- ಪೆರಿಫೆರಲ್ ರಿಂಗ್ ರಸ್ತೆ ಯೋಜನೆಗೆ 2007ರಲ್ಲಿ ಅಧಿಸೂಚನೆ ಹೊರಡಿಸಿದೆ
- ಯೋಜನೆ ಅನುಷ್ಠಾನವಾದರೆ ಜಮೀನುಗಳ ಬೆಲೆ ಐದು ಪಟ್ಟು ಹೆಚ್ಚಳ
ಬೆಂಗಳೂರು ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಪೆರಿಫೆರಲ್ ರಿಂಗ್ ರಸ್ತೆ ಅಗತ್ಯವಿದ್ದು, ಅದನ್ನು ಕೈಬಿಡುವ ಮಾತಿಲ್ಲ. ಆದರೆ, ಭೂಮಿ ಕಳೆದುಕೊಳ್ಳುವ ರೈತರಿಗೆ ನ್ಯಾಯ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ ಕೆ ಶಿವಕುಮಾರ್ ಭರವಸೆ ನೀಡಿದರು.
ಅರಮನೆ ರಸ್ತೆಯ ಜ್ಞಾನಭಾರತಿ ಸಭಾಂಗಣದಲ್ಲಿ ಪೆರಿಫೆರಲ್ ರಿಂಗ್ ರಸ್ತೆ ಯೋಜನೆ ರೈತರು ಮತ್ತು ಭೂ ಮಾಲೀಕರ ಜೊತೆ ಸಂವಾದ ಕಾರ್ಯಕ್ರಮ ನಡೆಸಿದ ಶಿವಕುಮಾರ್, ಯೋಜನೆಯಲ್ಲಿ ಭೂಮಿ ಕಳೆದುಕೊಂಡಿರುವವರ ಸಮಸ್ಯೆ ಆಲಿಸಿ, ಅವರ ಸಲಹೆ ಮತ್ತು ಅಭಿಪ್ರಾಯ ಪಡೆದರು.
ಈ ಸಂದರ್ಭದಲ್ಲಿ ಡಿ ಕೆ ಶಿವಕುಮಾರ್ ಮಾತನಾಡಿ, “ಜಮೀನು ಉಳಿಸಿಕೊಳ್ಳಬೇಕು, ಮನೆ ಕಟ್ಟಬೇಕು ಎಂಬುದು ಪ್ರತಿಯೊಬ್ಬರ ಕನಸು. ಇಂದಿನ ಸಭೆಯಲ್ಲಿ ನೀವು ಅನೇಕ ಉತ್ತಮ ಸಲಹೆಗಳನ್ನು ನೀಡಿದ್ದೀರಿ. ಕಾಲಮಿತಿಯಲ್ಲಿ ಯೋಜನೆ ಜಾರಿ, ಪರ್ಯಾಯ ಭೂಮಿ ಹಂಚಿಕೆ, ಸ್ವಾಧೀನ ಪಡಿಸಿಕೊಂಡಿರುವ ಭೂಮಿಗೆ ಎನ್ಒಸಿ ನೀಡಬೇಕು. ಬದಲಿ ನಿವೇಶನ ನೀಡುವ ಬಗ್ಗೆ ಸಲಹೆ ನೀಡಿದ್ದೀರಿ. ನಾನು ಸ್ವಾಧೀನ ಆಗಿರುವ ಭೂಮಿ ಎನ್ಒಸಿ ನೀಡಲು ಸಾಧ್ಯವಿಲ್ಲ. ಅದನ್ನು ನೇರವಾಗಿ ನಿಮಗೆ ಸ್ಪಷ್ಟಪಡಿಸುತ್ತೇನೆ ಎಂದರು.
“ಪಿಆರ್ಆರ್ ಯೋಜನೆ ನಿಲ್ಲಿಸಲು ಆಗುವುದಿಲ್ಲ. ಆದರೆ, ನಿಮ್ಮ ಹಿತ ಕಾಯುವಂತೆ, ನಿಮಗೆ ಹೆಚ್ಚಿನ ಅನುಕೂಲ ಆಗುವಂತೆ ಅಗತ್ಯ ಕ್ರಮ ಕೈಗೊಳ್ಳುತ್ತೇನೆ. ರಸ್ತೆಯೂ ಆಗಬೇಕು, ಭೂ ಮಾಲೀಕರಿಗೂ ನ್ಯಾಯ ಒದಗಿಸಬೇಕು ಎಂಬುದು ನನ್ನ ಉದ್ದೇಶ. ಕಾನೂನು ತಜ್ಞರ ಜೊತೆ ಚರ್ಚೆ ಮಾಡುತ್ತೇನೆ. ನಂತರ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ಆದಷ್ಟು ಬೇಗ ಈ ವಿಚಾರವಾಗಿ ತೀರ್ಮಾನ ಮಾಡಲಾಗುವುದು” ಎಂದು ಹೇಳಿದರು.
“ಪೆರಿಫೆರಲ್ ರಿಂಗ್ ರಸ್ತೆ ಯೋಜನೆಗೆ 2007ರಲ್ಲಿ ಅಧಿಸೂಚನೆ ಹೊರಡಿಸಿದೆ. ಆಗಲೇ ಈ ರಸ್ತೆ ನಿರ್ಮಾಣ ಆಗಿದ್ದರೆ ನಮಗೆ ಇಷ್ಟು ಹೊರೆ ಆಗುತ್ತಿರಲಿಲ್ಲ. ನ್ಯಾಯಾಲಯದಲ್ಲಿ ಈ ಯೋಜನೆ ವಿಚಾರಣೆ ಆಗಿ ಭೂಸ್ವಾಧೀನ ಪ್ರಕ್ರಿಯೆ ಮುಂದುವರಿಸಲು ಆದೇಶ ಬಂದಿದೆ. ಬಿಡಿಎಗೆ ಹೊಸ ಭೂಸ್ವಾಧೀನ ಕಾನೂನು ಅನ್ವಯ ಆಗುವುದಿಲ್ಲ. ಬಿಡಿಎ ಹಳೆ ಕಾನೂನಿನ ಪ್ರಕಾರ ಭೂಸ್ವಾಧೀನ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ನಲ್ಲಿ ಹೇಳಿದೆ” ಎಂದು ವಿವರಿಸಿದರು.
“ನಮ್ಮ ಸರ್ಕಾರ ಹೊಸ ಭೂಮಿಗೆ ಅಧಿಸೂಚನೆ ಹೊರಡಿಸುವ ಪರಿಸ್ಥಿತಿಯಲ್ಲಿ ಇಲ್ಲ. ನನ್ನ ಜಮೀನು ಕೂಡ ಭೂ ಸ್ವಾಧೀನ ಆಗುತ್ತಿದೆ. ಈ ಸಮಯದಲ್ಲಿ ನೋಟಿಫಿಕೇಶನ್ ಆಗಿರುವ ಜಮೀನುಗಳನ್ನು ಡಿನೋಟಿಫಿಕೇಶನ್ ಮಾಡಲು ಸಾಧ್ಯವಿಲ್ಲ. ಒಂದುವೇಳೆ ಮಾಡಿದರೆ ಕಾನೂನು ಸಮಸ್ಯೆ ಎದುರಿಸಬೇಕಾಗುತ್ತದೆ. ಈ ಯೋಜನೆಗೆ 25 ಸಾವಿರ ಕೋಟಿ ರೂ. ಅಗತ್ಯವಿದೆ. ಈ ಯೋಜನೆ ಅನುಷ್ಠಾನವಾದರೆ ಸುತ್ತಮುತ್ತಲ ಜಮೀನುಗಳ ಬೆಲೆ 5 ಪಟ್ಟು ಹೆಚ್ಚಾಗಲಿದೆ” ಎಂದು ತಿಳಿಸಿದರು.

ರೈತರು ಮತ್ತು ಭೂಮಾಲೀಕರ ಸಲಹೆಗಳು
- ಸುಪ್ರೀಂಕೋರ್ಟ್ ತೀರ್ಪು ಪ್ರಶ್ನಿಸಿ ಉನ್ನತ ಪೀಠಕ್ಕೆ ಮೇಲ್ಮನವಿ ಸಲ್ಲಿಸಲು ನಮ್ಮ ಬಳಿ ಹಣವಿಲ್ಲ. ನಮ್ಮ ಪರವಾಗಿ ಸರ್ಕಾರವೇ ನ್ಯಾಯಾಲಯದಲ್ಲಿ ಅರ್ಜಿ ಹಾಕಬೇಕು. ಇಲ್ಲದಿದ್ದರೆ 2013ರಲ್ಲಿ ಜಾರಿಗೆ ತಂದ ಕಾಯ್ದೆಯಂತೆ ಪರಿಹಾರ ನೀಡಿ.
- ಕಾನೂನು ಹೋರಾಟಕ್ಕೆ ಹೋದರೆ ಮತ್ತೆ ಕಾಲಹರಣ ಆಗುತ್ತದೆ. ಸರ್ಕಾರವೇ ಇನ್ನು ಐದು ಸಾವಿರ ಕೋಟಿ ಹೆಚ್ಚು ಹಣ ಹಾಕಿ ಭೂಮಿ ಕಳೆದುಕೊಳ್ಳುವವರಿಗೆ ಹೆಚ್ಚಿನ ಪರಿಹಾರ ನೀಡಬೇಕು.
- ಸುಪ್ರೀಂಕೋರ್ಟ್ ತೀರ್ಪು ರೈತರ ಹಿತಕ್ಕೆ ವಿರುದ್ಧವಾಗಿದ್ದು, ಸರ್ಕಾರ ಸುಗ್ರೀವಾಜ್ಞೆ ಮೂಲಕ ಇದನ್ನು ಪಕ್ಕಕ್ಕಿಟ್ಟು ರೈತರಿಗೆ 2013ರ ಕಾಯ್ದೆ ಅನ್ವಯ ಪರಿಹಾರ ಹಣ ನೀಡಬೇಕು.
- ಬಿಡಿಎ ಪರವಾಗಿ ಬಂದಿರುವ ತೀರ್ಪು ಬಿಡಿಎ vs ಸರ್ಕಾರದ ಪ್ರಕರಣವಾಗಿದ್ದು, ಯಾವುದೇ ರೈತರು ಈ ವಿಚಾರಣೆಯಲ್ಲಿ ಅರ್ಜಿದಾರರಾಗಿಲ್ಲ. ಹೀಗಾಗಿ ಈ ತೀರ್ಪು ಪಕ್ಕಕ್ಕೆ ಇಟ್ಟು ರೈತರಿಗೆ ನೆರವಾಗಬೇಕು.
- ಪೆರಿಪೆರಲ್ ರಿಂಗ್ ರಸ್ತೆಗೆ ನಮ್ಮ ಜಮೀನು ಸ್ವಾಧೀನ ಆಗಿದ್ದು, ಉಳಿದ 2-3 ಗುಂಟೆ ಜಮೀನು ಮಾತ್ರ ಉಳಿದಿದೆ. ಇದನ್ನು ಭೂ ಪರಿವರ್ತನೆ ಮಾಡಲು ಅರ್ಜಿ ಹಾಕಿದರೂ ಸಾಧ್ಯವಾಗುತ್ತಿಲ್ಲ. ನಮಗೆ ಹಳೆ ಪರಿಹಾರಕ್ಕಿಂತ ಅದೇ ಗ್ರಾಮದಲ್ಲಿ ಬದಲು ಜಮೀನು ಕೊಡಿಸಿ.
- ಈಗಿನ ಪರಿಸ್ಥಿತಿಯಲ್ಲಿ ಈ ಯೋಜನೆ ಅವಶ್ಯಕತೆ ಇದೆ. ಆದರೆ, ಈ ಯೋಜನೆಯಲ್ಲಿ ಪರಿಹಾರ ನೀಡುವುದರಲ್ಲಿ ರೈತರಿಗೆ ಅನ್ಯಾಯ ಆಗುತ್ತಿದೆ. ಈ ಬಗ್ಗೆ ಸರ್ಕಾರ ಉತ್ತಮ ರೀತಿಯಲ್ಲಿ ತೀರ್ಮಾನ ಮಾಡಬೇಕು.
ಈ ಸುದ್ದಿ ಓದಿದ್ದೀರಾ? ಎಸ್ಸಿಎಸ್ಪಿ, ಟಿಎಸ್ಪಿ ಅಡಿ ₹34,293 ಕೋಟಿ ಕ್ರಿಯಾ ಯೋಜನೆ ಅನುಮೋದನೆ
- ಯೋಜನೆಯಲ್ಲಿ ಜಮೀನು ಕಳೆದುಕೊಳ್ಳುವ ನಮಗೆ ಸುತ್ತಮುತ್ತಲ ಹಳ್ಳಿಗಳಲ್ಲಿರುವ ಸರ್ಕಾರಿ ಜಮೀನನ್ನು ಬದಲಿಯಾಗಿ ನೀಡಿ. ಆಗ ನಾವು ಅಲ್ಲೇ ವ್ಯವಸಾಯ ಮಾಡಿಕೊಂಡು ಹೋಗುತ್ತೇವೆ.
- ಕಳೆದ 15 ವರ್ಷಗಳಿಂದ ಮನೆ ನಿರ್ಮಿಸಬೇಕಾ ಬೇಡವಾ ಎಂಬ ಗೊಂದಲದಲ್ಲಿ ಇದ್ದೇವೆ. ನಮಗೆ ಬೇರೆ ಬದಲಿ ನಿವೇಶನ ನೀಡಬೇಕು.
- ಯಾವುದೇ ಯೋಜನೆ ನೋಟಿಫಿಕೇಶನ್ ಆದ ನಂತರ 5 ವರ್ಷಗಳಲ್ಲಿ ಯಾವುದೇ ಅಭಿವೃದ್ಧಿ ಆಗದಿದ್ದರೆ ಆ ನೋಟಿಫಿಕೇಶನ್ ಕೈಬಿಡಬೇಕು ಎಂಬ ಕಾನೂನು ಇದೆ. ಹೀಗಾಗಿ ನಮಗೆ ಎನ್ಒಸಿ ನೀಡಬೇಕು.
- ಯೋಜನೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ನಮಗೆ ಈ ತ್ರಿಶಂಕು ಸ್ಥಿತಿಯಿಂದ ಹೊರಗೆ ತಂದು ನಿರಾಳತೆ ನೀಡಬೇಕು.
- ಸರ್ಕಾರ ನೀಡುವ ಪುಡಿಗಾಸು ಪರಿಹಾರದಲ್ಲಿ ನಾವು ಬೇರೆ ಕಡೆ ಜಮೀನು ಖರೀದಿಸಲು ಆಗುವುದಿಲ್ಲ. ಹೀಗಾಗಿ ನಮ್ಮ ಗ್ರಾಮದಲ್ಲಿ ಇರುವ ಗೋಮಾಳ ಜಮೀನನ್ನು ನಮಗೆ ನೀಡಬೇಕು.
- ಯೋಜನೆಯಲ್ಲಿ ಭೂಮಿ ಕಳೆದುಕೊಳ್ಳುವ ರೈತರಿಗೆ ನ್ಯಾಯ ಸಿಗಬೇಕಾದರೆ 2013ರ ಕಾಯ್ದೆ ಅನ್ವಯ ಪರಿಹಾರ ನೀಡಬೇಕು. ಅದಕ್ಕೆ ಕ್ರಮ ಕೈಗೊಳ್ಳಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು.