ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆ ವತಿಯಿಂದ ಚಾಮರಾಜನಗರ ಜಿಲ್ಲೆ, ಹನೂರು ತಾಲೂಕಿನ ಚಿಂಚಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಬಿತ್ತನೆ ಅಭಿಯಾನಕ್ಕೆ ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ಗುರುವಾರ ಚಾಲನೆ ನೀಡಿದರು.
ಪ್ರಗತಿಪರ ರೈತರಾದ ದಯಾನಂದ್ ಅವರ ಚಿಂಚಳ್ಳಿ ಗ್ರಾಮದ ಜಮೀನಿನಲ್ಲಿ ರಾಗಿ ಬಿತ್ತನೆ ಮಾಡುವ ಮೂಲಕ ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರೊಂದಿಗೆ ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ಬಿತ್ತನೆ ಅಭಿಯಾನಕ್ಕೆ ಚಾಲನೆ ಕೊಟ್ಟರು. ಇದೇ ವೇಳೆ ಡ್ರೋನ್ ಮೂಲಕ ಬೆಳೆಗೆಳಿಗೆ ಔಷಧಿ ಸಿಂಪಡಣೆ ಕಾರ್ಯವನ್ನು ಸಚಿವರು ನೆರವೇರಿಸಿದರು.
ಬಳಿಕ ಜಮೀನಿನ ಆವರಣದೊಳಗೆ ಕೃಷಿ ಇಲಾಖೆ ವತಿಯಿಂದ ಫಲಾನುಭವಿಗಳಿಗೆ ಪವರ್ ಟಿಲ್ಲರ್, ರೋಟೊವೇಟರ್, ಜಾಫ್ ಕಟರ್, ಪವರ್ ವೀಡರ್, ಎಣ್ಣೆ ಗಾಣ, ಇನ್ನಿತರ ಕೃಷಿ ಸಂಬಂಧಿ ಯಂತ್ರೋಪಕರಣಗಳನ್ನು ರೈತರಿಗೆ ವಿತರಣೆ ಮಾಡಿ ಮಾತನಾಡಿದ ಸಚಿವ ಚಲುವರಾಯಸ್ವಾಮಿ ಅವರು ” ಸಮಗ್ರ ಕೃಷಿಯಿಂದ ಹೆಚ್ಚಿನ ಆದಾಯ ಬರಲಿದೆ. ಒಂದು ಎಕರೆ ಜಮೀನಿನಲ್ಲಿ ತರಕಾರಿ, ಕೃಷಿ ಹೊಂಡ, ಮೀನು, ಕುರಿ, ಕೋಳಿ ಸಾಕಾಣೆಯಂತಹ ಈ ಎಲ್ಲಾ ಚಟುವಟಿಕೆಗಳನ್ನು ಅಳವಡಿಸಿಕೊಂಡರೆ ಕನಿಷ್ಠ ₹10 ಲಕ್ಷ ರೂಪಾಯಿ ಆದಾಯ ಪಡೆಯಬಹುದಾಗಿದೆ. ಇಂತಹ ಸಮಗ್ರ ಕೃಷಿಯಿಂದ ಹಲವರು ಆರ್ಥಿಕವಾಗಿ ಸದೃಢರಾಗಿರುವ ನಿದರ್ಶನಗಳಿವೆ ” ಎಂದರು.

” ರಾಸಾಯನಿಕ ಗೊಬ್ಬರಗಳಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವುದರಿಂದ ಇದರ ಅವಲಂಬನೆ ಕಡಿಮೆಯಾಗಬೇಕಿದೆ. ಸಾವಯವ ನೈಸರ್ಗಿಕ ಕೃಷಿ ಪದ್ದತಿಗೆ ಹೆಚ್ಚಿನ ಒಲವು ತೋರಬೇಕು. ಸರ್ಕಾರವು ಇದರ ಉತ್ತೇಜನಕ್ಕೆ ಮುಂದಾಗಿದೆ. ನೀರು ವ್ಯರ್ಥ ಮಾಡದೇ ಅಗತ್ಯ ಪ್ರಮಾಣದಲ್ಲಿ ಬಳಸಿದಾಗ ಭೂಮಿಯ ಫಲವತ್ತತೆಯು ಹೆಚ್ಚಾಗಲಿದೆ. ಸೂಕ್ಷ್ಮ ನೀರಾವರಿ ಅಳವಡಿಕೆಗೆ ಹೆಚ್ಚಿನ ಸಹಾಯಧನ ನೀಡಲಾಗುತ್ತಿದೆ ” ಎಂದು ತಿಳಿಸಿದರು.
ಹವಾಮಾನ ವೈಪರಿತ್ಯ ಇನ್ನಿತರ ಸಂದರ್ಭಗಳಲ್ಲಿ ಬೆಳೆ ನಷ್ಟವಾದರೆ ರೈತರಿಗೆ ನೆರವಾಗಲು ವಿಮೆ ಸೌಲಭ್ಯವಿದೆ. ರೈತರು ವಿಮೆ ಮಾಡಿಸಬೇಕು. ಇದರಿಂದ, ಸಂಕಷ್ಟದಲ್ಲಿ ಪರಿಹಾರ ಸಿಗಲಿದೆ. ನಾನಾ ಬೆಳೆಗಳಿಗೆ ವಿಮಾ ಕಂತು ಪಾವತಿಸಿ ಬೆಳೆಹಾನಿ ಸಂದರ್ಭದಲ್ಲಿ ನೆರವು ಪಡೆಯಬಹುದಾಗಿದೆ. ಇಂತಹ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ಕೃಷಿ ಇಲಾಖೆ ವತಿಯಿಂದ ಕೃಷಿ ಭಾಗ್ಯ ಯೋಜನೆಯನ್ನು ರಾಜ್ಯದ 224 ತಾಲೂಕುಗಳಿಗೂ ವಿಸ್ತರಿಸಲಾಗಿದೆ. ಕೃಷಿ ಪದ್ದತಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕಿದೆ. ಕೃಷಿ ಇಲಾಖೆ, ಕೃಷಿ ವಿಶ್ವವಿದ್ಯಾಲಯ ನೀಡುವ ಸಲಹೆ, ಮಾರ್ಗದರ್ಶನಗಳನ್ನು ಅನುಸರಿಸಬೇಕಿದೆ. ಸರ್ಕಾರ ಗ್ಯಾರಂಟಿ ಯೋಜನೆಗಳ ಜೊತೆ ಕೃಷಿ ಯಂತ್ರೋಪಕರಣಗಳ ವಿತರಣೆ, ಸಹಾಯಧನ, ಇನ್ನಿತರ ಕೃಷಿ ಪೂರಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಮಾತನಾಡಿ ” ವ್ಯವಸಾಯ ಕಷ್ಟದ ಕೆಲಸ. ಆದರೆ, ಶ್ರದ್ದೆ ಆಸಕ್ತಿಯಿಂದ ಶ್ರಮವಹಿಸಿ ಮಾಡಿದರೆ ನಿರೀಕ್ಷಿತ ಲಾಭ ತಂದುಕೊಡುತ್ತದೆ. ಸರ್ಕಾರ ರೈತರಿಗೆ ಅನುಕೂಲ ಮಾಡಿಕೊಡುವ ದಿಸೆಯಲ್ಲಿ ಜಾರಿಗೆ ತಂದಿರುವ ಯೋಜನೆಗಳನ್ನು ಸದುಪಯೋಗ ಮಾಡಿಕೊಳ್ಳುವ ಮೂಲಕ ಹೆಚ್ಚಿನ ಆದಾಯ ಪಡೆಯಬಹುದಾಗಿದೆ ” ಎಂದರು.
” ಕೃಷಿ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನ ಪರಿಚಯವಾಗುತ್ತಲೇ ಇವೆ. ಇದನ್ನು ಒಪ್ಪಿಕೊಂಡು ಅಳವಡಿಸಿಕೊಳ್ಳಬೇಕಿದೆ. ಆಧುನಿಕ ಕೃಷಿ ಪದ್ದತಿಗೆ ಹೊಂದಿಕೊಳ್ಳಬೇಕು. ಯಂತ್ರೋಪಕರಣಗಳ ಬಳಕೆಯಿಂದ ಕೂಲಿ ವೆಚ್ಚವು ಉಳಿತಾಯವಾಗಲಿದೆ. ಹೀಗಾಗಿ ನೂತನ ಆವಿಷ್ಕಾರದತ್ತ ಹೆಚ್ಚಿನ ಗಮನ ಹರಿಸಬೇಕಿದೆ. ಜಿಲ್ಲೆಯಲ್ಲಿ ಸಚಿವ ಸಂಪುಟ ಸಭೆ ನಡೆಸಲಾಗಿದ್ದು, ಹಲವಾರು ಅಭಿವೃದ್ದಿ ಯೋಜನೆಗಳಿಗೆ ಮಂಜೂರಾತಿ ಸಿಕ್ಕಿದೆ. ಆದಷ್ಟು ಶೀಘ್ರದಲ್ಲೇ ಈ ಎಲ್ಲಾ ಕಾಮಗಾರಿ ಆರಂಭವಾಗಲಿದೆ ” ಎಂದು ತಿಳಿಸಿದರು.

ಶಾಸಕರಾದ ಎಂ. ಆರ್. ಮಂಜುನಾಥ್ ಮಾತನಾಡಿ ಹನೂರು ಭಾಗದಲ್ಲಿ ಕೃಷಿಯನ್ನೇ ಅವಲಂಬಿಸಿ ಜೀವನ ಮಾಡುತ್ತಿರುವವರ ಸಂಖ್ಯೆ ಹೆಚ್ಚಿದೆ. ತಾಲೂಕಿನಲ್ಲಿ ಹೈನುಗಾರಿಕೆ ಚಟುವಟಿಕೆಗಳು ಪ್ರಗತಿಯಾಗಿದ್ದು ಅಧಿಕ ಹಾಲು ಉತ್ಪಾದನೆಯಾಗುತ್ತಿದೆ. ತೊಟಗಾರಿಕೆ, ಕೃಷಿ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಬಾಳೆ, ಅರಿಶಿಣ, ಈರುಳ್ಳಿ, ಇನ್ನಿತರ ಬೆಳೆಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತಿದ್ದು, ರೈತರಿಗೆ ವಿದ್ಯುತ್, ನೀರು ಮತ್ತಷ್ಟು ಸಮರ್ಪಕವಾಗಿ ನೀಡುವ ಮೂಲಕ ಉತ್ತೇಜನ ನೀಡಬೇಕು ಎಂದರು.
ಈ ವಿಶೇಷ ಸುದ್ದಿ ಓದಿದ್ದೀರಾ? ಮೈಸೂರು | ಉತ್ತಮ ಆರೋಗ್ಯಕ್ಕೆ ಉಳಿದಿರುವ ದಾರಿ ಒಂದೇ; ಅದುವೇ ರಾಸಾಯನಿಕ ಮುಕ್ತ ಕೃಷಿ
ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ, ಮಾಜಿ ಶಾಸಕ ಆರ್. ನರೇಂದ್ರ, ಕೃಷಿಕ ಸಮಾಜದ ಅಧ್ಯಕ್ಷ ರಾಘವೇಂದ್ರ ನಾಯ್ಡು, ಗ್ರಾಮ ಪಂಚಾಯಿತಿ ಅಧ್ಯಕ್ಷ ಸೋಮಶೇಖರ್, ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ, ಜಂಟಿ ಕೃಷಿ ನಿರ್ದೇಶಕ ಎಸ್. ಎಸ್. ಆಬೀದ್, ಉಪ ಕೃಷಿ ನಿರ್ದೇಶಕ ಕೆ. ಸಿ. ಸುಷ್ಮಾ, ಸೇರಿದಂತೆ ಇನ್ನಿತರರು ಇದ್ದರು.