ವಿಜಯಪುರ ಜಿಲ್ಲಾದ್ಯಂತ ದಲಿತರ ಭೂಮಿ ಹಾಗೂ ವಸತಿ ಹಕ್ಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಡಾ.ಅಂಬೇಡ್ಕರ ವಾದ) ನೇತೃತ್ವದಲ್ಲಿ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರದಲ್ಲಿ ಜು.18ರಂದು ಏಕಕಾಲಕ್ಕೆ ಧರಣಿ ನಡೆಯಲಿದೆ ಎಂದು ಸಂಘಟನೆಯ ವಿಭಾಗೀಯ ಸಂಚಾಲಕ ಸಂಜು ಕಂಬಾಗಿ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, “ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ತಹಶೀಲ್ದಾರ್ ಕಚೇರಿ ಎದುರು ಏಕಕಾಲಕ್ಕೆ ಧರಣಿ ನಡೆಯಲಿದೆ. ಕಳೆದ 4 ದಶಕಗಳಿಂದ ದಲಿತರ ಭೂಮಿ ಹಕ್ಕಿಗಾಗಿ ನಡೆಸಿದ ಹೋರಾಟದಲ್ಲಿ ದರಖಾಸ್ತು ಜಮೀನು ಮಂಜೂರು ಮಾಡುವ ಕಾಯ್ದೆ ಜಾರಿಗೆ ತಂದಿತ್ತು. ಇಂದಿಗೂ ಕೂಡಾ ಸರ್ಕಾರದ ಅಧಿಕೃತ ಅಂಕಿ-ಅಂಶಗಳ ಪ್ರಕಾರ ರಾಜ್ಯದ ಒಟ್ಟು ಭೂಮಿಯಲ್ಲಿ ದಲಿತರು ಕೇವಲ ಶೇ.11ರಷ್ಟು ಭೂಮಿ ಮಾತ್ರ ಹೊಂದಿರುತ್ತಾರೆ. ಇದರಲ್ಲಿ ನೀರಾವರಿ ಪ್ರದೇಶದ ಭೂಮಿ ಅತ್ಯಲ್ಪವಾಗಿದೆ. 70ರ ದಶಕದಲ್ಲಿ ಬಿ. ಬಸವಲಿಂಗಪ್ಪ ಅವರ ದೂರದೃಷ್ಟಿ ಫಲವಾಗಿ ಪಿಟಿಸಿಎಲ್ ಕಾಯ್ದೆ ಜಾರಿಗೆ ಬಂದಿದ್ದರೂ ಕೂಡಾ ಜಾತಿವಾದಿಗಳು ಮತ್ತು ಅಧಿಕಾರಶಾಹಿಯ ಮಸಲತ್ತಿನಿಂದ ಹಾಗೂ ಸರ್ಕಾರಗಳ ಕುತಂತ್ರದಿಂದ ಪಿಟಿಸಿಎಲ್ ಜಮೀನುಗಳ ಪ್ರಕರಣಗಳಲ್ಲಿ ದಲಿತ ಸಮುದಾಯಗಳು ಕೋರ್ಟ್ಗಳಿಗೆ ಅಲೆಯುತ್ತ ವಂಚನೆಗೆ ಒಳಗಾಗಿದ್ದಾರೆ” ಎಂದರು.
“ಈ ಹಿನ್ನೆಲೆಯಲ್ಲಿ ದಸಂಸ(ಅಂಬೇಡ್ಕರ್ ವಾದ) ರಾಜ್ಯ ಸಮಿತಿ ‘ಹೆಂಡಬೇಡ ಭೂಮಿ ಬೇಕು’ ಎನ್ನುವ ಘೋಷಣೆಯನ್ನು 80ರಲ್ಲಿ ಮೊಳಗಿಸಿತು. ಆದೇ ರೀತಿ, ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ದಲಿತರನ್ನು ಅರಣ್ಯಮಯೀ ಸಾಮಾಜಿಕ ಅರಣ್ಯೀಕರಣ-ಗೋವುಗಳ ಗೋಮಾಳಗಳಿಗೆ ಕಾಯ್ದಿರಿಸಿರುವ ನೆಪದಲ್ಲಿ ಒಕ್ಕಲೆಬ್ಬಿಸುವುದನ್ನು ಖಂಡಿಸುತ್ತೇವೆ. ದಲಿತರಿಗೆ ಮಂಜೂರಾಗಿರುವ ಭೂಮಿಯನ್ನು ಸರ್ಕಾರಗಳು ಕೈಗಾರಿಕೆಗಳ ಸ್ಥಾಪನೆಗಾಗಿ ವಿದೇಶಿ ಬಂಡವಾಳಗಾರರಿಗೆ ಈ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತಿರುವುದು ದಲಿತರನ್ನು ಸಂಪೂರ್ಣವಾಗಿ ಭೂಮಿಯಿಂದ ಹೊರದಬ್ಬುವ ಕುತಂತ್ರವಾಗಿದೆ” ಎಂದು ಕಂಬಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಧರ್ಮಸ್ಥಳ ಪ್ರಕರಣವನ್ನು ಕೂಡಲೇ SIT ತನಿಖೆಗೆ ವಹಿಸಿ : SDPI ಆಗ್ರಹ
“ದರಕಾಸ್ತು ಭೂಮಿ ಸಕ್ರಮೀಕರಣ ಶಾಸಕರುಗಳ ಅಧ್ಯಕ್ಷತೆಯಲ್ಲಿರುವ ಸಮಿತಿಗಳು ನಿರ್ಲಕ್ಷ್ಯದಿಂದ ಸಭೆಗಳು ನಡೆಯದೇ ಫಾರಂ 50, 53, 57ರಲ್ಲಿ ಸಲ್ಲಿಸಿರುವ ದಲಿತ ಹಾಗೂ ತಳಸಮುದಾಯಗಳ ಅರ್ಜಿಗಳು ರಾಶಿಗಟ್ಟಲೆ ಕೊಳೆಯುತ್ತ ಬಿದ್ದಿವೆ. ಅವುಗಳಲ್ಲಿ ಜಿಪಿಎಸ್ ಮೂಲಕ ಉಳುಮೆ ಮಾಡುತ್ತಿಲ್ಲವೆಂದು ಹೇಳಿ ಸಾವಿರಾರು ಅರ್ಜಿಗಳನ್ನು ವಜಾಗೊಳಿಸಲಾಗಿದೆ. ಈ ಬಗ್ಗೆ ಸರ್ಕಾರವನ್ನು ಎಚ್ಚರಿಸಲು ಹಾಗೂ ದಲಿತರ ಭೂಮಿ-ವಸತಿ ಹಕ್ಕು ಮತ್ತು ಇತರೆ ಹಕ್ಕೊತ್ತಾಗಳಿಗೆ ಆಗ್ರಹಿಸಲಾಗುವುದು” ಎಂದು ಹೇಳಿದರು.