ತುಳುನಾಡಿನ ಪಾರಂಪರಿಕ ಕೈ ಮಗ್ಗ ವೃತ್ತಿಗೆ ತುಳುನಾಡಿನ ಜನತೆ ಎಲ್ಲಾ ರೀತಿಯ ಸಹಕಾರ ಬೆಂಬಲ ಕೊಡಬೇಕು ಎಂದು ಎ ಬಿ ಶೆಟ್ಟಿ ದಂತ ವೈದ್ಯಕೀಯ ಕಾಲೇಜಿನ ಅಸೋಸಿಯೇಟ್ ಡೀನ್ ಡಾ. ಅಮರಶ್ರೀ ಅಮರನಾಥ ಶೆಟ್ಟಿ ಹೇಳಿದರು.
ಮಂಗಳೂರಿನ ಕಿನ್ನಿಗೋಳಿ ನೇಕಾರ ಸೌಧದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಕದಿಕೆ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಕೈ ಮಗ್ಗ ನೇಯ್ಗೆಯ ಹಿರಿಯ ಕುಶಲಕರ್ಮಿ ದೇವಕಿ ಶೆಟ್ಟಿಗಾರ್ ಅವರಿಗೆ ಗೌರವ ಸಮರ್ಪಿಸಿ ಅವರು ಮಾತನಾಡಿದರು.
“ರಾಜ್ಯದ ಹಾಗೂ ದೇಶದ ಬೇರೆ ಬೇರೆ ಭಾಗಗಳಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಬೆಳೆದು ಬಂದ ನೇಯ್ಗೆ ವೃತ್ತಿಯ ಬಗ್ಗೆ ನಾವೆಲ್ಲ ಅಭಿಮಾನ ಪಟ್ಟುಕೊಳ್ಳುತ್ತೇವೆ. ಇದೇ ಸಂದರ್ಭದಲ್ಲಿ ನಮ್ಮದೇ ನೆಲದಲ್ಲಿ ಹುಟ್ಟಿ ಬೆಳೆದ ಒಂದು ಕಾಲದಲ್ಲಿ ಕುಲ ಕಸುಬಾಗಿದ್ದ, ಕೈ ಮಗ್ಗ ನೇಯ್ಗೆಯವರಿಗೆ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ವರ್ಷದಲ್ಲಿ ಒಂದು ಬಾರಿಯಾದರೂ ತುಳುನಾಡಿನ ಸೀರೆ ಹಾಗೂ ಕೈ ಮಗ್ಗದ ಉತ್ಪನ್ನಗಳನ್ನು ಖರೀದಿಸಬೇಕು” ಎಂದು ಆಶಯ ವ್ಯಕ್ತಪಡಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಹಿರಿಯ ಕೈ ಮಗ್ಗ ನೇಯ್ಗೆಯ ಕುಶಲಕರ್ಮಿ ದೇವಕಿ ಶೆಟ್ಟಿಗಾರ್, “ತಾಳಿಪಾಡಿ ನೇಕಾರರ ಸೇವಾ ಸಂಘ ಹಾಗೂ ಕದಿಕೆ ಟ್ರಸ್ಟ್ ಅವರ ಕಾರಣದಿಂದಾಗಿ ನಾನು ಮತ್ತೇ ನನ್ನ ಮೂಲ ವೃತ್ತಿಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಯಿತು. ನನಗೆ ಸಿಕ್ಕಿದ ಗೌರವವು ಈ ಎರಡೂ ಸಂಸ್ಥೆಗಳಿಗೆ ಅರ್ಪಿಸುತ್ತೇನೆ” ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಮಾತನಾಡಿ, “ತುಳು ಬದುಕಿನ ವಿಶಾಲವಾದ ವ್ಯಾಪ್ತಿಯೊಳಗಡೆ ಅನೇಕ ಕುಲಕಸುಬು ಹಾಗೂ ಕುಶಲಕರ್ಮಿಗಳ ಸೇವೆ ತುಳುನಾಡಿಗೆ ಸಂದಿವೆ. ಈ ಹಿನ್ನಲೆ ಕೈ ಮಗ್ಗ ನೇಯ್ಗೆಯಲ್ಲಿ ತೊಡಗಿಸಿಕೊಂಡ ಹಿರಿಯರನ್ನು ಪ್ರೋತ್ಸಾಹಿಸುವ ಸಲುವಾಗಿ ಅಕಾಡೆಮಿ ವತಿಯಿಂದ ಚಾವಡಿ ತಮ್ಮನದ ಗೌರವ ನೀಡಲಾಯಿತು” ಎಂದರು.
ಇದನ್ನೂ ಓದಿ: ಮಂಗಳೂರು | ‘ಮರೆಯಲಾಗದ ಬ್ಯಾರಿ ಮಹನೀಯರು’ ಕೃತಿಯ ಎರಡನೇ ಭಾಗ ಬಿಡುಗಡೆ
ಕದಿಕೆ ಟ್ರಸ್ಟ್ ನ ಅಧ್ಯಕ್ಷೆ ಮಮತಾ ರೈ ಮಾತನಾಡಿ, “2018 ರಲ್ಲಿ ಕದಿಕೆ ಟ್ರಸ್ಟ್ ವತಿಯಿಂದ ಪಾರಂಪರಿಕ ಕೈ ಮಗ್ಗವನ್ನು ಪುನರುಜ್ಜೀವನಗೊಳಿಸುವ ಕೆಲಸ ಮಾಡಿಕೊಂಡು ಬರಲಾಯಿತು. ಇಂದು ದೇವಕಿ ಶೆಟ್ಟಿಗಾರ್ ಅವರಂತೆ ಹಿರಿಯರು ಈ ವೃತ್ತಿಯಲ್ಲಿ ಮತ್ತೆ ತೊಡಗಿಸಿಕೊಳ್ಳಲು ಹಾಗೂ ಹೊಸಬರು ಈ ವೃತ್ತಿಗೆ ಬರುವಂತೆ ಪ್ರೇರೇಪಿಸಲು ಸಾಧ್ಯವಾಗಿದೆ. ಕೈ ಮಗ್ಗ ಬಟ್ಟೆಗಳನ್ನು ಖರೀದಿಸುವ ಮೂಲಕ ಇವರನ್ನು ನಾವು ಪ್ರೋತ್ಸಾಹಿಸಬೇಕು” ಎಂದರು.
ಸಮಾರಂಭದಲ್ಲಿ ಹಿರಿಯ ಸಾಹಿತಿ ಡಾ. ಪ್ರಭಾಕರ ನೀರ್ ಮಾರ್ಗ, ಕೊಡೆತ್ತೂರು ಸಚ್ಚಿದಾನಂದ ಉಡುಪ, ತುಳು ಪರಿಷತ್ ಅಧ್ಯಕ್ಷ ಶುಭೋದಯ ಆಳ್ವ ಸೇರಿದಂತೆ ಇತರರು ಉಪಸ್ಥಿತರಿದ್ದರು.