ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗಣಿಹಾರ ತಾಂಡದ ದೇವಿಬಾಯಿ ಲಾಲ್ ಸಿಂಗ್ ಜಾದವ(42) ಎನ್ನುವ ಮಹಿಳೆಯ ಕೊಲೆ ಪ್ರಕರಣದ ಇಬ್ಬರು ಆರೋಪಿಗಳಿಗೆ ಜಾಮೀನು ನೀಡಬಾರದು ಎಂದು ಆಗ್ರಹಿಸಿ ಗಣಿಹಾರ ತಾಂಡದ ನಿವಾಸಿಗಳು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಪಟ್ಟಣದಲ್ಲಿರುವ ತಾಲೂಕು ಆಡಳಿತ ಕಚೇರಿಗೆ ಆಗಮಿಸಿದ ತಾಂಡಾದ ನಿವಾಸಿಗಳು ತಹಶೀಲ್ದಾರ್ ಪ್ರದೀಪ್ ಕುಮಾರ್ ಹಿರೇಮಠ ಅವರ ಮೂಲಕ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
“ಆರೋಪಿಗಳಿಗೆ ಜಾಮೀನು ಸಿಕ್ಕರೆ ಆಕೆಯ ಮಕ್ಕಳಿಗೆ ತೊಂದರೆಯಾಗಲಿದೆ. ಆದಕಾರಣ ಕಲಬುರಗಿ ದರ್ಗಾ ಜೈಲಿನಲ್ಲಿರುವ ಆರೋಪಿಗಳಿಗೆ ಜಾಮೀನು ನೀಡಬಾರದು. ಅವರಿಗೆ ಜೀವಾವಧಿ ಶಿಕ್ಷೆ ನೀಡಬೇಕು” ಎಂದು ಗಣಿಹಾರ ತಾಂಡಾದ ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.
ಘಟನೆ ಹಿನ್ನೆಲೆ : ಗಣಿಹಾರ ತಾಂಡಾದ ಮೃತ ದೇವಿಬಾಯಿ ಅದೇ ತಾಂಡಾದ ಸೋಮಲು(53) ಎಂಬಾತನ ಜತೆಗೆ ಸಹಜೀವನ ನಡೆಸುತ್ತಿದ್ದಳು. ಮೊದಲ ಪತಿ 10 ವರ್ಷದ ಹಿಂದೆ ಮತಪಟ್ಟಿದ್ದು, ಮಕ್ಕಳಿದ್ದಾರೆ. ಸುಮಾರು 2015ರಿಂದ ದೇವಿ ಬಾಯಿ ಹಾಗೂ ಸೋಮಲು ಸಹಜೀವನ ನಡೆಸುತ್ತಿದ್ದರು.
ಮೊದಲ ಪತಿಯ ಎರಡನೇ ಮಗಳ ಮದುವೆ ವಿಚಾರವಾಗಿ ಇವರಿಬ್ಬರ ನಡುವೆ ಆಗಾಗ ಜಗಳವಾಗುತ್ತಿತ್ತು. ಹಾಗಾಗಿ ಮಗಳು ಸುಮಾರು ಏಳೆಂಟು ತಿಂಗಳ ಹಿಂದೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಸಂಗೊಳ್ಳಿಗೆ ಹೋಗಿದ್ದರು.
ಮಗಳು ಸಂಗೊಳ್ಳಿಗೆ ಹೋಗಿದ್ದಾಗಲೂ ಜಗಳವಾಗಿದೆ. ಆಗ ಮಗಳು ವಾಪಸ್ ವಿಜಯಪುರಕ್ಕೆ ಬಂದಿದ್ದಾಳೆ. ದೇವಿಬಾಯಿ ಅಲ್ಲೇ ಉಳಿದುಕೊಂಡಿದ್ದಾಳೆ. ಆಗ ಸೋಮಲು ವಿಜಯಪುರ ಬಸ್ ಹತ್ತಿಸುವುದಾಗಿ ಹೇಳಿ ಕಾರಿನಲ್ಲಿ ಆಕೆಯನ್ನು ಕರೆದುಕೊಂಡು ಬಂದಿದ್ದಾನೆ. ಆಗ ಹಾಮು ಪಪ್ಪು ಜೊತೆಗಿದ್ದ. ಆಳಂದ ಚೆಕ್ ಪೋಸ್ಟ್ ಬಳಿ ಕಾರು ನಿಲ್ಲಿಸಿ ಬಸ್ ಹತ್ತಿಸದೆ ಕಲಬುರಗಿ ದಾಟಿ ಕಾರು ತೆಗೆದುಕೊಂಡು ಹೋದಾಗ ದೇವಿ ಬಾಯಿಗೆ ಅನುಮಾನ ಬಂದಿದೆ. ಸಣ್ಣೂರು ಕ್ರಾಸ್ ಹತ್ತಿರ ಕಾರಿನಲ್ಲಿಯೇ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ನಂತರ ಶವ ತೆಗೆದುಕೊಂಡು ಸೇಡಂನತ್ತ ಬರುವಾಗ ಟೋಲ್ ಗೇಟ್ ನೋಡಿ ವಾಪಸ್ ಆಗಿದ್ದಾರೆ. ಶಹಾಬಾದ್ ರಾವೂರ ಮಾರ್ಗವಾಗಿ ಚಿತ್ತಾಪುರಕ್ಕೆ ಬಂದು ಒಂದು ಕ್ಯಾನ್ ಪೆಟ್ರೋಲ್ ಖರೀದಿಸಿದ್ದಾರೆ. ಯಾದಗಿರಿ ತೆಲಂಗಾಣ ಗಡಿಯಲ್ಲಿ ಶವ ಬಿಸಾಕುವಲ್ಲಿ ವಿಫಲರಾಗಿದ್ದಾರೆ. ನಂತರ ವಾಡಿಯಲ್ಲಿ ಸನಿಗೆ ಖರೀದಿಸಿದ್ದು, ಲಾಡ್ಲಾಪುರ ಹತ್ತಿರ ಶವ ಹೂಳಲು ನೋಡಿದ್ದಾರೆ. ನೆಲಗಟ್ಟಿ ಇರುವುದರಿಂದ ಪೆಟ್ರೋಲ್ ಸುರಿದು ಶವ ಸುಟ್ಟು ಪರಾರಿಯಾಗಿದ್ದಾರೆ. ಈ ಸಂಬಂಧ ಜೂನ್ 1ರಂದು ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಊರಿಗೆ ಬಂದು ನಾನು ಅವಳನ್ನು ವಿಜಯಪುರ ಬಸ್ಸಿಗೆ ಹತ್ತಿಸಿದ್ದೇನೆ. ಎಲ್ಲಿ ಹೋದಳು ಗೊತ್ತಿಲ್ಲವೆಂದು ಹೇಳಿದ್ದಾನೆ. ಏನೋ ಗೊತ್ತಿಲ್ಲದಂತೆ ಮನೆಯವರೊಂದಿಗೆ ಹುಬ್ಬಳ್ಳಿ, ನಿಪ್ಪಾಣಿಯಲ್ಲಿ ಹುಡುಕಿದ್ದಾನೆ ಎಂದು ಕಲಬುರಗಿ ಎಸ್ ಪಿ ಅಡ್ಡರ ಶ್ರೀನಿವಾಸಲು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಧರ್ಮಸ್ಥಳ ಪ್ರಕರಣ | SIT ರಚನೆಯಲ್ಲಿ ರಾಹುಲ್ ಗಾಂಧಿ ಮಧ್ಯಪ್ರವೇಶಿಸುವಂತೆ ಸಾಮಾಜಿಕ ಕಾರ್ಯಕರ್ತೆ ಒತ್ತಾಯ
ಈ ಬಗ್ಗೆ ತೀವ್ರ ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಬಂದಿದೆ. ಆರೋಪಿಗಳಾದ ಸೋಮಲು ಹಾಗೂ ಹಾಮು ಪಪ್ಪು ಇಬ್ಬರನ್ನೂ ಬಂಧಿಸಲಾಗಿದೆ. ಸದ್ಯ ಕಲಬುರಗಿಯ ದರ್ಗಾ ಜೈಲಿನಲ್ಲಿದ್ದಾರೆ.
ಮನವಿ ಸಲ್ಲಿಸುವ ವೇಳೆ ಕಿಶನ್ ಬಿಮು ಚಹಾನ್, ಕಿರಣ್ ರಾಠೋಡ್, ಪೂಜಾ ರಾಠೋಡ್, ಕಾಶಿಬಾಯಿ ಚೌಹಾಣ್, ಜಯಶ್ರೀ ಪವಾರ್, ಪಾರುಬಾಯಿ ರಾಠೋಡ ಹಾಗೂ ಸುಮಿತ್ರ ರಾಠೋಡ್ ಇದ್ದರು.