ಮಾಜಿ ಸಹಕಾರ ಸಚಿವ, ಹೆಸರಾಂತ ರಾಜಕಾರಣಿ ದಿವಂಗತ ಕೆ ಎಚ್ ಪಾಟೀಲ್ ಅವರು ಜನ ಸಮುದಾಯದ ಜೊತೆಗೆ ಗುರುತಿಸಿಕೊಳ್ಳುವುದರೊಂದಿಗೆ ಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವಂತಹ ಮಾನವೀಯ ಮೌಲ್ಯಗಳಿದ್ದ ಹುಟ್ಟು ಹೋರಾಟಗಾರರಾಗಿದ್ದರು ಎಂದು ಗೃಹ ಸಚಿವರಾದ ಡಾ. ಜಿ ಪರಮೇಶ್ವರ ಹೇಳಿದರು.
ಕುಕನೂರು ತಾಲೂಕಿನ ಶಿರೂರ ಪುನರ್ವಸತಿ ಗ್ರಾಮದಲ್ಲಿ ಕರ್ನಾಟಕ ನೀರಾವರಿ ನಿಗಮ ನಿಯಮಿತ ವತಿಯಿಂದ ಹಮ್ಮಿಕೊಂಡಿದ್ದ ಮಾಜಿ ಸಚಿವ ದಿ| ಕೆ ಎಚ್ ಪಾಟೀಲ್ ಅವರ ಮೂರ್ತಿ ಅನಾವರಣ ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿದರು.
“ರಾಜಕಾರಣದಲ್ಲಿ ಬಹಳ ವರ್ಷಗಳ ಕಾಲ ಜನ ಸಮುದಾಯದಲ್ಲಿ ಉಳಿದ ಪಾಟೀಲ್ ಅವರ ಮೂರ್ತಿಯನ್ನು ಇಂದು ಅನಾವರಣಗೊಳಿಸುತ್ತಿರುವುದು ಸಂತೋಷದ ವಿಷಯ. ನಾನು ಮೊದಲ ಬಾರಿಗೆ ಶಾಸಕನಾಗಿದ್ದಾಗ ಕೆ ಎಚ್ ಪಾಟೀಲ್ ಅವರು ಕಂದಾಯ ಸಚಿವರಾಗಿದ್ದರು. ಯುವ ಉತ್ಸಾಹದ ಹೊಸ ಶಾಸಕರನ್ನು ಅವರು ಪ್ರೀತಿಯಿಂದ ಮಾತನಾಡಿಸುವುದರ ಜೊತೆಗೆ ಪ್ರೋತ್ಸಾಹಿಸುತ್ತಿದ್ದರು. ಜನರ ಕಷ್ಟಗಳನ್ನು ದೂರ ಮಾಡುವ ಸಲುವಾಗಿ ಅವರು ಸಹಕಾರಿ ಕ್ಷೇತ್ರ, ಸಾಮಾಜಿಕ, ಆರ್ಥಿಕ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಿದರು” ಎಂದರು.

ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್ ವಿ ದೇಶಪಾಂಡೆ ಮಾತನಾಡಿ, “ನಾನು ಮತ್ತು ಭೋಸರಾಜು ಅವರು ಕೆ ಎಚ್ ಪಾಟೀಲ್ ಅವರ ಜೊತೆಗೆ ಕೆಲಸ ಮಾಡಿದ್ದೇವೆ. ಅವರು ಪಾರದರ್ಶಕ ಆಡಳಿತಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದರು. ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಪಕ್ಷಕ್ಕೆ ಹೆಚ್ಚಿನ ಶಕ್ತಿ ತುಂಬುವ ಕೆಲಸ ಮಾಡಿದ್ದರು. ತಮ್ಮ ಸರಳ ವ್ಯಕ್ತಿತ್ವದ ಜೊತೆಗೆ ಆಡಳಿತದಲ್ಲಿ ಹಿಡಿತ ಉಳ್ಳವರಾಗಿದ್ದರು. ಕೃಷಿ, ಸಹಕಾರ ಮತ್ತು ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದರು. ಪಾಟೀಲ್ ಅವರನ್ನು ಹುಲಕೋಟಿಯ ಹುಲಿ ಎಂದೆ ಕರೆಯುತ್ತಿದ್ದರು” ಎಂದು ನೆನೆದರು.
ಪ್ರವಾಸೋದ್ಯಮ ಸಚಿವರೂ ಆಗಿರುವ ದಿ| ಕೆ ಹೆಚ್ ಪಾಟೀಲ್ ಅವರ ಪುತ್ರ ಹೆಚ್ ಕೆ ಪಾಟೀಲ್ ಮಾತನಾಡಿ, “ಶಿರೂರ ಗ್ರಾಮದಲ್ಲಿ ತಂದೆಯವರ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿರುವುದು ಸಂತಸ ತಂದಿದೆ. ಹತ್ತಿ ಮಾರಾಟ ಪ್ರಕ್ರಿಯೆಯಲ್ಲಿ ರೈತರಿಗೆ ಬಹು ದೊಡ್ಡ ಸವಾಲಾಗಿದ್ದ ಸಂದರ್ಭದಲ್ಲಿ ತಂದೆಯವರು ಸಹಕಾರಿ ಕ್ಷೇತ್ರದ ಮುಖಾಂತರ ಹತ್ತಿ ಮಿಲ್ಗಳನ್ನು ಪ್ರಾರಂಭ ಮಾಡಿ ರೈತರನ್ನು ರಕ್ಷಿಸಿದರು. ಸಾಮಾಜಿಕ ನ್ಯಾಯ ಒದಗಿಸಲು ಸಹಕಾರ ಕ್ಷೇತ್ರದ ಮೂಲಕ ಹೋರಾಟ ಮಾಡಿರುವ ಅವರನ್ನು ನೆನಪಿಸುವಂತಹ ಕಾರ್ಯ ಶಿರೂರು ಗ್ರಾಮದಲ್ಲಾಗಿದೆ. ವೀರಾಪೂರ, ಮುತ್ತಾಳ, ಮುದ್ಲಾಪುರ, ಶಿರೂರು, ಯಲಬುರ್ಗಾ ಕ್ಷೇತ್ರದಲ್ಲಿಂದು ಸಾಕಷ್ಟು ಅಭಿವೃದ್ಧಿಯಾಗಿದೆ. ಕಳೆದ 25-30 ವರ್ಷಗಳ ಹಿಂದೆ ಯಲಬುರ್ಗಾ ಕ್ಷೇತ್ರವು ತೀರಾ ಹಿಂದುಳಿದ ಪ್ರದೇಶವಾಗಿತ್ತು. ಇಲ್ಲಿಯ ಜನರು ಆಸ್ಪತ್ರೆ, ಶಿಕ್ಷಣ ಕಲಿಕೆಗೆ ಹಾಗೂ ಹತ್ತಿಯಂತಹ ರೈತರ ಕೃಷಿ ಬೆಳೆಗಳನ್ನು ಮಾರಲು ಸಹ ಗದಗ ಜಿಲ್ಲೆಗೆ ಬರಬೇಕಾಗಿತ್ತು. ಬಸವರಾಜ ರಾಯರೆಡ್ಡಿಯವರು ಶಾಸಕರಾದ ನಂತರ ಈ ಕ್ಷೇತ್ರದಲ್ಲಿ ಹಲವಾರು ವಸತಿ ನಿಲಯಗಳು, ಶಾಲೆಗಳು, ಆಸ್ಪತ್ರೆ ಹೀಗೆ ವಿವಿಧ ಅಭಿವೃದ್ಧಿ ಕಾರ್ಯಗಳಾಗಿ ಜನರ ಬದುಕಿಗೆ ಬೇಕಾಗಿರುವ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಮಾದರಿ ಕ್ಷೇತ್ರವಾಗಿ ಮಾರ್ಪಟ್ಟಿದೆ” ಎಂದು ಸಂತಸ ವ್ಯಕ್ತಪಡಿಸಿದರು.

ಕರ್ನಾಟಕ ವಿಧಾನ ಪರಿಷತ್ತಿನ ಸಭಾ ನಾಯಕ ಹಾಗೂ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್ ಎಸ್ ಭೋಸರಾಜು ಮಾತನಾಡಿ, “ಕೆ.ಎಚ್ ಪಾಟೀಲ್ ಅವರು ಸಂಘಟನೆ ಹಾಗೂ ಆಡಳಿತದ ಬಗ್ಗೆ ತಿಳಿಸಲು ನಮಗೆ ಮಾರ್ಗದರ್ಶಕರಾಗಿದ್ದರು, ಯಾವುದೇ ಸಂಘಟನೆ ವಿಷಯದಲ್ಲಿ ಚರ್ಚೆ ಬಂದಾಗ ನೇರವಾಗಿ ನಿರ್ದೇಶನ ಮಾಡುತ್ತಿದ್ದರು. ರಾಜ್ಯದ ಹಿತದೃಷ್ಟಿಯನ್ನು ಎಂದಿಗೂ ಕಡೆಗಣಿರಸಿದವರಲ್ಲ. ಉಕ ಭಾಗದ ಅಭಿವೃದ್ಧಿಗೂ ಬಹಳ ಶ್ರಮಿಸಿದ್ದರು. ನನ್ನನ್ನು ಗುರುತಿಸಿ ರಾಜಕೀಯದಲ್ಲಿ ಪ್ರೋತ್ಸಾಹ ನೀಡಿದವರು ಯಾರಾದರು ಇದ್ದರೆ ಅದು ಪಾಟೇಲರು ಮಾತ್ರ” ಎಂದು ಹೇಳಿದರು.
ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಹಾಗೂ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿ ಮಾತನಾಡಿ, “ಕೊಪ್ಪಳ ತಾಲೂಕಿನ ಹಿರೆಹಳ್ಳ ಡ್ಯಾಂ ನಿಂದಾಗಿ ಶಿರೂರ, ವೀರಾಪುತ್ರ, ಮುತ್ತಾಳ ಹಾಗೂ ಮುದ್ಲಾಪುರ ಗ್ರಾಮಗಳಲ್ಲಿ ಡ್ಯಾಂ ತುಂಬಿದಾಗ, ಈ ಗ್ರಾಮಗಳಲ್ಲಿ ನೀರು ನಿಂತು ಬಿಡುತ್ತಿತ್ತು. 2002 ರಲ್ಲಿ ಈ ಗ್ರಾಮಗಳನ್ನು ಸ್ಥಳಾಂತರ ಮಾಡುವಂತೆ ಜನರ ಒತ್ತಾಯವೂ ಇತ್ತು. ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಧರ್ಮಸಿಂಗ್ ಅವರು ಮುಖ್ಯಮಂತ್ರಿ ಇದ್ದಾಗ 6 ಕೋಟಿ ಹಣ ಬಿಡುಗಡೆ ಮಾಡಿ ಭೂಮಿ ಖರೀದಿಸಿ ಎಲ್ಲರಿಗೂ 5 ಲಕ್ಷ, 10 ಲಕ್ಷದಿಂದ ಹಿಡಿದು 50 ರಿಂದ 60 ಲಕ್ಷಗಳವಗೆರೆ ಹಣವನ್ನು ಕೊಟ್ಟ ಮೇಲೆ ಅವರು ಮನೆ ಕಟ್ಟಿಸಿಕೊಂಡರು. ಅಲ್ಲಿ ಸಿಮೆಂಟ್ ರಸ್ತೆ, ಲೈಟ್, ಬಸ್ ನಿಲ್ದಾಣ ಹೈಸ್ಕೂಲ್ ಮಾಡಿದ್ದೇವೆ” ಎಂದರು.
ಇದೇ ಸಂದರ್ಭದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ 2024-25ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ ಕೊಪ್ಪಳ ಜಿಲ್ಲೆಗೆ ಮೊದಲನೇ ಹಂತದಲ್ಲಿ ಹಂಚಿಕೆಯಾದ ಲ್ಯಾಪ್ಟಾಪ್ ವಿತರಿಸಲಾಯಿತು. ಸಾಂಕೇತಿಕವಾಗಿ ಕುಕನೂರು ಮತ್ತು ಯಲಬುರ್ಗಾ ತಾಲೂಕಿನ ವಿವಿಧ ಗ್ರಾಮಗಳ ಗ್ರಾಮ ಆಡಳಿತಾಧಿಕಾರಿಗಳಿಗೆ ಒಟ್ಟು 72 ಲ್ಯಾಪ್ಟಾಪ್ ವಿತರಣೆ ಮಾಡಲಾಯಿತು.

ಇದನ್ನೂ ಓದಿ: ಕೊಪ್ಪಳ | ರೈತರ ಬೇಡಿಕೆ ಈಡೇರದಿದ್ದರೆ ಅನಿರ್ದಿಷ್ಟಾವಧಿ ಧರಣಿ ಖಚಿತ: ಈಶಪ್ಪ ಸರಬದ
ಸಮಾರಂಭದಲ್ಲಿ ಸಚಿವ ಶಿವರಾಜ ಎಸ್. ತಂಗಡಗಿ, ಸಂಸದ ಕೆ.ರಾಜಶೇಖರ ಬಸವರಾಜ ಹಿಟ್ನಾಳ, ಮುನಿರಾಬಾದ್ ತುಂಗಭದ್ರಾ ಯೋಜನೆಯ (ಕಾಡಾ) ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಸನಸಾಬ ನಬಿಸಾಬ ದೋಟಿಹಾಳ, ಕೊಪ್ಪಳ ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ, ಜಿಪಂ ಸಿಇಒ ವರ್ಣಿತ್ ನೇಗಿ, ಎಸ್ಪಿ ಡಾ. ರಾಮ್ ಎಲ್. ಅರಸಿದ್ದಿ, ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪುರ, ಎಡಿಸಿ ಸಿದ್ರಾಮೇಶ್ವರ, ಕೊಪ್ಪಳ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಕರ್ನಾಟಕ ನೀರಾವರಿ ನಿಗಮ ನಿಯಮಿತದ ನೀರಾವರಿ ಕೇಂದ್ರ ವಲಯ ಮುನಿರಾಬಾದನ ಮುಖ್ಯ ಎಂಜಿನಿಯರ್ ಎಲ್.ಬಸವರಾಜ, ಕನೀನಿನಿ ಸಿಂಗಟಾಲೂರ ಏತ ನೀರಾವರಿ ಯೋಜನೆ ವಿಭಾಗ ನಂ.1 ಮುಂಡರಗಿಯ ಕಾರ್ಯ ನಿರ್ವಾಹಕ ಅಭಿಯಂತರ ಐ.ಪ್ರಕಾಶ, ಕನೀನಿನಿ ಸಿಂಗಟಾಲೂರ ಏತ ನೀರಾವರಿ ಯೋಜನೆ ಉಪ ವಿಭಾಗ ನಂ.3 ಅಳವಂಡಿಯ ಸಹಾಯಕ ಕಾರ್ಯಪಾಲಕ ಅಭಿಯಂತರ ರಾಘವೇಂದ್ರಚಾರ್ಯ ಜೋಶಿ, ಮಾಜಿ ಜಿಪಂ ಉಪಾಧ್ಯಕ್ಷ ಯಂಕಣ್ಣ ಯರಾಶಿ ಹಾಗೂ ಹನಮಂತಗೌಡ ಪಾಟೀಲ್, ಕುಕನೂರಿನ ಸತ್ಯನಾರಾಯಣ ಹರಪನಹಳ್ಳಿ, ಮಾಜಿ ಜಿ.ಪಂ. ಸದಸ್ಯ ಅಶೋಕ ತೋಟದ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಕಾಶಿಂಸಾಬ ತಳಕಲ್, ಕುಕನೂರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕ ಅಧ್ಯಕ್ಷ ಸಂಗಮೇಶ ಗುತ್ತಿ ಹಾಗೂ ಶಿರೂರು ಗ್ರಾಮ ಪಂಚಾಯತ್ ಸರ್ವ ಸದಸ್ಯರು, ಯೋಜನಾ ಅನುಷ್ಠಾನ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಮತ್ತು ಶಿರೂರು ಗ್ರಾಮಸ್ಥರು ಉಪಸ್ಥಿತರಿದ್ದರು.