ದೇಹದ ಪ್ರಮುಖ ಅಂಗ ಕಣ್ಣು. ಅವುಗಳ ರಕ್ಷಣೆಗೆ ಆದ್ಯತೆ ಕೊಡಬೇಕು ಎಂದು ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಲಿಂಗರಾಜ್ ಟಿ ಹೇಳಿದರು.
ಡಿಎಚ್ಒ ಕಚೇರಿ, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಹಾಗೂ ಎಂಎಂ ಜೋಶಿ ನೇತ್ರ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಿಂದ ಪತ್ರಕರ್ತರಿಗೆ ಉಚಿತ ಕಣ್ಣುಗಳ ತಪಾಸಣೆ ಹಾಗೂ ಕನ್ನಡಕ ವಿತರಣೆ ಮಾಡಲಾಯಿತು. ಆ ಪ್ರಯುಕ್ತ ಕೊಪ್ಪಳ ಮೀಡಿಯಾ ಕ್ಲಬ್ನಲ್ಲಿ ಶುಕ್ರವಾರ ಪತ್ರಕರ್ತರಿಗೆ ಕನ್ನಡಕ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಪತ್ರಕರ್ತರು ಸಮಾಜದ ಕಣ್ಣುಗಳು ಇದ್ದ ಹಾಗೆ. ಸಮಾಜದ ಎಲ್ಲರ ಕೆಲಸದ ವೈಖರಿ, ಸಾಧನೆಗಳನ್ನು ಒರೆಗೆ ಹಚ್ಚುವ ಪತ್ರಕರ್ತರು ಸಾಕಷ್ಟು ಒತ್ತಡದಲ್ಲಿ ಕೆಲಸ ಮಾಡುತ್ತಾರೆ. ಆದ್ದರಿಂದ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಯಾವುದೇ ಸುದ್ದಿ ಬರೆಯಬೇಕಾದರೆ ಅದರ ಖಚಿತತೆ ಖಾತ್ರಿ ಪಡಿಸಿಕೊಳ್ಳಬೇಕು” ಎಂದರು.
ಜಿಲ್ಲಾ ಅಂಧತ್ವ ನಿವಾರಣಾ ಅಧಿಕಾರಿ ಡಾ. ಪ್ರಕಾಶ ಎಚ್ ಮಾತನಾಡಿ, “ರಾಜ್ಯ ಸರ್ಕಾರ ಆರಂಭಿಸಿರುವ ಆಶಾಕಿರಣ ಯೋಜನೆಯಡಿ ಜಿಲ್ಲೆಯಲ್ಲಿ 13 ಕೇಂದ್ರಗಳನ್ನು ಆರಂಭಿಸಲಾಗಿದೆ. ಅಂಧತ್ವ ಮತ್ತು ದೃಷ್ಟಿ ದೋಷ ಮಹಿಳೆಯರಲ್ಲಿಯೇ ಹೆಚ್ಚು ಕಂಡುಬರುತ್ತದೆ. ಉತ್ತಮ ಆರೋಗ್ಯ ಸೇವೆಯಿಂದ ಮನುಷ್ಯನ ಜೀವಿತಾವಧಿ ಜಾಸ್ತಿ ಆಗುತ್ತಿದೆ. ಅತ್ಯಂತ ಜವಾಬ್ದಾರಿಯುತ ಸ್ಥಾನದಲ್ಲಿರುವ ಪತ್ರಕರ್ತರು ಸಾಮಾಜಿಕ ಹೊಣೆಗಾರಿಕೆಯೊಂದಿಗೆ ಕೆಲಸ ಮಾಡಬೇಕು. ಸಾಮಾಜಿಕ ತಾಣಗಳಲ್ಲಿ ಹಂಚಿಕೆಯಾಗುವ ಆರೋಗ್ಯ ಸಲಹೆಗಳನ್ನು ಪಾಲಿಸುವ ಮೊದಲು ವೈದ್ಯರ ಸಲಹೆ ಪಡೆದುಕೊಳ್ಳಬೇಕು” ಎಂದು ಹೇಳಿದರು.
ಇದನ್ನೂ ಓದಿ: ಕೊಪ್ಪಳ | ಪತ್ರಕರ್ತರಿಗೆ ನೈತಿಕತೆ ಮುಖ್ಯ: ಶಿವಕುಮಾರ್ ಮೆಣಸಿನಕಾಯಿ
ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಂದಕುಮಾರ, ಎಂ.ಎಂ. ಜೋಶಿ ನೇತ್ರ ವಿಜ್ಞಾನ ಹಾಗೂ ಸಂಶೋಧನಾ ಸಂಸ್ಥೆಯ ಪ್ರತಿನಿಧಿ ವಿಕ್ರಂ, ಕೊಪ್ಪಳ ಮೀಡಿಯಾ ಕ್ಲಬ್ ಅಧ್ಯಕ್ಷ ರವೀಂದ್ರ ವಿ.ಕೆ., ಕಾರ್ಯದರ್ಶಿ ದತ್ತು ಕಮ್ಮಾರ, ಖಜಾಂಚಿ ಅನಿಲ ಬಾಚನಹಳ್ಳಿ ಹಾಗೂ ಇತರರು ಇದ್ದರು.