ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆದ ಸಾಹಿತಿ ಬಾನು ಮುಷ್ತಾಕ್ ಅವರ ಬರಹಗಳಲ್ಲಿ ಮಹಿಳಾ ಸಂವೇದನೆ ಇದೆ. ಬಾನು ಅವರ ʼಹಸೀನಾ ಮತ್ತು ಇತರ ಕಥೆಗಳುʼ ಕಥಾ ಸಂಕಲನವು ಜಾತಿ, ಧರ್ಮಗಳಾಚೆ ಸ್ತ್ರೀ ಕುಲಕ್ಕೆ ಸ್ಫೂರ್ತಿಯ ಚಿಲುಮೆಯಾಗಿದೆ ಎಂದು ಬೀದರ್ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಡಾ.ಮಹಾದೇವಿ ಹೆಬ್ಬಾಳೆ ಅಭಿಪ್ರಾಯಪಟ್ಟರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, ಚಕೋರ ಸಾಹಿತ್ಯ ವಿಚಾರ ವೇದಿಕೆ ಬೀದರ ಹಾಗೂ ಬೀದರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಬ್ರಿಮ್ಸ್ ಕನ್ನಡ ಸಂಘದ ಸಹಯೋಗದಲ್ಲಿ ಬ್ರಿಮ್ಸ್ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಅವರ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ʼಮಹಿಳೆ ಎಲ್ಲಾ ಕಟ್ಟುಪಾಡು, ಸಂಪ್ರದಾಯ ಮತ್ತು ಮೂಢನಂಬಿಕೆಯಿಂದ ಹೊರಬರಬೇಕು. ತನಗೂ ಒಂದು ಸುಂದರ ಬದುಕು ಇದೆ ಎಂದು ಅರ್ಥೈಸಿಕೊಂಡು ಸ್ವತಂತ್ರವಾಗಿ ಬದುಕಬೇಕೆಂದು ಬಾನು ಮುಷ್ತಾಕ್ ಅವರು ತಮ್ಮ ಬರಹದಲ್ಲಿ ಹಿಡಿದಿಟ್ಟಿದ್ದಾರೆʼ ಎಂದರು.
ನಿವೃತ್ತ ಡೀನ್ ಪ್ರೊ.ದೇವಿದಾಸ ತುಮಕುಂಟೆ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿ, ʼಬಾನು ಮುಷ್ತಾಕ್ ಅವರು ಬರೆದ ಕೃತಿಯನ್ನು 2025ರಲ್ಲಿ ದೀಪಾ ಭಾಸ್ತಿ ಅವರಿಂದ ಆಂಗ್ಲ ಭಾಷೆಗೆ ಅನುವಾದಿಸಲ್ಪಟ್ಟ ಸಣ್ಣ ಕಥಾಸಂಕಲನ ‘ಹಾರ್ಟ್ ಲ್ಯಾಂಪ್’ಗೆ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಲಭಿಸಿದೆ. ಮೂಲತಃ ಹಾಸನ ಜಿಲ್ಲೆಯವರಾದ ಮುಷ್ತಾಕ್ ಅವರು ವಕೀಲೆ, ಸಾಮಾಜಿಕ ಕಾರ್ಯಕರ್ತೆ ಮತ್ತು ಬರಹಗಾರ್ತಿಯಾಗಿದ್ದಾರೆ. ಅವರ ಅನೇಕ ಕೃತಿಗಳು ಉರ್ದು, ಹಿಂದಿ, ತಮಿಳು, ಮಲೆಯಾಳಂ, ಆಂಗ್ಲಭಾಷೆಯಲ್ಲಿ ಪ್ರಕಟವಾಗಿವೆʼ ಎಂದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಂಚಾಲಕಿ ಡಾ.ಚಂದ್ರಕಲಾ ಬಿದರಿ ಪ್ರಾಸ್ತಾವಿಕ ಮಾತನಾಡಿ, ʼಬಾನು ಮುಷ್ತಾಕ್ ಅವರ ಜೀವನ ಮತ್ತು ಸಾಧನೆ ಕುರಿತು ಇಂದಿನ ಯುವ ಜನತೆಗೆ ತಿಳಿಸುವ ನಿಟ್ಟಿನಲ್ಲಿ ಸಾಹಿತ್ಯ ಅಕಾಡೆಮಿ ವತಿಯಿಂದ ಕಾಲೇಜುಗಳಲ್ಲಿ ಉಪನ್ಯಾಸ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ. ಬಾನು ಅವರ ಹಸೀನಾ ಮತ್ತು ಇತರೆ ಕಥೆಗಳುʼ ಕೃತಿ ಓದಿಸಿಕೊಂಡು ಹೃದಯಕ್ಕೆ ತಟ್ಟುವಂತಿದೆʼ ಎಂದರು.
ಅಧ್ಯಕ್ಷತೆ ವಹಿಸಿದ್ದ ಬ್ರಿಮ್ಸ್ ಪ್ರಭಾರಿ ನಿರ್ದೇಶಕ ಡಾ. ಸುನೀಲ ತಪಸೆ ಮಾತನಾಡಿ, ʼಬಾನು ಅವರು ʼಹೆಜ್ಜೆ ಮೂಡಿದ ಹಾದಿ, ಬೆಂಕಿ ಮಳೆ, ಎದೆಯ ಹಣತೆ, ಸಫಿರಾ, ಬಡವರ ಮಗಳು ಹೆಣ್ಣಲ್ಲ, ಕುಬ್ರ ಕಾದಂಬರಿ, ಇಬ್ಬನಿಯ ಹಾವು ಲೇಖನಗಳ ಸಂಗ್ರಹ, ಒದ್ದೆ ಕಣ್ಣಿನ ಬಾಗಿನ ಕವನ ಸಂಕಲನ ಸೇರಿದಂತೆ ಹಲವು ಕೃತಿಗಳು ರಚಿಸಿದ್ದಾರೆ. ಈಗ ಬೂಕರ್ ಪ್ರಶಸ್ತಿ ಪಡೆಯುವ ಮೂಲಕ ಕನ್ನಡದ ಕೀರ್ತಿ ಜಗವೆಲ್ಲ ಬೆಳಗಿದ್ದಾರೆʼ ಎಂದು ತಿಳಿಸಿದರು.
ಇದನ್ನೂ ಓದಿ : ಬೀದರ್ | ಬಾಲ್ಯ ವಿವಾಹ ಕಂಡು ಬಂದರೆ ಪ್ರಕರಣ ದಾಖಲಿಸಿ : ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ
ಸಮುದಾಯ ವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಪಲ್ಲವಿ ಕೇಸರಿ, ಜಾನಪದ ಪರಿಷತ್ ತಾಲೂಕಾಧ್ಯಕ್ಷ ಎಸ್.ಬಿ.ಕುಚಬಾಳ, ಸಂಚಾಲಕ ಅಜೀತ ನೇಳಗೆ ಸೇರಿದಂತೆ ವೈದ್ಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಬ್ರಿಮ್ಸ್ ಕನ್ನಡ ಸಂಘದ ಸಂಯೋಜಕ ಡಾ.ರಾಜಕುಮಾರ ಹೆಬ್ಬಾಳೆ ನಿರೂಪಿಸಿದರು. ಚಕೋರ ಸಾಹಿತ್ಯ ವಿಚಾರ ವೇದಿಕೆ ಸಂಚಾಲಕಿ ಡಾ.ಮಕ್ತುಂಬಿ ಎಂ. ಸ್ವಾಗತಿಸಿದರು. ಸಮುದಾಯ ವೈದ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಪ್ರೊ. ಶಶಿಕಾಂತ ಹೊಸದೊಡ್ಡೆ ವಂದಿಸಿದರು.