'ತುರ್ತು ನಿರ್ಗಮನ ತಜ್ಞ' ಎಂದು ಬಿರುದಾಂಕಿತನಾದ ಬಿಜೆಪಿ ಯುವ ಸಂಸದ ಅಮೆರಿಕದ ಟ್ರಂಪ್ ಮನೆಗೆ ಕರೆಯದೆ ಹೋಗಿ ಮುಖಭಂಗಕ್ಕೊಳಗಾಗಿರುವ ಘಟನೆ ನಡೆದಿದೆ. ಇದು ರಾಜಕೀಯ ವಿವಾದವಾಗಿದೆ, ಭಾರತದ ಮಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕುತ್ತಿದೆ.
ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಒಬ್ಬ ಯುವ ಸಂಸದ ಶಿಷ್ಟಾಚಾರವನ್ನು ಉಲ್ಲಂಘಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಫ್ಲೋರಿಡಾದ ಖಾಸಗಿ ನಿವಾಸ—ಮಾರ್-ಎ-ಲಾಗೊಗೆ ತೆರಳಿ ಅವರನ್ನು ಖಾಸಗಿಯಾಗಿ ಭೇಟಿಯಾಗಲು ಹೋಗಿ ತೀವ್ರ ಮುಜುಗರಕ್ಕೆ ಒಳಗಾಗಿರುವ ಘಟನೆ ನಡೆದಿದ್ದು, ಇದು ರಾಜಕೀಯ ವಿವಾದಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ಪಕ್ಷವು ಈ ಘಟನೆಯನ್ನು ‘ಭಾರತದ ಸಾಂಸ್ಥಿಕ ಸಮಗ್ರತೆ ಮತ್ತು ರಾಜತಾಂತ್ರಿಕ ನಿಲುವಿಗೆ ಅವಮಾನ’ವೆಂದು ಖಂಡಿಸಿದ್ದು, ಈ ವಿಷಯವು ಭಾರತದ ರಾಜಕೀಯ ಮತ್ತು ರಾಜತಾಂತ್ರಿಕ ವಲಯದಲ್ಲಿ ತೀವ್ರ ಚರ್ಚೆಗೆ ಗುರಿಯಾಗಿದೆ.
ಘಟನೆಯ ಹಿನ್ನೆಲೆ
ಆಪರೇಷನ್ ಸಿಂಧೂರ್ನ ನಂತರ ಭಾರತದ ರಾಜತಾಂತ್ರಿಕ ತಂತ್ರಗಾರಿಕೆಯ ಭಾಗವಾಗಿ, ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ಒಂದು ಸರ್ವಪಕ್ಷೀಯ ಸಂಸದೀಯ ನಿಯೋಗವು 2025ರ ಜೂನ್ನಲ್ಲಿ ಅಮೆರಿಕಕ್ಕೆ ಭೇಟಿ ನೀಡಿತ್ತು. ಈ ಭೇಟಿಯ ಉದ್ದೇಶವು ಪಾಕಿಸ್ತಾನದಿಂದ ಒಡ್ಡಲಾದ ಗಡಿಯಾಚೆಗಿನ ಭಯೋತ್ಪಾದನೆಯ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯಕ್ಕೆ ಮಾಹಿತಿ ನೀಡುವುದು ಮತ್ತು ಭಾರತದ ಕಟ್ಟುನಿಟ್ಟಾದ ಪ್ರತಿಕ್ರಿಯೆಯನ್ನು(ಆಪರೇಷನ್ ಸಿಂಧೂರ್) ವಿವರಿಸುವುದು ಆಗಿತ್ತು.
2025ರ ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪೆಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಪ್ರವಾಸಿಗರು ಮೃತಪಟ್ಟಿದ್ದರು. ಈ ದಾಳಿಗೆ ಪ್ರತಿಕ್ರಿಯೆಯಾಗಿ, ಭಾರತವು ಮೇ 7ರಂದು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ನಿಖರವಾದ ದಾಳಿಗಳನ್ನು ನಡೆಸಿತು. ಇದನ್ನು ‘ಆಪರೇಷನ್ ಸಿಂಧೂರ್’ ಎಂದು ಕರೆಯಲಾಯಿತು. ಈ ಕಾರ್ಯಾಚರಣೆಯ ನಂತರ, ಭಾರತವು ತನ್ನ ರಾಜತಾಂತ್ರಿಕ ನಿಲುವನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ವಿವರಿಸಲು ಏಳು ಸರ್ವಪಕ್ಷೀಯ ನಿಯೋಗಗಳನ್ನು ವಿವಿಧ ರಾಷ್ಟ್ರಗಳಿಗೆ ಕಳುಹಿಸಿತು.
ಗಯಾನಾ, ಪನಾಮ, ಕೊಲಂಬಿಯಾ ಮತ್ತು ಬ್ರೆಜಿಲ್ ಸೇರಿದಂತೆ ನಿಯೋಗ ಭೇಟಿ ನೀಡಿದ ದೇಶಗಳ ದೀರ್ಘ ಪಟ್ಟಿಯಲ್ಲಿ ಅಮೆರಿಕ ಭೇಟಿಯೂ ಒಂದು.
ಶಶಿ ತರೂರ್ ನೇತೃತ್ವದ ನಿಯೋಗವು ಅಮೆರಿಕಕ್ಕೆ ಭೇಟಿ ನೀಡಿತು. ಇದರಲ್ಲಿ ಬಿಜೆಪಿ, ಲೋಕ ಜನಶಕ್ತಿ ಪಕ್ಷ, ಜಾರ್ಖಂಡ್ ಮುಕ್ತಿ ಮೋರ್ಚಾ, ತೆಲುಗು ದೇಶಂ ಪಕ್ಷ, ಶಿವಸೇನೆ ಮತ್ತು ಭಾರತದ ಮಾಜಿ ರಾಯಭಾರಿ ತಾರಾಂಜಿತ್ ಸಿಂಗ್ ಸಂಧು ಸೇರಿದಂತೆ ವಿವಿಧ ಪಕ್ಷಗಳ ಸಂಸದರು ಭಾಗವಹಿಸಿದ್ದರು.
ವಿವಾದದ ಕೇಂದ್ರಬಿಂದು
ಈ ನಿಯೋಗದ ಭೇಟಿಯ ಸಂದರ್ಭದಲ್ಲಿ, ಬಿಜೆಪಿಯ ಯುವ ಸಂಸದರೊಬ್ಬರು, ನಿಯೋಗದ ಅಧಿಕೃತ ಕಾರ್ಯಕ್ರಮದಿಂದ ಬೇರ್ಪಟ್ಟು, ಡೊನಾಲ್ಡ್ ಟ್ರಂಪ್ ಅವರನ್ನು ಖಾಸಗಿಯಾಗಿ ಭೇಟಿಯಾಗಲು ಪ್ರಯತ್ನಿಸಿದರು ಎಂಬ ವದಂತಿಗಳು ಹರಡಿದವು. X ತಾಣದಲ್ಲಿ ಹಲವಾರು ಬಳಕೆದಾರರು ಈ ಸಂಸದ ತಮ್ಮನ್ನು ‘ದೇಶದ ಪ್ರಧಾನಿಗಳಿಗೆ ಹತ್ತಿರದ ವ್ಯಕ್ತಿ’ ಎಂದು ಬಿಂಬಿಸಿಕೊಂಡು, ಟ್ರಂಪ್ ಅವರ ಖಾಸಗಿ ಎಸ್ಟೇಟ್ಗೆ ತೆರಳಿದ್ದರೆಂದು ಆರೋಪಿಸಲಾಗಿದೆ. ಆದರೆ, ಟ್ರಂಪ್ ಅವರು ಈ ಭೇಟಿಯ ಸಂದರ್ಭದಲ್ಲಿ ಸಂಸದರನ್ನು ಅವಮಾನಿಸಿರುವುದಾಗಿ ತಿಳಿದುಬಂದಿದೆ. ಈ ಘಟನೆಯು ದೆಹಲಿಯಲ್ಲಿ ಗಮನ ಸೆಳೆದಿದ್ದು, ಬಿಜೆಪಿ ಸಂಸದನ್ನು ಟ್ರಂಪ್ ಮುಜುಗರಕ್ಕೆ ಈಡುಮಾಡಿರುವುದಾಗಿ X ಪೋಸ್ಟ್ಗಳಲ್ಲಿ ಉಲ್ಲೇಖಿಸಲಾಗಿದೆ.
ವಿರೋಧ ಪಕ್ಷದ ಹಲವು ನಾಯಕರು ಸಂಸದರ ಅಪಕ್ವ ವರ್ತನೆಯನ್ನು ಪ್ರಶ್ನಿಸಿದ್ದಾರೆ. ಈ ಸಂಸದರು ತಮ್ಮ ಒಕ್ಕೂಟದ ಸಹ ಸದಸ್ಯ ಮಿಲಿಂದ್ ದೇವುರಾ ಟ್ರಂಪ್ ಜೂನಿಯರ್ ಅವರನ್ನು ಭೇಟಿಯಾದ ನಂತರ ಈ ಭೇಟಿಯನ್ನು ಆಯೋಜಿಸಿದ್ದಾರೆಂದು ಆರೋಪಿಸಲಾಗಿದ್ದು, ಇದರಿಂದ ಅವರು ಎಲ್ಲ ಸ್ಥಾಪಿತ ರಾಜತಾಂತ್ರಿಕ ಪದ್ಧತಿಗಳನ್ನು ಉಲ್ಲಂಘಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಇದು ‘ಭಾರತದ ಸಾಂಸ್ಥಿಕ ಸಮಗ್ರತೆ ಮತ್ತು ರಾಜತಾಂತ್ರಿಕ ನಿಲುವಿಗೆ ಅವಮಾನ’ವಾಗಿದೆ ಎಂದು ವರ್ಣಿಸಿದೆ.
If this news report of the BJP MP’s immature approach is accurate, it is nothing short of disgraceful.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) July 7, 2025
Serious questions must be answered:
•How did a sitting MP bypass all established diplomatic protocols to meet a former head of state?
•Was the Ministry of External Affairs… pic.twitter.com/eOwJ6NAeTW
ಕರ್ನಾಟಕದ ಮಾಹಿತಿ ತಂತ್ರಜ್ಞಾನ/ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ‘ಸುದ್ದಿ ವರದಿ’ಯನ್ನು ಉಲ್ಲೇಖಿಸಿ, ತಮ್ಮ X ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, “ಬಿಜೆಪಿ ಸಂಸದರ ಅಪ್ರಬುದ್ಧ ವಿಧಾನದ ಈ ಸುದ್ದಿ ವರದಿ ನಿಖರವಾಗಿದ್ದರೆ, ಅದು ನಾಚಿಕೆಗೇಡಿನ ಸಂಗತಿ. ಗಂಭೀರ ಪ್ರಶ್ನೆಗಳಿಗೆ ಉತ್ತರಿಸಬೇಕು. ಈ ಶಿಷ್ಟಾಚಾರ ಉಲ್ಲಂಘನೆಯ ವಿರುದ್ಧ ಕೇಂದ್ರ ಸರ್ಕಾರವು ಯಾವ ಕ್ರಮ ಕೈಗೊಂಡಿದೆ. ಈ ಘಟನೆಯಿಂದ ಭಾರತದ ರಾಜತಾಂತ್ರಿಕ ಘನತೆಗೆ ಧಕ್ಕೆಯಾಗಿದೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣುತ್ತಿದೆ. ಜತೆಗೆ, ಈ ಘಟನೆಯು ಶಶಿ ತರೂರ್ರ ನಿಯೋಗದ ರಾಜತಾಂತ್ರಿಕ ಉದ್ದೇಶವನ್ನು ಮಂಗಮಾಡಿದೆ” ಎಂದು ಪ್ರಿಯಾಂಕ್ ಖರ್ಗೆಯವರು ಕಾಲೆಳೆದಿದ್ದಾರೆ.
“ಹಾಲಿ ಸಂಸದರು ಮಾಜಿ ರಾಷ್ಟ್ರದ ಮುಖ್ಯಸ್ಥರನ್ನು ಭೇಟಿ ಮಾಡಲು ಎಲ್ಲ ಸ್ಥಾಪಿತ ರಾಜತಾಂತ್ರಿಕ ಶಿಷ್ಟಾಚಾರಗಳನ್ನು ಹೇಗೆ ತಪ್ಪಿಸಿದರು? ಯಾವುದೇ ಹಂತದಲ್ಲಿ ವಿದೇಶಾಂಗ ಸಚಿವಾಲಯಕ್ಕೆ(MEA) ಮಾಹಿತಿ ನೀಡಲಾಗಿದೆಯೇ ಅಥವಾ ಸಮಾಲೋಚಿಸಲಾಗಿದೆಯೇ? ಅಧಿಕೃತ ನಿಯೋಗದ ಭಾಗವಾಗಿದ್ದಾಗ, ಈ ಹಠಾತ್ ಪ್ರವೃತ್ತಿ ಮತ್ತು ಅಪ್ರಬುದ್ಧ ನಡವಳಿಕೆಯನ್ನು ಸಮರ್ಥಿಸಿದ್ದು ಯಾವುದು? ಈ ಯುವ ಬಿಜೆಪಿ ಸಂಸದ ಯಾರು ಮತ್ತು ಈ ಸಭ್ಯತೆಯ ಉಲ್ಲಂಘನೆಯನ್ನು ಪರಿಹರಿಸಲು ಸರ್ಕಾರ ಯಾವ ಕ್ರಮ ಕೈಗೊಂಡಿದೆ?” ಎಂದು ಪ್ರಿಯಾಂಕ್ ಖರ್ಗೆಯವರು ಸರಣಿ ಪ್ರಶ್ನೆಗಳನ್ನು ಪೋಸ್ಟ್ ಮಾಡಿದ್ದಾರೆ.
“ಇದು ತೀವ್ರ ವಿಪರ್ಯಾಸ, ಕೇಂದ್ರವು ಯಾವುದೇ ವಿವರಣೆಯಿಲ್ಲದೆ ರಾಜ್ಯ ನೇತೃತ್ವದ ಹೂಡಿಕೆ ನಿಯೋಗಗಳಿಗೆ ಅನುಮತಿಯನ್ನು ನಿಯಮಿತವಾಗಿ ನಿರಾಕರಿಸುತ್ತಿರುವಾಗ, ಬಿಜೆಪಿ ಸಂಸದರು ಫೋಟೋ-ಆಪ್ಗಳಿಗಾಗಿ ಶಿಷ್ಟಾಚಾರವನ್ನು ಉಲ್ಲಂಘಿಸುವ ಸ್ವಾತಂತ್ರ್ಯವನ್ನು ಹೊಂದಿರುವಂತೆ ತೋರುತ್ತದೆ. ಪ್ರಸ್ತುತ ಸಂದರ್ಭದಲ್ಲಿ ಈ ಘಟನೆ ಇನ್ನಷ್ಟು ಆತಂಕಕಾರಿಯಾಗಿದೆ. ಅಮೆರಿಕ ಅಧ್ಯಕ್ಷರು ಪಾಕಿಸ್ತಾನದೊಂದಿಗೆ ಬಹಿರಂಗವಾಗಿ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ ಮತ್ತು ʼಆಪರೇಷನ್ ಸಿಂಧೂರ್ʼನಲ್ಲಿ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿದ್ದಕ್ಕಾಗಿ ಕ್ರೆಡಿಟ್ ತೆಗೆದುಕೊಳ್ಳುತ್ತಿದ್ದಾರೆ. ಇದು ಕೇವಲ ನಿಷ್ಪ್ರಯೋಜಕ ರಾಜಕೀಯ ಗಾಸಿಪ್ ಅಲ್ಲ, ಇದರಿಂದ ಭಾರತದ ಸಾಂಸ್ಥಿಕ ಸಮಗ್ರತೆ ಮತ್ತು ರಾಜತಾಂತ್ರಿಕ ಸ್ಥಾನಮಾನಕ್ಕೆ ಗಂಭೀರ ಅವಮಾನವಾಗಿದೆ. ಇದಕ್ಕೆ ಮೌನಕ್ಕಿಂತ ಹೆಚ್ಚಿನದು ಬೇಕು. ಇದಕ್ಕೆ ಜವಾಬ್ದಾರಿಯುತ ಉತ್ತರ ಬೇಕು” ಎಂದು ಪ್ರಿಯಾಂಕ್ ಖರ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
”ಬಿಜೆಪಿ ಸಂಸದರು ಟ್ರಂಪ್ ಭೇಟಿಯ ಗಾಳಿಸುದ್ದಿಯನ್ನು ನಿರಾಕರಿಸುವುದನ್ನು ಕಾಯುತ್ತಿದ್ದೇವೆ, ಇದನ್ನು ಸಂಪೂರ್ಣ ಕಾಲ್ಪನಿಕವೆಂದು ಕರೆದು, ಶತ್ರುಗಳಿಂದ ಅನಗತ್ಯ ರಾಜಕೀಯ ನಾಟಕ ಆಡಲಾಗುತ್ತಿದೆ ಎಂದು ಹೇಳಿ, ತಾನು ಮಾರ್-ಎ-ಲಾಗೊಗೆ ಹೋಗಿಯೇ ಇಲ್ಲವೆಂದು ಮಾನನಷ್ಟಕ್ಕಾಗಿ ಮೊಕದ್ದಮೆ ಹೂಡುವುದಾಗಿ ಬೆದರಿಕೆ ಹಾಕುವುದನ್ನು ಕಾಯುತ್ತಿದ್ದೇವೆ. ಆದರೆ, ಮಾಧ್ಯಮ ಸಂಸ್ಥೆಗೆ ಗಟ್ಟಿಯಾದ ಪುರಾವೆ ಇದೆ ಎಂಬುದು ಖಚಿತವಾಗಿದೆ. ಅವರು ಆತನ ಬೋರ್ಡಿಂಗ್ ಪಾಸ್ ಅಥವಾ ಫೋಟೋಗಳನ್ನು ಬಿಡುಗಡೆ ಮಾಡಬಹುದು” ಎಂದು ಅಪೂರ್ವ ನಾಗ್ಪಾಲ್ ಎಂಬ ಎಕ್ಸ್ ಬಳಕೆದಾರರು ಬರೆದಿದ್ದಾರೆ.
”ಈ ಬಿಜೆಪಿ ಸಂಸದರು ಅಮೆರಿಕದಲ್ಲಿ ಟ್ರಂಪ್ ಅವರನ್ನು ಭೇಟಿಯಾಗಿ, ಆತನಿಂದ ತೀವ್ರ ತರಾಟೆಗೆ ಒಳಗಾಗಿದ್ದಾರೆ. ತುಂಬಾ ಮುಜುಗರಕ್ಕೊಳಗಾಗಿ ಯಾರಿಗೂ ತಿಳಿಸದಿರಲು ನಿರ್ಧರಿಸಿದ್ದಾರೆ. ಅವರು ಯಾರೆಂದು ಊಹಿಸಿ? ‘ತುರ್ತು ನಿರ್ಗಮನ ತಜ್ಞ'(ಇಂಡಿಗೋ ವಿಮಾನದ ತುರ್ತು ನಿರ್ಗಮನ ದ್ವಾರವನ್ನು ತೆಗೆದಿದ್ದವರು) ಎಂಬ ಸುಳಿವನ್ನು ಗಮನಿಸಿ” ಎಂದು ಮತ್ತೊಬ್ಬ ಬಳಕೆದಾರ ಬರೆದಿದ್ದಾರೆ.
ಯಾರನ್ನೂ ಹೆಸರಿಸದೆ ಅದು ‘ಯುವ ಬಿಜೆಪಿ ಸಂಸತ್ ಸದಸ್ಯ’ ಎಂದು ಸುದ್ದಿ ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ತರೂರ್ ಅವರನ್ನು ಹೊರತುಪಡಿಸಿ, ಅಮೆರಿಕಕ್ಕೆ ಹೋಗಿದ್ದ ನಿಯೋಗದಲ್ಲಿ ಮೂವರು ಬಿಜೆಪಿ ಸಂಸದರು ಇದ್ದರು. ಆ ಪೈಕಿ ಭುವನೇಶ್ವರ್ ಕಲಿತಾ(ಅಸ್ಸಾಂನ ರಾಜ್ಯಸಭಾ ಸದಸ್ಯ), ಶಶಾಂಕ್ ಮಣಿ ತ್ರಿಪಾಠಿ(ದಿಯೋರಿಯಾ ಸಂಸದ) ಮತ್ತು ತೇಜಸ್ವಿ ಸೂರ್ಯ(ಬೆಂಗಳೂರು ದಕ್ಷಿಣ ಸಂಸದ) ಸೇರಿದಂತೆ ಇತರರು ಇದ್ದರು. ಕಲಿತಾ ಅವರಿಗೆ 74 ವರ್ಷ ವಯಸ್ಸಾಗಿದ್ದು, ತ್ರಿಪಾಠಿ 55 ವರ್ಷದವರು ಮತ್ತು 34 ವರ್ಷದ ಸೂರ್ಯ ಇದ್ದರು ಎಂದು ತಿಳಿಸಿದೆ.
ಈ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿಯಿಂದ ಈವರೆಗೆ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಆದರೆ, X ತಾಣದ ಕೆಲವು ಪೋಸ್ಟ್ಗಳು ಈ ಘಟನೆಯ ಬಗ್ಗೆ, ‘ಸಂಸದರು ಭಾರತಕ್ಕೆ ಮರಳಿದ ನಂತರ ಬಿಜೆಪಿ ಉನ್ನತ ನಾಯಕತ್ವದಿಂದ ಮೂವರು ಹಿರಿಯ ನಾಯಕರ ಸಮ್ಮುಖದಲ್ಲಿ ಯುವ ಸಂಸದರಿಗೆ ತೀವ್ರ ತರಾಟೆಯಾಗಿದೆ’ ಎಂಬುದನ್ನು ಸೂಚಿಸಿವೆ. ಬಿಜೆಪಿಯ ಮೌನವು ಈ ವಿಷಯದ ಸೂಕ್ಷ್ಮತೆಯನ್ನು ಸೂಚಿಸುತ್ತದೆ. ಆದರೆ ಇದು ರಾಜಕೀಯ ವಿರೋಧಿಗಳಿಂದ ಟೀಕೆಗೆ ಕಾರಣವಾಗಿದೆ. ಕಾಂಗ್ರೆಸ್ನ ಆರೋಪಗಳಿಗೆ ಪ್ರತಿಕ್ರಿಯೆಯಾಗಿ, ಬಿಜೆಪಿ ಈ ಘಟನೆಯನ್ನು ರಾಜಕೀಯಗೊಳಿಸಲಾಗುತ್ತಿದೆ ಎಂದು ವಾದಿಸಬಹುದು, ಆದರೆ ಈವರೆಗೆ ಯಾವುದೇ ಸ್ಪಷ್ಟೀಕರಣ ನೀಡಿಲ್ಲ.
ರಾಜತಾಂತ್ರಿಕ ಭೇಟಿಗಳಲ್ಲಿ ಶಿಷ್ಟಾಚಾರವು ಅತ್ಯಂತ ಮುಖ್ಯವಾಗಿದೆ. ಒಂದು ದೇಶದ ಸಂಸದೀಯ ನಿಯೋಗವು ಇನ್ನೊಂದು ದೇಶಕ್ಕೆ ಭೇಟಿಯಾಗುವಾಗ, ಎಲ್ಲ ಕಾರ್ಯಕ್ರಮಗಳು ಎಂಬೇಡ್ಡಿನಂತೆ, ಯಾವುದೇ ಪ್ಲ್ಯಾನ್ ಇಲ್ಲದೆ, ಎರಡು, ನಿಖರವಾಗಿರಬೇಕು. ಈ ಘಟನೆಯಲ್ಲಿ, ಸಂಸದರ ಖಾಸಗಿ ಪ್ರಯತ್ನವು ಶಿಷ್ಟಾಚಾರದ ಉಲ್ಲಂಘನೆಯಾಗಿದ್ದು, ಭಾರತದ ರಾಜತಾಂತ್ರಿಕ ಘನತೆಗೆ ಧಕ್ಕೆಯನ್ನುಂಟು ಮಾಡಿದೆ. ಇಂತಹ ಘಟನೆಗಳು ದೇಶದ ಅಂತಾರಾಷ್ಟ್ರೀಯ ಚಿತ್ರಣಕ್ಕೆ ಹಾನಿಕಾರಕವಾಗಿದ್ದು, ರಾಜತಾಂತ್ರಿಕ ಸಂಬಂಧಗಳ ಮೇಲೆ ದೀರ್ಘಾವಧಿಯ ಪರಿಣಾಮ ಬೀರಬಹುದು.
ಶಶಿ ತರೂರ್, ಒಬ್ಬ ಮಾಜಿ ರಾಜತಾಂತ್ರಿಕ ಮತ್ತು ಸಂಸದೀಯ ವಿದೇಶಾಂಗ ವ್ಯವಹಾರಗಳ ಸಮಿತಿಯ ಅಧ್ಯಕ್ಷರಾಗಿದ್ದು, ಈ ನಿಯೋಗವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. ಅವರು ಅಮೆರಿಕದ ಸೆನೆಟ್ ಸದಸ್ಯರು, ಮಾಧ್ಯಮಗಳು ಮತ್ತು ರಾಜಕೀಯ ರಾಯಭಾರಿಗಳೊಂದಿಗೆ ಸಂವಾದ ನಡೆಸಿದ್ದರು. ಆದರೆ, ಈ ಶಿಷ್ಟಾಚಾರ ಉಲ್ಲಂಘನೆಯ ವಿವಾದವು, ತರೂರ್ ನೇತೃತ್ವದ ನಿಯೋಗದ ಯಶಸ್ಸು ಹಾಗೂ ರಾಜತಾಂತ್ರಿಕ ಉದ್ದೇಶವನ್ನು ಹಾಳುಮಾಡಿದೆ.
ಇದನ್ನೂ ಓದಿದ್ದೀರಾ? ಡಾ. ಬಿ.ಆರ್. ಅಂಬೇಡ್ಕರ್ ಪೀಪಲ್ ಎಜುಕೇಷನ್ ಸೊಸೈಟಿ ಸ್ಥಾಪಿಸಿದ್ದೇಕೆ?
ಬಿಜೆಪಿ ಸಂಸದರಿಂದ ಶಿಷ್ಟಾಚಾರ ಉಲ್ಲಂಘನೆಯ ಈ ಘಟನೆಯು ಭಾರತದ ರಾಜತಾಂತ್ರಿಕ ಶಿಷ್ಟಾಚಾರದ ಮಹತ್ವವನ್ನು ಒತ್ತಿಹೇಳುತ್ತದೆ. ಕಾಂಗ್ರೆಸ್ನ ಖಂಡನೆಯು ಈ ವಿಷಯದ ಸೂಕ್ಷ್ಮತೆಯನ್ನು ಎತ್ತಿತೋರಿಸಿದೆ. ಆದರೆ ಬಿಜೆಪಿಯ ಮೌನವು ರಾಜಕೀಯ ತಂತ್ರವಾಗಿರಬಹುದು. ಈ ಘಟನೆಯಿಂದ ಭಾರತ-ಅಮೆರಿಕ ಸಂಬಂಧಗಳ ಮೇಲೆ ಯಾವುದೇ ತಕ್ಷಣದ ಪರಿಣಾಮ ಬೀರದಿದ್ದರೂ, ಇಂತಹ ಘಟನೆಗಳು ಭವಿಷ್ಯದಲ್ಲಿ ರಾಜತಾಂತ್ರಿಕ ಭೇಟಿಗಳ ಯೋಜನೆಯಲ್ಲಿ ಹೆಚ್ಚಿನ ಜಾಗರೂಕತೆಯ ಅಗತ್ಯವನ್ನು ಸೂಚಿಸುತ್ತವೆ.
ಡೈಪರ್ ಸೂರ್ಯ, ತುರ್ತು ನಿರ್ಗಮನ ತಜ್ಞ ಎಂಬೆಲ್ಲ ಹಲವು ರೀತಿಯ ಹೆಸರುಗಳಿಂದ ಬಿರುದಾಂಕಿತನಾದ ಬಿಜೆಪಿ ಯುವ ಸಂಸದ ಅಮೆರಿಕದ ಟ್ರಂಪ್ ಮನೆಗೆ ಕರೆಯದೆ ಹೋಗಿ ಮುಖಭಂಗಕ್ಕೊಳಗಾಗಿರುವ ಘಟನೆ ನಡೆದಿದೆ. ಟ್ರಂಪ್ ಒಬ್ಬ ದೊಡ್ಡ ತಿಕ್ಕಲು ಆಸಾಮಿ. ಅಂತಹವನನ್ನು ಇನ್ನೊಬ್ಬ ಆತುರಗೇಡಿ ಆಸಾಮಿ ಖಾಸಗಿಯಾಗಿ ಭೇಟಿ ಮಾಡಲು ಹೋಗಿ ಭಾರತದ ಮಾನವನ್ನು ಹರಾಜು ಹಾಕಿರುವುದಾಗಿ ಚರ್ಚೆಯಾಗುತ್ತಿದೆ.