ಕಳ್ಳತನ ಪ್ರಕರಣದ ತನಿಖೆಗಾಗಿ ಯುವಕನನ್ನು ಪೊಲೀಸ್ ಠಾಣೆಗೆ ಎಳೆದುತಂದು, ಚಿತ್ರಹಿಂಸೆ ನೀಡಿ, ಹಲ್ಲೆ ನಡೆಸಿ ಕೊಲೆ ಮಾಡಿರುವ ಆರೋಪದ ಮೇಲೆ ಐವರು ಪೊಲೀಸರನ್ನು ಬಂಧಿಸಲಾಗಿದೆ. ಆರೋಪಿ ಪೊಲೀಸರನ್ನು ಅಮಾನತುಗೊಳಿಸಲಾಗಿದೆ.
ತಮಿಳುನಾಡಿನ ಶಿವಗಂಗಾ ಜಿಲ್ಲೆಯ ತಿರುಪುವನಂನಲ್ಲಿ ಘಟನೆ ನಡೆದಿದೆ. ತುರುಪುವನಂನ ಮಾದಾಪುರಂ ಭದ್ರಕಾಳಿಯಮ್ಮನ್ ದೇವಸ್ಥಾನದಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದ ಬಿ ಅಜಿತ್ ಕುಮಾರ್ ಅವರು ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾರೆ. ಅವರನ್ನು ಪೊಲೀಸರು ಅಮಾನುಷವಾಗಿ ಹೊಡೆದು ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ.
ಆರೋಪದ ಮೇಲೆ ಇಬ್ಬರು ಕಾನ್ಸ್ಸ್ಟೇಬಲ್ಗಳಾದ ಕಣ್ಣನ್ ಮತ್ತು ಪ್ರಭು (ಪಝಾಯನೂರು ಮತ್ತು ಮನಮಧುರೈ ಪೊಲೀಸ್ ಠಾಣೆ) ಹಾಗೂ ಕಾನ್ಸ್ಟೆಬಲ್ಗಳಾದ ರಾಜ, ಆನಂದ್ ಮತ್ತು ಶಂಕರ ಮಣಿಕಂದನ್ ಅವರನ್ನು ಶಿವಗಂಗಾ ಪೊಲೀಸರು ಬಂಧಿಸಿದ್ದಾರೆ. ಇದೇ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿ ರಾಮಚಂದ್ರನ್ ಕೂಡ ಆರೋಪಿಯಾಗಿದ್ದಾರೆ. ಆದರೆ, ಅವರನ್ನು ಇನ್ನೂ ಬಂಧಿಸಲಾಗಿಲ್ಲ.
ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು ಎಂದು ಮದ್ರಾಸ್ ಹೈಕೋರ್ಟ್ ಸೋಮವಾರ ಸೂಚನೆ ನೀಡಿದೆ. ಹೈಕೋರ್ಟ್ ಸೂಚನೆಯ ಬೆನ್ನಲ್ಲೇ ಆರೋಪಿಗಳನ್ನು ಬಂಧಿಸಲಾಗಿದೆ.
ಪ್ರಕರಣದ ಹಿನ್ನೆಲೆ:
ಮೃತ ಅಜಿತ್ ಕುಮಾರ್ ಅವರು ಭದ್ರಕಾಳಿಯಮ್ಮನ್ ದೇವಸ್ಥಾನದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ದೇವಾಲಯಕ್ಕೆ ಬಂದಿದ್ದ ತಾಯಿ-ಮಗಳು ತಮ್ಮ ಕಾರಿನಲ್ಲಿದ್ದ 10 ಪೌಂಡ್ ಚಿನ್ನ ಕಾಣೆಯಾಗಿದೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಚಿನ್ನ ಕಾಣೆ ಪ್ರಕರಣದ ತನಿಖೆಗಾಗಿ ಆರು ಮಂದಿ ಪೊಲೀಸರ ವಿಶೇಷ ತಂಡ ರಚಿಸಲಾಗಿತ್ತು. ಪ್ರಕರಣದಲ್ಲಿ ಅಜಿತ್ ಕುಮಾರ್ ಪಾತ್ರ ಇರಬಹುದೆಂದು ಶಂಕಿಸಿದ್ದ ಪೊಲೀಸರು ಅಜಿತ್ ಕುಮಾರ್ ಮತ್ತು ಇತರರನ್ನು ವಿಚಾರಣೆ ನಡೆಸಲು ಪೊಲೀಸ್ ಠಾಣೆಗೆ ಕರೆತಂದಿದ್ದರು. ಪೊಲೀಸ್ ಠಾಣೆಯಲ್ಲಿ ಅತ್ಯಂತ ಕ್ರೂರವಾಗಿ ಆತನಿಗೆ ಥಳಿಸಲಾಗಿದ್ದು, ಅಜಿತ್ ಮೃತಪಟ್ಟಿದ್ದಾರೆ.
ಅಜಿತ್ ಕುಮಾರ್ ಅವರ ಮೃತದೇಹವನ್ನು ಮರಣೊತ್ತರ ಪರೀಕ್ಷೆಗೆ ಒಳಪಡಿಸಲಾಗಿದ್ದು, ದೇಹದ ಮೇಲೆ15ಕ್ಕೂ ಹೆಚ್ಚು ಗಾಯದ ಗುರುತುಗಳು ಮತ್ತು ಗಂಭೀರವಾದ ಒಳಪೆಟ್ಟುಗಳು ಪತ್ತೆಯಾಗಿವೆ.
ಈ ಲೇಖನ ಓದಿದ್ದೀರಾ?: ಮೋದಿ 3.0 | ಒಂದೇ ವರ್ಷದಲ್ಲಿ 947 ಹೇಟ್ ಕ್ರೈಮ್; ಆತಂಕ ಹುಟ್ಟಿಸುತ್ತೆ APCR ವರದಿ
ಅಜಿತ್ ಸಾವಿನ ಕುರಿತು ಪ್ರತಿಕ್ರಿಯಿಸಿರುವ ಅಜಿತ್ ಸಹೋದರ, “ತಮ್ಮ ವಾಹನ ಪಾರ್ಕ್ ಮಾಡಲು ತಾಯಿ-ಮಗಳ ಅಜಿತ್ ಅವರನ್ನು ಕೇಳಿಕೊಂಡರು. ಅವರ ಕೋರಿಕೆಯಂತೆ ಅಜಿತ್ ಇನ್ನಿಬ್ಬರ ಸಹಾಯದಿಂದ ಕಾರನ್ನು ಪಾರ್ಕ್ ಮಾಡಿದರು. ಆದರೆ, ಬಳಿಕ ತಮ್ಮ ಕಾರಿನಲ್ಲಿದ್ದ ಚಿನ್ನ ಕಾಣುತ್ತಿಲ್ಲವೆಂದು ಆರೋಪಿಸಿ, ದೂರು ನೀಡಿದರು. ಪೊಲೀಸರು ಅಜಿತ್ ಅವರನ್ನು ಎಳೆದೊಯ್ದು, ನನ್ನ ಕಣ್ಣಮುಂದೆಯೇ ಕ್ರೂರವಾಗಿ ಥಳಿಸಿದರು” ಎಂದು ಆರೋಪಿಸಿದ್ದಾರೆ.
ಪ್ರಕರಣದ ಬಗ್ಗೆ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಮತ್ತು ಅವರ ಸರ್ಕಾರವು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮೌನಕ್ಕೆ ಶರಣಾಗಿದೆ. ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ವಿಪಕ್ಷಗಳು ಸ್ಟಾಲಿನ್ 2021ರ ಮೇ ತಿಂಗಳಿನಲ್ಲಿ ಸರ್ಕಾರ ರಚಿಸಿದಾಗಿನಿಂದ ಈವರೆಗೆ 24 ಕಸ್ಟಡಿ ಸಾವುಗಳು ಸಂಭವಿಸಿವೆ ಎಂದು ಆರೋಪಿಸಿವೆ.
ಕಸ್ಟಡಿ ಚಿತ್ರಹಿಂಸೆ ಮತ್ತು ನಂತರದ ಅಜಿತ್ ಕುಮಾರ್ ಅವರ ಸಾವು ತಮಿಳುನಾಡಿನಲ್ಲಿ ರಾಜಕೀಯ ಕೋಲಾಹಲವನ್ನು ಸೃಷ್ಟಿಸಿದ ನಂತರ ಆರು ಜನರನ್ನು ಅಮಾನತುಗೊಳಿಸಲಾಗಿದೆ, ಇದು ಮೇ 2021 ರಲ್ಲಿ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅಧಿಕಾರ ವಹಿಸಿಕೊಂಡ ನಂತರ ಇದು 24 ನೇ ಕಸ್ಟಡಿ ಸಾವು ಎಂದು ವಿರೋಧ ಪಕ್ಷಗಳು ಆರೋಪಿಸಿವೆ.