ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಮುಸ್ಲಿಂ ಮಹಿಳೆಯನ್ನು ಅದೇ ಆಸ್ಪತ್ರೆಯ ಸಿಬ್ಬಂದಿ ಬೈಲಪ್ಪ ಎಂಬುವವರು ಅವಳ ಕೋರಿಕೆಯ ಮೇರೆಗೆ ಮನೆಗೆ ಡ್ರಾಪ್ ಮಾಡಲು ತೆರಳುವಾಗ ಹದಿನೈದರಿಂದ ಇಪ್ಪತ್ತು ಜನರಿರುವ ಮುಸ್ಲಿಂ ತಂಡವು ಬೈಲಪ್ಪ ಅವರ ಮೇಲೆ ಹಲ್ಲೆ ಮಾಡಿರುವುದನ್ನು ಸೌಹಾರ್ದ ಕರ್ನಾಟಕ ಸಂಘಟನೆಯ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ.
ʼಮುಸ್ಲಿಂ ಅಲ್ಲದ ವ್ಯಕ್ತಿಯು ತಮ್ಮ ಸಮುದಾಯದ ಮುಸ್ಲಿಂ ಯುವತಿಯನ್ನು ಯಾಕೆ ಡ್ರಾಪ್ ಮಾಡುತ್ತಿರುವಿ ಎಂಬುದು ಹಲ್ಲೆಗೈದ ಮುಸ್ಲಿಂ ಗಂಡಸರ ಪ್ರಶ್ನೆಯಾಗಿದೆ. ಮತೀಯ ಭಾವನೆಯ ಕಾರಣದಿಂದ ಹಲ್ಲೆ ನಡೆದಿರುವುದು ತೀವ್ರ ಖಂಡನಾರ್ಹವಾದುದ್ದಾಗಿದೆʼ ಎಂದು ಸಂಘಟನೆಯ ಡಾ.ಮೀನಾಕ್ಷಿ ಬಾಳಿ, ಡಾ.ಪ್ರಭು ಖಾನಾಪುರೆ, ಆರ್ ಕೆ ಹುಡಗಿ,
ಮಾರುತಿ ಗೋಖಲೆ, ದತ್ತಾತ್ರೇಯ ಇಕ್ಕಳಕಿ ಹಾಗೂ ಪ್ರಮೋದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ʼಕೋಮು ಭಾವನೆ ಎಂಬುದೇ ಅಪಾಯಕಾರಿಯಾದದ್ದು. ಬಹುಸಂಖ್ಯಾತ ಸಮುದಾಯದ ಕೋಮುವಾದ ಮತ್ತು ಅಲ್ಪಸಂಖ್ಯಾತ ಸಮುದಾಯದ ಕೋಮುವಾದ ಎರಡರಿಂದಲೂ ಭಾವೈಕ್ಯತೆಗೆ ಸೌಹಾರ್ದತೆಗೆ ಧಕ್ಕೆಯಾಗುವುದು. ಈಗಾಗಲೇ ಕರಾವಳಿ ಪ್ರದೇಶದಲ್ಲಿ ಹೋಯ್ಕೈ ಮಾದರಿಯಲ್ಲಿ ಎರಡೂ ಸಮುದಾಯದ ಕೋಮುವಾದಿಗಳು ದ್ವೇಷವನ್ನು ಹರಡಿಸುತ್ತಿದ್ದಾರೆ. ಇಂತಹ ವಿಷಮಯ ಪ್ರವೃತ್ತಿಯಿಂದ ಸಮಾಜದ ಸ್ವಾಸ್ಥ್ಯಕ್ಕೆ ಅಪಾಯ ಉಂಟಾಗುವುದು. ಎಲ್ಲ ತೆರನ ಅಭಿವೃದ್ಧಿಗೆ ಇದು ಮಾರಕವಾಗಿ ಪರಿಣಮಿಸುವುದುʼ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ʼಕಲ್ಯಾಣ ಕರ್ನಾಟಕವು ಭಾವೈಕ್ಯ ಪರಂಪರೆಯ ನಾಡಾಗಿದೆ. ರಾಜ್ಯದಲ್ಲಿಯೇ ಕೂಡುಸಂಸ್ಕೃತಿಗೆ ಹೆಸರುವಾಸಿಯಾಗಿದೆ. ಬಹುಸಂಖ್ಯಾತ ಕೋಮುವಾದದ ಪ್ರಚೋದನೆಯು ಅಲ್ಪಸಂಖ್ಯಾತ ಕೋಮುವಾದಿ ಚಟುವಟಿಕೆಗೆ ಕಾರಣವಾಗುತ್ತಿದೆ. ಆದರೆ ಕಲ್ಯಾಣ ಕರ್ನಾಟಕವು ಈವರೆಗೆ ಎಲ್ಲ ಜನಸಮುದಾಯವು ಸೌಹಾರ್ದತೆಯಿಂದ ಬಾಳು ಸವೆಸಿದ್ದಾರೆ. ಸೂಫಿ-ಸಂತ ಪರಂಪರೆಯ ಬಹುಸಾಂಸ್ಕೃತಿಕ ಮೌಲ್ಯಗಳು ಈ ನೆಲದ ಗಟ್ಟಿ ಬೇರುಗಳು. ಚರಿತ್ರೆಯು ಹೀಗಿದ್ದಾಗ ಕೆಲ ಮತೀಯವಾದಿ ಮನಸುಗಳು ಇಂತಹ ಕುಕೃತ್ಯ ನಡೆಸುವುದನ್ನು ತಡೆಗಟ್ಟಲು ಜಿಲ್ಲಾ ಆಡಳಿತವು ಕೂಡಲೇ ಕ್ರಮ ವಹಿಸಬೇಕು. ಹಲ್ಲೆ ಮಾಡಿದ ಎಲ್ಲರನ್ನೂ ಬಂಧಿಸಿ ಶಿಕ್ಷೆಗೊಳಪಡಿಸುವಂತಾಗಬೇಕುಮತ್ತು ಇಂತಹ ಪ್ರಕರಣಗಳು ಮರುಕಳಿಸದಂತೆ ದೃಢ ಹೆಜ್ಜೆ ಇಡಬೇಕುʼ ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಕಲಬುರಗಿ | ಅನೈತಿಕ ಪೊಲೀಸ್ ಗಿರಿ ಮೆರೆದ ಆರು ಜನ ಯುವಕರ ಬಂಧನ