ಉಡುಪಿ ನಗರದ ಮೂಡನಿಡಂಬೂರು ಗ್ರಾಮದ, ಬನ್ನಂಜೆ ವಾರ್ಡಿನ ಬ್ರಹ್ಮಬೈರ್ದಕಳ ಗರಡಿ ರಸ್ತೆಯಲ್ಲಿ ಬರುವ, ಸಾರ್ವಜನಿಕ ನಾಗಬನದ ಹತ್ತಿರ, ನೀರು ಹರಿಯುವ ಕಾಲುವೆಯೊಂದಿದ್ದು, ಈ ಕಾಲುವೆಯು ಗರಡಿ ಸನಿಹ ಹರಿಯುವ ಇಂದ್ರಾಣಿ ನದಿಯನ್ನು ಸಂಪರ್ಕಿಸುತ್ತದೆ. ನಾಗಬನ ಸನಿಹದ ಕಾಲುವೆಗೆ ಕಾಲುಸೇತುವೆಯೊಂದನ್ನು ನಿರ್ಮಿಸಲಾಗಿದೆ. ಇದು ಕಳೆದ ಅರವವತ್ತು ವರ್ಷಗಳ ಹಿಂದೆಯೇ ನಿರ್ಮಿಸಲ್ಪಟ್ಟ ಕಾಲುಸೇತುವೆ ಎಂದು ಹೇಳಲಾಗುತ್ತಿದೆ.
ಕಾಲುಸೇತುವೆಯು ಅಪಾಯ ಆಹ್ವಾನಿಸುವ ಸ್ಥಿತಿಯಲ್ಲಿದೆ. ಸೇತುವೆ ಎರಡೂ ಪಾರ್ಶ್ವಗಳಲ್ಲಿಯೂ ರಕ್ಷಣಾ ಬೇಲಿ ಉರುಳಿಬಿದ್ದು ಹಲವು ವರ್ಷಗಳೇ ಕಳೆದುಹೋಗಿವೆ. ಇಲ್ಲಿ ಪಾದಚಾರಿಗಳು ಆಯತಪ್ಪಿ ಕಾಲುವೆಗೆ ಬೀಳುವ ಘಟನೆಗಳು ಸಂಭವಿಸುತ್ತಲೆ ಇರುತ್ತದೆ. ಅರ್ಕದಕಟ್ಟೆ, ಗರಡಿ, ನಿಟ್ಟೂರು ಭಾಗದ ನಾಗರಿಕರು, ವಲಸೆ ಕಾರ್ಮಿಕರು, ಉದ್ಯೋಗಿಗಳು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಉಡುಪಿ ನಗರಕ್ಕೆ ತೆರಳಲು ಈ ಕಾಲುಸೇತುವೆಯನ್ನು ಬಳಸುತ್ತಾರೆ. ಸಂಕದ ಮೇಲೆ, ದಿನವೊಂದರಲ್ಲಿ ಸಾವಿರಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿ ಜನ ಸಂಚರಿಸುವುದು ಕಂಡುಬರುತ್ತದೆ. ಶಾಲಾ ಮಕ್ಕಳು ಕಾಲುಜಾರಿ ಕಾಲುವೆಗೆ ಎಡವಿಬಿದ್ದರೆ ನೀರಲ್ಲಿ ಕೊಚ್ಚಿಹೋಗುವ ಹಾಗೂ ಹಿರಿಯ ನಾಗರಿಕರು ನಡೆದು ಸಾಗುವಾಗ ದೇಹ ನಿಯಂತ್ರಣ ಸಿಗದೆ, ಬೀಳುವ ಸಾಧ್ಯತೆಗಳು ಇಲ್ಲಿ ಹೆಚ್ಚಿದೆ. ಈ ಸ್ಥಳದಲ್ಲಿ ಬೀದಿದೀಪದ ವ್ಯವಸ್ಥೆಯೂ ಇಲ್ಲವಾಗಿದೆ. ವಿಷ ಜಂತುಗಳ ಸಂಚಾರವು ಇಲ್ಲಿದೆ. ಸೇತುವೆ ತಳಭಾಗವು ಶಿಥಿಲವಾಗಿದ್ದು ಸರಳುಗಳು ಕಾಣುತ್ತಿವೆ. ನಗರಾಡಳಿತ, ಜಿಲ್ಲಾಡಳಿತ, ಸ್ಥಳೀಯ ಶಾಸಕರು, ಸಂಸದರು ತುರ್ತಾಗಿ ಈ ಸ್ಥಳದಲ್ಲಿ ಹೊಸದಾದ ಅಗಲವಾದ ಕಾಲುಸೇತುವೆ ನಿರ್ಮಿಸಬೇಕೆಂದು ಉಡುಪಿ ಜಿಲ್ಲಾ ನಾಗರೀಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಆಗ್ರಹಪಡಿಸಿದ್ದಾರೆ.
