ಶಿವಮೊಗ್ಗ, ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣದ ಭೂಸ್ವಾಧೀನದ ಹೋರಾಟದ ಜಯವನ್ನು ಜುಲೈ-21 ರಂದು ನರಗುಂದ-ನವಲಗುಂದ ಹುತಾತ್ಮರಿಗೆ ಹಾಗೂ ಇಲ್ಲಿಯವರೆಗೆ ಹೋರಾಟದಲ್ಲಿ ಹುತಾತ್ಮರಾದ ಎಲ್ಲಾ ಹುತಾತ್ಮರಿಗೆ ಅರ್ಪಿಸಿಲಾಗುವುದು ಮತ್ತು ರೈತರ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಿ ಮುಂದಿನಹೋರಾಟವನ್ನು ರೂಪಿಸಲು 45ನೇ ರೈತ ಹುತಾತ್ಮ ದಿನಾಚರಣೆಯನ್ನು ಜು.21 ರ ಸೋಮವಾರ 11ಗಂಟೆಗೆ ನರಗುಂದದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಸವರಾಜಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್ ಆರ್. ಬಸವರಾಜಪ್ಪ , ದೇವನಹಳ್ಳಿ ಚನ್ನರಾಯಪಟ್ಟಣ ಭೂಸ್ವಾಧೀನದ ವಿರುದ್ಧ 1,198ದಿನದ ಹೋರಾಟದಲ್ಲಿ 1,777ಎಕರೆ ಕೆ.ಐ.ಎ.ಡಿ.ಬಿ ಗೆ ನೋಟೀಫಿಕೆಷನ್ ಮಾಡಿದ್ದನ್ನು ಹೋರಾಟದ ಫಲವಾಗಿ ಕೈಬಿಟ್ಟಿರುವುದಾಗಿ ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದಾರೆ. ರೈತ, ಕಾರ್ಮಿಕ, ದಲಿತ ಸಂಘಟನೆಗಳ ಹೋರಾಟಕ್ಕೆ ಪ್ರಗತಿಪರ ಚಿಂತಕರು, ಸಿನಿಮಾ ನಟರು, ಕಲಾವಿದರ ಬೆಂಬಲ ವ್ಯಕ್ತವಾಗಿದ್ದರಿಂದ ಸರ್ಕಾರ ಹೋರಾಟಕ್ಕೆ ಮಣಿದು ಸ್ವತಃ ಮುಖ್ಯಮಂತ್ರಿಗಳೇ ಇದೊಂದು ಐತಿಹಾಸಿಕ ಹೋರಾಟ ಇದು ಎಲ್ಲಾ ಹೋರಾಟಗಾರರಿಗೆ ಸಂದ ಜಯ ಎಂದು ಭೂಮಿಯನ್ನು ಡಿನೋಟೀಫೈ ಮಾಡಲು ಘೋಷಿಸಿದ್ದಾರೆ ಎಂದರು.

ಈ ಐಕ್ಯ ಹೋರಾಟಕ್ಕೆ ಸಂದ ಜಯವನ್ನು ನರಗುಂದ-ನವಲಗುಂದ ರೈತ ಹುತಾತ್ಮರಿಗೆ ಜುಲೈ 21ರಂದು ಅರ್ಪಣೆ ಮಾಡಲಾಗುವುದು ಮತ್ತು ರೈತರ ಜ್ವಲಂತ ಸಮಸ್ಯೆಗಳನ್ನ ಇಟ್ಟುಕೊಂಡು ಮುಂದಿನ ಹೋರಾಟದ ರೂಪುರೇಷೆಗಳನ್ನು ಈ ಬೃಹತ್ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು.
ಆದ್ದರಿಂದ ಈ ಬೃಹತ್ ಬಹಿರಂಗ ಸಭೆಗೆ ರೈತರು, ರೈತ ಮಹಿಳೆಯರು, ಕೃಷಿ ಕೂಲಿಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ಕೋರಿದರು.

ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ಭಾಗದ ರೈತರಿಗೆ ಮಹತ್ತರ ನೀರಾವರಿ ಯೋಜನೆಯಾದ ಮಹಾದಾಯಿ ಸುಮಾರು 2 ದಶಕಗಳು ಕಳೆದರೂ ಈಗಿನವರೆಗೂ ಯಾವುದೇ ರೀತಿಯಲ್ಲೂ ಕಾಮಗಾರಿ ಆರಂಭಗೊಂಡಿಲ್ಲ. ಮಹಾದಾಯಿ ಯೋಜನೆಯ ಹೆಸರಿನಲ್ಲಿ ವಿವಿಧ ರಾಜಕೀಯ ಪಕ್ಷದ ರಾಜಕಾರಣಿಗಳು ಅಧಿಕಾರಕ್ಕೆ ಬಂದು ಆಡಳಿತ ನಡೆಸಿದರೂ ಸಹ ಯೋಜನೆಯ ಬಗ್ಗೆ ಗಮನಹರಿಸಿಲ್ಲ. ಮಹಾದಾಯಿ ಯೋಜನೆಯನ್ನು ವಿಶೇಷವಾಗಿ ಪರಿಗಣಿಸಿ ಸರ್ಕಾರಗಳು ಕೂಡಲೇ ಕಾಮಗಾರಿ ಆರಂಭಿಸಬೇಕು ಎಂದು ಆಗ್ರಹಿಸಿದರು.
ಆಲಮಟ್ಟಿ ಜಲಾಶಯದ ಎತ್ತರವನ್ನು ಸುಪ್ರೀಂ ಕೋರ್ಟ್ ಆದೇಶದಂತೆ 524 ಮೀಟರ್ ಎತ್ತರಿಸಿ ಆ ಭಾಗದ ನೀರಾವರಿ ಯೋಜನೆಗಳನ್ನು ತ್ವರಿತಗತಿಯಲ್ಲಿ ಮುಗಿಸಬೇಕೆಂದು ಒತ್ತಾಯಿಸಿದರು.