ಬಸವಾದಿ ಶರಣರು ಪರಿಸರ ಕಾಳಜಿ ತೋರಿದ್ದರು. ಪರಿಸರವನ್ನು ತಮ್ಮ ಸ್ವಾರ್ಥಕ್ಕಾಗಿ ಬಲವಂತವಾಗಿ ಬಳಸಲಿಲ್ಲ. ಅದಕ್ಕೆ ಹಾನಿ ಉಂಟು ಮಾಡದಂತೆ ಬದುಕು ಸಾಗಿಸಿದ್ದರು ಎಂದು ಕರ್ನಾಟಕ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ಬಸವರಾಜ ಬಲ್ಲೂರ ಹೇಳಿದರು.
ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ವತಿಯಿಂದ ಬೀದರ್ ನಗರದ ಗಾಂಧಿಗಂಜ್ನ ಬಸವೇಶ್ವರ ದೇವಸ್ಥಾನದಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ಮಾಸಿಕ ವಚನ ಮಂಟಪ, ವಿಶ್ವ ಪರಿಸರ ದಿನಾಚರಣೆ ಹಾಗೂ ಸಸಿ ವಿತರಣೆ ಕಾರ್ಯಕ್ರಮದಲ್ಲಿ ‘ಶರಣರ ಪರಿಸರ ಪ್ರೇಮ’ ಕುರಿತು ಅವರು ಮಾತನಾಡಿದರು.
ʼಪರಿಸರ ಪ್ರೀತಿ ಬಾಯಿ ಮಾತಿಗೆ ಸೀಮಿತವಾಗಬಾರದು. ಪ್ರತಿಯೊಬ್ಬರೂ ಸಸಿ ನೆಟ್ಟು ಪರಿಸರ ಉಳಿಸಬೇಕು.ಪರಿಸರ ಸಂರಕ್ಷಣೆ ಭಾಗವಾಗಿ ಭಾತಂಬ್ರಾದ ಮಠದಲ್ಲಿ ಈವರೆಗೆ 2 ಸಾವಿರ ಸಸಿಗಳನ್ನು ನೆಟ್ಟು ಬೆಳೆಸಲಾಗಿದೆʼ ಎಂದು ಸಾನಿಧ್ಯ ವಹಿಸಿದ್ದ ಬಸವ ಮುಕ್ತಿ ಮಂದಿರದ ಶಿವಯೋಗೀಶ್ವರ ಸ್ವಾಮೀಜಿ ನುಡಿದರು.
ಅಧ್ಯಕ್ಷತೆ ವಹಿಸಿದ್ದ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿ, ʼಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ವತಿಯಿಂದ ಸೆಪೆಂಬರ್ ತಿಂಗಳಲ್ಲಿ ರಾಜ್ಯದ್ಯಂತ ಬಸವ ಸಂತತಿ ಅಭಿಯಾನ ನಡೆಸಲು ನಿರ್ಧರಿಸಲಾಗಿದೆ. ರಾಜ್ಯ ಸರ್ಕಾರ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕರನ್ನಾಗಿ ಘೋಷಿಸಿದ ಪ್ರಯುಕ್ತ ಬಸವ ಸಂಸ್ಕೃತಿಯನ್ನು ಜನ ಮಾನಸಕ್ಕೆ ತಲುಪಿಸಲು ಈ ಅಭಿಯಾನ ಹಮ್ಮಿಕೊಳ್ಳಲಾಗಿದೆʼ ಎಂದು ತಿಳಿಸಿದರು.
ರಾಜ್ಯ ಅಲ್ಪಸಂಖ್ಯಾತರ ಆಯೋಗದ ಸದಸ್ಯೆ ಮನದೀಪ್ ಕೌರ್ ಹಾಗೂ ಮನಪ್ರೀತ್ಸಿಂಗ್ ದಂಪತಿ, ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿದ್ದಯ್ಯ ಕಾವಡಿ, ಉಪಾಧ್ಯಕ್ಷ ಉದಯಕುಮಾರ ಲದ್ದೆ, ರೋಟರಿ ಕ್ಲಬ್ ಬೀದರ್ ಅಧ್ಯಕ್ಷ ಸೋಮಶೇಖರ ಪಾಟೀಲ, ಜಯದೇವಿತಾಯಿ ಲಿಗಾಡೆ ಪ್ರಶಸ್ತಿ ಪುರಸ್ಕೃತ ಸುವರ್ಣಾ ಚಿಮಕೋಡೆ ಹಾಗೂ ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಕವಿತಾ ಪ್ರಭಾ ಅವರನ್ನು ಸನ್ಮಾನಿಸಲಾಯಿತು.
ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಾಯಕ ಪರಿಸರ ಅಧಿಕಾರಿ ಜಗನ್ನಾಥ ಪರಿಸರ ಸಂರಕ್ಷಣೆ ಪ್ರತಿಜ್ಞೆ ಮಾಡಿಸಿದರು. ಅಶ್ವಿನಿ ರಾಜಕುಮಾರ ವಚನ ಗಾಯನ ನಡೆಸಿಕೊಟ್ಟರು. ಅರಣ್ಯ ಇಲಾಖೆ ಸಹಯೋಗದೊಂದಿಗೆ 250 ಸಸಿಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಲಾಯಿತು.
ಇದನ್ನೂ ಓದಿ : ಬೀದರ್ | ಬಿಎಸ್ಎಸ್ಕೆ ಪುನಶ್ಚೇತನಕ್ಕೆ ಸಿಎಂ ಬಳಿಗೆ ನಿಯೋಗ ತೆರಳಲು ನಿರ್ಧಾರ
ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಉಷಾ ಮಿರ್ಚೆ, ಕಾರ್ಯದರ್ಶಿ ಜಯದೇವಿ ಯದಲಾಪುರೆ, ಪ್ರಮುಖರಾದ ಸುವರ್ಣಾ ಧನ್ನೂರ, ರಾಜೇಂದ್ರಕುಮಾರ ಗಂದಗೆ, ಗುಂಡಪ್ಪ ಬಳತೆ, ನಾಗಶೆಟ್ಟೆಪ್ಪ ದಾಡಗಿ, ಮಲ್ಲಿಕಾರ್ಜುನ ಪಂಚಾಕ್ಷರಿ, ವೀರಭದ್ರಪ್ಪ ಬುಯ್ಯಾ, ರಾಜಕುಮಾರ ಹಜ್ಜರಗಿ ಮತ್ತಿತರರು ಇದ್ದರು.
ಯೋಗೇಶ ಶ್ರೀಗಿರಿ ಭಕ್ತಿ ದಾಸೋಹಗೈದರು. ಮಹಾಸಭಾದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಜೊನ್ನಿಕೇರಿ ಸ್ವಾಗತಿಸಿದರು. ಯೋಗೇಂದ್ರ ಯದಲಾಪುರೆ ನಿರೂಪಿಸಿದರು. ಬಸವರಾಜ ಜಕ್ಕಾ ವಂದಿಸಿದರು.