ತೆಲಂಗಾಣ ಹೈಕೋರ್ಟ್ ಇತ್ತೀಚೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಜನನ ಪ್ರಮಾಣ ಪತ್ರಕ್ಕಾಗಿ ಆನ್ಲೈನ್ ಅರ್ಜಿ ನಮೂನೆಗಳಲ್ಲಿ ‘ಯಾವುದೇ ಧರ್ಮವಿಲ್ಲ’ ಮತ್ತು ‘ಯಾವುದೇ ಜಾತಿಯಿಲ್ಲ’ ಎಂಬ ಆಯ್ಕೆಗಳನ್ನು ಒದಗಿಸುವಂತೆ ನಿರ್ದೇಶಿಸಿದೆ.
ಪ್ರಕರಣವೊಂದರ ತೀರ್ಪು ಪ್ರಕಟಿಸಿದ ನ್ಯಾಯಮೂರ್ತಿ ಲಲಿತಾ ಕನ್ನೆಗಂಟಿ ಅವರು, ಭಾರತೀಯ ಸಂವಿಧಾನದ 25ನೇ ಪರಿಚ್ಛೇದದಡಿಯಲ್ಲಿ ಯಾವುದೇ ಧರ್ಮವನ್ನು ಅನುಸರಿಸದಿರುವ ಅಥವಾ ಪ್ರತಿಪಾದಿಸದಿರುವ ಎಲ್ಲ ಹಕ್ಕು ನಾಗರಿಕರಿಗೆ ಇದೆ ಎಂದು ತಿಳಿಸಿದ್ದಾರೆ.
“ಭಾರತದ ಸಂವಿಧಾನದ ನಾಗರಿಕರಿಗೆ ಖಾತರಿಪಡಿಸಿದ ಹಕ್ಕುಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವುದು ಪ್ರತಿವಾದಿಗಳ ಬದ್ಧ ಕರ್ತವ್ಯವಾಗಿದೆ. ಕಾಲಕ್ಕೆ ತಕ್ಕಂತೆ ನಾಗರಿಕರ ಬದಲಾಗುತ್ತಿರುವ ಅವಶ್ಯಕತೆಗಳಿಗೆ ಅನುಗುಣವಾಗಿ ಆಡಳಿತ ವ್ಯವಸ್ಥೆಯು ವಿಕಸನಗೊಳ್ಳಬೇಕು. ಸಾಂವಿಧಾನಿಕ ನ್ಯಾಯಾಲಯವು ನಾಗರಿಕರ ನ್ಯಾಯಸಮ್ಮತ ಅಗತ್ಯಗಳಿಗೆ ಮೂಕ ಪ್ರೇಕ್ಷಕರಾಗಿ ಉಳಿಯಲು ಸಾಧ್ಯವಿಲ್ಲ” ಎಂದು ನ್ಯಾಯಾಧೀಶರು ಹೇಳಿದರು.
ಮೇಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ಜನನ ಪ್ರಮಾಣಪತ್ರದಲ್ಲಿ ಧರ್ಮ ಅಥವಾ ಜಾತಿಯನ್ನು ನಿರ್ದಿಷ್ಟಪಡಿಸದಿರಲು ಅರ್ಜಿದಾರರಿಗೆ ಎಲ್ಲ ಹಕ್ಕಿದೆ ಎಂದು ಈ ನ್ಯಾಯಾಲಯವು ಪರಿಗಣಿಸಿದೆ ಎಂದು ನ್ಯಾಯಾಧೀಶರು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಮುಂದಿನ ಚುನಾವಣೆ ಗೆಲ್ಲಲು ಬಿಜೆಪಿಯಿಂದ ರಾಮ ಮಂದಿರದ ಮೇಲೆ ದಾಳಿ: ಸತ್ಯಪಾಲ್ ಮಲಿಕ್ ಆರೋಪ
ಸಂವಿಧಾನದ 25ನೇ ವಿಧಿಯು ನಾಗರಿಕರಿಗೆ ಆತ್ಮಸಾಕ್ಷಿಯ ಸ್ವಾತಂತ್ರ್ಯವನ್ನು ನೀಡುತ್ತದೆ. ಅವರು ಯಾವುದೇ ಧರ್ಮವನ್ನು ನಂಬುವುದಿಲ್ಲ ಎಂದು ಹೇಳುವ ಹಕ್ಕನ್ನು ಒಳಗೊಂಡಿದೆ ಎಂದು ತೆಲಂಗಾಣ ಹೈಕೋರ್ಟ್ ವಿವರಿಸಿತು.
“ನಾಗರಿಕನು ತನ್ನ ಆತ್ಮಸಾಕ್ಷಿ ಮತ್ತು ನಂಬಿಕೆಗಳಿಗೆ ಅನುಗುಣವಾಗಿ ವರ್ತಿಸುವ ಹಕ್ಕನ್ನು ಹೊಂದಿದ್ದಾನೆ. ರಾಜ್ಯವು ನಾಗರಿಕನನ್ನು ಒಂದು ಧರ್ಮ ಅಥವಾ ಇನ್ನೊಂದು ಧರ್ಮಕ್ಕೆ ಸೇರಿದವನೆಂದು ಪ್ರತಿಪಾದಿಸಲು ಅಥವಾ ಘೋಷಿಸಲು ಒತ್ತಾಯಿಸಲು ಸಾಧ್ಯವಿಲ್ಲ. ಸರ್ಕಾರವು ಹಾಗೆ ಮಾಡಲು ಒತ್ತಾಯಿಸಿದರೆ, ಅದು ಭಾರತದ ಸಂವಿಧಾನವು ಖಾತರಿಪಡಿಸಿದ ವ್ಯಕ್ತಿಯ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆಯೇ ಹೊರತು ಬೇರೇನೂ ಅಲ್ಲ” ಎಂಬ ಸಂವಿಧಾನದ 25ನೇ ವಿಧಿಯ ನಾಗರಿಕರಿಗೆ ಆತ್ಮಸಾಕ್ಷಿಯ ಸ್ವಾತಂತ್ರ್ಯ ನೀಡುವ ಹಕ್ಕಿನ ಬಗ್ಗೆ ನ್ಯಾಯಾಧೀಶರು ವಿವರಿಸಿದರು.
2019 ರಲ್ಲಿ ಜನಿಸಿದ ಮಗುವಿನ ಪೋಷಕರು ಸಲ್ಲಿಸಿದ ರಿಟ್ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತ್ತು. ಅರ್ಜಿದಾರರು ಜನನ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸುವಾಗ ‘ಯಾವುದೇ ಧರ್ಮವಿಲ್ಲ’ ಮತ್ತು ‘ಯಾವುದೇ ಜಾತಿ ಇಲ್ಲ’ ಎಂಬ ಆಯ್ಕೆಗಳನ್ನು ಒದಗಿಸುವಂತೆ ನಿರ್ದೇಶನಗಳನ್ನು ನೀಡಲು ಸರ್ಕಾರಕ್ಕೆ ಒತ್ತಾಯಿಸುವಂತೆ ಮನವಿ ಮಾಡಿದ್ದರು.
ಅರ್ಜಿದಾರರು ಭಾರತವು ಜಾತ್ಯತೀತ ರಾಷ್ಟ್ರವಾಗಿದ್ದು, ಅರ್ಜಿ ನಮೂನೆಗಳು ತಮ್ಮ ಇಚ್ಛೆಗೆ ವಿರುದ್ಧವಾಗಿ ಧರ್ಮವನ್ನು ಆಯ್ಕೆ ಮಾಡಲು ನಾಗರಿಕರನ್ನು ಒತ್ತಾಯಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.