ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಬೂದಿಹಾಳ್ ಪೀರಾಪುರ ಏತ ನೀರಾವರಿಯ ಬಾಕಿ ಉಳಿದ(FIC) ಹೊಲಗಾಲುವೆ ಕಾಮಗಾರಿಗೆ ಚಾಲನೆ ನೀಡುವವರೆಗೂ ಅಹೋರಾತ್ರಿ ಧರಣಿ ಹಿಂಪಡೆಯೋ ಮಾತಿಲ್ಲ. ಸರ್ಕಾರ ರೈತರ ಹೋರಾಟವನ್ನು ನಿರ್ಲಕ್ಷಿಸಿದರೆ ಅಮರಣ ಉಪವಾಸ ಸತ್ಯಾಗ್ರಹ ಪ್ರಾರಂಭಿಸಲಾಗುವುದೆಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಸ್ಪಷ್ಟಪಡಿಸಿದ್ದಾರೆ.
7ನೇ ದಿನಕ್ಕೆ ಮುಂದುವರೆದ ಅಹೋರಾತ್ರಿ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ಬೂದಿಹಾಳ್ ಪೀರಾಪುರ್ ಏತ ನೀರಾವರಿ ಹೋರಾಟ ಇದ್ದು ಯಾವುದೇ ರಾಜಕೀಯ ಪ್ರೇರಿತ ಹೋರಾಟವಲ್ಲ. ಇದರಲ್ಲಿ ಯಾವುದೇ ರಾಜಕೀಯ ಬೆರೆಸುವ ಅಗತ್ಯವಿಲ್ಲ. ಇಲ್ಲಿ ರಾಜಕೀಯ ಬೇಡ 38 ಹಳ್ಳಿಗಳ ರೈತರ ಬದುಕಿನ ಪ್ರಶ್ನೆಯಾಗಿದೆ. ಈ ಭಾಗದ ಮತಕ್ಷೇತ್ರದ ಶಾಸಕರು ಯಾವುದೇ ಪಕ್ಷದವರಾಗಿರಲಿ ಇದರಲ್ಲಿ ರಾಜಕೀಯ ಬೆರೆಸುವುದು ಬೇಡ” ಎಂದು ಹೇಳಿದರು.
“ಆಹೋರಾತ್ರಿ ಧರಣಿ 7ನೇ ದಿನ ಪೂರೈಸಿ 8ನೇ ದಿನಕ್ಕೆ ಕಾಲಿಟ್ಟರೂ ಜಿಲ್ಲಾ ಉಸ್ತುವಾರಿ ಸಚಿವರು ಧರಣಿ ಸ್ಥಳಕ್ಕೆ ಆಗಮಿಸಿಲ್ಲ. ಇದು ಅವರ ರೈತ ವಿರೋಧಿ ನೀತಿ ಎದ್ದು ಕಾಣುತ್ತಿದೆ” ಎಂದು ಉಸ್ತುವಾರಿ ಸಚಿವರ ವಿರುದ್ಧ ಹರಿಹಾಯ್ದರು.
“ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವರೋ, ಇಲ್ಲವೋ ಬಬಲೇಶ್ವರದ ಉಸ್ತುವಾರಿ ಸಚಿವರೋ ಎಂಬುದನ್ನು ಸ್ಪಷ್ಟಪಡಿಸಲಿ. ಉಸ್ತುವಾರಿ ಸಚಿವರ ವಿಜಯಪುರ ಜಿಲ್ಲೆ ಪ್ರವಾಸವೆಂದು ಪತ್ರಿಕಾ ಹೇಳಿಕೆ ನೀಡುತ್ತಾರೆ. ಆದರೆ ಬಬಲೇಶ್ವರ ಮತಕ್ಷೇತ್ರ ಹೊರತುಪಡಿಸಿದರೆ ಉಳಿದ ತಾಲೂಕುಗಳಿಗೆ ಭೇಟಿ ನೀಡಿದ ಉದಾರಣೆ ಇಲ್ಲ. ಹಾಗಿದ್ದರೆ ಇವರನ್ನು ಜಿಲ್ಲಾ ಉಸ್ತುವಾರಿ ಸಚಿವರು ಎನ್ನಲು ಹೇಗೆ ಸಾಧ್ಯ? ಕೇವಲ ಬಬಲೇಶ್ವರ ಮತಕ್ಷೇತ್ರಕ್ಕೆ ನೀರಾವರಿ ಮಾಡಿಕೊಂಡು ಆಧುನಿಕ ಭಗೀರಥನೆಂದು ತಮ್ಮ ಕಾರ್ಯಕರ್ತರಿಂದ ಹೊಗಳಿಸಿಕೊಳ್ಳುತ್ತಿದ್ದಾರೆ. ನೀರು ಉಸ್ತುವಾರಿ ಸಚಿವರು ಸೃಷ್ಟಿಸಿದ್ದಲ್ಲ. ನೀರು ನಿಸರ್ಗದ ಕೊಡುಗೆ. ಹೀಗಿದ್ದಾಗ ಆಧುನಿಕ ಭಗೀರಥನೆಂದು ಅವರ ಬಾಲಂಗೋಚಿಗಳೆಂದು ಹೊಗಳುತ್ತಿರುವುದು ಏತಕ್ಕೆ” ಎಂದು ಪ್ರಶ್ನಿಸಿದ್ದಾರೆ.
“ಜಿಲ್ಲೆಯ ಕೆಲವೊಂದು ತಾಲೂಕುಗಳ ಹಳ್ಳಿಗಳಲ್ಲಿ ಕುಡಿಯುವ ನೀರಿಗಾಗಿ ನಾಲ್ಕೈದು ಕಿಲೋಮೀಟರ್ ದೂರದವರೆಗೆ ಹೋಗಿ ಕುಡಿಯುವ ನೀರು ತರುವ ಪರಸ್ಥಿತಿ ಈಗಲೂ ಇದೆ. ಉಸ್ತುವಾರಿ ಸಚಿವರು ಬೇರೆ ತಾಲೂಕಿಗೆ ಹೋಗಿ ನೈಜ ಪರಿಸ್ಥಿತಿಯನ್ನು ಅರಿತುಕೊಳ್ಳಬೇಕು. ಇನ್ನಾದರೂ ಉಸ್ತುವಾರಿ ಸಚಿವರು ಬೂದಿಹಾಳ್ ಪೀರಾಪುರ್ ಏತ ನೀರಾವರಿ ಬಾಕಿ ಉಳಿದ ಕಾಮಗಾರಿಗೆ ಅಗತ್ಯ ಇರುವ ಅನುದಾನವನ್ನು ಬಿಡುಗಡೆಗೊಳಿಸಲು ಪ್ರಯತ್ನಿಸಬೇಕು. ಇಲ್ಲದಿದ್ದರೆ ಉಸ್ತುವಾರಿ ಸಚಿವರಿಗೆ ಘೇರಾವ್ ಹಾಕಿ ಮನೆಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಅಹೋರಾತ್ರಿ ಧರಣಿ ಸ್ಥಳಕ್ಕೆ ಕೆಬಿಜಿ ಎನ್ಎಸ್ಎಸ್ಇ ಗೋವಿಂದ ರಾಠೋಡ್ ಭೇಟಿ ನೀಡಿ ಮಾತನಾಡಿ, “ಈಗಾಗಲೇ ತಮ್ಮ ಹೋರಾಟದ ಪರಿಣಾಮವಾಗಿ ಎಂ ಡಿ ಅವರು ಡಿಪಿಆರ್ ತಯಾರಿಸುವ ಸಲುವಾಗಿ ಸಮಾಲೋಚಕರನ್ನು ನೇಮಿಸುವ ಕಾರ್ಯಕ್ಕೆ ಅಂದಾಜು ₹1.75 ಕೋಟಿ ಮೊತ್ತಕ್ಕೆ ಟೆಂಡರ್ ಕರೆಯಲು ಅನುಮೋದನೆ ಕೋರಿ ಸರ್ಕಾರಕ್ಕೆ ಕಡತ ಕಳುಹಿಸಿದ್ದಾರೆ. ಶೀಘ್ರದಲ್ಲಿ ಕಾಮಗಾರಿಗೆ ಅನುಕೂಲವಾಗಲಿದೆ. ಆದ್ದರಿಂದ ಈ ಧರಣಿ ಹಿಂಪಡೆಯಿರಿ” ಎಂದು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ.
ಈ ಸುದ್ದಿ ಓದಿದ್ದೀರಾ? ಧಾರವಾಡ | ಮೃತ ರೈತರ ಸಂಪೂರ್ಣ ಸಾಲ ಮನ್ನಾಕ್ಕೆ ಗುರುವಾದಪ್ಪ ಬಂಕದ ಒತ್ತಾಯ
ಧರಣಿನಿರತ ರೈತರು ಹಾಗೂ ಹೋರಾಟದ ನೇತೃತ್ವ ವಹಿಸಿದ ಮುಖಂಡ ಅರವಿಂದ ಕುಲಕರ್ಣಿ ಅಂತಿಮ ಟೆಂಡರ್ ಕರೆಯುವವರೆಗೂ ಹೋರಾಟ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.
ಧರಣಿಯಲ್ಲಿ ಪ್ರಭುಗೌಡ ಅಸ್ಕಿ, ಬಸನಗೌಡ ಯಾಳವಾರ, ಬಸನಗೌಡ ಪಾಟೀಲ, ಸಂತೋಷ ಚೌದರಿ, ನಾನಾಗೌಡ ಬಿರಾದಾರ, ರಾಯಪ್ಪಗೌಡ ಪಾಟೀಲ, ಬಾಪೂಗೌಡ ಪಾಟೀಲ ಶಂಕರಗೌಡ ದೇಸಾಯಿ, ಗುರುರಾಜ ಎಂ ಪಡಶೆಟ್ಟಿ, ಶಿವಪುತ್ರ ಚೌದರಿ, ಡಾ. ಪ್ರಭುಗೌಡ ಬಿರಾದಾರ, ಸುಭಾಷ್ ನಡುವಿನಮನಿ, ರೇವಣಸಿದ್ಧ ವಾಲಿಕಾರ, ಜಂಬು ಚೀನಿವಾಲ, ಸಾಹು ಮಹಾನಿಂಗ ಬೂದಿ, ಮಡಿವಾಳಪ್ಪ ಕಲಬುರಗಿ, ರವಿ ಯಾಲ್ವಾರ, ರಾಜು ಚೌದರಿ, ಬೀರಪ್ಪ ಗೊಡ್ಡೆಮ್ಮಿ ಸೇರಿದಂತೆ ನೂರಾರು ರೈತರು 7ನೇ ದಿನದ ಧರಣಿಯಲ್ಲಿ ಇದ್ದರು.