ಇತ್ತೀಚೆಗಷ್ಟೇ ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆಯೆಂದು ಮರುನಾಮಕರಣ ಮಾಡಲಾಗಿದೆ. ತುಮಕೂರು ಜಿಲ್ಲೆಯನ್ನು ಬೆಂಗಳೂರು ಉತ್ತರ ಜಿಲ್ಲೆಯೆಂದು ಬದಲಿಸಲು ಬೇಡಿಕೆಗಳು ಹೆಚ್ಚುತ್ತಿವೆ. ಇ ಬೆನ್ನಲ್ಲೇ, ಕರಾವಳಿ ಕರ್ನಾಟಕದಲ್ಲಿಯೂ ಮರುನಾಮಕರಣದ ಕೂಗು ಮುನ್ನೆಲೆಗೆ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆಯಾಗಿ ಹೆಸರು ಬದಲಿಸಲು ಒತ್ತಾಯಗಳು ಕೇಳಿಬಂದಿವೆ.
ದಕ್ಷಿಣ ಕನ್ನಡ ಎಂಬ ಹೆಸರಿಗೆ ಕರ್ನಾಟಕದಿಂದ ಹೊರಗೆ ಮನ್ನಣೆ ಇಲ್ಲ. ವ್ಯಾಪಕ ಸಾರ್ವಜನಿಕರ ಎದೆಯಾಳದಲ್ಲಿ ಹಈ ಹೆಸರು ಪ್ರತಿಧ್ವನಿಸುವಲ್ಲಿ ವಿಫಲವಾಗಿದೆ. ಆದರೂ, ಜಿಲ್ಲಾ ಕೇಂದ್ರವಾದ ಮಂಗಳೂರು – ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಬ್ಯಾಂಕಿಂಗ್, ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಉದ್ಯಮದ ಕೇಂದ್ರವಾಗಿ ಉತ್ತಮ ಮನ್ನಣೆ ಪಡೆದಿದೆ. ಹೀಗಾಗಿ, ಜಿಲ್ಲೆಯ ಹೆಸರನ್ನು ಮಂಗಳೂರಿನಿಂದ ಗುರುತಿಸಬೇಕು. ಇದರಿಂದ, ಜಿಲ್ಲೆಗೆ ಆರ್ಥಿಕ ಆಕರ್ಷಣೆ ಹೆಚ್ಚಾಗುತ್ತದೆ ಎಂದು ವಾದಿಸುತ್ತಿದ್ದಾರೆ.
ಐತಿಹಾಸಿಕವಾಗಿ, ದಕ್ಷಿಣ ಕನ್ನಡ ಜಿಲ್ಲೆಯು ಬಹಳ ಹಿಂದಿನಿಂದಲೂ ಮಂಗಳೂರಿನಿಂದ ಗುರುತಿಸಿಕೊಂಡಿದೆ. 2008ರ ಕ್ಷೇತ್ರ ಪುನರ್ವಿಂಗಡಣೆಯವರೆಗೆ, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರವನ್ನು ಅಧಿಕೃತವಾಗಿ ಮಂಗಳೂರು ಕ್ಷೇತ್ರ ಎಂದು ಕರೆಯಲಾಗುತ್ತಿತ್ತು. 1951ರಿಂದಲೂ ಇದೇ ಹೆಸರಿನಲ್ಲಿ ಗುರುತಿಸಲಾಗಿತ್ತು. ಭಾಷಾವಾರು ರಾಜ್ಯಗಳ ಪುನರ್ವಿಂಗಡಣೆಗೆ ಮೊದಲು, ಮಂಗಳೂರು ಲೋಕಸಭಾ ಕ್ಷೇತ್ರವು ಇಂದಿನ ದಕ್ಷಿಣ ಕನ್ನಡ, ಈಗ ಕೇರಳದ ಭಾಗವಾಗಿರುವ ಕಾಸರಗೋಡು ಮತ್ತು ಕಾಞಂಗಾಡ್ ಪ್ರದೇಶಗಳನ್ನು ಒಳಗೊಂಡಿತ್ತು.
ಜಿಲ್ಲೆಯ ಮರುನಾಮಕರಣಕ್ಕೆ ಪಕ್ಷಾತೀತವಾಗಿ ರಾಜಕೀಯ ನಾಯಕರು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ದಕ್ಷಿಣ ಕನ್ನಡವನ್ನು ಪ್ರತಿನಿಧಿಸುವ ಬಿಜೆಪಿ ಸಂಸದ ಬ್ರಿಜೇಶ್ ಚೌಟ ಅವರು ಕೂಡ ಜಿಲ್ಲೆಯ ಹೆಸರು ಬದಲಾವಣೆಯನ್ನು ಪ್ರತಿಪಾದಿಸುತ್ತಿದ್ದಾರೆ. ಜಿಲ್ಲೆಯನ್ನು ಮಂಗಳೂರು ಹೆಸರಿನಲ್ಲಿ ಬ್ರಾಂಡ್ ಮಾಡುವುದರಿಂದ ಜಿಲ್ಲೆಗೆ ಹೆಚ್ಚಿನ ಹೂಡಿಕೆ, ಮನ್ನಣೆ ಹಾಗೂ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ.
ಅದೇ ರೀತಿ, ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಇವಾನ್ ಡಿ’ಸೋಜಾ, “ಕರ್ನಾಟಕ ಸರ್ಕಾರವು ಈ ವಿಷಯದಲ್ಲಿ ತ್ವರಿತವಾಗಿ ಕೆಲಸ ಮಾಡಬೇಕು. ಈ ವಿಚಾರವಾಗಿ ರಾಜಕೀಯ ಪಕ್ಷಗಳಲ್ಲಿ ಒಮ್ಮತವಿದೆ. ಮಂಗಳೂರು ಈಗಾಗಲೇ ಅಂತರರಾಷ್ಟ್ರೀಯವಾಗಿ ಪ್ರಸಿದ್ಧಿ ಪಡೆದಿರುವ ಬ್ರ್ಯಾಂಡ್ ಆಗಿದೆ. ಜಿಲ್ಲೆಯ ಹೆಸರನ್ನು ಮಂಗಳೂರಿನೊಂದಿಗೆ ಗುರುತಿಸುವುದು ನಮ್ಮ ಗುರುತನ್ನು ಬಲಪಡಿಸುತ್ತದೆ. ಅಭಿವೃದ್ಧಿಯನ್ನು ವೇಗಗೊಳಿಸುತ್ತದೆ” ಪ್ರತಿಪಾದಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಪಾಕ್ಅನ್ನು ಖಂಡಿಸದ ‘ಕ್ವಾಡ್’ ಹೇಳಿಕೆಗೆ ಭಾರತ ಸಹಿ; ಮತ್ತೆ ತಲೆ ಬಾಗಿತಾ ಮೋದಿ ಸರ್ಕಾರ
“ಹಲವಾರು ಕೈಗಾರಿಕೋದ್ಯಮಿಗಳು, ಉದ್ಯಮಿಗಳು ಹಾಗೂ ನಿವಾಸಿಗಳು ಕೂಡ ಈ ಪ್ರತಿಪಾದನೆಯನ್ನು ಬೆಂಬಲಿಸಿದ್ದಾರೆ. ಇದು ಜಿಲ್ಲೆಯ ಆರ್ಥಿಕ ಮತ್ತು ಸಾಂಸ್ಕೃತಿಕ ಸ್ಥಾನಮಾನವನ್ನು ಪ್ರತಿಬಿಂಬಿಸಲು ಹೆಸರು ಬದಲಾವಣೆಯ ಅಗತ್ಯವಿದೆ” ಎಂದು ಅವರು ವಾದಿಸಿದ್ದಾರೆ.
ಮಂಗಳೂರು ದಕ್ಷಿಣದ ಬಿಜೆಪಿ ಶಾಸಕ ಡಿ ವೇದವ್ಯಾಸ್ ಕಾಮತ್, “ದಕ್ಷಿಣ ಕನ್ನಡ ಎಂಬ ಹೆಸರು ಭೂಮಿಯೊಂದಿಗೆ ಯಾವುದೇ ಐತಿಹಾಸಿಕ ಅಥವಾ ಸಾಂಸ್ಕೃತಿಕ ಸಂಬಂಧವನ್ನು ಹೊಂದಿಲ್ಲ. ಪೋರ್ಚುಗೀಸ್ ಮತ್ತು ಬ್ರಿಟಿಷ್ ಆಳ್ವಿಕೆಯಲ್ಲಿ, ತುಳುನಾಡು ಪ್ರದೇಶವನ್ನು ದಕ್ಷಿಣ ಕೆನರಾ ಎಂದು ಕರೆಯಲಾಗುತ್ತಿತ್ತು. ಸ್ವಾತಂತ್ರ್ಯದ ನಂತರ, ರಾಜ್ಯ ಪುನರ್ವಿಂಗಡಣೆ ಸಮಯದಲ್ಲಿ, ಹೆಸರನ್ನು ದಕ್ಷಿಣ ಕನ್ನಡ ಎಂದು ಬದಲಿಸಲಾಯಿತು. ಆದರೆ, ಇದು ಐತಿಹಾಸಿಕವಾಗಿ, ಈ ಪ್ರದೇಶವನ್ನು ಪ್ರತಿನಿಧಿಸುವುದಿಲ್ಲ” ಎಂದಿದ್ದಾರೆ.