ಬೆಂಗಳೂರು ನಗರದ ಬೀದಿ ವ್ಯಾಪಾರಿಗಳು ತಮ್ಮ ಹಲವು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಇಂದು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿದರು.
ಬೆಂಗಳೂರಿನ ಬೀದಿ ಬದಿ ವ್ಯಾಪಾರಿಗಳು ರಸ್ತೆ ಬದಿ / ಫುಟ್ಪಾತ್ ಮೇಲೆ ವ್ಯಾಪಾರ ಮಾಡಬಾರದು. ವೆಂಡಿಂಗ್ ಜೋನ್ ನಲ್ಲಿ ಮಾತ್ರ ವ್ಯಾಪಾರ ಮಾಡಬೇಕು ಅಥವಾ ದಿನವಿಡೀ ಗಾಡಿಗಳನ್ನು ತಳ್ಳಿಕೊಂಡು ವ್ಯಾಪಾರ ಮಾಡಬೇಕು ಹಾಗು ಗುರುತಿನ ಚೀಟಿ ಇಲ್ಲದವರಿಗೆ ವ್ಯಾಪಾರ ಮಾಡಲು ಬಿಡುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇತ್ತೀಚೆಗೆ ಹೇಳಿಕೆ ನೀಡಿದ್ದರು. ಇದನ್ನೇ ಬಿಬಿಎಂಪಿ ವಿಶೇಷ ಆಯುಕ್ತರು (ಕಲ್ಯಾಣ) ಸಹ ಹೇಳುತ್ತಲೇ ಇದ್ದಾರೆ. ಜೊತೆಗೆ ಬೀದಿ ವ್ಯಾಪಾರಿಗಳ ಸಮೀಕ್ಷೆಯಲ್ಲಿ ಹಲವು ಬೀದಿ ವ್ಯಾಪಾರಿಗಳನ್ನು ಹೊರಗಿಡಲಾಗಿದೆ. ಇದರ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಗತಿಪರ ಬೀದಿ ವ್ಯಾಪಾರಿಗಳ ಸಂಘದ ಅಧ್ಯಕ್ಷರಾದ ಕಾಮ್ರೇಡ್ ಎಸ್. ಬಾಬು ರವರು ಮಾತನಾಡಿ, “ಬೀದಿ ವ್ಯಾಪಾರ ನಮ್ಮ ಹಕ್ಕು. ನಮಗೆ ಬೀದಿ ಬದಿಯಲ್ಲಿ, ಫುಟ್ ಪಾತ್ ನಲ್ಲಿ ವ್ಯಾಪಾರ ಮಾಡುವ ಹಕ್ಕು ಕಾನೂನು ನೀಡಿದೆ. ನಾವು ಪಾದಚಾರಿಗಳ ವಿರೋಧವರಲ್ಲ, ಅವರು ನಮ್ಮ ಗ್ರಾಹಕರು. ಅವರ ಹೆಸರಿನಲ್ಲಿ ನಮನ್ನು ಎತ್ತಂಗಡಿ ಮಾಡುವುದು ಸರಿಯಲ್ಲ. ಬೀದಿ ವ್ಯಾಪಾರಿಗಳ ಎತ್ತಂಗಡಿ ನಿಲ್ಲದಿದ್ದರೆ ನಾವು ಹೋರಾಟ ತೀವ್ರಗೊಳಿಸುತ್ತೇವೆ” ಎಂದು ಎಚ್ಚರಿಕೆ ನೀಡಿದರು.
ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಂಚಾಲಕರು ಮಾವಳ್ಳಿ ಶಂಕರ್ ಅವರು ಪ್ರತಿಭಟನೆಗೆ ಬೆಂಬಲ ಸೂಚಿಸಿ ಮಾತನಾಡುತ್ತಾ “ರಾಜಕಾರಣಿಗಳು ಮತ ಕೇಳಲು ಬಂದಾಗ ಬೀದಿ ವ್ಯಾಪಾರಿಗಳ ಕಲ್ಯಾಣಕ್ಕಾಗಿ ಶ್ರಮಿಸುತ್ತೇವೆಂದು ಭರವಸೆ ನೀಡಿ ಮತ ಪಡೆಯುತ್ತಾರೆ. ಅಧಿಕಾರ ಪಡೆದ ನಂತರ ಇವರೇ ಬಡ ಬೀದಿ ವ್ಯಾಪಾರಿಗಳ ವಿರುದ್ಧ ಕೆಲಸ ಮಾಡುತ್ತಾರೆ. ಇದು ಖಂಡನೀಯ ಮತ್ತು ಬೀದಿ ವ್ಯಾಪಾರಿಗಳು ತಮ್ಮ ಹೋರಾಟವನ್ನು ತೀವ್ರಗೊಳಿಸುವುದು ಸೂಕ್ತ” ಎಂದರು.
AICCTU ರಾಷ್ಟ್ರ ಕಾರ್ಯದರ್ಶಿಗಳಾದ ಕ್ಲಿಫ್ಟನ್ ಡಿ’ರೊಜಾರಿಯೋ “ಬ್ರಾಂಡ್ ಬೆಂಗಳೂರಿನಲ್ಲಿ ಸಾಹುಕಾರರಿಗೆ ಮಾತ್ರ ಜಾಗವಿದೆಯೇ? ಬೆಂಗಳೂರು ನಗರದಲ್ಲಿರುವ ಬಡವರಿಗೆ, ಮಧ್ಯಮ ವರ್ಗದವರಿಗೆ ಸೇವೆ ಸಲ್ಲಿಸುವ ಬೀದಿ ವ್ಯಾಪಾರಿಗಳಿಗೆ ಜಾಗ ಏಕಿಲ್ಲ? ಬೆಂಗಳೂರು ನಗರದ ರಸ್ತೆಗಳಲ್ಲಿ ಬರೀ ಕಾರುಗಳಿಗೆ ಮಾತ್ರ ಹೆಚ್ಚು ಜಾಗ ಕೊಡುತ್ತಿರುವ ಸರ್ಕಾರ ಬೀದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸುವುದು ಕಾನೂನು ಬಾಹಿರ ಹಾಗೂ ಅಮಾನವೀಯ” ಎಂದು ಹೇಳಿದರು.
ಕರ್ನಾಟಕ ಪ್ರಗತಿಪರ ಬೀದಿ ವ್ಯಾಪಾರಿಗಳ ಸಂಘದ ಜಿಲ್ಲಾ ಕಾರ್ಯದರ್ಶಿ ಕಾಮ್ರೇಡ್ ಸೈಯದ್ ಜಮೀರ ಅವರು ಮಾತನಾಡಿ “ಬೀದಿ ವ್ಯಾಪಾರಿಗಳಿಗೆ ಯಾವುದೇ ರೀತಿಯ ಸಾಮಾಜಿಕ ಭದ್ರತೆ ಇಲ್ಲ. ಬೀದಿ ವ್ಯಾಪಾರಿಗಳಲ್ಲಿ ವೃದ್ಧರು, ವಿಶೇಷ ಚೇತನರು ಈಗಲೂ ದಿನ ಬಿಸಿಲು-ಮಳೆಯಲ್ಲಿ ದುಡಿಯುವ ಪರಿಸ್ಥಿತಿ ಇದೆ. ಹಾಗಾಗಿ ನಮಗೆ ಅರೋಗ್ಯ ವಿಮೆ, ಪಿಂಚಣಿ ಹಾಗೂ ಇತರೆ ಸೌಲಭ್ಯತೆಗಳನ್ನು ಸರ್ಕಾರವು ಕಲ್ಪಿಸಿಕೊಡಬೇಕು” ಎಂದರು.
ವಿಜಯನಗರದ ಬೀದಿ ವ್ಯಾಪಾರಿ ಹಾಗು ಮಾಜಿ ಪಟ್ಟಣ ವ್ಯಾಪಾರಿ ಸದಸ್ಯರಾದ ಕಾಮ್ರೇಡ್ ಶಶಿಕಲಾರವರು ಮಾತನಾಡಿ “ಮಹಿಳೆಯರಿಗೆ ಉಚಿತ ಶೌಚಾಲಯ ವ್ಯವಸ್ಥೆ ಮಾಡಿಕೊಡಬೇಕು. ಬೀದಿ ವ್ಯಾಪಾರಿಗಳು ತಿರುಗಾಡುತ್ತಾ ವ್ಯಾಪಾರ ಮಾಡಬೇಕೆಂದರೆ ಗರ್ಭಿಣಿ ಬೀದಿ ವ್ಯಾಪಾರಿಗಳು ಹೇಗೆ ತಾನೇ ವ್ಯಾಪಾರ ಮಾಡಲು ಸಾಧ್ಯ?” ಎಂದರು.
ಪ್ರತಿಭಟನಾ ಸ್ಥಳಕ್ಕೆ ಬಿಬಿಎಂಪಿ ಜಂಟಿ ಆಯುಕ್ತರು (ಪಶ್ಚಿಮ) ಸಂಗಪ್ಪರವರು ಬೀದಿ ವ್ಯಾಪಾರಿಗಳಿಂದ ಮನವಿ ಪತ್ರವನ್ನು ಸ್ವೀಕರಿಸಿ ಬಿಬಿಎಂಪಿ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರೊಂದಿಗೆ ಇದೇ ಮಧ್ಯಾಹ್ನ 3 ಗಂಟೆಗೆ ಸಭೆಯನ್ನು ಆಯೋಜಿಸುವಂತೆ ಭರವಸೆ ನೀಡಿ ಪ್ರತಿಭಟನೆಯನ್ನು ಹಿಂಪಡೆಯುವಂತೆ ಮನವಿ ಮಾಡಿಕೊಂಡರು. ಅದರಂತೆಯೇ ಪ್ರತಿಭಟನೆಯನ್ನು ಹಿಂಪಡೆದ ಬೀದಿ ವ್ಯಾಪಾರಿಗಳ ಪದಾಧಿಕಾರಿಗಳು ಮಧ್ಯಾಹ್ನ 3 ಗಂಟೆಗೆ ಮುಖ್ಯ ಆಯುಕ್ತರನ್ನು ಭೇಟಿ ಮಾಡಲು ಹೋದಾಗ ಆಯುಕ್ತರು ಲಭ್ಯವಿಲ್ಲದೆ ಹೋದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಬೀದಿ ವ್ಯಾಪಾರಿಗಳ ಮುಖಂಡರು ಒತ್ತಾಯಪೂರ್ವಕವಾಗಿ ವಿಶೇಷ ಆಯುಕ್ತರನ್ನು (ಕಲ್ಯಾಣ) ಭೇಟಿ ಮಾಡಿದರು.
ವಿಶೇಷ ಆಯುಕ್ತರನ್ನು ಭೇಟಿ ಮಾಡಿ ಹಕ್ಕೊತ್ತಾಯ ಮಂಡಿಸಿದಾಗ ಅವುಗಳಲ್ಲಿ ಹಲವು ಬೇಡಿಕೆಗಳಿಗೆ ಪ್ರತಿಕ್ರಿಯೆ ನೀಡಲು ಸಾಧ್ಯವಾಗದಿದ್ದ ಕಾರಣ ಮುಖ್ಯ ಆಯುಕ್ತರೊಂದಿಗೆ ಸಭೆಯನ್ನು ನಿಗದಿಪಡಿಸುವುದಾಗಿ ತಿಳಿಸಿದರು.
ಬರುವ ದಿನಗಳಲ್ಲಿ ಮುಖ್ಯ ಆಯುಕ್ತರೊಡನೆ ಸಭೆ ನಿಗದಿ ಆಗದಿದ್ದರೆ, ಬೆಂಗಳೂರು ನಗರದಲ್ಲಿ ಎತ್ತಂಗಡಿಗಳು ನಿಲ್ಲದಿದ್ದರೆ, ನಮ್ಮ ಇತರೆ ಬೇಡಿಕೆಗಳು ಈಡೇರದಿದ್ದರೆ ನಾವು ನಮ್ಮ ಹೋರಾಟವನ್ನು ತೀವ್ರಗೊಳಿಸುತ್ತೇವೆ ಎಂದು ಹೇಳಿದರು.
ನಗರದ ಪ್ರಮುಖ ಮಾರುಕಟ್ಟೆಗಳಾದ ಕೆ.ಆರ್.ಮಾರುಕಟ್ಟೆ, ಜಯನಗರ 4ನೇ ಹಂತ, ವಿಜಯನಗರ, ಶಿವಾಜಿನಗರ, ಹೆಬ್ಬಾಳ, ಮುನಿರೆಡ್ಡಿ ಪಾಳ್ಯ, ಯಶವಂತಪುರ, ಗಾಂಧಿ ಬಜಾರ್ ಹಾಗು ಇತರೆ ಮಾರುಕಟ್ಟೆಗಳಿಂದ 500ಕ್ಕೂ ಹೆಚ್ಚು ವ್ಯಾಪಾರಿಗಳು ಭಾಗವಹಿಸಿದ್ದರು.