“ವಿದ್ಯಾವಂತ ಯುವ ಜನರು ಶಾಖಾ ಗ್ರಂಥಾಲಯದ ಉಪಯೋಗವನ್ನು ಪಡೆದುಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಣಿಯಾಗಬೇಕು” ಎಂದು ಶಾಖಾ ಗ್ರಂಥಾಲಯ ಉದ್ಘಾಟಿಸಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಮಣ್ಣ ದೊಡ್ಡಮನಿ ಸಲಹೆ ನೀಡಿದರು.
ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಮಾಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪರಸಾಪುರ ಗ್ರಾಮದಲ್ಲಿ ಶಾಖಾ ಗ್ರಂಥಾಲಯವನ್ನು ಉದ್ಘಾಟಿಸಿ ಮಾತನಾಡಿದರು.
“ವಿದ್ಯಾವಂತ ಯುವಕರು ಗ್ರಂಥಾಲಯಗಳಲ್ಲಿ ದಿನಪತ್ರಿಕೆ, ಕಾದಂಬರಿ, ಪುಸ್ತಕ, ಸ್ವರ್ಧಾತ್ಮಕ ಪುಸ್ತಕಗಳನ್ನು ಓದುವ ಮೂಲಕ ತಮ್ಮ ಜ್ಞಾನವನ್ನು ಬೆಳಸಿಕೊಳ್ಳುತ್ತಿದ್ದರು. ಈಗ ಕಾಲ ಬದಲಾದಂತೆ ಆನ್ಲೈನ್ ಮೂಲಕ ವ್ಯಾಸಂಗ ಪುಸ್ತಕಗಳನ್ನು ಕಂಪ್ಯೂಟರ್ನಲ್ಲಿ ನೋಡಿ ಕಲಿತುಕೊಳ್ಳುವಂತಾಗಿದೆ. ವಿದ್ಯಾರ್ಥಿಗಳ ಜತೆಗೆ ಇತರರು ಇದನ್ನು ಬಳಸಿಕೊಳ್ಳುವ ಮೂಲಕ ತಮ್ಮ ಜಾನ ಹೆಚ್ಚಿಸಿಕೊಳ್ಳಬೇಕು” ಎಂದು ನುಡಿದರು.
“ನಗರಗಳಲ್ಲಿ ವಿದ್ಯಾರ್ಥಿಗಳು ಖಾಸಗಿ ಸೈಬರ್ನಲ್ಲಿ ಹೋಗಿ ಕಲಿಯುತ್ತಿದ್ದಾರೆ ಹಾಗೂ ಅವರಿಗೆ ಬೇಕಾಗಿರುವ ಅರ್ಜಿಗಳನ್ನು ಅಲ್ಲಿ ಸಲ್ಲಿಸುತ್ತಾರೆ. ನಗರದವರಂತೆ ಗ್ರಾಮೀಣ ಭಾಗದವರೂ ಪ್ರಸ್ತುತ ಸ್ವರ್ಧಾತ್ಮಕ ಪ್ರಪಂಚದಲ್ಲಿ ಹಿಂದುಳಿದಿದ್ದಾರೆ. ಗ್ರಾಮೀಣ ಭಾಗದವರ ಪ್ರತಿಭೆ ಹೊರತರಲು ಈ ಡಿಜಿಟಲ್ ಗ್ರಂಥಾಲಯ ಬಹಳ ಉಪಯುಕ್ತವಾಗಿದೆ” ಎಂದರು.
“ಗ್ರಾಮ ಪಂಚಾಯಿತಿ ಅಧ್ಯಕ್ಷ ವೀರಯ್ಯ ಮಠಪತಿ ಮಾತನಾಡಿ ವಿಶೇಷವಾಗಿ ಐ.ಎ.ಎಸ್, ಐ.ಪಿ.ಎಸ್, ಯು.ಪಿ.ಎಸ್.ಸಿ, ಕೆ.ಪಿ.ಎಸ್.ಸಿ ಪರೀಕ್ಷೆಗಳಲ್ಲಿ ಸ್ವರ್ಧಿಸಲು ಈ ಗ್ರಂಥಾಲಯವು ಬಹಳ ಅಗತ್ಯವಾಗಿದೆ. ಇದನ್ನು ಬಳಸಿಕೊಂಡು ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆಯುವ ಮೂಲಕ ಉನ್ನತ ಹುದ್ದೆಯನ್ನು ಪಡೆಯಬಹುದು” ಎಂದು ನುಡಿದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ನೂತನ ಎಸ್ಪಿ ಆಗಿ ಯಶೋಧಾ ವಂಟಗೋಡಿ
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್ ವೈ ಕುಂಬಾರ ಮಾತನಾಡಿ, “ಸರ್ಕಾರ ನೀಡಿರುವ ಡಿಜಿಟಲ್ ಗ್ರಂಥಾಲಯವನ್ನು ಪ್ರತಿಯೊಬ್ಬರೂ ಉಪಯೋಗಿಸಿಕೊಳ್ಳುವ ಮೂಲಕ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿರಿ. ಕಂಪ್ಯೂಟರ್ ಮೂಲಕ ಎಲ್ಲಾ ರೀತಿಯ ಮಾಹಿತಿಗಳನ್ನು ಪಡೆಯಬಹುದು” ಎಂದರು.
ಕಾರ್ಯಕ್ರಮದಲ್ಲಿ ಗ್ರಾಮದ ಉಪಾಧ್ಯಕ್ಷರು, ಗ್ರಾಮ ಪಂಚಾಯತ ಸರ್ವ ಸದಸ್ಯರು, ಪಂಚಾಯತ ಸಿಬ್ಬಂದಿಗಳು, ಗ್ರಾಮಸ್ಥರು ಹಾಜರಿದ್ದರು.