ವಚನ ಸಾಹಿತ್ಯ ಸಂಶೋಧನೆಗೆ ತನ್ನ ಜೀವನವನ್ನೇ ಅರ್ಪಿಸಿದ ಡಾ.ಫ.ಗು.ಹಳಕಟ್ಟಿ ಅವರು ಲಾಭದಾಯಕ ವಕೀಲ ವೃತ್ತಿಯನ್ನು ತ್ಯಜಿಸಿ 60 ವರ್ಷಗಳ ಕಾಲ ವಚನ ಸಂಶೋಧನೆಗೆ ಮೀಸಲಿಟ್ಟ ಮಹನೀಯರು ಎಂದು ಚಿತ್ರದುರ್ಗದ ವಚನ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಾಂಶುಪಾಲೆ ಡಾ.ಎನ್.ಮಮತಾ ಸ್ಮರಿಸಿದರು.
ಚಿತ್ರದುರ್ಗ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆಯ ಸಹಯೋಗದಲ್ಲಿ ಡಾ.ಹಳಕಟ್ಟಿಯವರ ಜನ್ಮದಿನದ ಅಂಗವಾಗಿ ನಡೆದ ವಚನ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು
“ಡಾ.ಹಳಕಟ್ಟಿಯವರು ವಚನ ಸಾಹಿತ್ಯದ ಉಳಿವಿಗಾಗಿ ಮಹತ್ವದ ಕೊಡುಗೆ ನೀಡಿದ್ದಾರೆ. ವಚನಗಳನ್ನು ಸಂಗ್ರಹಿಸುವ ಮೂಲಕ 250ಕ್ಕೂ ಹೆಚ್ಚು ವಚನಕಾರರನ್ನು ಪರಿಚಯಿಸಿ, ನಾಡಿಗೆ ಸಾಹಿತ್ಯಕ್ಕೆ ಮಹತ್ತರ ಸೇವೆ ಸಲ್ಲಿಸಿದರು” ಎಂದು ಸ್ಮರಿಸಿದರು.

“ಸಾಹಿತಿಗಳಾದ ಬಿ.ಎಂ.ಶ್ರೀಕಂಠಯ್ಯನವರು ಅವರನ್ನು “ವಚನಗುಮ್ಮಟ”, ಸಾಹಿತಿ ಸಿಂಪಗೆ ಲಿಂಗಣ್ಣನವರು “ಕರ್ನಾಟಕದ ಮ್ಯಾಕ್ಸ್ ಮುಲ್ಲರ್” ಎಂದು ಹೊಗಳಿದ್ದಾರೆ. ಉತ್ತರ ಕರ್ನಾಟಕದಲ್ಲಿ ದೇವರ ಜಗುಲಿಗಳಲ್ಲಿ ಪೂಜೆಗೆ ಇರಿಸಿದ್ದ ತಾಳೆಗರಿಯ ವಚನ ಸಾಹಿತ್ಯವನ್ನು ರಾಜ್ಯದ ಮೂಲೆ ಮೂಲೆಗಳಿಂದ, ಮನೆ ಮನೆಗಳಿಂದ ಸಂಗ್ರಹಿಸಿ, ಸಂರಕ್ಷಿಸಿ ಜಗತ್ತಿಗೆ ಕೊಡುಗೆಯಾಗಿ ನೀಡಿದರು. ಆ ಮೂಲಕ 12ನೇ ಶತಮಾನದ ವಚನಕಾರರ ವೈಚಾರಿಕ ನಿಲುವುಗಳನ್ನು ಅನಾವರಣಗೊಳಿಸಿದರು” ಎಂದು ಸಂತಸ ವ್ಯಕ್ತಪಡಿಸಿದರು.
ಅವರ ವಚನದ ಕುರಿತ ಸಂಶೋಧನೆಗೆ ವಿಜಯಪುರದಲ್ಲಿ ಅವರ ಮನೆಗೆ ಅಂದಿನ ರಾಜ್ಯಪಾಲ ಜಯಚಾಮರಾಜೇಂದ್ರ ಒಡೆಯರ್ ಭೇಟಿ ನೀಡಿ ಗೌರವಿಸಿದ್ದರು. ಅಪಘಾತದಲ್ಲಿ ತಮ್ಮ ಮಗನ ಮೃತ್ಯುವಿನ ನೋವನ್ನೂ ಮರೆತು ವಚನ ಸಾಹಿತ್ಯದ ಸಂಶೋಧನೆ ಮುಂದುವರೆಸಿದ ಬದ್ದತೆಯುಳ್ಳ ಚಿಂತಕರು. ಆದ್ದರಿಂದಲೇ ಅವರನ್ನು ವಚನ ಸಾಹಿತ್ಯದ ಪಿತಾಮಹ ಎಂದು ಕರೆಯುತ್ತಾರೆ. ಅವರ ಆದರ್ಶ ಇಂದಿನ ಪೀಳಿಗೆಗೆ ಮಾದರಿ” ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಷಿ ಮಾತನಾಡಿ “ವಿಶ್ವ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿದ ಕನ್ನಡದ ವಚನ ಸಾಹಿತ್ಯವನ್ನು ಸಂಗ್ರಹಿಸಿ ಸಂರಕ್ಷಿಸಿ ಸಮಾಜಕ್ಕೆ ನೀಡಿದ ಡಾ.ಹಳಕಟ್ಟಿಯವರ ಸಾಹಿತ್ಯ ಸೇವೆ ಅವಿಸ್ಮರಣೀಯವಾದದ್ದು. ಇದರಿಂದಾಗಿ ವಚನ ಸಾಹಿತ್ಯದ ಮಹತ್ವದ ಬಗ್ಗೆ ತಿಳಿದುಕೊಳ್ಳಲು ಜನರಿಗೆ ಸಾಧ್ಯವಾಗಿತ್ತು” ಎಂದು ಅವರ ಕೊಡುಗೆಯನ್ನು ಸ್ಮರಿಸಿದರು.

“ಗ್ಯಾರಂಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಆರ್. ಶಿವಣ್ಣ ಮಾತನಾಡಿ “ಹಳಕಟ್ಟಿಯವರು ಮನೆ ಮನೆಗೆ ಸೈಕಲ್ ಮೂಲಕ ತೆರಳಿ ವಚನ ಸಂಗ್ರಹ ಕಾರ್ಯ ನಡೆಸಿ, ವಚನಗಳ ಬೆಳಕು ಹರಡಿದರು” ಎಂದು ನೆನಪಿಸಿಕೊಂಡರು.
ಚಿತ್ರದುರ್ಗ ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ. ತಾಜ್ಪೀರ್ ಮಾತನಾಡಿ “ಸ್ವತಂತ್ರ ಪೂರ್ವದಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ಹಳಕಟ್ಟಿಯವರು ವಚನ ಸಾಹಿತ್ಯದ ನಿಸ್ವಾರ್ಥ ಸೇವೆ ಸಲ್ಲಿಸಿದರು. ಆಕಸ್ಮಿಕವಾಗಿ ದೊರೆತ ವಚನಗಳ ಗಂಟಿನಿಂದ ಅವರ ಜೀವನವೇ ವಚನ ಸಾಹಿತ್ಯದ ಸಂಗ್ರಹಕ್ಕೆ ಮುಡುಪಾಯಿತು” ಎಂದು ಅಭಿಪ್ರಾಯಪಟ್ಟರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ, ದಾವಣಗೆರೆ | ಭದ್ರಾ ಬಲದಂಡೆಯಿಂದ ಕುಡಿಯುವ ನೀರು ಹರಿಸಲು ಐಐಎಸ್ಸಿ ವರದಿ, ನಾಲೆ ಜಲಾಶಯಕ್ಕೆ ತೊಂದರೆ ಇಲ್ಲ
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ. ಶಿವಸ್ವಾಮಿ ಮಾತನಾಡಿ, “ಡಾ.ಹಳಕಟ್ಟಿ ವಕೀಲ, ಪತ್ರಕರ್ತ ಹಾಗೂ ವಿಧಾನ ಪರಿಷತ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದವರು. ಇಂತಹ ಮಹನೀಯರ ಸೇವೆ ಸ್ಮರಿಸುವ ಅಗತ್ಯವಿದೆ” ಎಂದು ಪ್ರತಿಪಾದಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ, ತಹಶೀಲ್ದಾರ್ ನರಸಿಂಹಮೂರ್ತಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಮಳಲಿ ಶ್ರೀನಿವಾಸ್, ನಿಜಲಿಂಗಪ್ಪ ಸ್ಮಾರಕ ಟ್ರಸ್ಟ್ ಸದಸ್ಯ ಷಣ್ಮುಖಪ್ಪ, ಎಸ್.ಲಕ್ಷ್ಮಣ್, ಸಾಹಿತಿ ಆನಂದಮೂರ್ತಿ ಮತ್ತು ಶಿಕ್ಷಕಿ ಗೀತಾ ಭರಮಸಾಗರ ಹಾಗೂ ಇತರರು ಭಾಗವಹಿಸಿದ್ದರು.