ಸರ್ಕಾರಿ ಆಸ್ಪತ್ರೆಗೆ ಬಂದಾಗ ಕೆಲವೊಂದು ಔಷಧಿಗಳನ್ನು ಹೊರಗೆ ಬರೆದು ಕೊಡ್ತಾರೆ. ಖಾಸಗಿ ಔಷಧಿ ಅಂಗಡಿಯಲ್ಲಿ ಗುಳಿಗಿ ತಗೊಂಡ್ರ ಜಾಸ್ತಿ ರೊಕ್ಕಾ ತಗೊಂತಾರ, ಅದಕ್ಕ ಕಡಿಮಿ ರೊಕ್ಕದಾಗ ಜನೌಷಧಿ ಕೇಂದ್ರದಾಗ ಔಷಧಿಗಳನ್ನು ಖರೀದಿ ಮಾಡ್ತಿವಿ. ಈಗ ಜನೌಷಧಿ ಕೇಂದ್ರ ಮುಚ್ಚಿ ಆರೇಳು ತಿಂಗಳ ಆತು, ಔಷಧಿ ತಗೊಳ್ಳಕ ಬಾಳ ರೊಕ್ಕ ಹೊಂಟಾವ, ಜನೌಷಧಿ ಕೇಂದ್ರ ಮುಚ್ಚಬ್ಯಾಡ್ರಿ, ಹೊಳ್ಳಿ ಓಪನ್ ಮಾಡಿ” ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ಸುಮಾರು 1,541 ಜನೌಷಧಿ ಕೇಂದ್ರಗಳಿವೆ. ಈ ಕೇಂದ್ರಗಳಿಂದ 12 ಲಕ್ಷ ಜನ ಲಾಭ ಪಡೆಯುತ್ತಿದ್ದಾರೆ. ಇದರಿಂದ ಕರ್ನಾಟಕದಲ್ಲಿ ವಾರ್ಷಿಕವಾಗಿ 40 ಕೋಟಿ ರೂ. ಉಳಿತಾಯವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಬಡವರಿಗೆ ವರದಾನವಾಗಿರುವ ಈ ಕೇಂದ್ರಗಳನ್ನು ರಾಜ್ಯ ಸರ್ಕಾರ ಬಂದ್ ಮಾಡುತ್ತಿರುವುದು ಖಂಡನೀಯ ಎಂದು ಬಿಜೆಪಿ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ.
ಲಭ್ಯವಿರುವ ಮಾಹಿತಿ ಪ್ರಕಾರ, ಕರ್ನಾಟಕ ಸರ್ಕಾರವು ಜನರಿಕ್ ಔಷಧಗಳ ಖರೀದಿಗೆ ಸಂಬಂಧಿಸಿದಂತೆ ಸಾರ್ವಜನಿಕ ವಲಯದ ಔಷಧ ಉದ್ಯಮಗಳ ಬ್ಯೂರೋ (Bureau of Pharma PSUs of India – BPPI) ದೊಂದಿಗೆ ಕರ್ನಾಟಕ ಸ್ಟೇಟ್ ಮೆಡಿಕಲ್ ಸಪ್ಲೈಸ್ ಕಾರ್ಪೊರೇಷನ್ ಲಿಮಿಟೆಡ್ (KMSCL) ವಿಶೇಷ ದರಗಳನ್ನು ರೂಪಿಸುತ್ತಿದೆ. ಇದರಡಿ, ಸರ್ಕಾರಿ ಆಸ್ಪತ್ರೆಗಳು ನೇರವಾಗಿ BPPI ನಿಂದ ಔಷಧಗಳನ್ನು ಖರೀದಿಸಿ, ರೋಗಿಗಳಿಗೆ ಉಚಿತವಾಗಿ ವಿತರಿಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ.

ಈ ಹೊಸ ನೀತಿಯ ಅನ್ವಯ, ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ರೋಗಿಗಳಿಗೆ ಉಚಿತವಾಗಿ ಔಷಧಗಳು ದೊರೆಯಲಿವೆ. ಹೀಗಾಗಿ, ಈ ಹಿಂದೆ ಕಡಿಮೆ ಬೆಲೆಯಲ್ಲಿ ಔಷಧಗಳನ್ನು ಒದಗಿಸುತ್ತಿದ್ದ ಜನೌಷಧಿ ಕೇಂದ್ರಗಳ ಅಗತ್ಯವಿಲ್ಲ ಎಂದು ಸರ್ಕಾರ ಪರಿಗಣಿಸಿ, ಅವುಗಳನ್ನು ಸ್ಥಗಿತಗೊಳಿಸುತ್ತಿದೆ ಎನ್ನಲಾಗಿದೆ.
ಎಸ್ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ ವೈ ಚಲವಾದಿ ಮಾತನಾಡಿ, “ಬಡವರಿಗೆ ವರದಾನವಾದ ಜನೌಷಧಿ ಕೇಂದ್ರವನ್ನು ಮುಚ್ಚಿಸಿ ಬಡ ಜನರ ಜೀವದ ಜೊತೆ ರಾಜ್ಯ ಕಾಂಗ್ರೆಸ್ ಸರ್ಕಾರ ಚೆಲ್ಲಾಟವಾಡುತ್ತಿದೆ. ದೇಶದಲ್ಲಿ ಬಡವರಿಗೆ ಯೋಗ್ಯ ದರದಲ್ಲಿ ಗುಣ ಮಟ್ಟದ ಔಷಧಿ ಸಿಗುವಂತಹ ಜನೌಷಧಿ ಕೇಂದ್ರಗಳನ್ನು ಸ್ಥಾಪಿಸಿ ಬಡ ಕೂಲಿ ಕಾರ್ಮಿಕರು, ಆಟೋ ಡ್ರೈವರ್ಗಳು, ಕಾರ್ಮಿಕರು ಸೇರಿದಂತೆ ಎಲ್ಲ ಬಡ ಜನರಿಗೆ ಗುಣ ಮಟ್ಟದ ಔಷಧಿಗನ್ನು ವಿತರಿಸುವ ಕೇಂದ್ರ ಸರ್ಕಾರದ ಮಹತ್ವದ ಯೋಜನೆಯನ್ನು ರಾಜ್ಯ ಸರ್ಕಾರ ಸ್ಥಗಿತಗೊಳಿಸಲು ಮುಂದಾಗಿರುವುದು ಸರಿಯಲ್ಲ. ರಾಜ್ಯ ಸರ್ಕಾರ ಜನೌಷಧಿ ಕೇಂದ್ರಗಳನ್ನು ಮುಚ್ಚಿಸಲು ಹೊರಟಿದ್ದು ನಾಚಿಕೆಗೇಡಿನ ಸಂಗತಿ. ಜನೌಷಧಿ ಕೇಂದ್ರಗಳನ್ನು ಮುಚ್ಚುವ ಆದೇಶವನ್ನು ಹಿಂತೆಗೆದುಕೊಂಡು ಜನರ ಹಿತಾಸಕ್ತಿ ಕಾಪಾಡಿಕೊಂಡು ಮುಂದುವರೆಯಬೇಕು” ಎಂದು ಆಗ್ರಹಿಸಿದ್ದಾರೆ.
ನರಗುಂದದಲ್ಲಿ ಜನೌಷಧಿ ಕೇಂದ್ರದ ಮುಚ್ಚುವಿಕೆ ಮತ್ತು ರಾಜ್ಯ ಸರ್ಕಾರದ ಉಚಿತ ಔಷಧ ವಿತರಣೆಯ ಹೊಸ ನೀತಿಯು ಒಂದು ಸಂಕೀರ್ಣ ಸನ್ನಿವೇಶವನ್ನು ಸೃಷ್ಟಿಸಿದೆ. ಕಡಿಮೆ ಬೆಲೆಯಲ್ಲಿ ಔಷಧಗಳನ್ನು ಬಡವರಿಗೆ ತಲುಪಿಸುವ ಒಂದು ಉತ್ತಮ ಉದ್ದೇಶದೊಂದಿಗೆ ಜನೌಷಧಿ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಆದರೆ, ಈಗ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಉಚಿತವಾಗಿ ಔಷಧಗಳನ್ನು ನೀಡುವ ಮೂಲಕ ಹೆಚ್ಚು ಜನರಿಗೆ ನೆರವಾಗುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ ಎಂದು ತೋರುತ್ತಿದೆ.

ಈ ಕ್ರಮವು ಸ್ವಾಗತಾರ್ಹವಾಗಿದ್ದರೂ, ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯವಿರುವ ಎಲ್ಲ ಔಷಧಗಳು ಸಕಾಲದಲ್ಲಿ ಮತ್ತು ಸಮರ್ಪಕವಾಗಿ ಲಭ್ಯವಾಗುವಂತೆ ನೋಡಿಕೊಳ್ಳುವುದು ಸರ್ಕಾರದ ಮುಂದಿರುವ ಅತಿದೊಡ್ಡ ಸವಾಲು. ಕೇವಲ ನೀತಿಯನ್ನು ಘೋಷಿಸಿದರೆ ಸಾಲದು, ಅದರ ಅನುಷ್ಠಾನದಲ್ಲಿ ಯಾವುದೇ ಲೋಪಗಳಾಗದಂತೆ ಎಚ್ಚರಿಕೆವಹಿಸಬೇಕು. ನರಗುಂದದಂತಹ ಪ್ರದೇಶಗಳಲ್ಲಿ ಈಗಾಗಲೇ ಔಷಧಕ್ಕಾಗಿ ಖಾಸಗಿ ಅಂಗಡಿಗಳನ್ನು ಅವಲಂಬಿಸಬೇಕಾದ ಸ್ಥಿತಿ ಎದುರಾಗಿದೆ. ಇದು ಸರ್ಕಾರದ ಹೊಸ ನೀತಿ ಸರಿಯಾಗಿ ಕಾರ್ಯರೂಪಕ್ಕೆ ಬರುವವರೆಗೆ ಅಥವಾ ಸಾಕಷ್ಟು ಪ್ರಮಾಣದ ಔಷಧಗಳು ಆಸ್ಪತ್ರೆಗಳಲ್ಲಿ ಲಭ್ಯವಾಗುವವರೆಗೆ ಬಡವರ ಮೇಲೆ ಆರ್ಥಿಕ ಹೊರೆ ಹೆಚ್ಚಿಸುತ್ತದೆ.
ಇದನ್ನೂ ಓದಿ: ಲುಧಿಯಾನ ಉಪಚುನಾವಣೆ: ಎಎಪಿ ಗೆದ್ದರೆ ಅಚ್ಚರಿ ಇಲ್ಲ – ಸೋಲು ಮಾತ್ರ ದುರಂತ
ಆದ್ದರಿಂದ, ರಾಜ್ಯ ಸರ್ಕಾರವು ತನ್ನ ಹೊಸ ಉಚಿತ ಔಷಧ ವಿತರಣಾ ವ್ಯವಸ್ಥೆಯನ್ನು ಸಮರ್ಥವಾಗಿ ಜಾರಿಗೆ ತರುವ ಮೂಲಕ, ಜನೌಷಧಿ ಕೇಂದ್ರಗಳ ಸ್ಥಗಿತದಿಂದ ಉಂಟಾಗಬಹುದಾದ ಸಮಸ್ಯೆಗಳನ್ನು ನಿವಾರಿಸಬೇಕು. ಬಡ ಮತ್ತು ಮಧ್ಯಮ ವರ್ಗದ ಜನರ ಆರೋಗ್ಯದ ಹಿತದೃಷ್ಟಿಯಿಂದ, ಔಷಧಗಳ ಅಲಭ್ಯತೆ ಯಾವುದೇ ಕಾರಣಕ್ಕೂ ಅಡ್ಡಿಯಾಗದಂತೆ ನೋಡಿಕೊಳ್ಳುವುದು ಅತ್ಯಗತ್ಯ. ಜನರ ನಿರೀಕ್ಷೆಗಳಿಗೆ ತಕ್ಕಂತೆ ಸರ್ಕಾರ ಕಾರ್ಯನಿರ್ವಹಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕು.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.