- ಕೇರಳದ ಕಳಮಶ್ಶೇರಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್ಐಆರ್ ಈ ದಿನ.ಕಾಮ್ಗೆ ಲಭ್ಯ
- ತನಿಖಾ ತಂಡ ಕೋರಿದರೆ ಹಾಜರಾಗುವಂತೆ ತಪ್ಪಿತಸ್ಥ ನಾಲ್ವರು ಪೊಲೀಸ್ ಸಿಬ್ಬಂದಿಗಳಿಗೆ ಸೂಚನೆ
ಪ್ರಕರಣವೊಂದರ ತನಿಖೆಗೆ ಹೋಗಿದ್ದ ವೇಳೆ ಆರೋಪಿಗಳಿಂದ ಸ್ವೀಕರಿಸಿದ್ದ ಲಂಚದ ಹಣದೊಂದಿಗೆ ಸಿಕ್ಕಿ ಬಿದ್ದಿದ್ದ ಕರ್ನಾಟಕ ಪೊಲೀಸರನ್ನು ಬಿಡುಗಡೆ ಮಾಡಲು ಕೇರಳದ ಪೊಲೀಸರು ತೀರ್ಮಾನಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಕೇರಳದ ಮಲಯಾಳಂ ಸುದ್ದಿವಾಹಿನಿಗಳು, ಸಿಆರ್ಪಿಸಿ 41ರ ಅಡಿಯಲ್ಲಿ ನೋಟಿಸ್ ನೀಡಿದ ನಂತರ ಅವರನ್ನು ಬಿಡುಗಡೆ ಮಾಡಲಾಗುವುದು’ ಎಂದು ವರದಿ ಮಾಡಿದೆ.
ಆರೋಪಿಗಳಿಂದ ಹಣ ವಸೂಲಿ ಮಾಡಿದ್ದ ದೂರಿನ ಮೇರೆಗೆ ಬೆಂಗಳೂರಿನ ವೈಟ್ಫೀಲ್ಡ್ನ ಸೆನ್ ಪೊಲೀಸ್ ಠಾಣೆಯ ಎಸ್ ಐ ಹಾಗೂ ಮೂವರು ಕಾನ್ಸ್ಟೆಬಲ್ ಸಹಿತ ನಾಲ್ವರನ್ನು ಬಂಧಿಸಲಾಗಿತ್ತು.
ಅಲ್ಲದೇ, ಕರ್ತವ್ಯದ ವೇಳೆಯಲ್ಲಿರುವಾಗಲೇ ತಪ್ಪು ಮಾಡಿರುವ ಹಿನ್ನೆಲೆಯಲ್ಲಿ ಬಂಧನವಿಲ್ಲದೆ ಬಿಡುಗಡೆ ಮಾಡಬೇಕೆಂಬುದು ಕಾನೂನು ಸಲಹೆ ಎಂಬುದನ್ನು ಗಮನಿಸಿರುವ ಕೊಚ್ಚಿ ನಗರ ಪೊಲೀಸ್ ಕಮಿಷನರೇಟ್ನ ಅಧಿಕಾರಿಗಳು, ತನಿಖಾ ತಂಡ ಕೋರಿದರೆ ಕಸ್ಟಡಿಯಲ್ಲಿದ್ದ ನಾಲ್ವರೂ ಪೊಲೀಸ್ ಅಧಿಕಾರಿಗಳು ಹಾಜರಾಗುವಂತೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ.
ಆಗಸ್ಟ್ 16ರಂದು ಕಳಮಶ್ಶೇರಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗುವಂತೆಯೂ ಸೂಚನೆ ನೀಡಲಾಗಿದೆ. ಲಂಚವಾಗಿ ಆರೋಪಿಗಳಿಂದ ವಸೂಲಿ ಮಾಡಿದ್ದ 3,95,000 ಹಣವನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.
ಬೆಂಗಳೂರಿನ ವೈಟ್ಫೀಲ್ಡ್ನ ನಾಲ್ವರು ಪೊಲೀಸ್ ಸಿಬ್ಬಂದಿಗಳ ವಿರುದ್ಧ ಕಳಮಶ್ಶೇರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ಪ್ರತಿ ಈ ದಿನ.ಕಾಮ್ಗೆ ಲಭ್ಯವಾಗಿದೆ.

ಎಫ್ಐಆರ್ನಲ್ಲಿ ಶಿವಪ್ರಕಾಶ್, ವಿಜಯ ಕುಮಾರ್, ಸಂದೇಶ್ ಮತ್ತು ಶಿವಣ್ಣ ಎಂಬವರ ಮೇಲೆ ದೂರು ದಾಖಲಾಗಿದೆ. ಇವರ ವಿರುದ್ಧ ಹಣಕಾಸು ವಂಚನೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇವರು ಪ್ರಯಾಣಿಸುತ್ತಿದ್ದ ವಾಹನದಲ್ಲಿ 3,95,000 ಹಣವು ಕೇರಳ ಪೊಲೀಸರು ತಪಾಸಣೆ ನಡೆಸಿದ್ದ ಸಂದರ್ಭದಲ್ಲಿ ದೊರಕಿತ್ತು.

ಘಟನೆ ಏನು?
ವಂಚನೆ ಪ್ರಕರಣದ ಆರೋಪಿಗಳಿಂದ ಲಂಚ ಪಡೆದ ಆರೋಪದಲ್ಲಿ ಇನ್ಸ್ಪೆಕ್ಟರ್ ಸೇರಿ ನಾಲ್ಕು ಮಂದಿ ಕರ್ನಾಟಕದ ಪೊಲೀಸ್ ಅಧಿಕಾರಿಗಳನ್ನು ಕೇರಳ ಪೊಲೀಸರು ವಶಕ್ಕೆ ಪಡೆದಿದ್ದರು.
ಈ ಸುದ್ದಿ ಓದಿದ್ದೀರಾ? ತನಿಖೆಗೆಂದು ಕೇರಳಕ್ಕೆ ಹೋಗಿದ್ದ ಕರ್ನಾಟಕ ಪೊಲೀಸರ ಬಂಧನ!
ಕರ್ನಾಟಕದಲ್ಲಿ ನಡೆದ ವಂಚನೆ ಪ್ರಕರಣದ ಸಂಬಂಧ ಆರೋಪಿಯನ್ನು ಬಂಧಿಸಲು ಕರ್ನಾಟಕ ಪೊಲೀಸರು ಆಗಸ್ಟ್ 1ರಂದು ಕೊಚ್ಚಿಗೆ ತೆರಳಿದ್ದರು. ಅಲ್ಲಿ ಅವರು ಇಬ್ಬರು ಆರೋಪಿಗಳಿಂದ ಲಂಚ ಪಡೆದಿದ್ದಾರೆ ಎಂದು ಆರೋಪಿಸಿ, ಅಲ್ಲಿನ ಪೊಲೀಸರಿಗೆ ಆರೋಪಿಗಳ ಕುಟುಂಬಸ್ಥರು ದೂರು ನೀಡಿದ್ದರು.
ಈ ದೂರಿನನ್ವಯ ಕೊಚ್ಚಿಯ ಕಳಮಶ್ಶೇರಿ ಪೊಲೀಸರು, ಬೆಂಗಳೂರಿನ ವೈಟ್ಫೀಲ್ಡ್ನ ಸೆನ್ ಪೊಲೀಸ್ ಠಾಣೆಯ ಎಸ್ ಐ ಹಾಗೂ ಮೂವರು ಕಾನ್ಸ್ಟೆಬಲ್ ಸಹಿತ ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ವಶಕ್ಕೆ ಪಡೆದಿದ್ದರು.