ಚಾಮರಾಜನಗರ ಜಿಲ್ಲೆ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹ್ಯೂಗಂ ವಲಯದಲ್ಲಿ ಐದು ಹುಲಿಗಳ ಸಾವಾಗಿದ್ದು, ಈ ಕುರಿತು ದೇಶದೆಲ್ಲೆಡೆ ಚರ್ಚೆಯಾಗುತ್ತಿದೆ, ರಾಜ್ಯ ಸರ್ಕಾರದ ನಿರ್ಲಕ್ಷ್ಯ ಬಗ್ಗೆ ಪ್ರಶ್ನೆಗಳು ಉದ್ಭವವಾಗುತ್ತಿದ್ದು, ದೇಶದ ಮುಂದೆ ರಾಜ್ಯದ ಮಾನ ಹರಾಜಾಗುತ್ತಿದೆ. ಅರಣ್ಯ ಇಲಾಖೆ ವನ್ಯ ಜೀವಿಗಳ ರಕ್ಷಣೆಯಲ್ಲಿ ವಿಫಲವಾಗಿದೆ, ಸಚಿವ ಈಶ್ವರ ಖಂಡ್ರೆ ಇದರ ಜವಬ್ದಾರಿ ಹೊತ್ತು, ತನ್ನ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಒತ್ತಾಯಿಸಿದ್ದಾರೆ.
ಈ ವಿಷಯದಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಉತ್ತರಿಸಲಾಗದೆ, ಪತ್ರಕರ್ತರಿಗೆ ನಿಮ್ಮ ಧೋರಣೆ ಬದಲಾಯಿಸಿಕೊಳ್ಳಿ ಎಂದು ಗುರಾಯಿಸಿ, ತನ್ನ ರಾಕ್ಷಸ ಪ್ರವರ್ತಿ ಮುಂದುವರೆಸಿದ್ದಾರೆ. ಇದನ್ನು ನಿಲ್ಲಿಸಬೇಕು ಮತ್ತು ಹುಲಿಗಳ ಸಾವಿನಲ್ಲಿ ಆದ ನಿಷ್ಕಾಳಜಿ ಕುರಿತು ದೇಶದ ಜನತೆಯಲ್ಲಿ ಈಶ್ವರ ಖಂಡ್ರೆ ಕ್ಷಮೆಯಾಚಿಸಬೇಕೆಂದು ಖೂಬಾ ಶನಿವಾರ ಪ್ರಕಟಣೆ ಮುಖಾಂತರ ಆಗ್ರಹಿಸಿದ್ದಾರೆ.
ʼಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಷ್ಟ್ರದ ಎರಡನೇ ರಾಜ್ಯ ಎಂಬ ಖ್ಯಾತಿ ಪಡೆದಿರುವ ನಮ್ಮ ರಾಜ್ಯದಲ್ಲಿ ಇಂತಹ ಘಟನೆ ನಡೆದಿದೆ. ಆದರೆ ಮಂತ್ರಿಯಾಗಲಿ, ಸರ್ಕಾರವಾಗಲಿ ಇದರ ಹೊಣೆ ಹೊತ್ತಿಲ್ಲ, ಕೇವಲ ತನಿಖೆ ನಡೆಯುತ್ತಿದೆ ಎನ್ನುವ ಬೇಜವಬ್ದಾರಿ ಹೇಳಿಕೆ ನೀಡಿ ತನ್ನ ಜವಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಖಂಡ್ರೆ ಅಹಂಕಾರ, ಭಂಡತನ ಮತ್ತು ಭ್ರಷ್ಟಾಚಾರದಲ್ಲಿ ಎತ್ತಿದ ಕೈ, ಇನ್ನು ಅವರ ಹಾದಿಯಲ್ಲೆ ಅವರ ಇಲಾಖೆಯೂ ಸಾಗುತ್ತಿದೆ ಎಂಬುದು ಈ ಘಟನೆಯಿಂದ ತಿಳಿದುಬರುತ್ತಿದೆ, ಇದು ದುರದೃಷ್ಟಕರʼ ಎಂದು ಎಂದರು.
ʼಮುಖ್ಯಮಂತ್ರಿ ಕುರ್ಚಿಗೆ ಕಂಟಕ ಬಂದಾಗಲೆಲ್ಲಾ ಸಿದ್ದರಾಮಯ್ಯ ಅವರಿಗೆ ಸಂವಿಧಾನ, ಡಾ.ಬಿ.ಆರ್.ಅಂಬೇಡ್ಕರ, ಬಿಜೆಪಿ, ಆರ್ಎಸ್ಎಸ್ ನಾಯಕರು ನೆನಪಿಗೆ ಬರುತ್ತಾರೆ, ಯಾವುದೋ ಒಂದು ವೇದಿಕೆ ಬಳಸಿಕೊಂಡು, ಅಲ್ಲಿ ಸಂವಿಧಾನದ ನೆನಪು ಮಾಡಿ, ಬಿಜೆಪಿಗರಿಗೆ, ಆರ್ಎಸ್ಎಸ್ನವರಿಗೆ ಬೈದು ನಾನೊಬ್ಬ ಸಮಾಜವಾದಿ, ಜಾತ್ಯತೀತವಾದಿ ಎಂದು ತೋರಿಸಿಕೊಳ್ಳುವ ಕೆಲಸ ಸಿದ್ದರಾಮಯ್ಯನವರು ಮಾಡುತ್ತಾರೆʼ ಎಂದು ಹೇಳಿದರು.

ʼಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ತುರ್ತು ಪರಿಸ್ಥಿತಿ ಹೇರಿದಾಗ ನಿಜವಾಗಿಯೂ ಸಂವಿಧಾನದ ಕಗ್ಗೊಲೆಯಾಗಿತ್ತು, ಆ
ಸಂದರ್ಭದಲ್ಲಿ ಸಿದ್ದರಾಮಯ್ಯನವರು ವಿರೋಧ ಪಕ್ಷದಲ್ಲಿದ್ದರು, ಅಂದು ವಿರೋಧಿಸಿದ್ದರು, ಈಗೇಕೆ ನೆನಪು ಮಾಡುತ್ತಿಲ್ಲ, ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ನಿಂದ ಅವಮಾನವಾಗಿತ್ತು ಅದರ ಬಗ್ಗೆ ಸಿದ್ದರಾಮಯ್ಯ ಮಾತನಾಡಲ್ಲʼ ಎಂದರು.
ಇದನ್ನೂ ಓದಿ : ಜೂನ್ 30ರಂದು ಬೀದರ್ನಲ್ಲಿ ʼಸದ್ಭಾವನಾ ನಡಿಗೆʼ
ʼಬಿಜೆಪಿ ಮತ್ತು ಆರ್ಎಸ್ಎಸ್ ಎಂದು ಸಂವಿಧಾನ ವಿರೋಧಿ ನಡೆ ಅನುಸರಿಸಿಲ್ಲ, ಸಬಕಾ ಸಾಥ್ ಸಬಕಾ ವಿಕಾಸ ದಾರಿಯಲ್ಲಿ ಎಲ್ಲರ ಅಭಿವೃದ್ದಿ ಮಾಡಲಾಗುತ್ತಿದೆ, ಕಾಂಗ್ರೆಸ್ ಪಕ್ಷದಂತೆ ನಮ್ಮ ಪಕ್ಷ ಇಲ್ಲ, ಸಿದ್ದಾಂತ, ರಾಷ್ಟ್ರಭಕ್ತಿ ಹೊಂದಿರುವ ಪಕ್ಷ ನಮ್ಮದಾಗಿದೆʼ ಎಂದು ಖೂಬಾ ತಿಳಿಸಿದ್ದಾರೆ.