ದೆಹಲಿಯ ಯಮುನಾ ನದಿಯ ನೀರಿನ ಮಟ್ಟವು ಭಾನುವಾರ(ಜುಲೈ 23) ಮತ್ತೆ ಅಪಾಯದ ಮಟ್ಟವನ್ನು ಮೀರಿದೆ.
ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದ ಕೆಲವು ಭಾಗಗಳಲ್ಲಿ ಭಾರೀ ಮಳೆ ಸುರಿಯುತ್ತಿರುವ ಕಾರಣ ಹತ್ನಿಕುಂಡ್ ಬ್ಯಾರೇಜ್ನಿಂದ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಿದ ಪರಿಣಾಮ ನದಿಯ ಅಪಾಯದ ಮಟ್ಟ ಮೀರಿದೆ.
ಯಮುನಾ ನದಿಯ ನೀರಿನ ಮಟ್ಟದಲ್ಲಿ ಮತ್ತಷ್ಟು ಹೆಚ್ಚಳದಿಂದ ರಾಜಧಾನಿಯ ಪ್ರವಾಹ ಪೀಡಿತ ತಗ್ಗು ಪ್ರದೇಶಗಳಲ್ಲಿ ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹತ್ನಿಕುಂಡ್ ಬ್ಯಾರೇಜ್ನಿಂದ ನದಿಗೆ 2 ಲಕ್ಷ ಕ್ಯೂಸೆಕ್ಗೂ ಹೆಚ್ಚು ನೀರನ್ನು ಹರಿಸುವುದರಿಂದ ದೆಹಲಿ ಸರ್ಕಾರವು ಕಟ್ಟೆಚ್ಚರ ವಹಿಸಿದೆ. ನೀರಿನ ಮಟ್ಟ 206.7 ಮೀಟರ್ಗೆ ಏರಿದರೆ ಯಮುನಾ ನದಿ ತೀರದ ಕೆಲವು ಭಾಗಗಳು ಜಲಾವೃತವಾಗಬಹುದು ಎಂದು ಕಂದಾಯ ಸಚಿವ ಅತಿಶಿ ತಿಳಿಸಿದ್ದಾರೆ.
ಜುಲೈ 13 ರಂದು ಸಾರ್ವಕಾಲಿಕ ಗರಿಷ್ಠ ಮಟ್ಟವಾದ 208.66 ಮೀಟರ್ ತಲುಪಿದ ನಂತರ ಕಳೆದ ಕೆಲವು ದಿನಗಳಿಂದ ನದಿಯ ನೀರಿನ ಮಟ್ಟವು 205.33 ಮೀಟರ್ಗಳ ಅಪಾಯದ ಮಟ್ಟದಲ್ಲಿದೆ.
ಶನಿವಾರ(ಜುಲೈ 22) ರಾತ್ರಿ 10 ಗಂಟೆಗೆ 205.02 ಮೀಟರ್ ಇದ್ದ ನೀರಿನ ಮಟ್ಟ ಭಾನುವಾರ(ಜುಲೈ 23) ಬೆಳಗ್ಗೆ 9 ಗಂಟೆಗೆ 205.96 ಮೀಟರ್ಗೆ ಏರಿದೆ ಎಂದು ಕೇಂದ್ರ ಜಲ ಆಯೋಗದ(ಸಿಡಬ್ಲ್ಯುಸಿ) ಅಂಕಿಅಂಶಗಳು ತೋರಿಸಿವೆ. ನಾಳೆಯೊಳಗೆ ನದಿಯ ನೀರಿನ ಮಟ್ಟ 206.7 ಮೀಟರ್ಗಿಂತಲೂ ಹೆಚ್ಚು ತಲುಪುವ ನಿರೀಕ್ಷೆಯಿದೆ.
ಈ ಸುದ್ದಿ ಓದಿದ್ದೀರಾ? ದೆಹಲಿ | 20 ಸಾವಿರ ಕಾರು ಮಾಲೀಕರ ಪ್ರತಿ ಕಾರಿನ ಮೇಲೆ 100ಕ್ಕೂ ಹೆಚ್ಚು ಉಲ್ಲಂಘನೆ ಪ್ರಕರಣಗಳು
ಭಾರತೀಯ ಹವಾಮಾನ ಇಲಾಖೆಯು ಜುಲೈ 25 ರವರೆಗೆ ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ.
ಸಿಡಬ್ಲ್ಯುಸಿ ಅಂಕಿಅಂಶಗಳ ಪ್ರಕಾರ, ಯಮುನಾ ನಗರದಲ್ಲಿರುವ ಹತ್ನಿಕುಂಡ್ ಬ್ಯಾರೇಜ್ನಲ್ಲಿ ಶನಿವಾರ ಬೆಳಿಗ್ಗೆ 9 ಗಂಟೆಗೆ ಹರಿವಿನ ಪ್ರಮಾಣ 1 ಲಕ್ಷದ ಗಡಿ ದಾಟಿದೆ ಮತ್ತು ಬೆಳಿಗ್ಗೆ 10 ರಿಂದ ಸಂಜೆ 5 ರ ನಡುವೆ 2 ಲಕ್ಷದಿಂದ 2.5 ಲಕ್ಷ ಕ್ಯೂಸೆಕ್ಗಳ ನಡುವೆ ತೂಗಾಡುತ್ತಿದೆ.
ಜುಲೈ 13 ರಂದು ಯಮುನಾ ನದಿಯ ನೀರಿನ ಮಟ್ಟವು ಸೆಪ್ಟೆಂಬರ್ 1978ರ 207.49 ಮೀಟರ್ಗಳ ಹಿಂದಿನ ದಾಖಲೆಯನ್ನು ಮೀರಿ 208.66 ಮೀಟರ್ಗಳಿಗೆ ಏರಿಕೆಯಾಗಿದೆ. ಪ್ರವಾಹದಿಂದಾಗಿ 27 ಸಾವಿರಕ್ಕೂ ಹೆಚ್ಚು ಜನರನ್ನು ತಮ್ಮ ಮನೆಗಳಿಂದ ಸ್ಥಳಾಂತರಿಸಲಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಜನಜೀವನ ಅಸ್ತವ್ಯಸ್ತದ ಜೊತೆಗೆ ಕೋಟ್ಯಂತರ ರೂ. ಆಸ್ತಿಪಾಸ್ತಿ ನಷ್ಟವಾಗಿದೆ.
ಮನುಷ್ಯನ ದುರಾಸೆಯ ಅತಿಕ್ರಮಣವೇ ರಾಜಧಾನಿಯ ಹಲವು ನಗರಗಳು ಪ್ರವಾಹದಿಂದ ಸಂಕಷ್ಟಕ್ಕೊಳಗಾಗಲು ಕಾರಣ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.