ಸಂಸದರ ಸಭೆಗೆ ಉದ್ದೇಶ ಪೂರ್ವಕವಾಗಿ ಅಡ್ಡಿಪಡಿಸಿದ ಚನ್ನರಾಯಪಟ್ಟಣದ ಪುರಸಭೆ ಅಧ್ಯಕ್ಷ ಮತ್ತು ಮುಖ್ಯಾಧಿಕಾರಿ ವಿರುದ್ಧ ಕೂಡಲೇ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಾಂಗ್ರೆಸ್ ಮುಖಂಡರು ಅಪರ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಪುರಸಭೆ ಪರಿಶೀಲನಾ ಸಭೆಗೆ ತೆರಳಿದ ವೇಳೆ ಸಂಸದ ಶ್ರೇಯಸ್ ಎಂ ಪಟೇಲ್ ಅವರ ಸ್ಥಾನಕ್ಕೆ ತೀವ್ರ ಅವಮಾನ ಮಾಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು ದೂರಿನಲ್ಲಿ ಪ್ರಬಲವಾಗಿ ಆಗ್ರಹಿಸಿದ್ದಾರೆ.
“ಕೇಂದ್ರ ಅನುದಾನಿತ 22ನೇ ಹಣಕಾಸು ಪ್ರಗತಿ ಪರಿಶೀಲನಾ ಸಭೆ ನಡೆಸಲು ಸಂಸದ ಶ್ರೇಯಸ್ ಎಂ ಪಟೇಲ್ ಜುಲೈ 9ರಂದು ಚನ್ನರಾಯಪಟ್ಟಣ ಪುರಸಭೆಗೆ ತೆರಳಿದ್ದರು. ಈ ವೇಳೆ, ಪುರಸಭಾ ಸಭಾಂಗಣದ ಬಾಗಿಲಿಗೆ ಬೀಗ ಹಾಕಿ, ಪ್ರೋಟೋಕಾಲ್ ಉಲ್ಲಂಘಿಸಿ ಸಂಸದರಿಗೆ ಸಭೆ ನಡೆಸಲು ಪುರಸಭಾ ಅಧ್ಯಕ್ಷ ಮೋಹನ್ ಮತ್ತು ಮುಖ್ಯಾಧಿಕಾರಿಗಳು ಅಡ್ಡಿಪಡಿಸಿದ್ದಾರೆ. ಈ ಘಟನೆಯು ಸಂಸದೀಯ ಘನತೆಗೆ ಮಾಡಿದ ನೇರ ಅಪಮಾನ” ಎಂದು ದೂರುದಾರರು ದೂರಿನಲ್ಲಿ ಸ್ಫಷ್ಟವಾಗಿ ತಿಳಿಸಿದ್ದಾರೆ.
“ಪುರಸಭೆ ಮುಖ್ಯಾಧಿಕಾರಿಗಳು ನಿಯಮಾನುಸಾರ ಸಭಾಂಗಣದ ಮುಖ್ಯ ಬಾಗಿಲಿನ ಬೀಗ ತೆರೆದು ಸಂಸದರು ಸಭೆ ನಡೆಸಲು ಅವಕಾಶ ಮಾಡಿಕೊಡಬೇಕಿತ್ತು. ಆದರೂ, ಅವರು ತಮ್ಮ ಕರ್ತವ್ಯದಲ್ಲಿ ಸಂಪೂರ್ಣ ನಿರ್ಲಕ್ಷ್ಯ ತೋರಿದ್ದಾರೆ. ಇದು ಉನ್ನತ ಸ್ಥಾನದಲ್ಲಿರುವ ಜನಪ್ರತಿನಿಧಿಗೆ ಮಾಡಿದ ಅಗೌರವದ ಪರಮಾವಧಿ” ಎಂದು ದೂರಿನಲ್ಲಿ ಖಂಡಿಸಲಾಗಿದೆ.
“ಸಂಸದರಿಗೆ ಮಾಡಿದ ಈ ಅಗೌರವಕ್ಕೆ ಮುಖ್ಯ ಕಾರಣಕರ್ತರಾದ ಪುರಸಭಾ ಅಧ್ಯಕ್ಷ ಮೋಹನ್ ಮತ್ತು ಪುರಸಭೆ ಮುಖ್ಯಾಧಿಕಾರಿಗಳ ಮೇಲೆ ಕೂಡಲೇ ಕಾನೂನು ರೀತಿ ಸೂಕ್ತ ಕ್ರಮ ಕೈಗೊಳ್ಳಬೇಕು. ಅಷ್ಟೇ ಅಲ್ಲದೆ, ಮೋಹನ್ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ, ಪುರಸಭೆಗೆ ಆಡಳಿತ ಅಧಿಕಾರಿಯನ್ನು ನೇಮಿಸಿ, ಪುರಸಭೆಯನ್ನು ವಿಸರ್ಜಿಸಬೇಕು” ಎಂದು ಆಗ್ರಹಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ವಿಜಯಪುರ | ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ದ್ವಿಭಾಷಾ ನೀತಿ ಜಾರಿಗೆ ತರಬೇಕು: ಕರವೇ
ಹೊಳೆನರಸೀಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್ ಟಿ ಲಕ್ಷ್ಮಣ್ ಮತ್ತು ಪುರಸಭೆ ನಾಮ ನಿರ್ದೇಶಿತ ಮಾಜಿ ಸದಸ್ಯ ಮುಜಾಹಿದ್ ಪಾಷಾ, ವಕೀಲರು ಹಾಗೂ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಚ್ ಕೆ ಹರೀಶ್, ಹಾಸನ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್, ಬ್ಲಾಕ್ ಕಾಂಗ್ರೆಸ್ ಎಸ್ ಸಿ ಘಟಕದ ಮಾಜಿ ಅಧ್ಯಕ್ಷ ಹಾಗೂ ವಕೀಲ ಎಚ್ ಆರ್ ಮಂಜುನಾಥ್, ವಕೀಲ ಅಶೋಕ್ ಸೇರಿದಂತೆ ಅನೇಕರು ಅಪರ ಜಿಲ್ಲಾಧಿಕಾರಿ ಶಾಂತಲಾ ಅವರಿಗೆ ಮನವಿ ಸಲ್ಲಿಸಿದ್ದಾರೆ.