ಚಾಮರಾಜನಗರದ ಪೊಲೀಸ್ ಪೆರೇಡ್ ಮೈದಾನದಲ್ಲಿ ಭಾರತ ಸರ್ಕಾರದ ಆಯುಷ್ ಮಂತ್ರಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಪತಂಜಲಿ ಯೋಗ ಶಿಕ್ಷಣ ಸಮಿತಿ, ಯೋಗ ನಿರತ ಸಂಘ ಸಂಸ್ಥೆಗಳು ಮತ್ತು ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ‘ ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ ’ ಘೋಷವಾಕ್ಯದೊಂದಿಗೆ ಆಯೋಜಿಸಲಾಗಿದ್ದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ‘ ಮಾನಸಿಕ, ದೈಹಿಕ ಸದೃಢತೆ, ಸುಸ್ಥಿತಿ, ಮನೋಲ್ಲಾಸಕ್ಕೆ ಯೋಗ ಸಹಕಾರಿ ‘ ಎಂದರು.
ಇಂದಿನ ಸ್ಪರ್ಧಾತ್ಮಕ ಒತ್ತಡದ ಪರಿಸ್ಥಿತಿಯಲ್ಲಿ 30 ರಿಂದ 40ನೇ ವಯಸ್ಸಿಗೆ ಸಾಕಷ್ಟು ಯುವಕ, ಯುವತಿಯರು ಹೃದಯಾಘಾತಕ್ಕೀಡಾಗುತ್ತಿರುವುದು ಎಲ್ಲೆಡೆ ಕಂಡು ಬರುತ್ತಿದೆ. ಹಾಗಾಗಿ, ದೈನಂದಿನ ಎಷ್ಟೇ ಒತ್ತಡವಿರಲಿ, ಯೋಗವನ್ನು ಅಳವಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು. ದಿನನಿತ್ಯ ಯೋಗ ಮಾಡುವುದರಿಂದ ಧ್ಯಾನ, ದೈಹಿಕ ವ್ಯಾಯಾಮ, ಸುಸ್ಥಿರ ಆರೋಗ್ಯ ದೊರೆಯಲಿದೆ. ಈ ನಿಟ್ಟಿನಲ್ಲಿ ಸಂಪೂರ್ಣವಾಗಿ ಕಾಯಾ, ವಾಚಾ, ಮನಸ ಯೋಗದಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.
ಯೋಗ ಮಾಡಲು ಹೆಚ್ಚಿಗೆ ಹಣ ಖರ್ಚಾಗುವುದಿಲ್ಲ. ಒಂದು ಮ್ಯಾಟ್ ಅಥವಾ ಶಾಲು ಇದ್ದರೆ ಸಾಕು. ಮನೆ ಅಥವಾ ಶಾಲೆಯ ಪ್ರಶಾಂತ ವಾತಾವರಣದಲ್ಲಿ ಯೋಗ ಮಾಡಬಹುದು. ನಮ್ಮ ಆರೋಗ್ಯ ನಮ್ಮ ಕೈಯಲ್ಲೇ ಇದೆ. ನಮ್ಮ ಆರೋಗ್ಯ, ನಮ್ಮ ಕುಟುಂಬದವರ ಹಾಗೂ ಸಮುದಾಯದ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಮಾಡುವಂತೆ ಇತರರಿಗೆ ತಿಳಿ ಹೇಳಬೇಕು. ನಾವು ಆರೋಗ್ಯವಾಗಿದ್ದರೇ ದೇಶದ ಆರೋಗ್ಯ ಉತ್ತಮವಾಗಿರಲಿದೆ. ಚಾಮರಾಜನಗರವನ್ನು ಈಗ ಹಸಿರು ಚಾಮರಾಜನಗರ, ಚೆಲುವ ಚಾಮರಾಜನಗರ ಎಂದು ಹೇಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಆರೋಗ್ಯಕರ ಚಾಮರಾಜನಗರವನ್ನಾಗಿ ಮಾಡಲು ದಿನನಿತ್ಯ ಯೋಗ ಮಾಡುತ್ತೇವೆಂದು ಎಲ್ಲರೂ ಇಂದೇ ಪಣ ತೋಡೋಣ ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಕನ್ನಡ ನಾಡು ಸೌಹಾರ್ದದ ಕಲಾ ಸಂಪತ್ತಿನ ಬೀಡು : ಡಾ. ಚೂಡಾಮಣಿ

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್, ಜಿಲ್ಲಾ ಆಯುಷ್ ಅಧಿಕಾರಿ ಡಾ. ಬಿ.ಪಿ. ಸತೀಶ್ ಕುಮಾರ್ ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಇದ್ದರು.