ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶ ನಡೆಯುತ್ತಿದೆ. ಈ ನಡುವೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ಸಂಸದ ಯದುವೀರ್ ಒಡೆಯರ್ ರಾಜ್ಯ ಸರ್ಕಾರವನ್ನು ಟೀಕಿಸಿದ್ದಾರೆ. ಬೆಲೆ ಏರಿಕೆ, ಬಾಣಂತಿಯರ ಸಾವು ಸೇರಿದಂತೆ ಹಲವು ಘಟನೆಗಳು ಕಾಂಗ್ರೆಸ್ನ ಹತ್ತು ಸಾಧನೆಗಳು ಎಂದು ಹೇಳಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಒಡೆಯರ್, “ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮೈಸೂರಿನಲ್ಲಿ ಒಂದು ಭವ್ಯ ಸಾಧನಾ ಸಮಾವೇಶವನ್ನು ಆಯೋಜಿಸುತ್ತಿದೆ, ಇದು ಯಾವುದೇ ಮೂಲಭೂತ ಅಂಶವಿಲ್ಲದೆ ಸ್ವಯಂ ಅಭಿನಂದನಾ ಕಾರ್ಯಕ್ರಮ. ಆದರೆ ಅವರು ನಿಜವಾಗಿಯೂ ಇದನ್ನು ಆಚರಿಸುತ್ತಿರುವ ಉದ್ದೇಶವಾದರೂ ಏನು? ಇದು ರಾಜ್ಯದ ಆರ್ಥಿಕ ಕುಸಿತದ ಸಮಾರಂಭವೆ? ಭರವಸೆಗಳನ್ನು ಈಡೇರಿಸದಿರುವುದರ ಆಚರಣೆಯೆ? ಬೆಲೆ ಏರಿಕೆ ಹಾಗೂ ಸಾರ್ವಜನಿಕ ಸೇವೆಗಳು ಕುಸಿತದ ಸಮಾವೇಶವೆ” ಎಂದು ಪ್ರಶ್ನಿಸಿದ್ದಾರೆ. ಎರಡು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರದ ನಿಜವಾದ ಸಾಧನೆಗಳು ಇವುಗಳೇ ಎಂದು ಹತ್ತು ಅಂಶಗಳನ್ನು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಯದುವೀರ್ ಹೆಸರನ್ನು ʼಯಮರಾಜ್ ಒಡಿಯರ್ʼ ಎಂದ ಮೋದಿ: ಪ್ರಧಾನಿ ಪ್ರಮಾದಕ್ಕೆ ಕಾಲೆಳೆದ ನೆಟ್ಟಿಗರು
“ಕಾಂಗ್ರೆಸ್ ಆಳ್ವಿಕೆಯಲ್ಲಿ ರಾಜ್ಯದ ಸಾರ್ವಜನಿಕ ಸಾಲವು ಗಗನಕ್ಕೇರಿದ್ದು, ಆರ್ಥಿಕ ಸಮೀಕ್ಷೆಯಲ್ಲೂ ಇದು ಕಳಪೆಯಾಗಿದೆ. ಮತಬ್ಯಾಂಕ್ ಯೋಜನೆಗಳ ಬಲಿಪೀಠದಲ್ಲಿ ಹಣಕಾಸಿನ ವಿವೇಕವನ್ನು ಬಲಿಕೊಡಲಾಗಿದೆ.
ರಾಜ್ಯದ ಸಾರ್ವಜನಿಕ ಸಾಲವು 2025-26ರ ಅವಧಿಯಲ್ಲಿ ಒಟ್ಟು ಹೊಣೆಗಾರಿಕೆಗಳಿಗೆ ಸುಮಾರು 1.16 ಲಕ್ಷ ಕೋಟಿ ರೂಪಾಯಿಗಳ ಪ್ರಸ್ತಾವಿತ ಸೇರ್ಪಡೆಯಾಗುವ ನಿರೀಕ್ಷೆಯಿದ್ದು, ಇದು ಕಳವಳಕ್ಕೆ ಕಾರಣವಾಗಬಹುದು ಎಂದು ಕರ್ನಾಟಕದ 2024-25ರ ಆರ್ಥಿಕ ಸಮೀಕ್ಷೆ ತಿಳಿಸಿದೆ” ಎಂದಿರುವ ಸಂಸದರು ಇದೇ ಕಾಂಗ್ರೆಸ್ ಸರ್ಕಾರದ ಮೊದಲ ಸಾಧನೆ” ಎಂದು ಟೀಕಿಸಿದ್ದಾರೆ.
“ಹೆಚ್ಚು ಪ್ರಚಾರ ಪಡೆದ ಗ್ಯಾರಂಟಿ ಯೋಜನೆಗಳು ವಿಳಂಬ, ಕಳಪೆ ಹಂಚಿಕೆ ಮತ್ತು ತಾಂತ್ರಿಕ ದೋಷಗಳಿಂದ ವಿಳಂಬವಾಗುತ್ತಿವೆ. ಅಬ್ಬರದಿಂದ ನೀಡಲಾದ ಭರವಸೆಗಳನ್ನು ನಿರಾಸಕ್ತಿಯಿಂದ ಪೂರೈಸಲಾಗುತ್ತಿದೆ. ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಸೇರಿದಂತೆ ಪ್ರಮುಖ ಯೋಜನೆಗಳಿಗೆ ಹಣ ಹಂಚಿಕೆಯಲ್ಲಿ ವಿಳಂಬವಾಗಿರುವುದಕ್ಕೆ ಕರ್ನಾಟಕ ಸರ್ಕಾರವು ಎಲ್ಲೆಡೆ ಟೀಕೆಗೆ ಗುರಿಯಾಗಿದೆ” ಎಂದು ಬಿಜೆಪಿ ಸಂಸದರು ಹೇಳಿದ್ದಾರೆ.
“ದೈನಂದಿನ ಬಳಕೆ ವಸ್ತುಗಳ ಬೆಲೆ ಗಗನಕ್ಕೇರಿರುವುದಲ್ಲದೆ, ನಂದಿನಿ ಹಾಲು ಹಾಗೂ ಮೊಸರು ಉತ್ಪನ್ನಗಳ ಮೇಲೆ ಪ್ರಸ್ತುತ ವರ್ಷದಲ್ಲಿ ಮೂರನೇ ಬಾರಿ ದರವನ್ನು ಹೆಚ್ಚಿಸಲಾಗಿದೆ. ಕೊನೆಯ ಬಾರಿಗೆ ಬೆಲೆಯನ್ನು 3 ರೂ. ಹೆಚ್ಚಿಸಿದಾಗ ನೀಡಲಾಗಿದ್ದ 50 ಮಿ.ಲಿ. ಹಾಲಿನ ಪ್ರೋತ್ಸಾಹ ಧನವನ್ನು ಸರ್ಕಾರ ರದ್ದುಗೊಳಿಸಿದೆ. ಎರಡು ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ ಇದು ಮೂರನೇ ಬಾರಿಗೆ ಬೆಲೆ ಪರಿಷ್ಕರಣೆಯಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ.
“ಕೆಎಸ್ಆರ್ಟಿಸಿ, ಕೆಕೆಆರ್ಟಿಸಿ, ಎನ್ಡಬ್ಲ್ಯೂಕೆಆರ್ಟಿಸಿ ಮತ್ತು ಬಿಎಂಟಿಸಿ ಸಾರಿಗೆ ನಿಗಮಗಳ ಬಸ್ ಟಿಕೆಟ್ ದರಗಳು ಶೇಕಡ 15ರಷ್ಟು ಏರಿಕೆಯಾಗಿವೆ. ಕಾರ್ಮಿಕ ವರ್ಗದ ಚಲನಶೀಲತೆಯನ್ನು ವಿಸ್ತರಿಸುವ ಬದಲು, ಈ ಸರ್ಕಾರವು ಅದನ್ನು ಮತ್ತಷ್ಟು ದುಬಾರಿಯನ್ನಾಗಿಸಿದೆ” ಎಂದು ಆರೋಪಿಸಿದ್ದಾರೆ.
ಕರ್ನಾಟಕದ ಶ್ರೀ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮೈಸೂರಿನಲ್ಲಿ ಒಂದು ಭವ್ಯ ಸಾಧನಾ ಸಮಾವೇಶವನ್ನು ಆಯೋಜಿಸುತ್ತಿದೆ, ಇದು ಯಾವುದೇ ಮೂಲಭೂತ ಅಂಶವಿಲ್ಲದೆ ಸ್ವಯಂ ಅಭಿನಂದನಾ ಕಾರ್ಯಕ್ರಮವಾಗಿದೆ.
— Yaduveer Wadiyar (@yaduveerwadiyar) July 19, 2025
ಆದರೆ ಅವರು ನಿಜವಾಗಿಯೂ ಇದನ್ನು ಆಚರಿಸುತ್ತಿರುವ ಉದ್ದೇಶವಾದರೂ ಏನು?
ಇದು ರಾಜ್ಯದ ಆರ್ಥಿಕ ಕುಸಿತದ ಸಮಾರಂಭವೆ? ಭರವಸೆಗಳನ್ನು…
“ಬಿಬಿಎಂಪಿಯ ಸುರಂಗ ರಸ್ತೆ ವರದಿಯು 1,000 ಕಿ.ಮೀ ದೂರದಲ್ಲಿರುವ ನಾಸಿಕ್ ಮತ್ತು ಮಾಲೆಗಾಂವ್ ನಗರಗಳ ಸಂಚಾರ ದತ್ತಾಂಶವನ್ನು ಬೆಂಗಳೂರಿನ ಪ್ರದೇಶಗಳಂತೆ ಉಲ್ಲೇಖಿಸಿದೆ. ಇದು ಕ್ಲೆರಿಕಲ್ ದೋಷವಲ್ಲ, ಇದು ಸೋಮಾರಿ ಆಡಳಿತ, ನಕಲು ಮಾಡುವ ಸಲಹಾ ವ್ಯವಸ್ಥೆ ಮತ್ತು ಯೋಜನೆಯ ವೇಷದಲ್ಲಿರುವ ವಂಚನೆಯ ಪ್ರಕರಣ” ಎಂದು ಟೀಕಿಸಿದ್ದಾರೆ.
“ಕರ್ನಾಟಕದ ವಿದ್ಯುತ್ ಬಿಲ್ಗಳು ಈಗಾಗಲೇ ಕಡಿಮೆ ಇರುವ ಮನೆಗಳ ಮೇಲೆ ಮತ್ತೊಂದು ಹೊರೆಯನ್ನು ಸದ್ದಿಲ್ಲದೆ ಹೆಚ್ಚಿಸಿವೆ. ಕರ್ನಾಟಕದ ವಿದ್ಯುತ್ ಸರಬರಾಜು ಕಂಪನಿಗಳು KERCಗೆ ಬಹು-ವರ್ಷಗಳ ಸುಂಕ ಹೆಚ್ಚಳ ಪ್ರಸ್ತಾವನೆಯನ್ನು ಸಲ್ಲಿಸಿ, 2025-26ಕ್ಕೆ ಪ್ರತಿ ಯೂನಿಟ್ಗೆ 67 ಪೈಸೆ, 2026-27ಕ್ಕೆ 75 ಪೈಸೆ ಮತ್ತು 2027-28ಕ್ಕೆ 91 ಪೈಸೆ ದರ ಹೆಚ್ಚಳವನ್ನು ಕೋರಿಕೆ ಸಲ್ಲಿಸಿವೆ” ಎಂದು ಒಡೆಯರ್ ಹೇಳಿದ್ದಾರೆ.
“ಕರ್ನಾಟಕದ ಸರ್ಕಾರಿ ಶಾಲೆಗಳ ಗೋಡೆಗಳು ಬಿರುಕು ಬಿಟ್ಟಿವೆ, ಶೌಚಾಲಯಗಳು ಹದಗೆಟ್ಟಿದ್ದು, ಶಾಲಾ ಕಟ್ಟಡಗಳ ಛಾವಣಿಗಳು ಸೋರುತ್ತಿವೆ. ಸರ್ಕಾರಿ ಶಾಲಾ ಶಿಕ್ಷಣವನ್ನು ಅವಲಂಬಿಸಿರುವ ಅತ್ಯಂತ ಬಡ ಮಕ್ಕಳಿಗೆ ಯಾವುದೇ ‘ಗ್ಯಾರಂಟಿ’ ಇಲ್ಲದಂತಾಗಿದೆ. ಒಂದು ರಾಜ್ಯವು ತನ್ನ ಶಾಲೆಗಳನ್ನು ನಿರ್ಲಕ್ಷಿಸಿದರೆ, ಅದು ತನ್ನದೇ ಆದ ಭವಿಷ್ಯವನ್ನು ಹಾಳುಮಾಡುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಕರ್ನಾಟಕದಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ, ಕಾಂಗ್ರೆಸ್ ಸರ್ಕಾರ ‘ತಾತ್ಕಾಲಿಕ ನೇಮಕಾತಿ’ಯ ಬಗ್ಗೆ ದೊಡ್ಡ ದೊಡ್ಡ ಹೇಳಿಕೆಗಳನ್ನು ನೀಡುತ್ತಾ ಬಂದಿದೆ. ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಭವಿಷ್ಯದ ಭರವಸೆಯನ್ನು ತುಳಿದುಹಾಕುತ್ತಿದೆ” ಎಂದು ದೂರಿದ್ದಾರೆ.
ಇದನ್ನು ಓದಿದ್ದೀರಾ? ನಾನು ಹಿಂದುಳಿದ ಜಾತಿಗೆ ಸೇರಿದವ ಎಂದು ಗೊತ್ತೇ ಇರಲಿಲ್ಲ: ಸಂಸದ ಯದುವೀರ್
“2024ರ ಏಪ್ರಿಲ್ ಮತ್ತು ಡಿಸೆಂಬರ್ ನಡುವೆ ಕರ್ನಾಟಕದಲ್ಲಿ ಸಂಭವಿಸಿದ ಗರ್ಭಿಣಿಯರು ಹಾಗೂ ತಾಯಂದಿರ ಸಾವುಗಳಲ್ಲಿ ಶೇ.70 ತಡೆಗಟ್ಟಬಹುದಾಗಿತ್ತು ಎಂದು ಆಡಿಟ್ ವರದಿ ತಿಳಿಸಿದೆ. ಸರ್ಕಾರದ ವ್ಯವಸ್ಥೆಯಲ್ಲಿ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ತೋರಿದ ನಿರಾಸಕ್ತಿಯಿಂದ ತಾಯಂದಿರ ಸಾವು ಹೆಚ್ಚಾಗಿರುವುದನ್ನು ವರದಿ ತಿಳಿಸಿದೆ” ಎಂದಿದ್ದಾರೆ.
“ಈ ಸಾಧನಾ ಸಮಾವೇಶವು ಆಡಳಿತದ ಆಚರಣೆಯಲ್ಲ, ಬದಲಾಗಿ ಆಡಳಿತ ಹದಗೆಟ್ಟಿರುವುದನ್ನು ಮರೆಮಾಚಿಸುವ ಪ್ರದರ್ಶನವಾಗಿದೆ. ಕೇವಲ ಎರಡು ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ, ಕರ್ನಾಟಕವು ಹೆಚ್ಚುತ್ತಿರುವ ಸಾಲ, ಸುಳ್ಳು ಭರವಸೆಗಳು, ಕುಸಿಯುತ್ತಿರುವ ಸಾರ್ವಜನಿಕ ಸೇವೆಗಳು ಮತ್ತು ಸಾರ್ವಜನಿಕ ಕಲ್ಯಾಣಕ್ಕಿಂತ ಆಂತರಿಕ ಅಧಿಕಾರ ಹೋರಾಟಗಳ ಮೇಲೆ ಹೆಚ್ಚು ಗಮನಹರಿಸಿದ ಸರ್ಕಾರವನ್ನು ಕಂಡಿದೆ. ಮುಂದಿನ ಇತಿಹಾಸದಲ್ಲಿ ಈ ಕಾಂಗ್ರೆಸ್ ಸರ್ಕಾರವನ್ನು ಗ್ಯಾರಂಟಿಗಳಿಗಾಗಿ ಅಲ್ಲ, ಬದಲಾಗಿ ಎಷ್ಟು ದುರುಪಯೋಗವಾಯಿತು ಎಂಬುದಕ್ಕಾಗಿ ನೆನಪಿಸಿಕೊಳ್ಳಲಾಗುತ್ತದೆ” ಎಂದು ಬಿಜೆಪಿ ಸಂಸದರು ಹೇಳಿದ್ದಾರೆ.
ಇಂದು(ಜುಲೈ 19) ಮೈಸೂರಿನಲ್ಲಿ ಕಾಂಗ್ರೆಸ್ ಸಾಧನಾ ಸಮಾವೇಶ ನಡೆದಿದೆ. ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2658 ಕೋಟಿ ರೂಪಾಯಿ ವಿವಿಧ ಅಭಿವೃದ್ಧಿಗೆ ಶಂಕು ಸ್ಥಾಪನೆ ಮಾಡಿದ್ದಾರೆ. 24 ಇಲಾಖೆಗಳ 74 ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಹಲವು ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದರು.
