ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಕಸಬಾ ಹೋಬಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊತ್ತಪಲ್ಲಿ ಶಾಲೆಯಲ್ಲಿ ಮಂಗಳವಾರದಂದು ಸಾರ್ವಜನಿಕ ಆರೋಗ್ಯ ಇಲಾಖೆಯಿಂದ ಡೆಂಘಿ, ಮಲೇರಿಯಾ ರೋಗದ ಬಗ್ಗೆ ಮಕ್ಕಳಿಗೆ ಮುಂಜಾಗ್ರತಾ ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಆರೋಗ್ಯ ಸಹಾಯಕಿ ಗೀತಾ ಮಾತನಾಡಿ, “ಮಳೆಗಾಲದಲ್ಲಿ ನಿಂತ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ, ಸೊಳ್ಳೆ ಕಡಿತದಿಂದ ಡೆಂಘಿ, ಮಲೇರಿಯಾ, ಚಿಕನ್ ಗುನ್ಯಾ, ಆನೆಕಾಲು ರೋಗ ಸೇರಿದಂತೆ ಹಲವಾರು ಸಾಂಕ್ರಾಮಿಕ ರೋಗಗಳು ಹರಡುತ್ತವೆ. ನಿಮ್ಮ ಮನೆಯಲ್ಲಿ ಮತ್ತು ನಿಮ್ಮ ಮನೆಯ ಸುತ್ತಮುತ್ತಲೂ ಎಲ್ಲೆಂದರಲ್ಲಿ ಕಸ, ಪ್ಲಾಸ್ಟಿಕ್, ಔಷಧೀಯ ಬಾಟಲ್ ಸೇರಿದಂತೆ ಅನೇಕ ತ್ಯಾಜ್ಯವನ್ನು ಬಿಸಾಡದೆ ಕಸದ ತೊಟ್ಟಿಯಲ್ಲಿ ಹಾಕಬೇಕು. ಈ ಮೂಲಕ ಸಾಂಕ್ರಾಮಿಕ ರೋಗಗಳು ಹರಡುವುದನ್ನು ಕಡಿಮೆ ಮಾಡಬೇಕು” ಎಂದು ಮಕ್ಕಳಿಗೆ ತಿಳಿಸಿದರು.
ರಕ್ಷಣಾತ್ಮಕ ಕ್ರಮಗಳು: “ಸೊಳ್ಳೆ ನಿವಾರಕ ಲೇಪನ, ಸೊಳ್ಳೆ ಪರದೆಗಳನ್ನು ಬಳಸಬೇಕು. ಈ ಸೊಳ್ಳೆಗಳು ಹಗಲು ಕಚ್ಚುವುದರಿಂದ ಮಕ್ಕಳು, ಹಿರಿಯರು ಮೈ ತುಂಬಾ ಬಟ್ಟೆ ಧರಿಸಬೇಕು. ಜಾಗೃತಿ ಜಾಥಾ ಕಾರ್ಯಕ್ರಮ ಎಲ್ಲ, ತಾಲೂಕು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಡೆಯುತ್ತಿದ್ದು, ಕರಪತ್ರಗಳು, ಆಡಿಯೋ ಮೂಲಕವೂ ಅರಿವು ಮೂಡಿಸಲಾಗುತ್ತಿದೆ” ಎಂದರು.
ಇದನ್ನೂ ಓದಿದ್ದೀರಾ? ಗದಗ | ಅಲ್ಪಸಂಖ್ಯಾತರ ಹಾಸ್ಟೆಲ್ನಲ್ಲಿ ಮೂಲ ಸೌಕರ್ಯಗಳ ಕೊರತೆ: ಅಧಿಕಾರಿಗಳ ಸುಳಿವೇ ಇಲ್ಲ
ಶಾಲಾ ಮುಖ್ಯ ಶಿಕ್ಷಕ ವೇಣು ಮಾತನಾಡಿ, “ಸೊಳ್ಳೆಗಳ ಉತ್ಪತ್ತಿ ತಾಣಗಳಾದ ಸಿಮೆಂಟ್ ತೊಟ್ಟಿಗಳು ಟೈರ್ಗಳು ಬ್ಯಾರೆಲ್ಗಳು, ನಿರ್ಮಾಣ ಹಂತದಲ್ಲಿರುವ ಕಟ್ಟಡಗಳು ಮತ್ತು ಘನ ತ್ಯಾಜ್ಯ ವಸ್ತುಗಳಲ್ಲಿ ನೀರು ನಿಂತು ಡೆಂಘಿ ಮತ್ತು ಚಿಕನ್ ಗುನ್ಯಾ ಹರಡುವ ಸೊಳ್ಳೆಗಳು ಯಥೇಚ್ಛವಾಗಿ ಉತ್ಪತ್ತಿಯಾಗುತ್ತಿವೆ. ಮಳೆಗಾಲ ಪ್ರಾರಂಭವಾಗುತ್ತಿರುವುದರಿಂದ ಡೆಂಘಿ ಹಾಗೂ ಚಿಕನ್ ಗುನ್ಯಾ ರೋಗಗಳು ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಇವುಗಳನ್ನು ನಿಯಂತ್ರಿಸಲು ಮುಂಜಾಗೃತಾ ಕ್ರಮವನ್ನು ತೆಗೆದುಕೊಳ್ಳುವುದು ತುಂಬಾ ಅತ್ಯಗತ್ಯ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಕಿಯರಾದ ಜಯಲಕ್ಷ್ಮಿ, ವರಲಕ್ಷ್ಮೀ, ಪುಷ್ಪಾವತಿ, ವಿಜಯಲಕ್ಷ್ಮಿ, ಶಿಕ್ಷಕರಾದ ಜಿ.ರಾಮಕೃಷ್ಣ ನಾಯಕ, ವೆಂಕಟೇಶ್, ಅರೋಗ್ಯ ಇಲಾಖೆ ಸಿಬ್ಬಂದಿಗಳಾದ ಲಲಿತ, ಮುನಿಯಮ್ಮ ಹಾಜರಿದ್ದರು.