ಕನ್ನಡವನ್ನು ತಮ್ಮ ತನು, ಮನ, ಭಾವ ತುಂಬಿಕೊಂಡಿದ್ದ ಡಾ.ಜಯದೇವಿತಾಯಿ ಲಿಗಾಡೆ ಕನ್ನಡದ ಅಸ್ಮಿತೆಯ ಕವಯಿತ್ರಿ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಚಂದ್ರಕಾಂತ ಶಹಬಾದಕರ ನುಡಿದರು.
ಬೀದರ ತಾಲ್ಲೂಕು ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ನಗರದ ಬಸವಕೇಂದ್ರದಲ್ಲಿ ಆಯೋಜಿಸಲಾದ ಡಾ.ಜಯದೇವಿತಾಯಿ ಲಿಗಾಡೆ ಜಯಂತ್ಯುತ್ಸವ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ʼಕನ್ನಡದಲ್ಲಿ ಮಹಾಕಾವ್ಯ ರಚಿಸಿದ ಲಿಗಾಡೆ ತಾಯಿಯವರು ಮರಾಠಿಗೆ ವಚನಗಳನ್ನು ಅನುವಾದಿಸಿ ಮರಾಠಿ ಮತ್ತು ಕನ್ನಡದ ಮಧ್ಯ ಭಾಷಿಕ ಸೌಹಾರ್ದತೆ ಬೆಳೆಸಿದವರು. ಅವರ ಜಯಂತ್ಯುತ್ಸವ ದಿನದಂದು ಸಾಧಕರಿಗೆ ಅಭಿನಂದಿಸುತ್ತಿರುವುದು ಶ್ಲಾಘನೀಯ ಕಾರ್ಯʼ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ʼಕನ್ನಡ ಸಾಹಿತ್ಯಕ್ಕೆ ಜಯದೇವಿತಾಯಿ ಲಿಗಾಡೆ ಅವರ ಕೊಡುಗೆ ಅಪಾರವಾಗಿದೆ. ಕರ್ನಾಟಕ ಏಕೀಕರಣ ಚಳವಳಿಗೆ ಹೋರಾಡಿದಂತೆ ಕರ್ನಾಟಕಕ್ಕೆ ಸೇರಬೇಕಾದ ಪ್ರದೇಶಗಳಿಗಾಗಿ ಏಕೀಕರಣ ಹೋರಾಟ ಮಾಡಿದವರು. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ಮಹಿಳಾ ಅಧ್ಯಕ್ಷರಾಗಿದ್ದ ಅವರ ಹೆಸರಲ್ಲಿ ಮತ್ತು ಪ್ರಭುರಾವ ಕಂಬಳಿವಾಳೆ ಅವರ ಹೆಸರಲ್ಲಿ ಉದ್ದೇಶಿತ ಟ್ರಸ್ಟ್ ಇನ್ನು ನನೆಗುದಿಗೆ ಬಿದ್ದಿರುವುದು ನೋವಿನ ಸಂಗತಿ. ಜಿಲ್ಲಾಡಳಿತ ಮತ್ತು ಸರಕಾರ ಈ ಬಗ್ಗೆ ಲಕ್ಷವಹಿಸಬೇಕೆಂದು ಮನವಿ ಮಾಡಿದರು.
ವಿಧಾನ ಪರಿಷತ್ತಿನ ಮಾಜಿ ಶಾಸಕ ಅರವಿಂದ್ ಕುಮಾರ ಅರಳಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ʼಬಸವಣ್ಣನವರ ಚಿಂತನೆಗಳೆ ನಮ್ಮ ಸಂವಿಧಾನದಲ್ಲಿ ಅಡಕವಾಗಿವೆ. ಆದ್ದರಿಂದ ಸಂವಿಧಾನ ಮತ್ತು ಬಸವತತ್ವದ ಆಶೋತ್ತರ ಒಂದೇ ಆಗಿದ್ದು, ನಮ್ಮ ನಡೆ-ನಡಿ ಕೂಡಾ ಒಂದಾಗಿರಬೇಕುʼ ಎಂದು ಹೇಳಿದರು.
ಭಾಷಾಂತರ ನಿರ್ದೇಶನಾಲಯದ ಉಪ ನಿರ್ದೇಶಕ ಭಕ್ತರಾಜ ಪಾಟೀಲ ಮಾತನಾಡಿ, ʼಪ್ರಾಮಾಣಿಕ ಕಾರ್ಯಗಳಿಗೆ ಯಾವತ್ತೂ ಜನಮನ್ನಣೆ ಇರುತ್ತದೆ. ಆದರೆ ಕಾರ್ಯ ನಿರ್ವಹಿಸುವಾಗ ಧೈರ್ಯವಿರಬೇಕು ಯಶಸ್ಸು ಖಂಡಿತʼ ಎಂದು ಹೇಳಿದರು.
ಪ್ರಾಚಾರ್ಯ ಡಾ.ಮನ್ಮತ ಡೋಳೆ ಮಾತನಾಡಿ, ʼಸರ್ವಸಮತೆ ಸಾರಿದ ಬಸವಾದಿ ಶರಣರ ವಾರಸುದಾರರಾದ ನಾವು ಸೌಹಾರ್ದತೆ ನಮ್ಮ ಅಂತಃಶಕ್ತಿಯಾಗಲಿ, ಜಾಗತಿಕ ಶಾಂತಿ ಪ್ರೀತಿ ಪುನಃ ನೆಲೆಗೊಳ್ಳಬೇಕಾದಲ್ಲಿ ಬುದ್ಧ, ಬಸವಣ್ಣನವರ ಚಿಂತನೆಯ ಆಚರಣೆ ಅಗತ್ಯ ಎಂದು ತಿಳಿಸಿದರು.
ಜೀ ಕನ್ನಡ ಸರಿಗಮಪ 21ನೇ ಸೀಸನ್ನಲ್ಲಿ ವಿಜೇತರಾದ ಶಿವಾನಿ ಶಿವದಾಸ ಸ್ವಾಮಿ, ಮಾಜಿ ವಿಧಾನ ಪರಿಷತ್ ಸದಸ್ಯ ಅರವಿಂದ್ ಕುಮಾರ ಅರಳಿ ಹಾಗೂ ನಾಲಂದಾ ಪಪೂ ಕಾಲೇಜು ಪ್ರಾಚಾರ್ಯ ಡಾ. ಮನ್ಮಥ ಡೋಳೆ ಅವರಿಗೆ ಸುಡಾನ್ದಲ್ಲಿ ಜರುಗಿದ ಅಂತರರಾಷ್ಟ್ರೀಯ ವಾಲಂಟರಿ ಶಾಂತಿ ಪುರಸ್ಕಾರ ಮತ್ತು ಬೆಂಗಳೂರು ಭಾಷಾಂತರ ನಿರ್ದೇಶನಾಲಯ ಉಪ ನಿರ್ದೇಶಕ ಭಕ್ತರಾಜ ಪಾಟೀಲ ಅವರಿಗೆ ರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಲಭಿಸಿದ ಪ್ರಯುಕ್ತ ಅಭಿನಂದಿಸಲಾಯಿತು.
ಕರ್ನಾಟಕ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಡಾ.ಬಸವರಾಜ ಬಲ್ಲೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಾಹಿತಿಗಳು, ಕನ್ನಡಪರ ಚಿಂತಕರು ಪಾಲ್ಗೊಂಡಿದ್ದರು.
ಇದನ್ನೂ ಓದಿ : ಬೀದರ್ | ಶರಣರ ಪರಿಸರ ಕಾಳಜಿ ಎಲ್ಲರಿಗೂ ಮಾದರಿಯಾಗಲಿ : ಬಸವರಾಜ ಬಲ್ಲೂರ್
ಸರ್ಕಾರಿ ಮತ್ತು ಅರೆ ಸರ್ಕಾರಿ ನೌಪಸ ಸಂಘದ ಬೀದರ್ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಮತ್ತು ಬೀದರ ಅನುದಾನಿತ ಪದವಿ ಪೂರ್ವ ಕಾಲೇಜು ನೌಕರರ ಸಂಘದ ಜಿಲ್ಲಾಧ್ಯಕ್ಷ ಡಾ.ವಿಜಯಕುಮಾರ ಕೆ.ಪಾಟೀಲ, ರೂಪಾ ಪಾಟೀಲ್, ಸಿದ್ದರೂಢ ಭಾಲ್ಕೆ, ದೇವೆಂದ್ರ ಕರಂಜೆ ಸೇರಿದಂತೆ ಮತ್ತಿತರರು ಉಪಸ್ಥಿತರರಿದ್ದರು. ಬೀದರ್ ತಾಲೂಕು ಕಸಾಪ ಅಧ್ಯಕ್ಷ ಟಿ.ಎಂ.ಮಚ್ಚೆ ಸ್ವಾಗತಿಸಿದರು, ವೀರಶೆಟ್ಟಿ ಚನಶಟ್ಟಿ ವಂದಿಸಿದರು. ತಾಲ್ಲೂಕು ಕಸಾಪ ಗೌರವ ಕಾರ್ಯದರ್ಶಿ ಉಮೇಶ ಜಾಬಾ ನಿರೂಪಿಸಿದರು.