ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬೀರಮಲೆ ಬೆಟ್ಟಕ್ಕೆ ಬಂದಿದ್ದ ಅಪ್ರಾಪ್ತ ಬಾಲಕಿ ಮತ್ತು ಬಾಲಕನ ವಿರುದ್ಧ ನೈತಿಕ ಪೊಲೀಸ್ ಗಿರಿ ಮಾಡಿದ್ದ ಆರೋಪದಲ್ಲಿ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ಸಂಘಪರಿವಾರದ ಕಾರ್ಯಕರ್ತರಾದ ಕಡಬದ ಕುಡ್ಮಾರ್ನ ಪುರುಷೋತ್ತಮ್ (43) ಮತ್ತು ಪುತ್ತೂರು ಆರ್ಯಾಪು ಗ್ರಾಮದ ರಾಮಚಂದ್ರ (38) ಎಂದು ಗುರುತಿಸಲಾಗಿದೆ. ಬಾಲಕನ ತಂದೆ ನೀಡಿದ ದೂರಿನನ್ವಯ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್, “ಘಟನೆ ಜುಲೈ 5, 2025 ರಂದು ಮಧ್ಯಾಹ್ನ ನಡೆದಿದೆ. ದೂರುದಾರರ ಅಪ್ರಾಪ್ತ ಮಗ ಮತ್ತು ಆತನ ಪರಿಚಯದ ಬಾಲಕಿ ಪುತ್ತೂರು ಕಸ್ಬಾ ಗ್ರಾಮದ ಬೀರಮಲೆ ಬೆಟ್ಟದಲ್ಲಿ ಕುಳಿತಿದ್ದಾಗ, ಇಬ್ಬರು ಅಪರಿಚಿತ ವ್ಯಕ್ತಿಗಳು ಅವರನ್ನು ಅಕ್ರಮವಾಗಿ ತಡೆದು, ಅಶ್ಲೀಲ ಪದಗಳಿಂದ ನಿಂದಿಸಿ, ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಆರೋಪಿಗಳು, ಬಾಲಕ ಬೇರೆ ಧರ್ಮಕ್ಕೆ ಸೇರಿದವನು ಎಂದು ನಿಂದಿಸಿ, ಸಾರ್ವಜನಿಕರನ್ನು ಕರೆದು ಅವಮಾನಿಸಿದ್ದಾರೆ ಮತ್ತು ವೀಡಿಯೊ ರೆಕಾರ್ಡ್ ಮಾಡಿ, ಸೋಷಿಯಲ್ ಮೀಡಿಯಾಗಳಲ್ಲಿ ಹರಿಯಬಿಟ್ಟಿದ್ದಾರೆ” ಎಂದು ಮಾಹಿತಿ ನೀಡಿದ್ದಾರೆ.

ಬಂಧಿತ ವ್ಯಕ್ತಿಗಳು ನಂತರ ವೀಡಿಯೊವನ್ನು ವಾಟ್ಸಾಪ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು, ವೀಡಿಯೊದಲ್ಲಿ ಬಾಲಕನನ್ನು ಬೇರೆ ಧರ್ಮಕ್ಕೆ ಸೇರಿದವನು ಎಂದು ಗುರುತಿಸಿದ್ದಾರೆ. ಈ ಕೃತ್ಯವು ಕೋಮು ಸೌಹಾರ್ದತೆಗೆ ಭಂಗ ತರಲು ಮತ್ತು ಧರ್ಮಗಳ ನಡುವೆ ದ್ವೇಷವನ್ನು ಪ್ರಚೋದಿಸುವ ಪ್ರಯತ್ನವಾಗಿದೆ. ಅಪ್ರಾಪ್ತ ಬಾಲಕ-ಬಾಲಕಿ ಇಬ್ಬರು ಕೂಡ ಒಂದೇ ಧರ್ಮಕ್ಕೆ ಸೇರಿದವರು. ಬಾಲಕನ ತಂದೆಯ ದೂರಿನ ಆಧಾರದ ಮೇಲೆ, ಪುತ್ತೂರು ನಗರ ಪೊಲೀಸರು ಎಫ್ಐಆರ್ ಸಂಖ್ಯೆ 54/2025 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಿಎನ್ಎಸ್ 2023 ರ (ಕಿರುಕುಳ, ಬೆದರಿಕೆ ಮತ್ತು ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ವಿಭಾಗಗಳಿಗೆ ಸಂಬಂಧಿಸಿದೆ) ಸೆಕ್ಷನ್ಗಳನ್ನು ಅನ್ವಯಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಆರೋಪಿಗಳನ್ನು ಪ್ರಸ್ತುತ ವಿಚಾರಣೆ ನಡೆಸಲಾಗುತ್ತಿದೆ ಮತ್ತು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ತಿಳಿಸಿದ್ದಾರೆ.