- ಕುಮಾರಸ್ವಾಮಿ ನನ್ನ ಪಕ್ಕ ನಿಲ್ಲಲೂ ಹೆದರುತ್ತಿದ್ದರು: ರಾಯರೆಡ್ಡಿ
- ಸಚಿವ ಸ್ಥಾನ ಸಿಗದಿರುವುದಕ್ಕೆ ಬೇಸರವಿಲ್ಲ, ಈಗ ಅವಶ್ಯಕತೆ ಇಲ್ಲ
ನಮ್ಮ ಹಿಂದೆ ಓಡಾಡಿದವರೆಲ್ಲ ಮಂತ್ರಿಯಾಗಿದ್ದಾರೆ. ಅವರಪ್ಪಂದಿರ ಜೊತೆ ನಾನು ಕೆಲಸ ಮಾಡಿದವ. ಈಗ ಇವರು ನಮ್ಮ ಮುಂದೆ ಧಿಮಾಕು ತೋರಿಸಿಕೊಂಡು ಓಡಾಡುತ್ತಾರೆ ಎಂದು ಶಾಸಕ ಬಸವರಾಜ ರಾಯರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದ ಜನಸಂರ್ಪಕ ಸಭೆಯಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಅವರು, “ನೀವು ದುಃಖ ಪಡುವ ಅಗತ್ಯವಿಲ್ಲ. ಒಮ್ಮೊಮ್ಮೆ ಮಂತ್ರಿಯಾಗಲು ಸಾಧ್ಯವಾಗುವುದಿಲ್ಲ. ಅದಕ್ಕೆ ಹಣೆಬರಹ ಬೇಕು” ಎಂದು ಜನರಿಗೆ ತಿಳಿಸಿದರು.
“ನಮ್ಮ ಸಿದ್ದರಾಮಯ್ಯ ಅವರನ್ನು ನೋಡಿ, ಕಾಂಗ್ರೆಸ್ಗೆ ಬಂದು ಎರಡು ಬಾರಿ ಮುಖ್ಯಮಂತ್ರಿ ಆದರು. ಕಾಂಗ್ರೆಸ್ನ ಹಳೇ (ಮೂಲ) ಮಂದಿ ಈಗ ಏನು ಹೇಳುತ್ತಿರಬಹುದು? ಇವೆಲ್ಲ ಮನುಷ್ಯನ ಅದೃಷ್ಟ” ಎಂದು ಹೇಳಿದರು.
“ದೇವೆಗೌಡರ ಕ್ಯಾಬಿನೆಟ್ನಲ್ಲಿ ನಾನು ಸಚಿವ ಆಗಿದ್ದೆ. ಈ ಕುಮಾರಸ್ವಾಮಿ ನನ್ನ ಪಕ್ಕ ನಿಲ್ಲಲೂ ಹೆದರುತ್ತಿದ್ದರು. ಏನ್ ಮಾಡುವುದು, ಅವರ ಹಣೆಬರಹದಲ್ಲಿ ಸಿಎಂ ಆಗುವುದು ಬರೆದಿತ್ತು. ಪಾಪ ಎಲ್ ಕೆ ಅಡ್ವಾಣಿ ಅವರು ಬಿಜೆಪಿ ಕಟ್ಟಿಕಟ್ಟಿ ಹೈರಾಣಾದರು. ಆದರೆ ಪ್ರಧಾನಿಯಾದದ್ದು ನರೇಂದ್ರ ಮೋದಿ” ಎಂದರು.
ಈ ಸುದ್ದಿ ಓದಿದ್ದೀರಾ? ಮಲ್ಲಿಕಾರ್ಜುನ ಖರ್ಗೆ ಬಗ್ಗೆ ವಿವಾದಾತ್ಮಕ ಹೇಳಿಕೆ : ಆರಗ ಜ್ಞಾನೇಂದ್ರ ವಿರುದ್ಧ ಕಾಂಗ್ರೆಸ್ ದೂರು
“ಮುಖ್ಯಮಂತ್ರಿಗಳು ನನಗೆ ಕ್ಯಾಬಿನೆಟ್ ದರ್ಜೆ ಸ್ಥಾನ ನೀಡಲು ಸಿದ್ಧರಾಗಿದ್ದರು. ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನ ಕೊಡುತ್ತೇನೆ ಎಂದು ಹೇಳಿದ್ದರು. ನಾನೇ ಬೇಡ ಎಂದು ಹೇಳಿದ್ದೆ” ಎಂದು ತಿಳಿಸಿದರು.
“ಸಚಿವ ಸ್ಥಾನ ಸಿಗದಿರುವುದಕ್ಕೆ ಬೇಸರವಿಲ್ಲ, ಅದರ ಅವಶ್ಯಕತೆಯೂ ಇಲ್ಲ. ಸಚಿವ ಸ್ಥಾನ ಬೇಡ ಎಂದು ಬಹಿರಂಗವಾಗಿ ಬರೆದುಕೊಡಲು ಸಿದ್ಧ. ಮುಂದೆಯೂ ನನ್ನನ್ನು ಮಂತ್ರಿಯನ್ನಾಗಿ ಮಾಡುವುದು ಬೇಡ” ಎಂದು ಮಂಗಳವಾರ ರಾಯರೆಡ್ಡಿ ಕೊಪ್ಪಳದಲ್ಲಿ ಹೇಳಿದ್ದನ್ನು ಇಲ್ಲಿ ನೆನೆಯಬಹುದು.