ವಿಜಯನಗರ ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಜಾಹ್ನವಿ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಹಿಂದಿದ್ದ ಡಾ. ಶ್ರೀಹರಿಬಾಬು ಬಿ ಎಲ್ ಬೆಂಗಳೂರಿಗೆ ವರ್ಗಾವಣೆಯಾಗಿದ್ದು, 2019ನೇ ಬ್ಯಾಚ್ನ ಐಪಿಎಸ್ ಅಧಿಕಾರಿ ಜಾಹ್ನವಿ ವಿಜಯನಗರ ಜಿಲ್ಲೆಯ ಎಸ್ಪಿಯಾಗಿ ನೇಮಿಸಲಾಗಿದೆ.
ಜಿಲ್ಲೆಯ ಮೂರನೇ ಪೊಲೀಸ್ ಅಧೀಕ್ಷಕರಾಗಿ 2019ನೇ ಬ್ಯಾಚ್ ನ ಐಪಿಎಸ್ ಅಧಿಕಾರಿ ಜಾಹ್ನವಿ ಅಧಿಕಾರ ಸ್ವೀಕರಿಸಿದರು. ಬಿ.ಎಲ್.ಶ್ರೀಹರಿಬಾಬು ಅವರಿಂದ ಅಧಿಕಾರವನ್ನು ಸ್ವೀಕಾರಿಸಿದರು. ವಿಜಯನಗರ ಜಿಲ್ಲೆಯಲ್ಲಿ ಎರಡು ವರ್ಷ ಒಂಬತ್ತು ತಿಂಗಳಿನಿಂದ ಎಸ್ ಪಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿ ಎಲ್ ಶ್ರೀ ಹರಿಬಾಬು ಅವರು ಬೆಂಗಳೂರಿನ ಸಿಸಿಬಿ ಡಿಸಿಪಿಯಾಗಿ ನಿಯೋಜನೆಗೊಂಡಿದ್ದಾರೆ.
ಕೆಲಸದ ಬಗ್ಗೆ ತೃಪ್ತಿ ಇದೆ: ನಿರ್ಗಮನ ಎಸ್ಪಿ ಶ್ರೀಹರಿಬಾಬು
“ಹೊಸ ಜಿಲ್ಲೆಯಲ್ಲಿ ಪೊಲೀಸರಿಗೆ ಮೂಲಸೌಲಭ್ಯ ಒದಗಿಸುವುದು ಸುಲಭದ ಕೆಲಸವಲ್ಲ. ಆದರೆ ಸರ್ಕಾರದ ಅನುದಾನ, ದಾನಿಗಳ ಸಹಕಾರದಿಂದ ಪೊಲೀಸ್ ಪರೇಡ್ ಮೈದಾನ, ಫೈರಿಂಗ್ ರೇಂಜ್ನಂತಹ ಮೂಲಸೌಲಭ್ಯ ಕಲ್ಪಿಸಲು ಸಾಧ್ಯವಾಯಿತು” ಎಂದು ನಿರ್ಗಮಿತ ಎಸ್ಪಿ ಶ್ರೀಹರಿಬಾಬು ಬಿ.ಎಲ್.ಹೇಳಿದರು.
ಬೆಂಗಳೂರಿನಲ್ಲಿ ಸಿಸಿಬಿ ಡಿಸಿಪಿ ಆಗಿ ವರ್ಗಾವಣೆಗೊಂಡಿರುವ ಅವರಿಗೆ ಮಂಗಳವಾರ ಸಂಜೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ತಮ್ಮಿಂದಾದ ಈ ಕೆಲಸದ ಬಗ್ಗೆ ತೃಪ್ತಿ ಇದೆ ಎಂದರು.
“ಲಕ್ಷಾಂತರ ಜನ ಸೇರುವ ಬೃಹತ್ ಜಾತ್ರೆಗಳ ಜಿಲ್ಲೆ ಇದು. ವರ್ಷಕ್ಕೆ 318ಕ್ಕೂ ಹೆಚ್ಚು ಜಾತ್ರೆಗಳು ಇಲ್ಲಿ ನಡೆಯುತ್ತವೆ. ಅದೆಲ್ಲವನ್ನೂ ಯಶಸ್ವಿಯಾಗಿ ನಿಭಾಯಿಸಿದ ಖುಷಿ ಇದೆ, ಜತೆಗೆ ಮೂರು ಹಂಪಿ ಉತ್ಸವ, ಜಿ.20 ಶೃಂಗದಂತಹ ಬೃಹತ್ ಕಾರ್ಯಕ್ರಮಗಳನ್ನು ಯಶಸ್ವಿ ಗೊಳಿಸಿದ ಅಭಿಮಾನವೂ ಇದೆ” ಎಂದು ಶ್ರೀಹರಿಬಾಬು ಹೇಳಿದರು.
ಇದನ್ನು ಓದಿದ್ದೀರಾ? ಬೆಂಗಳೂರು | ಮೂಡಬಿದ್ರೆ ಕಾಲೇಜಿನ ವಿದ್ಯಾರ್ಥಿನಿಯ ಅತ್ಯಾಚಾರ: ಉಪನ್ಯಾಸಕರಿಬ್ಬರು ಸೇರಿ ಮೂವರ ಬಂಧನ
ಜಿಲ್ಲೆಯ ಬೇಡಿಕೆಗೆ ಸರ್ಕಾರ ಸ್ಪಂದಿಸಿದ್ದರಿಂದ ಹೊಸ ಎಸ್ಪಿ ಕಚೇರಿ, ಡಿಎಆರ್ ಕಚೇರಿ ನಿರ್ಮಾಣದ ಕನಸು ನನಸಾಯಿತು. ಡಿಎಆರ್ ವಸತಿ ಸಮುಚ್ಛಯದ ನಿರ್ಮಾಣ ಪ್ರಗತಿ ಯಲ್ಲಿದೆ. ನಾನು ಮತ್ತೊಮ್ಮೆ ಇಲ್ಲಿಗೆ ಭೇಟಿ ನೀಡಿದಾಗ ಈ ಎಲ್ಲ ಶಾಶ್ವತ ಕೊಡುಗೆಗಳು ನನ್ನ ಅವಧಿಯಲ್ಲಿ ಆಯಿತು ಎಂಬ ಸಂತೃಪ್ತಿ ಭಾವ ನನ್ನಲ್ಲಿದೆ ಎಂದು ಹೇಳಿದರು.
‘ಹುಡಾ’ ಅಧ್ಯಕ್ಷ ಎಚ್.ಎನ್.ಎಫ್.ಮೊಹಮ್ಮದ್ ಇಮಾಮ್ ನಿಯಾಜಿ, ನಿವೃತ್ತ ಪೊಲೀಸ್ ನೌಕರರ ಸಂಘದ ಅಧ್ಯಕ್ಷ ಕುಮಾರಸ್ವಾಮಿ, ಇಲಾಖೆಯ ಅಧಿಕಾರಿಗಳು, ವಿವಿಧ ಕ್ಷೇತ್ರದ ಗಣ್ಯರು ಮಾತನಾಡಿದರು.