ಮೈಸೂರು ಜಿಲ್ಲೆಯ ತಿ. ನರಸೀಪುರ ಪುರಸಭೆ ವ್ಯಾಪ್ತಿಗೆ ಒಳಪಡುವ ಗೋಪಾಲಪುರ ವಿಷಯದಲ್ಲಿ ವಾಸ್ತವವೇ ಬೇರೆ. ಆದರೆ, ವಿಚಾರ ಮರೆಮಾಚಿ, ನನ್ನ ಹಾಗೂ ಸಂಸದರ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ. ಸದರಿ ಸ್ಥಳದಲ್ಲಿ ಪರಿಶಿಷ್ಟ ಜಾತಿಯವರಿಗೆ ಅನುಕೂಲ ಕಲ್ಪಿಸುವ ಉದ್ದೇಶ ನಮ್ಮದಾಗಿತ್ತು. ಆದರೆ, ಕಿಡಿಗೇಡಿಗಳು ಮಾದಿಗ ಸಮುದಾಯದ ವಿರೋಧಿಯೆಂದು ಬಿಂಬಿಸಲು ಹೊರಟಿರುವುದು ಸಮಂಜಸವಲ್ಲ ಎಂದು ಆಕ್ಷೇಪಿಸಿದರು.
ಪತ್ರಿಕಾ ಹೇಳಿಕೆಯಲ್ಲಿ ಸಚಿವರು ಮಾತನಾಡಿ ಗೋಪಾಲಪುರದಲ್ಲಿ ಬಹುಕಾಲದಿಂದ ವಾಸ ಮಾಡುತ್ತಿರುವ ಕುಟುಂಬಗಳಿಗೆ ದಾಖಲಾತಿ ನೀಡಬೇಕು. ಜತೆಗೆ, ಶಿಥಿಲಾವಸ್ಥೆಯಲ್ಲಿರುವ ಮನೆಗಳನ್ನು ತೆರವುಗೊಳಿಸಿ ಸರ್ಕಾರದ ವಸತಿ ಯೋಜನೆಯಡಿಯಲ್ಲಿ ಮನೆ ಕಲ್ಪಿಸಬೇಕೆಂದು ಸೂಚಿಸಿದ್ದೆ. ಇದನ್ನು ತಿರುಚಿದ ಕಿಡಿಗೇಡಿಗಳು ಅಪಪ್ರಚಾರದ ಸರಕನ್ನಾಗಿ ಮಾಡಿಕೊಂಡು ಗೋಪಾಲಪುರದ ನಿವಾಸಿಗಳಲ್ಲದೇ ಇದ್ದರೂ ಟಾರ್ಪಲ್ ಹೊದಿಕೆಯ ಶೆಡ್ ನಿರ್ಮಿಸಿಕೊಂಡು ಪುರಸಭೆ ವ್ಯಾಪ್ತಿಯಲ್ಲಿ ನಿವೇಶನ ಪಡೆಯಲು ಸಂಚು ಮಾಡಿದ್ದರು.
ಪುರಸಭೆ ವ್ಯಾಪ್ತಿಯ ಗೋಪಾಲಪುರದಲ್ಲಿ ವಾಸ ಮಾಡುತ್ತಿರುವ ಪರಿಶಿಷ್ಟ ಸಮುದಾಯಗಳಿಗೆ ದಾಖಲೆಗಳು ಇಲ್ಲದಿರುವ ಕಾರಣಕ್ಕೆ ತೆರವು ಮಾಡಿಸುವ ಆತಂಕವಿತ್ತು. ಅಲ್ಲಿಯ ಜನ ಮನೆಗಳನ್ನು ತೆರವುಗೊಳಿಸದಂತೆ ಮನವಿ ಮಾಡಿದ್ದರು. ಇತ್ತೀಚಿಗೆ ಶೆಡ್ ನಿರ್ಮಾಣ ಮಾಡಿರುವ ಹಲವರಿಗೆ ಮನೆಯಿದೆ. ಸಾಮಾಜಿಕವಾಗಿ ಸ್ಥಿತಿವಂತರಾಗಿದ್ದು, ಅವರು ನಿವೇಶನದ ಅತ್ಯಗತ್ಯ ಇಲ್ಲದಿರುವವರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ, ಇನ್ನೂ ಕೆಲವರು ನಿವೇಶನದ ಆಸೆಯಿಂದ ಬೇನಾಮಿ ನಿವೇಶನ ಪಡೆಯಲು ಪ್ರಯತ್ನ ಪಟ್ಟಿದ್ದಾರೆ.
ಈ ವಿಚಾರದ ಮಾಹಿತಿಗಳ ಅನುಸಾರ ಕೆಡಿಪಿ ಸಭೆಯಲ್ಲಿ ಗೋಪಾಲಪುರದಲ್ಲಿ ವಾಸವಿದ್ದ ನಿಜವಾದ ಪರಿಶಿಷ್ಟ ಜಾತಿಯ ಸಮುದಾಯದವರಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ, ಅಕ್ರಮವಾಗಿ ಶೆಡ್ ನಿರ್ಮಿಸಿ ನಿವೇಶನ ಪಡೆಯಲು ಯತ್ನಿಸಿದ್ದ ಕಿಡಿಗೇಡಿಗಳಿಗೆ ಎಚ್ಚರಿಕೆ ನೀಡಿ, ಕೆಡಿಪಿ ಸಭೆಯ ತೀರ್ಮಾನದಂತೆ ಅಧಿಕಾರಿಗಳು ಗುಡಿಸಲು ತೆರವು ಆದೇಶ ಮಾಡಿದ್ದರು ಎಂದು ಸ್ಪಷ್ಟಪಡಿಸಿದ್ದಾರೆ.

ಘಟನೆಯ ಹಿನ್ನಲೆ : ಪುರಸಭೆ ವ್ಯಾಪ್ತಿಯ ಗೋಪಾಲಪುರ ಸರ್ವೇ ನಂಬರ್ 7ರಲ್ಲಿ ಮುಖ್ಯಾಧಿಕಾರಿ ಬಿ ಕೆ ವಸಂತ ಕುಮಾರಿ ನೇತೃತ್ವದಲ್ಲಿ ಜೂನ್ 27ರಂದು ಬೆಳಿಗ್ಗೆ 6-30ರ ಸುಮಾರಿನಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಶೆಡ್ಗಳನ್ನು ಜೆಸಿಬಿ ಯಂತ್ರಗಳ ಮೂಲಕ ತೆರವುಗೊಳಿಸಿದ್ದಾರೆ. ಇದೇ ಸಂದರ್ಭದಲ್ಲಿ ವಕೀಲ ಪ್ರಕಾಶ್ ಮಾದಿಗ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದ್ದಾರೆಂದು ಆರೋಪಿಸಿದ್ದರು. ಪುರಸಭೆ ಮಾಜಿ ಅಧ್ಯಕ್ಷ ಟಿ ಎನ್ ನಂಜುಂಡಸ್ವಾಮಿ ಹುಲ್ಲಹಳ್ಳಿ ನಾಲೆಯನ್ನು ಒತ್ತುವರಿ ಮಾಡಿ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡಿಲ್ಲವೇ? ಅದನ್ನು ಬಿಟ್ಟು ದಲಿತರು ನಿರ್ಮಿಸಿಕೊಂಡಿರುವ ಗುಡಿಸಲನ್ನು ನೆಲಸಮ ಮಾಡಿದ್ದೀರಿ ಎಂದು ಆಕ್ರೋಷ ವ್ಯಕ್ತಪಡಿಸಿದ್ದರು.
ಶೆಡ್ ತೆರವು ಮುನ್ನ ಸಚಿವ ಮಹದೇವಪ್ಪ ನೇತೃತ್ವದಲ್ಲಿ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಕೆಡಿಪಿ ಸಭೆ ನಡೆದು ಅಕ್ರಮ ಗುಡಿಸಲು ತೆರವು ನಡೆಸಲು ಕ್ರಮ ಕೈಗೊಳ್ಳಲಾಗಿತ್ತು. ಅದರಂತೆ, ತೆರವಿನ ವೇಳೆ ತಹಶೀಲ್ದಾರ್ ಟಿ ಜೆ ಸುರೇಶಚಾರ್, ಪೊಲೀಸ್ ಅಧೀಕ್ಷಕ ಎನ್ ವಿಷ್ಣುವರ್ಧನ, ಡಿವೈಎಸ್ಪಿ ರಘು, ಸಿಪಿಐ ಧನಂಜಯ, ಮನೋಜ್ ಕುಮಾರ್, ಆನಂದ ಕುಮಾರ್, ಎಸ್ಐ ಜಗದೀಶ್ ದೂಳ್ ಶೆಟ್ಟಿ ಹಾಜರಿದ್ದು, ತೆರವಿಗೆ ಬಂದೋಬಸ್ತ್ ನೀಡಿದ್ದರು.

ಕಾಂಗ್ರೆಸ್ ರಾಜ್ಯ ವಕ್ತಾರ ಎಂ ಲಕ್ಷ್ಮಣ್ ಈದಿನ. ಕಾಮ್ ಜೊತೆ ಮಾತನಾಡಿ, “ಜಾತಿ ಹೆಸರಿನಲ್ಲಿ ಸಚಿವ ಮಹದೇವಪ್ಪ ಅವರು ರಾಜಕೀಯ ಮಾಡುವ ಅಗತ್ಯತೆ ಇಲ್ಲ. ನಾನು ಕಳೆದ ಮೂವತ್ತು ವರ್ಷಗಳಿಂದ ಅವರ ರಾಜಕೀಯ ಕಂಡಿದ್ದೇನೆ. ಶೋಷಿತರ ಪರವಾಗಿ, ಧನಿಯಾಗಿ ಕೆಲಸ ಮಾಡಿದವರು. ಇತ್ತೀಚಿಗೆ ಕೆಲವು ಕಿಡಿಗೇಡಿಗಳು ರಾಜಕೀಯ ಲಾಭಕ್ಕಾಗಿ ಜನರನ್ನು ಎತ್ತುಕಟ್ಟುವ, ಜಾತಿ ಹಣೆಪಟ್ಟಿ ಕಟ್ಟಿ ತೇಜೋವಧೆ ಮಾಡುವ ಕೃತ್ಯಕ್ಕೆ ಕೈ ಹಾಕಿದ್ದಾರೆ. ಇದೆಲ್ಲವೂ ಸರಿಯಲ್ಲ. ಶೋಷಿತ ಸಮಾಜಕ್ಕೆ ನ್ಯಾಯ ಸಿಗಬೇಕು ಎನ್ನುವ ಕಾರಣಕ್ಕಾಗಿ ಒಳಮೀಸಲಾತಿ ಸಮೀಕ್ಷೆ ನಡೆಸುತ್ತಿರುವ ಸಮಯದಲ್ಲಿ ಮಾದಿಗ ಸಮುದಾಯದ ವಿರೋಧಿಯಾಗಲು ಹೇಗೆ ಸಾಧ್ಯ? ಈಗಾಗಲೇ, ಕಾಂಗ್ರೆಸ್ ಪಕ್ಷದ ಜಿಲ್ಲಾ ಸಮಿತಿ ಪೊಲೀಸ್ ಇಲಾಖೆಗೆ ದೂರು ನೀಡಿದೆ. ನಾನೂ ಕೂಡ ಇಷ್ಟರಲ್ಲೇ ಪೊಲೀಸ್ ಇಲಾಖೆಗೆ ದೂರು ನೀಡಿ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸುವೆ. ಈ ವಿಚಾರವಾಗಿ ಕಾಂಗ್ರೆಸ್ ಪಕ್ಷ ಹೋರಾಟ ಮಾಡಲಿದೆ” ಎಂದು ಕಿಡಿಕಾರಿದರು.
“ಹಿಂದುಳಿದ ವರ್ಗಗಳ ಹಕ್ಕು, ಬಾಧ್ಯತೆಗಾಗಿ ಮುಖ್ಯಮಂತ್ರಿಗಳು, ಸಮಾಜ ಕಲ್ಯಾಣ ಇಲಾಖೆ ಸಚಿವರು ನಿರಂತರವಾಗಿ ಕೆಲಸ ಮಾಡುತಿದ್ದಾರೆ. ಇದನ್ನೆಲ್ಲಾ ಸಹಿಸದ ಕಿಡಿಗೇಡಿಗಳು ಮಾದಿಗ ಸಮುದಾಯದ ಹೆಸರು ಹೇಳಿ ಕಳಂಕ ಹಚ್ಚುವ, ಮಾದಿಗ ಸಮುದಾಯದ ವಿರೋಧಿ ಎಂದು ಹಣೆಪಟ್ಟಿ ಕಟ್ಟುವ ಹುನ್ನಾರ ನಡೆಸಿದ್ದಾರೆ. ಇಂತಹ ಕಿಡಿಗೇಡಿತನಗಳನ್ನು ಸಹಿಸಲು ಸಾಧ್ಯವಿಲ್ಲ. ಕಾನೂನಿನ ಹೋರಾಟಕ್ಕೆ ಮುಂದಾಗುತ್ತೇವೆ” ಎಂದು ಪ್ರತಿಕ್ರಿಯೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಡಾ. ಡಿ ತಿಮ್ಮಯ್ಯ ಅವರು ಈದಿನ. ಕಾಮ್ ಜೊತೆ ಮಾತನಾಡಿ, “ಇದೊಂದು ಪಿತೂರಿ. ರಾಜಕೀಯ ಷಡ್ಯಂತ್ರ. ಬಿಜೆಪಿ, ಆರ್ಎಸ್ಎಸ್ ಮುಂಚಿನಿಂದಲೂ ಇಂತಹ ಪ್ರಯತ್ನ ಮಾಡಿಕೊಂಡುಬಂದಿದೆ. ಅದರ ಮುಂದುವರೆದ ಭಾಗ ಈಗ ನಡೆಯುತ್ತಿರುವ ಘಟನಾವಳಿ. ಹೆಚ್ ಸಿ ಮಹದೇವಪ್ಪ ಅವರನ್ನು ಮಾದಿಗ ಸಮುದಾಯದ ವಿರೋಧಿ ಎಂದು ಬಿಂಬಿಸಲು ಹೊರಟಿರುವುದು ರಾಜಕೀಯ ಪ್ರೇರಿತ. ರಾಜಕೀಯ ಜೀವನದಲ್ಲಿ ಎಂದಿಗೂ ಜಾತಿ ರಾಜಕೀಯ ಮಾಡದ ವ್ಯಕ್ತಿ ಅವರು” ಎಂದರು.
“ಇತ್ತೀಚಿಗೆ ಕೆಲವು ವ್ಯಕ್ತಿಗಳು ರಾಜಕೀಯ ಲಾಭಕ್ಕಾಗಿ, ಮುನ್ನಲೆಗೆ ಬರಬೇಕೆಂಬ ಹವಣಿಕೆಗೆ ಜಾತಿ ಬಳಸುವುದು, ತುಚ್ಚವಾಗಿ ಮಾತನಾಡುವುದು. ಇಲ್ಲಸಲ್ಲದ ವಿಚಾರಗಳನ್ನು ಸಮುದಾಯಕ್ಕೆ ಹಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ಇಂತವರಿಗೆ ಕಾನೂನಿನ ಪಾಠ ಆಗಬೇಕಿದೆ. ನನ್ನನ್ನೂ ಕೂಡ ಮಾದಿಗ ಸಮುದಾಯದ ವಿರೋಧಿ ಎಂದು ಬಿಂಬಿಸುತಿದ್ದಾರೆ. ನಾವುಗಳು ಒಳಮೀಸಲಾತಿ ವಿರೋಧಿಗಳಲ್ಲ. ಸರ್ಕಾರ ಸಮೀಕ್ಷೆ ನಡೆಸುತ್ತಿರುವ ಸಮಯದಲ್ಲಿ ಇಂತಹ ಅಪಪ್ರಚಾರ ನಡೆಯುತ್ತಿವೆ. ಈ ನಿಟ್ಟಿನಲ್ಲಿ ಹೋರಾಟ ನಡೆಯಲಿದೆ” ಎಂದು ಹೇಳಿದರು.

ಮೈಸೂರು ಜಿಲ್ಲಾ ಕಾಂಗ್ರೆಸ್ ವಕ್ತಾರ ರಾಜೇಶ್ ಮಾತನಾಡಿ, “ದಲಿತ ಮಹಾಸಭಾ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪಕ್ಷದ ಮುಖಂಡರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುತ್ತಿರುವುದರ ಬಗ್ಗೆ ನಗರದ ಪುರಭವನದ ಆವರಣದಲ್ಲಿರುವ ಡಾ. ಬಿ ಆರ್ ಅಂಬೇಡ್ಕರ್ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಿ ಪೊಲೀಸ್ ಇಲಾಖೆಗೆ ದೂರು ನೀಡಿದ್ದೇವೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ?ಮೈಸೂರು | ಸುಳ್ಳು ಕೇಸ್ ಪ್ರಕರಣ; ಮೂವರು ಪೊಲೀಸ್ ಅಧಿಕಾರಿಗಳ ಅಮಾನತು
“ಸಚಿವ ಹೆಚ್ ಸಿ ಮಹದೇವಪ್ಪ ಹಾಗೂ ಡಾ. ಡಿ ತಿಮ್ಮಯ್ಯ ಅವರಿಗೆ ಮುಂದಿನ ಚುನಾವಣೆಯಲ್ಲಿ ಕಣ್ಣಿನಿಂದ, ನೀರಲ್ಲ ರಕ್ತ ಬರಿಸುತ್ತೇವೆ ಎಂದು ಬೆದರಿಕೆಯೊಡ್ದಿರುವುದು ಗೂಂಡಾಗಿರಿ ವರ್ತನೆಯಾಗಿದೆ. ಸಮುದಾಯಗಳ ನಡುವೆ ದ್ವೇಷ ಮತ್ತು ಒಡಕನ್ನು ಉಂಟು ಮಾಡುತ್ತದೆ. ಹೀಗಾಗಿ, ಇದಕ್ಕೆಲ್ಲ ಅವಕಾಶ ನೀಡದೆ ಕಾಂಗ್ರೆಸ್ ಪಕ್ಷ ಕಾನೂನು ಕ್ರಮಕ್ಕೆ ಮುಂದಾಗಲಿದೆ” ಎಂದರು.