- ಹೇಳುವುದು ಒಂದು ಮಾಡುವುದು ಇನ್ನೊಂದು ಕಾಂಗ್ರೆಸ್ ಸರ್ಕಾರದ ಪರಿಪಾಠ
- ಕಾಂಗ್ರೆಸ್ಗೆ ಮತನೀಡಿದ ದಲಿತ ವರ್ಗ ಮಹಾಮೋಸಕ್ಕೆ ಒಳಗಾಗುತ್ತಿರುವುದು ದುರಂತ
“ದಲಿತ ವರ್ಗಕ್ಕೆ ಮೀಸಲಿಟ್ಟಿರುವ ₹11,130 ಕೋಟಿಯನ್ನು ಗ್ಯಾರಂಟಿ ಯೋಜನೆಗಳಿಗೆ ಉಪಯೋಗ ಮಾಡುತ್ತಿರುವುದು ಮಹಾ ಅನ್ಯಾಯ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಎರಡೇ ತಿಂಗಳಿಗೆ ದಲಿತ ವಿರೋಧಿ ಎಂಬುದನ್ನು ಸಾಬೀತು ಪಡಿಸಲು ಹೊರಟಿದೆ” ಎಂದು ಎಎಪಿ ಎಸ್ಸಿ/ಎಸ್ಟಿ ವಿಭಾಗದ ರಾಜ್ಯಾಧ್ಯಕ್ಷ ಪುರುಷೋತ್ತಮ ತಿಳಿಸಿದರು.
ಗುರುವಾರ ಎಎಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ದಲಿತ ವರ್ಗದ ಶ್ರೇಯೋಭಿವೃದ್ಧಿಗಾಗಿ ಮೀಸಲಿಟ್ಟಿರುವ ಎಸ್ಸಿ-ಎಸ್ಪಿ/ಟಿಎಸ್ಪಿ ಯೋಜನೆಯ ₹11,130 ಕೋಟಿಯನ್ನು ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇದೇ ರೀತಿಯಾಗಿ ಬಿಜೆಪಿ ಸರ್ಕಾರವು ಕೂಡ ದಲಿತರ ಹಣವನ್ನು ದುರ್ಬಳಕೆ ಮಾಡಿಕೊಂಡು ಬಂದಿದೆ. ಕಾಂಗ್ರೆಸ್ಗೆ ಮತನೀಡಿದ ದಲಿತ ವರ್ಗ ಮಹಾಮೋಸಕ್ಕೆ ಒಳಗಾಗುತ್ತಿರುವುದು ದುರಂತ” ಎಂದರು.
“14 ಬಾರಿ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿಗಳು ಈ ಬಾರಿ ₹4,079 ಕೋಟಿಯನ್ನು ಹೆಚ್ಚುವರಿಯಾಗಿ ಈ ಯೋಜನೆಯಲ್ಲಿ ಇಟ್ಟಿದ್ದೇವೆಂದು ತಮ್ಮ ಬಜೆಟ್ ಭಾಷಣದಲ್ಲಿ ಹೇಳಿ, ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ಇದೀಗ ದಲಿತ ವರ್ಗದಿಂದ ಛೀಮಾರಿ ಹಾಕಿಸಿಕೊಳ್ಳುವ ಪರಿಸ್ಥಿತಿ ಬಂದಿದೆ. ಯಾವುದೇ ಕಾರಣಕ್ಕೂ ದಲಿತ ವರ್ಗಕ್ಕೆ ಈ ರೀತಿ ಅನ್ಯಾಯವಾಗುವುದನ್ನು ನಾವು ಸಹಿಸುವುದಿಲ್ಲ. ಸರ್ಕಾರದ ಈ ನಡೆಯ ವಿರುದ್ಧ ಹೋರಾಟದ ಹಾದಿಯಲ್ಲಿ ಇಳಿಯುತ್ತೇವೆ” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಜಗಳ ಮಾಡುವಾಗ ಪತ್ನಿಯ ಬೆರಳನ್ನೆ ಕಚ್ಚಿ ತಿಂದ ಪತಿರಾಯ
“ಹೇಳುವುದು ಒಂದು ಮಾಡುವುದು ಇನ್ನೊಂದು ಕಾಂಗ್ರೆಸ್ ಸರ್ಕಾರದ ಪರಿಪಾಠ. ಈ ಬಗ್ಗೆ ರಾಜ್ಯ ವ್ಯಾಪಿ ಹೋರಾಟವನ್ನು ರೂಪಿಸುತ್ತೇವೆ. ಇದೇ ತಿಂಗಳ ಆಗಸ್ಟ್ 5ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರದ ದಲಿತ ನೀತಿಯ ವಿರುದ್ಧ ಹೋರಾಟ ಮಾಡಲಿದ್ದೇವೆ. ನಮ್ಮ ಪ್ರತಿಭಟನೆಗೆ ಅನೇಕ ದಲಿತ ಸಂಘಟನೆಗಳು ಬೆಂಬಲ ಸೂಚಿಸಿವೆ” ಎಂದು ಎಎಪಿ ಉಪಾಧ್ಯಕ್ಷ ಸುರೇಶ್ ರಾಥೋಡ್ ತಿಳಿಸಿದರು.