ಶಿವಮೊಗ್ಗ ನಗರದ ಕೆ.ಆರ್. ಪುರಂ ಬಳಿ ಆಟೋ ಚಾಲಕರೊಬ್ಬರನ್ನು ಅಡ್ಡಗಟ್ಟಿ, ಲಕ್ಷಾಂತರ ರೂಪಾಯಿ ನಗದು ದರೋಡೆ ಮಾಡಿದ ಘಟನೆ ನಡೆದಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಶಿವಮೊಗ್ಗದ ವಿವಿದ ಆಟೋ ಸ್ಟ್ಯಾಂಡ್ನ ಚಾಲಕರು ಪ್ರತ್ಯೇಕವಾಗಿ ಮೂರು ಫಂಡ್ಗಳನ್ನು ಮಾಡಿಕೊಂಡಿದ್ದರು. ಪ್ರತಿ ಶನಿವಾರ ಈ ಫಂಡ್ಗಳಿಗೆ ಹಣ ಹಾಕಿ, ಅಗತ್ಯವಿರುವ ಆಟೋ ಚಾಲಕರಿಗೆ ನೀಡುವ ವ್ಯವಸ್ಥೆಯನ್ನು ಮಾಡಲಾಗಿತ್ತು.
ಅದರಂತೆ, ಜುಲೈ 5ರಂದು ಅಲ್ಲಾಬಕ್ಷ್ ಎಂಬುವರು ಮೂರು ಫಂಡ್ಗಳ ಚೀಟಿಗಳನ್ನು ಮುಗಿಸಿಕೊಂಡು, ಫಂಡ್ನಲ್ಲಿ ಉಳಿದ 2 ಲಕ್ಷ ರೂಪಾಯಿ ಹಣ ಮತ್ತು ಫಂಡ್ಗೆ ಸಂಬಂಧಿಸಿದ ಪುಸ್ತಕಗಳನ್ನು ಬ್ಯಾಗ್ನಲ್ಲಿಟ್ಟುಕೊಂಡು ತಮ್ಮ ಸಹೋದರನೊಂದಿಗೆ ಆಟೋದಲ್ಲಿ ಹೊರಟಿದ್ದರು.
ಈ ವೇಳೆ ಕೆ.ಆರ್. ಪುರಂ ಬಡಾವಣೆ ಪಕ್ಕದ ರಸ್ತೆಯಲ್ಲಿ ಚಲಿಸುತ್ತಿದ್ದಾಗ, ಏಕಾಏಕಿ ಎರಡು ಬೈಕ್ಗಳಲ್ಲಿ ಬಂದ ಐವರು ಕಳ್ಳರು ಆಟೋವನ್ನು ಅಡ್ಡಗಟ್ಟಿದ್ದಾರೆ. ನಂತರ, ಅಲ್ಲಾಬಕ್ಷ್ ಬ್ಯಾಗ್ನಲ್ಲಿದ್ದ ಹಣವನ್ನು ಕಸಿದುಕೊಂಡು, ಅವರ ಮೇಲೆ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
